ಸಿ. ಕೆ. ಫೈಸಲ್
( ಮೂಲ : In its 74th year, India’s Constitution has been emptied of its soul – C K Faisal – The Scroll.)
ಲೇಖಕರು ಕೇರಳ ಸರ್ಕಾರದ ಉಪ ಕಾನೂನು ಕಾರ್ಯದರ್ಶಿಗಳು
ಅನುವಾದ : ನಾ ದಿವಾಕರ
ಜಾಗತಿಕ ಪ್ರಜಾಪ್ರಭುತ್ವವು 2024ರ ವರ್ಷದಲ್ಲಿ ನಿರ್ಣಾಯಕವಾದ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿದ್ದು, ಈ ವರ್ಷದಲ್ಲೇ 40 ದೇಶಗಳಲ್ಲಿ ಚುನಾವಣೆಗಳು ನಡೆಯಲಿವೆ. ಆದರೆ ಭವಿಷ್ಯ ನುಡಿ ಆಶಾದಾಯಕವಾಗಿ ಕಾಣುತ್ತಿಲ್ಲ. ಭಾರತದಲ್ಲಿ ಜನವರಿ 22ರ ರಾಮಮಂದಿರ ಪ್ರತಿಷ್ಠಾಪನೆ ಹಾಗೂ ಜನವರಿ 26ರ ಗಣತಂತ್ರ ದಿನಾಚರಣೆಯ ನಂತರದಲ್ಲಿ ಮಹಾ ಚುನಾವಣೆಗಳು ನಡೆಯಲಿವೆ. ಭಾರತದ ಸಂವಿಧಾನವನ್ನು 1950ರ ಜನವರಿ 26ರಂದು ಅಂಗೀಕರಿಸಿ ಅನುಷ್ಠಾನಗೊಳಿಸಲಾಯಿತು. ಅಂದರೆ ಗಣತಂತ್ರ ಭಾರತ 74 ವರ್ಷಗಳನ್ನು ಪೂರೈಸಿದೆ.
ಈ ಸಂದರ್ಭದಲ್ಲಿ ಸಂವಿಧಾನದ ಅಂತಃಸತ್ವ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಅಂತಃಸತ್ವವೇ ಸಾಂವಿಧಾನಿಕತೆ (Constitutionalism) . ಅಂದರೆ ಆಡಳಿತಾರೂಢ ಸರ್ಕಾರವು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಕಾನೂನಾತ್ಮಕವಾಗಿ ಇತಿಮಿತಿಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಸರ್ಕಾರದ ಆಡಳಿತಾಧಿಕಾರ ಮತ್ತು ನ್ಯಾಯಸಮ್ಮತತೆಯು ಈ ಮಿತಿಗಳ ಅನುಸರಣೆಯನ್ನೇ ಅವಲಂಬಿಸುತ್ತದೆ. ಸಾಂವಿಧಾನಿಕತೆಯ ಮತ್ತೊಂದು ಅಂಶವೆಂದರೆ, ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಾಗೂ ಸ್ವಾಭಾವಿಕ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿರುವುದು. ಸರ್ಕಾರದ ಆಡಳಿತ ಯಂತ್ರಗಳು ಹಾಗೂ ಸ್ವತಃ ಸರ್ಕಾರವು ವ್ಯಕ್ತಿಯ ಸ್ವಾಭಾವಿಕ ಹಕ್ಕುಗಳನ್ನು ರಕ್ಷಿಸುವ ರೀತಿಯಲ್ಲೇ ರಚಿಸಲಾಗಿರುತ್ತವೆ.
ಆದರೆ ಅಮೆರಿಕದ ರಾಜಕೀಯ ವಿಜ್ಞಾನಿ ಚಾರ್ಲ್ಸ್ ಹೊವಾರ್ಡ್ ಮೆಲ್ವೈನ್ ಹತ್ತು ವರ್ಷಗಳ ಹಿಂದೆಯೇ ತಮ್ಮ “ Consitutionalism : Ancient and Modern ” ಕೃತಿಯಲ್ಲಿ ಹೇಳಿರುವಂತೆ, ಜಗತ್ತಿನ ಸುದೀರ್ಘ ಚರಿತ್ರೆಯಲ್ಲಿ ಸಾಂವಿಧಾನಿಕತೆಯು ಇಂದು ಪ್ರಶ್ನೆಗೊಳಗಾಗುತ್ತಿರುವಂತೆ ಎಂದಿಗೂ ಆಗಿರಲಿಲ್ಲ. ಇಂದು ದಾಳಿಗೊಳಗಾಗುತ್ತಿರುವ ರೀತಿಯಲ್ಲಿ, ಅಪಾಯಕ್ಕೊಳಗಾಗಿರುವಂತೆ, ಎಂದಿಗೂ ಸಾಂವಿಧಾನಿಕತೆ ಸಂದಿಗ್ಧತೆ ಎದುರಿಸಿರಲಿಲ್ಲ. ಉದಾರವಾದಿ ದೃಷ್ಟಿಕೋನದಿಂದ ನೋಡಿದಾಗ, ವ್ಯಕ್ತಿಗಳ ಹಕ್ಕುಗಳು ಮತ್ತು ಘನತೆಯನ್ನು ಎತ್ತಿಹಿಡಿಯುವುದು ಸಂವಿಧಾನದ ಆದ್ಯಂತಿಕ ಗುರಿಯಾಗಿರುತ್ತದೆ. ಯಾವುದೇ ಸರ್ಕಾರವಾದರೂ ಈ ಗುರಿಯನ್ನು ತಲುಪುವ ಒಂದು ಮಾರ್ಗವಾಗಿರುತ್ತದೆ. ಹಾಗಾಗಿ ಸಾಂವಿಧಾನಿಕತೆಯನ್ನು ಕಳೆದುಕೊಂಡ ಯಾವುದೇ ಸಂವಿಧಾನವು ಟೊಳ್ಳು ಎನಿಸಿಕೊಳ್ಳುತ್ತದೆ.
ಸಾಂವಿಧಾನಿಕತೆ ಮತ್ತು ಪ್ರಭುತ್ವ ನ್ಯಾಯಸಮ್ಮತತೆ:
ಕಾನೂನು ತಜ್ಞ ಹಿಲೇರ್ ಬಾರ್ನೆಟ್ ಅವರು ತಮ್ಮ Constitutional and Administrative Law ಕೃತಿಯಲ್ಲಿ ಸಾಂವಿಧಾನಿಕತೆಯ ನಾಲ್ಕು ಪ್ರಮುಖ ಆಯಾಮಗಳನ್ನು ಗುರುತಿಸುತ್ತಾರೆ. ಮೊದಲನೆಯದು ಅಧಿಕಾರಾರೂಢ ಸರ್ಕಾರವು ಕಾನೂನಿಗೆ ಉತ್ತರದಾಯಿಯಾಗಿರುವುದು. ಎರಡನೆಯ ತತ್ವ ಎಂದರೆ ಕಾನೂನು ಮತ್ತು ಅಧಿಕಾರದ ವ್ಯಾಪ್ತಿಯಿಂದ ಹೊರತಾಗಿಯೂ ಅಧಿಕಾರ ಚಲಾಯಿಸುವುದರಲ್ಲಿ ವ್ಯಕ್ತಿಯ/ನಾಗರಿಕರ ಹಕ್ಕುಗಳನ್ನು ಗೌರವಿಸುವುದು. ಮೂರನೆಯ ತತ್ವ ಎಂದರೆ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ಸಂಸ್ಥೆಗಳಿಗೆ ನೀಡಲಾಗುವ ಅಧಿಕಾರ ವ್ಯಾಪ್ತಿಯನ್ನು, ಅಧಿಕಾರದ ದುರ್ಬಳಕೆಯಾಗದ ರೀತಿಯಲ್ಲಿ ನಿರ್ವಹಿಸುವುದು. ನಾಲ್ಕನೆಯದು ಆಡಳಿತ ನೀತಿಗಳನ್ನು ರೂಪಿಸುವ ಸರ್ಕಾರ ಮತ್ತು ಅವುಗಳಿಗೆ ನ್ಯಾಯಸಮ್ಮತತೆಯನ್ನು ಒದಗಿಸುವ ಶಾಸಕಾಂಗವು ಮತದಾರರಿಗೆ ಉತ್ತರದಾಯಿಯಾಗಿರುವುದು. ಏಕೆಂದರೆ ಮತದಾರರ ವಿಶ್ವಾಸವನ್ನು ಆಧರಿಸಿಯೇ ಸರ್ಕಾರ ಅಧಿಕಾರ ನಡೆಸುತ್ತದೆ. ಭಾರತದಲ್ಲಿ ಸಾಂವಿಧಾನಿಕತೆಯ ಈ ಪ್ರಧಾನ ತತ್ವಗಳನ್ನು ವ್ಯವಸ್ಥಿತವಾಗಿ ಉಲ್ಲಂಘಿಸುತ್ತಿರುವುದನ್ನು ಗಮನಿಸಬಹುದು. ಕಾನೂನು ನಿಯಮಗಳನ್ನು ಇಷ್ಟಬಂದಂತೆ ನಿರ್ಲಕ್ಷಿಸುತ್ತಿರುವುದು ಸಾಮಾನ್ಯವಾಗಿದ್ದು, ಅಧಿಕಾರ ಸಂರಚನೆಯು ಹೆಚ್ಚು ಹೆಚ್ಚು ಮಿತಜನಾಧಿಪತ್ಯದತ್ತ (Oligarchic) ವಾಲುತ್ತಿದೆ ತನ್ಮೂಲಕ ವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುತ್ತಿದೆ. ಆಡಳಿತಾರೂಢ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆಯ ʼ ಅಮೃತ ಕಾಲʼ ದಲ್ಲಿ ಸಾಂವಿಧಾನಿಕತೆಯು ಸಂಪೂರ್ಣವಾಗಿ ಶಿಥಿಲವಾಗುತ್ತಿದೆ.
ಅಮೆರಿಕದ ಸಂಸ್ಥಾಪಕರಲ್ಲಿ ಒಬ್ಬರಾದ ಥಾಮಸ್ ಪೇಯ್ನ್ ತಮ್ಮ Rights of Man ಕೃತಿಯಲ್ಲಿ ಹೇಳಿರುವಂತೆ ಸಂವಿಧಾನ ಎಂದರೆ ಸರ್ಕಾರದ ಒಂದು ಕ್ರಿಯೆ ಅಲ್ಲ ಬದಲಾಗಿ ಸರ್ಕಾರವನ್ನು ರಚಿಸುವ ನಾಗರಿಕರ ಕ್ರಿಯೆ. “ ಸಂವಿಧಾನ ಇಲ್ಲದ ಸರ್ಕಾರವು ಹಕ್ಕು ಇಲ್ಲದ ಅಧಿಕಾರದಂತೆ ” ಎಂದು ಥಾಮಸ್ ಪೇಯ್ನ್ ಹೇಳುತ್ತಾರೆ. ಸಂವಿಧಾನವು ಯಾವುದೇ ಸರ್ಕಾರಕ್ಕೆ ಪೂರ್ವಭಾವಿಯಾಗಿರುತ್ತದೆ. ಅಂದರೆ ಸರ್ಕಾರಕ್ಕೂ ಮುನ್ನ ಸಂವಿಧಾನ ಜಾರಿಯಲ್ಲಿರುತ್ತದೆ. “ ಸರ್ಕಾರ ಎನ್ನುವುದು ಸಂವಿಧಾನದ ಒಂದು ಸೃಷ್ಟಿ ಮಾತ್ರ” ಎಂದು ಪೇಯ್ನ್ ಹೇಳುತ್ತಾರೆ. ಹಾಗಾಗಿ ಸಾಂವಿಧಾನಿಕತೆಯ ಸ್ಫೂರ್ತಿಯನ್ನು ದುರ್ಬಲಗೊಳಿಸುವುದೆಂದರೆ, ಸರ್ಕಾರವು ತನ್ನ ನ್ಯಾಯಸಮ್ಮತತೆಯನ್ನು ದುರ್ಬಲಗೊಳಿಸುತ್ತಿದೆ ಎಂದೇ ಅರ್ಥೈಸಬೇಕಾಗುತ್ತದೆ. ಭಾರತದಲ್ಲಿ ಇದನ್ನು ಗಮನಿಸುತ್ತಿದ್ದೇವೆ.
ರಕ್ಷಣಾತ್ಮಕ ಕವಚ:
ಪ್ರಭುತ್ವದ ರೂಪ-ಲಕ್ಷಣಗಳಿಂದ ಉಂಟಾಗಬಹುದಾದ ಅಪಾಯಗಳಿಂದ ಪ್ರಜೆಗಳನ್ನು ರಕ್ಷಿಸಲು ಸರ್ಕಾರ ಎಂಬ ವ್ಯವಸ್ಥೆಯನ್ನು ರೂಪಿಸಲಾಯಿತು. ಸರ್ಕಾರಗಳ ಸಂಭಾವ್ಯ ಅತಿರೇಕಗಳಿಂದ ಪ್ರಜೆಗಳನ್ನು ರಕ್ಷಿಸುವ ಸಲುವಾಗಿ ಸಂವಿಧಾನವನ್ನು ರೂಪಿಸಲಾಯಿತು. ಸಾಂವಿಧಾನಿಕತೆಯು ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಪ್ರಭುತ್ವದ ಅಧಿಕಾರ ಲೋಲುಪತೆಯಿಂದ ರಕ್ಷಿಸುವ ಒಂದು ಭದ್ರ ಕವಚವಾಗಿರುತ್ತದೆ. ಕಾನೂನು ಪ್ರಕ್ರಿಯೆಗಳು ಮತ್ತು ಬಲದ ಪ್ರಕ್ರಿಯೆಗಳ ನಡುವೆ ದುರ್ಬಲವಾದ ಸಮತೋಲನ ಇಂದು ಕಂಡುಬರುತ್ತಿದೆ. ಸಾಂವಿಧಾನಿಕತೆಯು ಒಂದು ಸಾರ್ವತ್ರಿಕ ಪರಂಪರೆಯಾಗಿದ್ದು ಸಮಸ್ತ ಮನುಕುಲಕ್ಕೂ ಸೇರಿದ್ದಾಗಿರುತ್ತದೆ. ಆದರೆ ವರ್ತಮಾನದ ಭಾರತದಲ್ಲಿ ಬಹುಸಂಖ್ಯಾವಾದದ ಅಧಿಕಾರವು ಸಾಂವಿಧಾನಿಕತೆಯ ಸ್ಫೂರ್ತಿಯನ್ನು ಕುಗ್ಗಿಸುತ್ತಿದೆ.
ಭಾರತೀಯ ಸಂವಿಧಾನದ ಕರ್ತೃ ಡಾ. ಬಿ.ಆರ್. ಅಂಬೇಡ್ಕರ್ , ಪಶ್ಚಿಮದಿಂದ ಸಂವಿಧಾನದ ತತ್ವಗಳನ್ನು ಪಡೆದುಕೊಳ್ಳುವುದಕ್ಕೆ ಯಾವುದೇ ರೀತಿಯ ಮುಜುಗರ ಪಡಬೇಕಿಲ್ಲ ಎಂದು ಹೇಳಿದ್ದರು. “ ಅದರಲ್ಲಿ ಯಾವುದೇ ಕೃತಿ ಚೌರ್ಯ ಇರುವುದಿಲ್ಲ ” ಎಂದು ಹೇಳಿದ್ದ ಅಂಬೇಡ್ಕರ್ “ ಸಂವಿಧಾನದ ಮೂಲಭೂತ ಚಿಂತನೆಗಳ ಮೇಲೆ ಯಾರೂ ಸಹ ಹಕ್ಕು ಸ್ವಾಮ್ಯವನ್ನು ಹೊಂದಿರುವುದಿಲ್ಲ ” ಎಂದು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಗಣತಂತ್ರ ದಿನಾಚರಣೆಯ ಸಂದರ್ಭದಲ್ಲಿ ಭಾರತದ ಸಾಂವಿಧಾನಿಕತೆಯ ಪರಂಪರೆಯ ಬಗ್ಗೆ ಏನು ಹೇಳಬಹುದು ?
ಅಸಾಂವಿಧಾನಿಕ ನಡವಳಿಕೆಗಳು:
ಭಾರತದಲ್ಲಿ ಸಾಂವಿಧಾನಿಕತೆಯ ಉಲ್ಲಂಘನೆಗಳಲ್ಲಿ ಪ್ರಧಾನವಾಗಿ ಕಾಣುವುದು ಅತಿರೇಕದಂತೆ ಕಾಣುವ “ ಬುಲ್ಡೋಜರ್ ನ್ಯಾಯ ”. 2022ರ ಆದಿಯಿಂದ ಬಿಜೆಪಿ ಆಳ್ವಿಕೆಯ ರಾಜ್ಯ ಸರ್ಕಾರಗಳು ತಮ್ಮ ಇಚ್ಚೆಗನುಸಾರವಾಗಿ ಬುಲ್ಡೋಜರ್ ನ್ಯಾಯವನ್ನು ಅನುಸರಿಸುತ್ತಿದ್ದು, ಯಾವುದೇ ವಿಚಾರಣೆಯನ್ನೂ ನಡೆಸದೆ ಆರೋಪಿಗಳೆಂದು ಗುರುತಿಸಲ್ಪಟ್ಟವರ ಮನೆಗಳನ್ನು ಪ್ರತೀಕಾರದ ಭಾವದಿಂದ ಧ್ವಂಸ ಮಾಡುತ್ತಿದೆ. ಕೆಲವೊಮ್ಮೆ ಸುಳ್ಳು ಆರೋಪಗಳೂ ಸಹ ಕಾರಣವಾಗಿವೆ. ಉದಾಹರಣೆಗೆ ಮಧ್ಯಪ್ರದೇಶದ ಉಜ್ಜಯಿನಿಯ 18 ವರ್ಷದ ಮುಸ್ಲಿಂ ವ್ಯಕ್ತಿಗೆ ಜನವರಿ 18ರಂದು ನ್ಯಾಯಾಲಯವು ಜಾಮೀನು ನೀಡಿ ಬಿಡುಗಡೆ ಮಾಡಿತ್ತು. ಹಿಂದೂಗಳ ಮೆರವಣಿಗೆಯ ಮೇಲೆ ಉಗಿದಿದ್ದ ಆರೋಪದ ಮೇಲೆ ಐದು ತಿಂಗಳ ಹಿಂದೆ ಆತನನ್ನು ಬಂಧಿಸಲಾಗಿತ್ತು. ವಿಚಾರಣೆಯ ವೇಳೆ ದೂರುದಾರ ಮತ್ತು ಸಾಕ್ಷಿ ಹೇಳುವವರು ತಮ್ಮ ಹೇಳಿಕೆಗಳನ್ನು ನ್ಯಾಯಾಲಯದ ಮುಂದೆ ಅಲ್ಲಗಳೆದಿದ್ದರು. ಆದರೆ ಆ ವೇಳೆಗಾಗಲೇ, ಜುಲೈ 23ರಂದೇ , ಆರೋಪ ಹೂಡಿದ ಎರಡು ದಿನಗಳ ನಂತರ, ಆತನ ತಂದೆಯ ಮನೆಯನ್ನು ಧ್ವಂಸಗೊಳಿಸಲಾಗಿತ್ತು.
ಭಾರತೀಯ ಸಂವಿಧಾನದ ಅನುಚ್ಛೇದ 21ರಲ್ಲಿ ಖಾತರಿಪಡಿಸಿರುವ ಬದುಕುವ ಹಕ್ಕಿನ ಅಡಿಯಲ್ಲಿ ಸೂರಿನ/ವಸತಿಯ ಹಕ್ಕು ಸಹ ಒಂದು ಮೂಲಭೂತ ಮಾನವ ಹಕ್ಕು ಎಂದೇ ಪರಿಗಣಿಸಲ್ಪಡುತ್ತದೆ ಎಂದು ಭಾರತದ ಸರ್ವೋಚ್ಛ ನ್ಯಾಯಾಲಯ ಹೇಳುತ್ತದೆ. 1996ರ ಚಮೇಲಿ ಸಿಂಗ್ ಮತ್ತಿತರರು Vs ಉತ್ತರ ಪ್ರದೇಶ ಸರ್ಕಾರ ಮೊಕದ್ದಮೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ “ ಮನುಷ್ಯನಿಗೆ ಸೂರು/ವಸತಿ ಎನ್ನುವುದು ಕೇವಲ ಅವನ ಜೀವನ ಅಥವಾ ಅಂಗಾಂಗಳ ರಕ್ಷಣೆಗೆ ಸೀಮಿತವಾದದ್ದಲ್ಲ, ಮನೆಯೇ ಆತನ/ಆಕೆಯ ಭೌತಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಅವಕಾಶ ಕಲ್ಪಿಸುವ ತಾಣವಾಗಿರುತ್ತದೆ ” ಎಂದು ಹೇಳಿತ್ತು.
1604ರಲ್ಲಿ ಪ್ರಸಿದ್ಧ ಸೆಮಾನ್ಯೆ ಪ್ರಕರಣದಲ್ಲಿ ತೀರ್ಪು ನೀಡಿದಾಗ ಇಂಗ್ಲಿಷ್ ನ್ಯಾಯಶಾಸ್ತ್ರಜ್ಞ ಎಡ್ವರ್ಡ್ ಕೋಕ್ “ ಒಬ್ಬ ವ್ಯಕ್ತಿಯ ಮನೆ ಎನ್ನುವುದು ಆತನ/ಆಕೆಯ ಅರಮನೆಯಂತೆ ಇರುತ್ತದೆ, ಹಾಗೆಯೇ ಹಿಂಸೆ ಮತ್ತು ಆಘಾತಗಳಿಂದ ರಕ್ಷಣೆ ಒದಗಿಸುವ ಭದ್ರಕೋಟೆಯಂತೆಯೂ ಇರುತ್ತದೆ ” ಎಂದು ಹೇಳಿದ್ದುದನ್ನು ಸ್ಮರಿಸಬಹುದು. ಈ ಮಹತ್ವದ ಸ್ವಾಭಾವಿಕ ಹಕ್ಕು ಇಂದು ಭಾರತದಲ್ಲಿ ಅವ್ಯಾಹತವಾಗಿ ಉಲ್ಲಂಘನೆಗೊಳಗಾಗುತ್ತಿದೆ.
ಕೋಮು ಗಲಭೆಗಳು ಸಂಭವಿಸಿದ ಕೂಡಲೇ ಆರೋಪಿಗಳ ಮನೆಗಳನ್ನು ಸ್ಥಳೀಯ ಪುರಸಭೆಯ ಅಧಿಕಾರಿಗಳು ಅಕ್ರಮ ಅಥವಾ ಅತಿಕ್ರಮದ ನಿರ್ಮಾಣ ಎಂದು ಪರಿಗಣಿಸಿ, ಯಾವುದೇ ಮೇಲ್ಮನವಿಯ ಅವಕಾಶವನ್ನೂ ನೀಡದೆ ಧ್ವಂಸ ಗೊಳಿಸಲಾಗುತ್ತಿದೆ. ಈ ಕಾಂಗರೂ ನ್ಯಾಯಾಲಯದ ಪ್ರಕ್ರಿಯೆಯು ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಇದರಿಂದ ಅಸಾಂವಿಧಾನಿಕ ನಡವಳಿಕೆಗಳಿಗೆ ಚಾಲನೆ ದೊರೆತಂತಾಗಿದ್ದು ಸಾಮಾನ್ಯ ಪರಿಸ್ಥಿತಿಗಳಲ್ಲಿ ನ್ಯಾಯಾಂಗದ ಮಧ್ಯಸ್ತಿಕೆ ಅಥವಾ ಇನ್ನಿತರ ಸಂಸ್ಥೆಗಳ ಹಸ್ತಕ್ಷೇಪದ ಪ್ರತಿಕ್ರಿಯೆ ಅಪೇಕ್ಷಿಸಲಾಗುತ್ತದೆ. ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭ ಎನಿಸಿಕೊಂಡ ಮಾಧ್ಯಮಮಮ ವಲಯದ ಸ್ಪಂದನೆಯನ್ನೂ ನಿರೀಕ್ಷಿಸಲಾಗುತ್ತದೆ. ಆದರೆ ಕೇವಲ ಮೌನ ಪ್ರತಿಕ್ರಿಯೆ ಮಾತ್ರ ಕಂಡುಬರುತ್ತಿದೆ.
ಇದೇ ರೀತಿ, ಸಾಂವಿಧಾನಿಕತೆಯ ಪ್ರಧಾನ ಅಂಶವಾದ ಹಾಗೂ ಅಧಿಕಾರ ಕೇಂದ್ರೀಕರಣದ ವಿರುದ್ಧ ಒಂದು ಪ್ರಬಲ ಅಸ್ತ್ರವಾಗಿರುವ ಒಕ್ಕೂಟ ವ್ಯವಸ್ಥೆ ಭಾರತದಲ್ಲಿ ಶಿಥಿಲವಾಗುತ್ತಿದೆ. ಇತರ ಪ್ರಭುತ್ವದ ಸಂಸ್ಥೆಗಳು, ಚುನಾವಣಾ ಆಯೋಗ, ಕೇಂದ್ರ ಮಾಹಿತಿ ಆಯೋಗ ಇತ್ಯಾದಿಗಳು ತಮ್ಮ ಪ್ರಖರತೆಯನ್ನು ಕಳೆದುಕೊಳ್ಳುತ್ತಿದ್ದು, ಸಂಸತ್ತನ್ನು ಕೇವಲ ಕಾನೂನು ರೂಪಿಸುವ ಅಲಂಕಾರಿಕ ಸಂಸ್ಥೆಯನ್ನಾಗಿ ಪರಿವರ್ತಿಸಲಾಗಿದೆ. ಮುದ್ರಣ ಮಾಧ್ಯಮಗಳು ಹಾಗೂ ನಾಗರಿಕ ಸಮಾಜವು ವ್ಯವಸ್ಥಿತವಾಗಿ ದುರ್ಬಲವಾಗುತ್ತಿವೆ. ಭಾರತದ ಸಂವಿಧಾನ 74 ವರ್ಷಗಳನ್ನು ಪೂರೈಸುತ್ತಿರುವಂತೆಯೇ ಅದನ್ನು ನಿರ್ವಹಿಸುತ್ತಿರುವವರು ಒಳಗಿನಿಂದಲೆ ಸಂವಿಧಾನವನ್ನು ಶಿಥಿಲಗೊಳಿಸುತ್ತಿದ್ದಾರೆ. ಅಮೆರಿಕದ ಸಂಸ್ಥಾಪಕ ಪಿತಾಮಹ ಥಾಮಸ್ ಜೆಫರ್ಸನ್ ಹೇಳಿರುವಂತೆ “ ದೇಶಭಕ್ತರ ಹಾಗೂ ನಿರಂಕುಶಾಧಿಕಾರಿಗಳ ಹಿಡಿತದಿಂದ ಸ್ವಾತಂತ್ರ್ಯದ ವೃಕ್ಷವನ್ನು ಆಗಿಂದಾಗ್ಗೆ ಕಾಲಕಾಲಕ್ಕೆ ಪುನರುಜ್ಜೀವನಗೊಳಿಸುತ್ತಿರಬೇಕು ”. ಭಾರತದಲ್ಲಿ ಸ್ವಾತಂತ್ರ್ಯ ಹಾಗೂ ಸಾಂವಿಧಾನಿಕತೆಯನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬ ನಾಗರಿಕನೂ ತನ್ನ ಬೆವರು ಸುರಿಸಬೇಕಾಗಿದೆ.