ಅಫ್ಘನ್ ಅನ್ನು ತಮ್ಮ ಕೈವಶ ಪಡೆದುಕೊಂಡ ತಾಲಿಬಾನಿಗಳು ವಿಜಯೋತ್ಸವ ನಡೆಸುವ ವಿಡಿಯೋವೊಂದನ್ನು ಕೇರಳದ ತಿರುವಂತಪುರಂ ಸಂಸದ ಶಶಿ ತರೂರ್ ಹಂಚಿಕೊಂಡಿದ್ದು, ಅಲ್ಲಿಬ್ಬರು ಮಲಯಾಳಿ ತಾಲಿಬಾನಿಗಳಿರಬೇಕು ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಇಬ್ಬರು ಮಲಯಾಳಂ ಮಾತನಾಡಿದಂತೆ ತೋರುತ್ತದೆ. ಅದೇ ಆಧಾರದ ಮೇಲೆ ಅಲ್ಲಿಬ್ಬರು ಮಳೆಯಾಳಿಗಳಿರಬೇಕು ಎಂದು ತರೂರ್ ಟ್ವೀಟಿಸಿದ್ದಾರೆ.
“ಸಂಸಾರಿಕಟ್ಟೆ” (ಮಾತನಾಡಲಿ) ಎಂಬ ಶಬ್ದ ವಿಡಿಯೋದ ನಡುವಲ್ಲಿ ಅಸ್ಪಷ್ಟವಾಗಿ ಕೇಳಿ ಬರುತ್ತದೆ. ಆದರೆ, ಅದು ಮಲಯಾಳಂ ಭಾಷಿಕರೇ ಮಾತನಾಡಿದ್ದಾರೆಯೇ ಅಥವಾ ಮಳೆಯಾಲಂ ಪದಕ್ಕೆ ಹೋಲಿಕೆಯಾಗುವ ಬೇರೆ ಭಾಷೆಯ ಪದವೇ ಎಂಬುವುದು ಸ್ಪಷ್ಟವಾಗಿಲ್ಲ.
ಪತ್ರಕರ್ತ ರಮೀಝ್ ಹಂಚಿಕೊಂಡಿರುವ ವಿಡಿಯೋವನ್ನು ತರೂರ್ ರಿಟ್ವೀಟ್ ಮಾಡಿದ್ದು, ‘ಇಲ್ಲಿ ಕನಿಷ್ಠ ಇಬ್ಬರು ಮಲಯಾಳಿ ತಾಲಿಬಾನ್ಗಳಿರುವಂತೆ ತೋರುತ್ತಿದೆ. ವಿಡಿಯೊದ 8 ನೇ ಸೆಕೆಂಡ್ನಲ್ಲಿ ವ್ಯಕ್ತಿಯೊಬ್ಬರು ‘ಸಂಸಾರಿಕಟ್ಟೆ’ (ಮಾತಾಡಲಿ)’ ಎಂದು ಹೇಳುತ್ತಾರೆ. ಇನ್ನೊಬ್ಬರು ಅದನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿದೆ, ಎಂದು ಬರೆದಿದ್ದಾರೆ.
ಅದಕ್ಕೆ ಸ್ಪಷ್ಟನೆ ನೀಡಿರುವ ರಮೀಝ್, ʼತಾಲಿಬಾನ್ನ ರ್ಯಾಂಕ್ನಲ್ಲಿ ಮತ್ತು ಫೈಲ್ನಲ್ಲಿ ಯಾವುದೇ ಕೇರಳ ಮೂಲದವರಿಲ್ಲ, ಅವರು ಜಬುಲ್ ಪ್ರಾಂತ್ಯದ ಬಲೂಚ್ ಪ್ರದೇಶದವರಾಗಿದ್ದು, ಅವರು ಬ್ರಾಹ್ವಿ ಭಾಷೆಯನ್ನು ಮಾತನಾಡುತ್ತಿದ್ದಾರೆ. ಆಪ್ರಾಂತ್ಯದಲ್ಲಿ ಬ್ರಾಹ್ವಿ ಭಾಷೆಯನ್ನು ವ್ಯಾಪಕವಾಗಿ ಮಾತನಾಡುತ್ತಾರೆ, ಇದು ದಾರ್ವಿಡಿಯನ್ ಭಾಷೆ ತೆಲುಗು ತಮಿಳು ಮಲಯಾಳಂ ಇತ್ಯಾದಿಗಳನ್ನು ಹೋಲುತ್ತದೆ.ʼ ಎಂದು ಹೇಳಿದ್ದಾರೆ.
ಬ್ರಾಹ್ವಿ ಭಾಷೆ ದ್ರಾವಿಡಿಯನ್ ಭಾಷೆಗಳಿಗೆ ಹೋಲುವುದರ ಕುರಿತು ಈ ಹಿಂದೆಯೇ ಹಲವು ಸಂಗತಿಗಳು ಹೊರ ಬಿದ್ದಿದ್ದವು. ಬ್ರಾಹ್ವಿ ಭಾಷೆಯ ಹಲವು ಪದಗಳು ತಮಿಳಿನ ಪದಗಳಿಗೆ ಹೋಲಿಕೆಯಾಗುವುದರ ಕುರಿತು Brahui TV ಎಂಬ ಯುಟ್ಯೂಬ್ ಚಾನೆಲ್ 2018 ರಲ್ಲಿ ವಿಡಿಯೋ ಪ್ರಸಾರ ಮಾಡಿತ್ತು.
ಇನ್ನು ತರೂರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ದಿ ನ್ಯೂಸ್ ಮಿನಿಟ್ ಪತ್ರಕರ್ತ ಕೋರಾ ಅಬ್ರಹಾಂ ಎಂಬವರು, ‘ಕೇರಳದ ಕೆಲ ಮಂದಿ ಜಿಹಾದಿ ಗುಂಪುಗಳನ್ನು ಸೇರುತ್ತಿರುವುದರಿಂದ ಬಲಪಂಥೀಯ ಗುಂಪುಗಳು ಕೇರಳ ವಿರುದ್ಧ ದ್ವೇಷಪೂರಿತ ಅಪಪ್ರಚಾರ ನಡೆಸುತ್ತಿವೆ. ಇಂಥಹ ಹೊತ್ತಿನಲ್ಲಿ ಹೀಗೆ ಟ್ವೀಟ್ ಮಾಡುವುದು ಅತ್ಯಂತ ಸಮಸ್ಯಾತ್ಮಕ. ನೀವು ಕೇರಳ ರಾಜಧಾನಿಯ ಸಂಸದರು ಎಂಬುದರ ಅರಿವು ಇದ್ದರೆ ಒಳಿತು,‘ ಎಂದು ತರೂರ್ಗೆ ಉತ್ತರ ನೀಡಿದ್ದಾರೆ.
ಬ್ರಾಹ್ವಿ ಭಾಷೆಯಲ್ಲಿ ಇದೇ ಶಬ್ದಕ್ಕೆ ಹೋಲಿಕೆಯಾಗುವ ಪದವನ್ನು ತಾಳೆ ಮಾಡಿರುವುದರಲ್ಲಿ (سما تننگ, Sama Tinning) ಎಂಬ ಪದವನ್ನು ಅವರು ಬಳಸಿರುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಈ ಶಬ್ದವು ʼಎಬ್ಬಿಸುʼ ಎಂಬರ್ಥವನ್ನು ನೀಡುತ್ತದೆ. ನೆಲದಲ್ಲಿ ಕೂತಿದ್ದ ವ್ಯಕ್ತಿಯನ್ನು ಎಬ್ಬಿಸಲು ಹೇಳಿರಬಹುದೆಂದು ಇದರ ಆಧಾರದಲ್ಲಿ ಅಂದಾಜಿಸಬಹುದು. ಇದನ್ನೇ ಹೋಲುವ ಇನ್ನೊಂದು ಶಬ್ದವು (سرمننگ, Ser Manning) ʼತೃಪ್ತಿʼ ಎಂಬರ್ಥವನ್ನೂ ನೀಡುತ್ತದೆ. ಕಾಬೂಲ್ ಪ್ರವೇಶಿಸಿದ ತೃಪ್ತಿಯನ್ನು ವ್ಯಕ್ತಪಡಿಸಿದ ಸಾಧ್ಯತೆಯೂ ಇದೆ. ಅದಾಗ್ಯೂ, ಆ ಶಬ್ದ ನಿಜಾರ್ಥ ಇನ್ನೂ ನಿಖರವಾಗಿಲ್ಲ. ತರೂರ್ ಒಬ್ಬ ಸಂಸದರಾಗಿ ಯಾವುದೇ ಆಧಾರವಿಲ್ಲದೆ ಬೀಸು ಹೇಳಿಕೆ ನೀಡಿರುವುದು ಸಾಕಷ್ಟು ಚರ್ಚೆಯನ್ನುಂಟು ಮಾಡಿದೆ.








