ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ಕೇಸರಿ ಹನುಮ ಧ್ವಜ ವಿವಾದ ಬೆಂಕಿ ಹೊತ್ತಿಕೊಂಡು ಇಡೀ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ರಾತ್ರೋರಾತ್ರಿ ಹನುಮ ಧ್ವಜ ತೆರವಿಗೆ ಅಧಿಕಾರಿಗಳ ಎಂಟ್ರಿಕೊಟ್ಟಿದ್ದು, ಅಧಿಕಾರಿಗಳ ವಿರುದ್ದ ಸಿಡಿದೆದ್ದ ಗ್ರಾಮಸ್ಥರು.
ಹನುಮ ಧ್ವಜ ತೆರವು ಮಾಡದಂತೆ ನೂರಾರು ಜನರು ಜಮಾಯಿಸಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮುಂಜಾನೆ 3 ಗಂಟೆಗೆ ಗ್ರಾಮಕ್ಕೆ ಆಗಮಿಸಿ ಧ್ವಜ ತೆರವಿಗೆ ಯತ್ನ ಆರೋಪಿಸಿದ್ದಾರೆ. ಮಂಡ್ಯ ಎಸಿ ಶಿವಮೂರ್ತಿ, ತಹಸಿಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ಧ್ವಜ ಇಳಿಸಲು ಯತ್ನ ನಡೆಸಿದ್ದು, ಪೊಲೀಸರು ಆಗಮನ ಆಗುತ್ತಿದ್ದಂತೆ ಆತಂಕದಿಂದ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ, ಜೈ ಶ್ರೀರಾಮ್, ಜೈ ಹನುಮ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಧ್ವಜ ಕಂಬದ ಬಳಿಯೆ ಕುಳಿತಿರುವ ಮಹಿಳೆಯರು ಹಾಗೂ ಯುವಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಹಿನ್ನೆಲೆ: ಕಳೆದ ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಾಗೂ ಬಾಲರಾಮ ಪ್ರಾಣಪ್ರತಿಷ್ಠಾಪನೆಯ ದಿನ ಗ್ರಾಮದ ಮಧ್ಯಭಾಗದಲ್ಲಿರುವ ಧ್ವಜಸ್ತಂಭದಲ್ಲಿ ಕೇಸರಿ ಹನುಮ ಧ್ವಜ ಬಾವುಟ ಹಾರಿಸಲಾಗಿತ್ತು. ಇದರಿಂದ ಗ್ರಾಮದಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಜ.26ರಂದು ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಅದನ್ನು ಇಳಿಸಿ ರಾಷ್ಟ್ರೀಯ ಧ್ವಜ ಹಾರಿಸಲಾಗಿತ್ತು. ಅದಾದ ಬಳಿಕ ಶನಿವಾರ ಮತ್ತೆ ಅಲ್ಲಿನ ಯುವಕರು ಕೇಸರಿ ಹನುಮ ಧ್ವಜ ಹಾರಿಸಿದ್ದರು. ಇದಕ್ಕೆ ಗ್ರಾಪಂ ಸಭೆಯಲ್ಲೂ ಸದಸ್ಯರು ವರ್ಷ ಪೂರ್ತಿ ಕೇಸರಿ ಹನುಮ ಧ್ವಜ ಹಾರಾಡುವಂತೆ ನಿರ್ಣಯ ಕೈಗೊಂಡಿದ್ದರು. ಅದರಂತೆ ಬಾವುಟ ಹಾಕಲಾಗಿತ್ತು. ಆದರೆ ಕೆಲವರು ಇದರ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಶನಿವಾರ ತಾಲೂಕು ಪಂಚಾಯಿತಿ ಇಒ ಸ್ಥಳಕ್ಕೆ ಭೇಟಿ ನೀಡಿ ಧ್ವಜ ತೆರವು ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಗ್ರಾಮದ ಯುವಕರು ಹಾಗೂ ಕೆಲ ಮುಖಂಡರು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ. ಧ್ವಜವನ್ನು ಯಾವುದೇ ಕಾರಣಕ್ಕೂ ಇಳಿಸಬಾರದು ಎಂದು ಒತ್ತಾಯಿಸಿದ್ದಾರೆ. ಗ್ರಾಮದ ಪರಿಸ್ಥಿತಿ ಅರಿತ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.
ಕೆಲವರು ಸರ್ಕಾರಿ ಧ್ವಜಸ್ತಂಭದಲ್ಲಿ ಭಾಗವಾಧ್ವಜ ಬಾವುಟ ಹಾಕಿರುವುದು ಸರಿಯಾದ ಕ್ರಮವಲ್ಲ ಎಂದು ವಾದಿಸಿದರೆ, ಮತ್ತೆ ಕೆಲವರು ವರ್ಷಪೂರ್ತಿ ಖಾಲಿ ಇರುವುದರಿಂದ ಭಾಗವಾಧ್ವಜ ಹಾರಾಡಲಿ ಬಿಡಿ ಎನ್ನುತ್ತಿದ್ದಾರೆ. ಗ್ರಾಮದಲ್ಲಿಯೇ ಪರ ವಿರೋಧ ವ್ಯಕ್ತವಾಗಿದೆ. ಅಲ್ಲದೆ, ಕೆಲವು ಮುಸ್ಲಿಂ ಮುಖಂಡರು, ಯುವಕರು ಕೇಸರಿ ಹನುಮ ಧ್ವಜ ಬಾವುಟ ಹಾಕಿರುವುದಕ್ಕೆ ಬೆಂಬಲ ನೀಡುವ ಮೂಲಕ ಧ್ವಜ ಇಳಿಸದಂತೆ ಮನವಿ ಮಾಡಿದ್ದಾರೆ. ಜತೆಗೆ ಪ್ರತಿಭಟನೆಯಲ್ಲೂ ಭಾಗವಹಿಸಿ ಗ್ರಾಮದಲ್ಲಿ ಶಾಂತಿ ನೆಲೆಸಲು ಎಂದು ಕೈಜೋಡಿಸಿದ್ದಾರೆ. ಕೇಸರಿ ಹನುಮ ಧ್ವಜ ಹಾಕಿರುವುದಕ್ಕೆ ಕೆಲವರು ರಾಜಕೀಯ ಬೆರೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಗ್ರಾಮಸ್ಥರು ಎಲ್ಲರೂ ಒಗ್ಗಟ್ಟಿನಿಂದ ಧ್ವಜ ಹಾಕಿರುವಾಗ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಅಶಾಂತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.