ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ನಿರ್ಮಾಣ ಆಗುತ್ತಿದೆ. ಶ್ರೀರಾಮರು ವನವಾಸ ಅನುಭವಿಸುವಾಗ ಇಡೀ ಭರತ ಖಂಡವನ್ನೇ ಸುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ವನವಾಸದ ವೇಳೆ ದೇಶದ ನಾನಾ ಕಡೆ ಸಂಚರಿಸಿದ್ದ ಶ್ರೀರಾಮ ಲಕ್ಷ್ಮಣರು. ಬೆಂಗಳೂರು ನಗರದಲ್ಲೂ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟಿದ್ದಾರೆ.
ಶ್ರೀ ರಾಮನು ಪಾದ ಇಟ್ಟ ಕಾರಣಕ್ಕಾಗೇ ಈ ಊರನ್ನು ಪಾದರಾಯನಪುರ ಎಂದು ಕರೆಯಲಾಗುತ್ತದೆ. ವನವಾಸ, ಸೀತಾಪಹರಣ, ಸೀತೆಯ ರಕ್ಷಣೆಯ ದಿನಗಳಲ್ಲಿ ಶ್ರೀರಾಮ ಇಡೀ ದೇಶವನ್ನು ಸುತ್ತಾಡುವ ಸಮಯದಲ್ಲಿ ಕರ್ನಾಟಕದಲ್ಲೇ ಅತೀ ಹೆಚ್ಚು ದಿನಗಳ ಕಾಲ ಸಂಚರಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಪ್ರದೇಶಕ್ಕೂ ಭೇಟಿ ನೀಡಿದ್ದ ಶ್ರೀರಾಮ ಮತ್ತು ಲಕ್ಷ್ಮಣ, ಅಂದು ಕಾಡು-ಮೇಡು ಎನಿಸಿಕೊಂಡಿದ್ದ ರಾಜ್ಯ ರಾಜಧಾನಿ ಬೆಂಗಳೂರಿನ ಹೃದಯಭಾಗಕ್ಕೂ ಭೇಟಿ ನೀಡಿದ್ದರು ಎನ್ನುವುದು ಪ್ರತೀತಿ.
ಈಗಿನ ಜಗಜೀವನರಾಮ್ ನಗರವನ್ನು ಪಾದರಾಯನಪುರ ಎಂದು ಕರೆಯಲಾಗ್ತಿತ್ತು. ಶ್ರೀರಾಮ ಇಲ್ಲಿಗೆ ಬಂದಿದ್ದ ಕಾರಣಕ್ಕಾಗಿಯೇ ಪಾದರಾಯನ ಪುರ ಎಂದು ನಾಮಕರಣ ಮಾಡಲಾಗಿದೆ ಎನ್ನಲಾಗುತ್ತದೆ. ರಾಮ ಸ್ಪರ್ಶಿಸಿದ ಪಾದದ ಹೆಜ್ಜೆ ಗುರುತಿನ ಕುರುಹು ಈಗಲೂ ಇಲ್ಲಿದ್ದು, ಪಾದರಾಯನ ದೇವಾಲಯದಲ್ಲಿ ಈಗಲೂ ಪೂಜೆ ಪುನಸ್ಕಾರ ನಡೆಯುತ್ತದೆ. ಪಾದರಾಯಪುರ ಪ್ರದೇಶ ಬೆಟ್ಟ-ಗುಡ್ಡಗಳಿಂದ ಕೂಡಿತ್ತು. ರಾಮನ ಪಾದ ಸ್ಪರ್ಶಿಸಿದ ಸ್ಥಳ ಎನ್ನಲಾದ ಸ್ಥಳವೂ ಎತ್ತರದ ಗುಡ್ಡದ ಮೇಲಿದೆ. ನಾಲ್ಕು ಅಡಿಯ ರಾಮನ ಎರಡು ಪಾದಗಳನ್ನು ಗುಡ್ಡದ ಮೇಲೆ ಕೆತ್ತಲಾಗಿದೆ. ಇದರ ಅಕ್ಕಪಕ್ಕದಲ್ಲೇ ಅಳಿಲು, ಗರುಡ ಚಿತ್ರಗಳೂ ಇವೆ. ಪ್ರತಿನಿತ್ಯ ಪೂಜಿಸಲಾಗುತ್ತಿದೆ.
ಪಾದರಾಯ ದೇವಾಲಯದ ಪಕ್ಕ ಕೋದಂಡರಾಮ ದೇವಾಲಯ ನಿರ್ಮಿಸಲಾಗಿದೆ. ರಾಮ, ಲಕ್ಷ್ಮಣ, ಸೀತೆ ಮೂರ್ತಿಯನ್ನು ಇರಿಸಿ, ನಿತ್ಯ ಪೂಜೆ ಪೂಜಾ ಕಾರ್ಯ ಮಾಡಲಾಗುತ್ತಿದೆ. ರಾಮ ಲಕ್ಷ್ಮಣರು ಕರ್ನಾಟಕದಲ್ಲಿ ಅತೀ ಹೆಚ್ಚು ದಿನ ಇದ್ದ ಕಾರಣದಿಂದಲೋ ಏನೋ ಕರ್ನಾಟಕಕ್ಕೂ ಅಯೋಧ್ಯೆಗೂ ಅತ್ಯಧಿಕ ಸಂಬಂಧಗಳು ಕಾಣಿಸುತ್ತಿವೆ. ಕರ್ನಾಟಕ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಇಂದಿನ ಬಾಲ ರಾಮನ ಮೂರ್ತಿಯನ್ನು ಕೆತ್ತಿದ್ದಾರೆ ಎನ್ನಬಹುದು.