ಬಳ್ಳಾರಿಯಿಂದ ರಾಜಕೀಯ ಜರ್ನಿ ಆರಂಭ ಮಾಡಿದ್ದ ಗಾಲಿ ಜನಾರ್ದನ ರೆಡ್ಡಿ, ರಾಜ್ಯ ಸರ್ಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದರು. ಬಿಜೆಪಿಯಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಜನಾರ್ದನ ರೆಡ್ಡಿ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಆ ಬಳಿಕ ಬಳ್ಳಾರಿಗೆ ಹೋಗುವುದಕ್ಕೆ ತಡೆಯಾಗಿದ್ದು, BJPಯಲ್ಲೂ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಜೈಲಿನಿಂದ ಬಿಡುಗಡೆ ಆದ ಬಳಿಕ ಬಿಜೆಪಿಯಲ್ಲಿ ರಾಜಕೀಯ ಸ್ಥಾನಮಾನ ಪಡೆಯಲು ಭಾರೀ ಪ್ರಯತ್ನ ಮಾಡಿದ್ಧ ಶ್ರೀರಾಮುಲು ಹಿನ್ನಡೆ ಅನುಭವಿಸಿದ್ದರು. ಇದೀಗ ಬಳ್ಳಾರಿಯ ಗಡಿ ಭಾಗ ಗಂಗಾವತಿಯಿಂದ ಅದೃಷ್ಟ ಪರೀಕ್ಷೆಗೆ ಇಳಿಯಲು ಜನಾರ್ದನ ರೆಡ್ಡಿ ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಗಂಗಾವತಿಯಲ್ಲಿ ಬೃಹತ್ ಅರಮನೆಯನ್ನೇ ನಿರ್ಮಾಣ ಮಾಡಿದ್ದಾರೆ. ಗೃಹ ಪ್ರವೇಶ ಕೂಡ ಮಾಡಲು ಜನಾರ್ದನ ರೆಡ್ಡಿ ತಯಾರಿ ನಡೆಸಿದ್ದಾರೆ. ಇದು ಬಿಜೆಪಿಗೆ ಇರುಸು ಮುರುಸಾಗಿದ್ದು, ಜನಾರ್ದನ ರೆಡ್ಡಿಯನ್ನು ತಡೆಯುವ ಬಗೆಯನ್ನು ಹುಡುಕಾಡುತ್ತಿದೆ.
ರಾಜಕಾರಣದ ಮತ್ತೊಂದು ಮಗ್ಗುಲಿಗೆ ಜನಾರ್ದನ ರೆಡ್ಡಿ ಸಿದ್ಧತೆ !
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಹೊಸ ಮನೆ ರೆಡಿಯಾಗಿದ್ದು, ಮುಂದಿನ 10 ದಿನಗಳಲ್ಲಿ ಗೃಹಪ್ರವೇಶಕ್ಕೆ ಜನಾರ್ದನ ರೆಡ್ಡಿ ಸಿದ್ಧತೆ ಮಾಡಿದ್ದಾರೆ. ಗಂಗಾವತಿಯಿಂದಲೇ ರಾಜಕೀಯ ಶುರು ಮಾಡಲು ಜನಾರ್ದನ ರೆಡ್ಡಿ ಸಿದ್ಧತೆ ನಡೆಸಿದ್ದು, ಗೃಹ ಪ್ರವೇಶಕ್ಕೆ ಎಲ್ಲರನ್ನೂ ಆಹ್ವಾನಿಸುತ್ತೇನೆ ಎಂದಿದ್ದಾರೆ ರೆಡ್ಡಿ. ಗೃಹ ಪ್ರವೇಶ ಬಳಿಕ ರಾಜಕೀಯದಲ್ಲಿ 2ನೇ ಇನ್ನಿಂಗ್ಸ್ ಘೋಷಣೆ ಮಾಡುತ್ತಾರೆ ಎನ್ನುವುದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಹನುಮ ಮಾಲೆ ಧರಿಸಿ ಅಂಜನಾದ್ರಿಗೆ ತೆರಳಿರುವ ಜನಾರ್ದನ ರೆಡ್ಡಿ, ಪಕ್ಷೇತರವಾಗಿ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆ ಬಳಿಕ ಹೊಸ ಪಕ್ಷವನ್ನೇ ಸ್ಥಾಪನೆ ಮಾಡಲಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಿದ್ಧತೆ ಮಾಡಿದ್ದಾರೆ ಎನ್ನಲಾಗ್ತಿದೆ. ಶ್ರೀರಾಮುಲು ಸಂಧಾನದ ಬಳಿಕ ಬಿ.ಎಸ್ ಯಡಿಯೂರಪ್ಪ ಕೂಡ ಸಂಧಾನ ಮಾಡಲು ಮುಂದಾಗಿದ್ದು, ಯಶಸ್ಸು ಸಿಕ್ಕಿಲ್ಲ ಎನ್ನಲಾಗ್ತಿದೆ. ಈಗಾಗಲೇ ರಾಷ್ಟ್ರಮಟ್ಟದಲ್ಲೂ ಜನಾರ್ದನ ರೆಡ್ಡಿ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆಗಳು ನಡೆದಿದ್ದು, ಸಾಧಕ ಬಾಧಕಗಳ ಬಗ್ಗೆ ಹೈಕಮಾಂಡ್ ನಾಯಕರು ಚರ್ಚೆ ನಡೆಸಿದ್ದಾರೆ.
ಶ್ರೀರಾಮುಲು ಬಳಿಕ ಯಡಿಯೂರಪ್ಪ ಕೂಡ ಸಂಧಾನ !
ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಾರೆ ಅನ್ನೋ ಮಾತುಗಳು ಶುರುವಾಗ್ತಿದ್ದ ಹಾಗೆ ರಾಜ್ಯ ಬಿಜೆಪಿ ಶ್ರೀರಾಮುಲು ಅವರಿಗೆ ಸಂಧಾನದ ಉಸ್ತುವಾರಿ ನೀಡಿತ್ತು. ಆದರೆ ಶ್ರೀರಾಮುಲು ಸಂಧಾನದ ವೇಳೆಯೂ ಜನಾರ್ದನ ರೆಡ್ಡಿ ಮಣಿಯಲಿಲ್ಲ. ಆ ಬಳಿಕ ಜನಾರ್ದನ ರೆಡ್ಡಿ ಮೊಮ್ಮೊಗಳ ಹುಟ್ಟುಹಬ್ಬ ಆಚರಣೆಯ ನೆಪದಲ್ಲಿ ಬಿ.ಎಸ್ ಯಡಿಯೂರಪ್ಪ ಭಾಗಿಯಾಗಿದ್ದರು. ಆದರೆ ಜನಾರ್ದನ ರೆಡ್ಡಿ ಅವರಿಗೆ ಶ್ರೀರಾಮುಲು ಆಪ್ತ ಸ್ನೇಹಿತನಾಗಿದ್ದರೂ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಆದರೆ ಯಡಿಯೂರಪ್ಪ ಅವರ ಮಾತಿಗೂ ಜನಾರ್ದನ ರೆಡ್ಡಿ ಸೊಪ್ಪು ಹಾಕಿಲ್ಲ ಎನ್ನಲಾಗ್ತಿದ್ದು, ತನ್ನ ನಿರ್ಧಾರದಿಂದ ಹಿಂದೆ ಸರಿಯದೆ ಇರಲು ನಿರ್ಧಾರ ಮಾಡಿದ್ದಾರೆ. ಮುಂದಿನ 10 ದಿನಗಳಲ್ಲಿ ಹೊಸ ಪಕ್ಷ ಘೋಷಣೆ ಮಾಡಲಿದ್ದಾರೆ. ಇದು ಬಳ್ಳಾರಿ, ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಎದುರಾಳಿ ಆಗುವ ಸಾಧ್ಯತೆಗಳಿವೆ. 2013ರಲ್ಲಿ ಬಿಎಸ್ ಯಡಿಯೂರಪ್ಪ ಹೊಸ ಪಕ್ಷ ಸ್ಥಾಪನೆಯಿಂದ ಬಿಜೆಪಿ ಮುಗ್ಗರಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಇದೀಗ ಮತ್ತದೇ ಇತಿಹಾಸ ಮರುಕಳಿಸುತ್ತಾ ಅನ್ನೋ ಭೀತಿ ಕೇಸರಿ ಪಾಳಯದಲ್ಲಿ ಶುರುವಾಗಿದೆ.
ರೆಡ್ಡಿ ಮನೆಯ ವಾಸ್ತುವಿನಿಂದ ಯಾರಿಗೆ ಸಂಕಷ್ಟ ಎದುರಾಗುತ್ತೆ ?
ಬಳ್ಳಾರಿಯಲ್ಲಿ ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಈಗಾಗಲೇ ಬಿಜೆಪಿಯಿಂದ ಶಾಸಕರಾಗಿದ್ದಾರೆ. ಜನಾರ್ದನ ರೆಡ್ಡಿ ಅವರಿಂದಲೇ ಬಿಜೆಪಿ ಸಾಕಷ್ಟು ಪಡೆದುಕೊಂಡಿದ್ದು, ಇದೀಗ ಜೈಲಿನಿಂದ ಬಂದ ಬಳಿಕ ಬಿಜೆಪಿ ಜನಾರ್ದನ ರೆಡ್ಡಿ ಅವರನ್ನು ಸಾಕಷ್ಟು ದೂರ ಇಟ್ಟಿದೆ. ಇದೀಗ ಮತ್ತೆ ಜನಾದೇಶ ಪಡೆದುಕೊಂಡು ವಿಧಾನಸೌಧಕ್ಕೆ ಎಂಟ್ರಿ ಪಡೆದುಕೊಂಡರೆ ಮತ್ತೆ ಬಿಜೆಪಿ ರೆಡ್ ಕಾರ್ಪೆಟ್ ಮೂಲಕ ಸ್ವಾಗತ ಮಾಡಬಹುದು ಅನ್ನೋದು ಜನಾರ್ದನರೆಡ್ಡಿ ಕನಸು. ಆದರೆ ಬಿಜೆಪಿ ಅಭ್ಯರ್ಥಿಗಳಿಗೆ ದೊಡ್ಡ ಮಟ್ಟದ ಪೆಟ್ಟು ಬೀಳುವ ಸಾಧ್ಯತೆ ಇರುವ ಕಾರಣಕ್ಕೆ ಜನಾರ್ಧನ ರೆಡ್ಡಿಯನ್ನು ಕಟ್ಟಿ ಹಾಕಲು ಬಿಜೆಪಿ ಯತ್ನ ನಡೆಸುತ್ತಲೇ ಇದೆ. ಇದೀಗ ಗಂಗಾವತಿಯಲ್ಲಿ ಮೂರು ಅಂತಸ್ತಿನ ಹೈಫೈ ಮನೆ ಖರೀದಿಸಿರುವ ರೆಡ್ಡಿ, ಐದು ಬೆಡ್ ರೂಮ್, ಮೂರು ಹಾಲ್, ಅತ್ಯಾಧುನಿಕ ವಿನ್ಯಾಸ, ಜನರೊಂದಿಗೆ ಸಂಪರ್ಕ ಸಾಧಿಸಲು ಹೊರಗೆ ದೊಡ್ಡ ಹೊರಾಂಗಣ, ಆಪ್ತರ ಜೊತೆ ಮಾತನಾಡಲು ಪ್ರತ್ಯೇಕ ಕೋಣೆಗಳನ್ನು ನಿರ್ಮಿಸಲಾಗಿದೆ. ಸುಮಾರು 3 ಎಕರೆ ಪ್ರದೇಶದಲ್ಲಿರೋ ರೆಡ್ಡಿ ಮನೆ ಯಾರಿಗೆ ದುಬಾರಿ ಆಗಲಿದೆ ಅನ್ನೋ ಆತಂಕವನ್ನೂ ಸೃಷ್ಟಿಸಿದೆ.
ಕೃಷ್ಣಮಣಿ