ಅಯೋಧ್ಯೆಯಲ್ಲಿ (Ayodhya) ರಾಮಮಂದಿರ (Ramamandira) ನಿರ್ಮಾಣದ ಕೆಲಸ ಅದ್ಧೂರಿಯಾಗಿ ನಡೀತಿದೆ.. ಜನವರಿ 22ಕ್ಕೆ ಉದ್ಘಾಟನೆಯೂ ಆಗ್ತಿದೆ. ರಾಮನ ಪ್ರಾಣ ಪ್ರತಿಷ್ಠಾಪನೆಯೂ ನಡೆಯಲಿದ್ದು, ಪಕ್ಷಾತೀತವಾಗಿ ಎಲ್ಲರಿಗೂ ಆಹ್ವಾನಗಳು ಹೋಗಿದೆ.. ಆದ್ರೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದ ನಾಲ್ಕು ಪ್ರಮುಖ ಶಕ್ತಿ ಪೀಠಗಳಾದ ಶಂಕರಾಚಾರ್ಯರ ಪೈಕಿ ಇಬ್ಬರು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.. ಒರಿಸ್ಸಾದ ಪುರಿಯಲ್ಲಿರುವ ಶ್ರೀ ಗೋವರ್ಧನ ಪೀಠ, ಹಾಗು ಪ್ರಧಾನಿ ನರೇಂದ್ರ ಮೋದಿ ಹುಟ್ಟೂರು ಗುಜರಾತ್ನ ದ್ವಾರಕದಲ್ಲಿರುವ ಶ್ರೀ ದ್ವಾರಕಾ ಪೀಠದ ಶ್ರೀಗಳು ಅಸಮಾಧಾನ ಹೊರಹಾಕಿದ್ದಾರೆ.. ರಾಮಮಂದಿರ ಉದ್ಘಾಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಕಾಮಗಾರಿ ಪೂರ್ಣವಾಗದೆ ಉದ್ಘಾಟನೆ ಸರಿಯಲ್ಲ ಎಂದಿದ್ದಾರೆ.
![](https://pratidhvani.com/wp-content/uploads/2024/01/No-One-Is-Like-Lord-Srirama.png)
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತಿರುವುದು ದೇಶದ ಎಲ್ಲರಿಗೂ ಸಂತಸದ ವಿಚಾರವೇ ಆಗಿದೆ. ಆದರೂ ಕಾಮಗಾರಿ ಪೂರ್ಣವಾಗದೆ ಉದ್ಘಾಟನೆ ಮಾಡುತ್ತಿರುವುದು ದೇಶಕ್ಕೆ ಸಂಕಷ್ಟ ತಂದೊಡ್ಡುವ ನಂಬಿಕೆಯ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಇನ್ನೂ ಸಾಕಷ್ಟು ಕೆಲಸಗಳು ಬಾಕಿಯಿದ್ದರೂ ಯಾಕೆ ಆತುರದಿಂದ ಉದ್ಘಾಟನೆ ಮಾಡಲಾಗ್ತಿದೆ. ರಾಮಮಂದಿರ ಮೊದಲೇ ಇತ್ತು.. ಇದು ಜೀರ್ಣೋದ್ದಾರ ಅಷ್ಟೇ ಅಂದಿದ್ದಾರೆ ಸಂತರು. ಉತ್ತರಾಖಂಡ ಜ್ಯೋತಿರ್ಮಠ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಮಾತನಾಡಿ, ರಾಮಮಂದಿರವನ್ನು ಈಗ ಕಟ್ಟಿಲ್ಲ. ಅದು ಜೀರ್ಣೋದ್ಧಾರ ಮಾಡಲಾಗ್ತಿದೆ ಅಷ್ಟೇ. ಮಂದಿರ ಪೂರ್ಣವಾದ ಮೇಲೆ ರಾಮನ ಪ್ರಾಣ ಪ್ರತಿಷ್ಠಾಪನೆ ಆಗ್ಬೇಕು ಎಂದು ಹೇಳಿದ್ದಾರೆ.
![](https://pratidhvani.com/wp-content/uploads/2024/01/56850ce0dea5553be25632dedca57f7e-1.jpg)
ಅಯೋಧ್ಯೆಯಲ್ಲಿ ಮೊದಲಿಂದಲೂ ಶ್ರೀ ರಾಮನಿದ್ದಾನೆ. ಮಂದಿರ ಪೂರ್ಣವಾಗಿಲ್ಲ, ಮೊದಲಿಗೆ ಮಂದಿರ ಪೂರ್ಣವಾಗಲಿ. ಮಂದಿರ ಪೂರ್ಣ ಆದ್ಮೇಲೆ ಲೋಕಾರ್ಪಣೆ ಆಗ್ಬೇಕು. ವಿಧಿ-ವಿಧಾನಗಳಂತೆ ಮಂದಿರ ಕೆಲಸ ಪೂರ್ಣವಾಗಿಲ್ಲ. ರಾಜಕೀಯದವರಿಗೆ ಮಾತ್ರ ಉದ್ಘಾಟನೆ ಅವಶ್ಯಕತೆಯಿದೆ. ರಾಮ ಮಂದಿರದ ಹೆಸರಲ್ಲಿ ಲಾಭ ಪಡೆಯುತ್ತಿದ್ದಾರೆ. ಲಾಭ ಪಡೆಯುವುದಾದರೆ ಪಡೆದುಕೊಳ್ಳಲಿ, ಆದರೆ ಅಪೂರ್ಣವಾಗ ಮಂದಿರ ಉದ್ಘಾಟನೆ ದೇಶಕ್ಕೆ ಒಳಿತಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ ಶ್ರೀಗಳು. ಒಡಿಶಾದ ಪುರಿ ಗೋವರ್ಧನ ಪೀಠದ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ.. ಶ್ರೀರಾಮ ಧರ್ಮಕ್ಕೆ ಸೀಮಿತ ಅಲ್ಲ. ಎಲ್ಲರ ಸ್ವತ್ತು.. ಆದ್ರೆ ನಾನು ಅಯೋಧ್ಯೆ ಕಾರ್ಯಕ್ರಮಕ್ಕೆ ಹೋಗಲ್ಲ.. ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಹಿಂದೂಗಳ ಸಿದ್ಧಾಂತಕ್ಕೆ ತದ್ವಿರುದ್ಧವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ
ದ್ವಾರಕಾ ಪೀಠದ ಸದಾನಂದ ಸರಸ್ವತಿ ಸ್ವಾಮೀಜಿ, ಮಂದಿರ ಉದ್ಘಾಟನೆ ಸಂಭ್ರಮದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸನಾತನ ಧರ್ಮದ ನೀತಿ, ನಿಯಮಗಳು ಅನುಸಾರ ಮಂದಿರ ಉದ್ಘಾಟನೆ ಆಗ್ಬೇಕು. ದ್ವಾರಕಾದಲ್ಲಿ ಕೆಲ ಪೂರ್ವನಿಯೋಜಿತ ಕಾರ್ಯಕ್ರಮಗಳು ಇರುವ ಹಿನ್ನೆಲೆಯಲ್ಲಿ ನಾನು ಅಯೋಧ್ಯೆಗೆ ಹೋಗ್ತಿಲ್ಲ ಎಂದಿದ್ದಾರೆ. ಕರ್ನಾಟಕದ ಶೃಂಗೇರಿ ಪೀಠದ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಪ್ರತಿಕ್ರಿಯಿಸಿ, ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಸಂದರ್ಭದಲ್ಲಿ ಭಾಗವಹಿಸಿ ಎಲ್ಲರೂ ಕೃತಾರ್ಥರಾಗಿ ಎಂದಷ್ಟೇ ಹೇಳಿದ್ದಾರೆ. ಆದರೆ ಯಾರೊಬ್ಬರೂ ಅಪೂರ್ಣವಾದ ದೇವಸ್ಥಾನ ಉದ್ಘಾಟನೆ ಬಗ್ಗೆ ಚರ್ಚೆ ಆಗ್ತಿಲ್ಲ. ನಿಮ್ಮ ಮನೆಯನ್ನೇ ಅರ್ಧ ನಿರ್ಮಾಣ ಆದ ಕೂಡಲೇ ಗೃಹ ಪ್ರವೇಶ ಮಾಡುವಿರಾ..? ನೀವು ಹೌದು ಎಂದಾದರೆ ರಾಮ ಮಂದಿರ ಉದ್ಘಾಟನೆ ಸರಿಯಾಗಿದೆ ಎಂದುಕೊಳ್ಳಿ. ಅರ್ಧ ನಿರ್ಮಾಣವಾದ ಮನೆ ಉದ್ಘಾಟನೆ ಮಾಡಬಾರದು ಎನ್ನುವುದು ನಿಮ್ಮ ಉತ್ತರ ಆಗಿದ್ದರೆ, ರಾಮ ಮಂದಿರಕ್ಕೂ ಅದೇ ಅನ್ವಯ ಅಲ್ಲವೇ..?