
ಯಾದಗಿರಿಯಲ್ಲಿ ಪಿಎಸ್ಐ ಪರಶುರಾಮ್ (Yadagiri PSI Parashuram Death Case) ಸಾವಿನ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ನನ್ನ ಗಂಡನ ಸಾವಿಗೆ ಶಾಸಕ ಚೆನ್ನಾರೆಡ್ಡಿ (MLA Chennareddy)ಹಾಗೂ ಅವರ ಮಗನೇ ಕಾರಣ ಎಂದು ಪತ್ನಿ ನೀಡಿರುವ ದೂರಿನ ಮೇಲೆ ಎಫ್ಐಆರ್ ದಾಖಲಾಗಿದೆ. ಟ್ರಾನ್ಸ್ಫರ್ ಕ್ಯಾನ್ಸಲ್ ಮಾಡಿಸಿ ಠಾಣೆಯಲ್ಲೇ ಉಳಿಸಿಕೊಳ್ಳಲು ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಪುತ್ರ ಪಂಪಣ್ಣಗೌಡ 30 ರಿಂದ 40 ಲಕ್ಷ ರೂಪಾಯಿ ಹಣ ಕೇಳಿದ್ದಾರೆ ಎಂದು ನೀಡಿದ ದೂರಿನ ಮೇಲೆ ಎಫ್ಐಆರ್ ದಾಖಲಾಗಿದೆ. ಪ್ರಕರಣವನ್ನ ಸಿಐಡಿ ತನಿಖೆಗೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ಶಾಸಕ ಚನ್ನಾರೆಡ್ಡಿ(MLA Channareddy), ಪಂಪಣ್ಣಗೌಡ (Pampannna Gowda) ಜೈಲಿಗೆ ಹೋಗಬೇಕು ಅಂತ ಮೃತ ಪಿಎಸ್ಐ ಪರಶುರಾಮ್ ಪತ್ನಿ ಶ್ವೇತಾ (PSI Parameshwar WIfe Shwetha) ಆಕ್ರೋಶ ಹೊರಹಾಕಿದ್ದಾರೆ. ಅವ್ರು ಜೈಲಿಗೆ ಹೋಗೋದನ್ನ ನಾನು ನೋಡಬೇಕು. ಆರೋಪಿಗಳು ಶಾಸಕರಾದ್ರೂ ಜೈಲಿಗೆ ಹೋಗಬೇಕು ಅಂತ ಆಗ್ರಹಿಸಿದ್ದಾರೆ. ಮೃತ ಪಿಎಸ್ಐ ಸ್ವಗ್ರಾಮ ಸೋಮನಾಳದಲ್ಲಿ ಜನರು ಪ್ರತಿಭಟನೆ ಮಾಡಿದ್ದಾರೆ. ಆರೋಪಿಗಳನ್ನ ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಿದ ಸ್ಥಳದಲ್ಲೇ ಗ್ರಾಮಸ್ಥರು ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಪರಶುರಾಮ್ ಯಾದಗಿರಿ ಠಾಣೆಯಲ್ಲಿ PSI ಆಗಿ ಕಳೆದ 7 ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. 7 ತಿಂಗಳಿಗೇ ಇಲ್ಲಿಂದ ವರ್ಗಾವಣೆ ಮಾಡಲಾಗಿತ್ತು . ಶಾಸಕ ಚನ್ನಾರೆಡ್ಡಿ ಪಾಟೀಲ್, ಅವ್ರ ಪುತ್ರ ಉದ್ದೇಶಪೂರ್ವಕವಾಗಿ ವರ್ಗಾವಣೆ ಮಾಡಿಸಿದ್ದಾರೆ. ಇದರಿಂದ ನನ್ನ ಪತಿ ಮಾನಸಿಕವಾಗಿ ನೊಂದಿದ್ದರು. ಇದೇ ಠಾಣೆಯಲ್ಲಿ ಮುಂದುವರಿಸಲು ಮನವಿ ಮಾಡಿದ್ದರು. ಆದರೆ ಅವರು ಕೇಳಿದ ₹30 ಲಕ್ಷ ಹೊಂದಿಸಲು ಆಗಲಿಲ್ಲ. ಆದರೆ ಹಣ ಕೊಡಲು ಆಗದಿದ್ದರೆ ಹೋಗಬೇಕು ಎಂದಿದ್ರು. ನಿಮ್ಮ ಜಾತಿಯವರು ನನ್ನ ಕ್ಷೇತ್ರದಲ್ಲಿ ಇರಬಾರದು ಅಂತಿದ್ರು. ಇದರಿಂದ ನನ್ನ ಪತಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಅವ್ರು ಮಾಡಿದ ಅವಮಾನದಿಂದ ಬೇಸರಗೊಂಡಿದ್ರು. ನನಗೆ ಜೀವನ ಸಾಕಾಗಿದೆ ಅಂತ ನನ್ನ ಪತಿ ಹೇಳಿದ್ರು. ನನಗೆ ಸಾಯಬೇಕು ಅನ್ನಿಸುತ್ತಿದೆ ಅಂತ ಹೇಳಿದ್ದರು. ರಾತ್ರಿ ಮಲಗಿದವರು ಬೆಳಗ್ಗೆ ಅವರು ಏಳಲೇ ಇಲ್ಲ. ನಾನು ನೋಡಿದಾಗ ಬಾಯಿ, ಮೂಗಿನಲ್ಲಿ ರಕ್ತ ಬಂದಿತ್ತು ಎಂದು ಪತ್ನಿ ಆರೋಪಿಸಿದ್ದಾರೆ.

ಪಿಎಸ್ಐ ಪರಶುರಾಮ್ ಸಾವು ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಇಂದು ಯಾದಗಿರಿ ಸೋಮನಾಳಕ್ಕೆ ವಿಪಕ್ಷ ನಾಯಕ ಆರ್. ಅಶೋಕ್(R Ashok) ಭೇಟಿ ನೀಡಲಿದ್ದು, ಮೃತ ಪರಶುರಾಮ್ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಸದ್ಯ ಈ ಪ್ರಕರಣ ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಹೀಗಾಗಿ ಸರ್ಕಾರದ ವರ್ಗಾವಣೆ ಕುರಿತು ಬಿಜೆಪಿ ನಾಯಕರು ಮಾತಕತೆ ನಡೆಸಲಿದ್ದಾರೆ. ಪಿಎಸ್ಐ ಅನುಮಾನಾಸ್ಪದ ಸಾವು ಪ್ರಕರಣದ ಬಗ್ಗೆ ಸರ್ಕಾರದ ವಿರುದ್ಧ ದೋಸ್ತಿ ನಾಯಕರು ಕಿಡಿಕಾರಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಧಿಕಾರಿಗಳ ಆತ್ಮಹತ್ಯೆ ಹೆಚ್ಚಾಗಿದೆ. ಈಗ ದಲಿತ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಸರ್ಕಾರದ ಕಿರುಕುಳವೇ ಕಾರಣ ಅಂತ ವಾಗ್ದಾಳಿ ನಡೆಸಿದ್ದಾರೆ.

ಆದರೆ ಪಿಎಸ್ಐ ಪರಶುರಾಮ ಸಾವು ಬಗ್ಗೆ ಗೃಹ ಸಚಿವ ಪರಮೇಶ್ವರ್(Home Minister Parameshwar) ಮಾತಾಡಿ, ಆಡಳಿತ ಪಕ್ಷದ ಶಾಸಕರೇ ಇದ್ರೂ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ ಎಂದಿದ್ದಾರೆ. ರಾತ್ರಿ ಮಲಗಿದ್ದವರು ಬೆಳಗ್ಗೆ ಏಳಲಿಲ್ಲ ಎಂದಾಗ, ಇದು ಆತ್ಮಹತ್ಯನಾ ಅನ್ನೋ ಬಗ್ಗೆ ತನಿಖೆ ನಡೆಯುತ್ತದೆ. ಯಾರಾದರೂ ಕೊಲೆ ಮಾಡಿದ್ರಾ ಅನ್ನೋ ಬಗ್ಗೆಯೂ ಪೊಲೀಸ್ರು ತನಿಖೆ ಮಾಡ್ತಾರೆ. ಜೊತೆಗೆ ಮರಣೋತ್ತರ ಪರೀಕ್ಷೆ ವರದಿ ಏನು ಬರಲಿದೆ ಅನ್ನೋದರ ಆಧಾರದಲ್ಲಿ ಪೊಲೀಸ್ರ ತನಿಖೆಯ ದಿಕ್ಕು ಬದಲಾಗುತ್ತದೆ. ಈ ಪ್ರಕರಣದಲ್ಲಿ ಪಿಎಸ್ಐ ಪತ್ನಿ ಆರೋಪ ಮಾಡಿರುವ ಕಾರಣಕ್ಕೆ 30 ರಿಂದ 40 ಲಕ್ಷ ಹಣ ಕೇಳಿದ್ದು ಸತ್ಯನಾ..? ಯಾವಾಗ ಭೇಟಿ ಮಾಡಿದ್ರು..? ಹಣ ಕೊಡದಿದ್ದರೆ ವರ್ಗಾವಣೆ ಮಾಡ್ತೇವೆ ಎಂದಿದ್ರಾ..? ಅನ್ನೋ ಬಗ್ಗೆಯೂ ತನಿಖೆ ನಡೆಯಬೇಕಿದೆ. ಆದರೆ ಆಡಳಿತ ಪಕ್ಷದ ಶಾಸಕರೇ ಆಗಿರುವಾಗ ತನಿಖೆ ನಡೆದು ನ್ಯಾಯ ಸಿಗುತ್ತಾ ಅನ್ನೋದು ಅನುಮಾನ ಆಗಿದೆ.
ಕೃಷ್ಣಮಣಿ




