ಐಟಿ ದೈತ್ಯ ಇನ್ಫೋಸಿಸ್ ಅನ್ನು ‘ದೇಶವಿರೋಧಿ’ ಎಂದು ಹೇಳುವ ಆರ್ಎಸ್ಎಸ್ ಮುಖವಾಣಿ ಪಾಂಚಜನ್ಯ ಲೇಖನವು ಬೆಂಗಳೂರಿನ ಐಟಿ ಸಮುದಾಯದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ದಿ ನ್ಯೂಸ್ ಮಿನಿಟ್ ಪೋರ್ಟಲ್ (ಟಿಎನ್ಎಂ) ಹಲವಾರು ಉದ್ಯಮಿಗಳು ಮತ್ತು ಐಟಿ ಸಿಇಒ ಗಳೊಂದಿಗೆ ಮಾತನಾಡಿದೆ. ಅವರಲ್ಲಿ ಅನೇಕರು ಸಂಭವನೀಯ ಪರಿಣಾಮಗಳ ಭಯದಿಂದ ತಮ್ಮ ಹೆಸರನ್ನೂ ಕೂಡ ಉಲ್ಲೇಖಿಸಿಲ್ಲ. ಕೆಲವರು ಮುಂದೆ ಕಿರುಕುಳದ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇಲ್ಲಿ ಪಾಂಚಜನ್ಯ ಲೇಖನ ಇನ್ಫೋಸಿಸ್ ಅನ್ನು ಎಡಪಂಥೀಯ ಎನ್ನುತ್ತಲೇ ದೇಶದ್ರೋಹಿ ಎಂಬಂತೆ ಪ್ರತಿಪಾದಿಸುತ್ತದೆ. ಇಲ್ಲಿ ಇರುವುದು ಗೊಂದಲ. ಇನ್ಫೋಸಿಸ್ನ ಬಹುಪಾಲು ಉದ್ಯೋಗಿಗಳಿಗೆ ಎಡಪಂಥೀಯ ಎನ್ನುವುದು ಒಂದು ಸಿಟ್ಟಾದರೆ, ದೇಶದ್ರೋಹಿ ಎಂದಿರುವುದು ಇನ್ನೊಂದು ಸಿಟ್ಟು. ಇಲ್ಲಿವರೆಗೆ ಇನ್ಫೋಸಿಸ್ ಮತ್ತು ಆರ್ಎಸ್ಎಸ್ ಎರಡನ್ನೂ ಭಜನೆ ಮಾಡುತ್ತಿದ್ದ ಐಟಿ ವಲಯದ ಉದ್ಯೋಗಿಗಳು ಗೊಂದಲಕ್ಕೆ ಈಡಾದಂತಿದೆ.
ಸದ್ಯಕ್ಕೆ ಇನ್ಫೋಸಿಸ್ ಈ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ, ಹಿಂದೆ ಇನ್ಫೋಸಿಸ್ನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ಆಗಿದ್ದ, ಈಗ ಮಣಿಪಾಲ್ ವಿದ್ಯಾ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕರಾಗಿರುವ ಮೋಹನದಾಸ್ ಪೈ ಎಂಬ ಬಂಡವಾಳಶಾಹಿ ತನ್ನ ಜೀವಮಾನದಲ್ಲಿ ಮೊದಲ ಬಾರಿಗೆ ಆರ್ಎಸ್ಎಸ್ ಪಾಂಚಜನ್ಯದ ನಿಲುವು ತಪ್ಪು ಎಂದು ಸಾಫ್ಟ್ ಆಗಿ ಹೇಳಿದ್ದಾರೆ. ಇದು ಬುಡಕ್ಕೆ ಬೆಂಕಿ ಬಿದ್ದ ಹೊತ್ತಲ್ಲವೇ?
ನ್ಯಾಸ್ಕಾಂ (ದೇಶದ ಐಟಿ ಕಂಪನಿಗಳ ಒಕ್ಕೂಟ) ಕೂಡ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದೆ.
ಬಂಡವಾಳಶಾಹಿ ಇನ್ಫೋಸಿಸ್ ಎಂದೂ ಎಡಪಂಥೀಯ ಆಗಲು ಸಾಧ್ಯವಿಲ್ಲ. ಆದರೂ ಆರ್ಎಸ್ಎಸ್ ಅದನ್ನು ಎಡಪಂಥೀಯ ಎಂದೂ, ದೇಶದ್ರೋಹಿ ಎಂದೂ ಕರೆದಿದೆ. ಹಾಗೆ ನೋಡಿದರೆ ಇನ್ಫೋಸಿಸ್ ಫೌಂಡೇಷನ್ ಇಲ್ಲಿವರೆಗೆ ಬಲಪಂಥಿಯ ಸಂಘಟನೆಗಳಿಗೇ ಹಣಕಾಸು ಸಹಾಯ ನೀಡುತ್ತ ಬಂದಿದೆ.
ನಾರಾಯಣಮೂರ್ತಿ ಪತ್ನಿ ಸುಧಾಮೂರ್ತಿ ಫೌಂಡೇಷನ್ ಆರಂಭವಾದಾಗಿನಿಂದ ಇವರೇ ಮುಖ್ಯಸ್ಥರಾಗಿದ್ದಾರೆ. ಅವರು ಆರ್ಎಸ್ಎಸ್ ಬಾಲಗೋಂಚಿ ಸಂಸ್ಥೆಗಳಿಗೇ ನೆರವು ನೀಡುತ್ತ ಬಂದಿದ್ದಾರೆ. ಆರ್ಎಸ್ಎಸ್ನ ರಾಷ್ಟ್ರೋತ್ತಾನ ಪರಿಷತ್ ಸುಧಾ ಮೂರ್ತಿಯವರ ನೆರವಿನಿಂದ ಸಾಕಷ್ಟು ಸಶಕ್ತಗೊಂಡಿತು. ಹಿಂದುತ್ವವಾದಿ ಗುಂಪುಗಳಲ್ಲದೇ ಕೆಲವು ತಟಸ್ಥ ಮತ್ತು ಕೆಲವು ಸೆಕ್ಯುಲರ್ ಗುಂಪುಗಳಿಗೂ ಹಣಕಾಸು ನೆರವು ನೀಡಲು ಸುಧಾಮೂರ್ತಿ ಆರಂಭಿಸಿದರು. ತಾವು ಹಿಂದೂತ್ಬವಾದಿ ಎಂಬ ಹಣಪಟ್ಟಿ ಕಳಚಿಕೊಳ್ಳುವ ಉದ್ದೇಶ ಇದರ ಹಿಂದೆ ಇತ್ತು. ಇದೇ ಆರ್ಎಸ್ಎಸ್ಗೆ ತಲೆನೋವಾಗಿ, ಕಾರ್ಪೋರೇಟ್ ಕಂಪನಿಗಳ ಸಿಎಸ್ಅರ್ (ಕಾರ್ಪೋರೇಟ್ ಸೋಷಿಯಲ್ ರಿಸ್ಪಾನ್ಸಿಬಲಿಟಿ) ಫಂಡ್ ಎಲ್ಲವೂ ತಮ್ಮ ಸಂಸ್ಥೆಗಳಿಗೇ ಸೇರಬೇಕು ಎಂಬ ಉದ್ದೇಶದಿಂದ ಪಾಂಚಜನ್ಯದಲ್ಲಿ ಇನ್ಫೋಸಿಸ್ ವಿರುದ್ಧ ಬರಹ ಪ್ರಕಟಿಸಿತಷ್ಟೇ.
ಇದಿಷ್ಟು ಕತೆ. ಇನ್ಫೋಸಿಸ್ ಎಂದೂ ಎಡಪಂಥೀಯ ಆಗಲಾರದು. ಹಾಗೆಯೇ ಅದು ಹಿಂದೂತ್ವವಾದಿ ನಿಲುವುಗಳಿಂದ ದೂರ ಸರಿಯದು.
ಈ ಬಗ್ಗೆ ‘ಪ್ರತಿಧ್ವನಿ’ಗೆ ಪ್ರತಿಕ್ರಿಯೆ ನೀಡಿದ ಬರಹಗಾರ ಬಂಜಗೆರೆ ಜಯಪ್ರಕಾಶ್, ‘ಐಟಿ ವಲಯದಲ್ಲಿರುವ ಬಹುತೇಕರದು ವರ್ಗ ಹಿತಾಸಕ್ತಿಯೇ. ಈ ಹಿತಾಸಕ್ತಿ ದಲಿತರು. ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ವಿರುದ್ಧ ಮತ್ತು ಮೀಸಲಾತಿ ವಿರುದ್ಧವೇ ಇರುತ್ತದೆ. ಈ ದೇಶದ ಸಂವಿಧಾನದ ಬಗ್ಗೆಯೂ ಅವರಿಗೆ ಅಸಡ್ಡೆ ಇದೆ. ಅನಿವಾರ್ಯಕ್ಕಾಗಿ ಕಾರ್ಪೋರೇಟ್ ಸಾಮಾಜಿಕ ನಿಧಿಯಿಂದ ಹಣ ನೀಡುತ್ತಾರೆಯೇ ಹೊರತು ಅದರಲ್ಲಿ ಯಾವುದೇ ಪರಿಶುದ್ಧ ಭಾವನ ಇಲ್ಲ’ ಎಂದರು.
‘ಬಿಜೆಪಿ ಎನ್ನುವುದು ಮೇಲ್ವರ್ಗ ಮತ್ತು ಮೇಲ್ಜಾತಿಗಳ ಪಾಲಿಗೆ ಕೇವಲ ಪಕ್ಷವಲ್ಲ, ಅದು ಅವರ ಕನಸಿನ ಅಭಿವ್ಯಕ್ತಿ. ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರನ್ನು ತುಳಿಯುವುದು, ಈ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಾಶಯಗಳನ್ನು ನಾಶ ಮಾಡುವುದು ಅದರ ುದ್ದೇಶ. ಬಂಡವಾಳಶಾಹಿ ಇನ್ಫೋಸಿಸ್ ಕೂಡ ಈ ಗುಂಪಿನ ಪ್ರಾತಿನಿಧಿಕ ಸಂಸ್ಥೆಯೇ ಆಗಿದೆ. ಆದರೆ ಆರ್ಎಸ್ಎಸ್ ಅದೇಕೋ ಅದರ ವಿರುದ್ಧ ಟೀಕೆ ಮಾಡಿದೆ. ಎಲ್ಲ ಕಂಪನಿಗಳೂ ತನ್ನ ಆಧೀನ ಸಂಸ್ಥೆಗಳಿಗೇ ಧನ ಸಹಾಯ ಮಾಡಬೇಕು ಎಂಬ ಫತ್ವಾ ಇದಾಗಿದೆ; ಎಂದು ಬಂಜಗೆರೆ ತಿಳಿಸಿದರು.
ಈ ಕುರಿತು ಮಾತನಾಡಿದ ಕಮ್ಯುನಿಸ್ಟ್ ವಿದ್ಯಾರ್ಥಿ ಚಳವಳಿ ಹಿನ್ನಲೆಯ ಭೀಮನಗೌಡ ಕಾಶಿರೆಡ್ಡಿ, ‘ಇದು ಒಂಥರಾ ಬಿಸಿಬಿಸಿ ಐಸ್ಕ್ರೀಂ ಕೇಳಿದಂಗೆ. ಇನ್ಫೋಸಿಸ್ ಎಡಪಂಥೀಯ ಎನ್ನುವುದು ಒಂದು ಮೂರ್ಖತನವಾದರೆ, ಎಡಪಂಥೀಯರೆಲ್ಲ ದೇಶದ್ರೋಹಿಗಳು ಎಂಬುದು ಇನ್ನೊಂದು ಮೂರ್ಖತನ. ಇನ್ಫೋಸಿಸ್ ಬೋರ್ಡ್ ಆಫ್ ಡೈರೆಕ್ಟರ್ಸ್ ಎಲ್ಲ ಆಲ್ಮೊಸ್ಟ್ ಬ್ರಾಹ್ಮಣರೇ ಆಗಿದ್ದಾರೆ ಅಲ್ಲವೇ? ಎಂದರು.
ಪಾಂಚಜನ್ಯದಿಂದ ಮೊಳಗಿದ ಬರಹ ಇನ್ಫೋಸಿಸ್ ಮೇಲೆ ಅಟ್ಯಾಕ್ ಮಾಡಿದ್ದು ಸುಮ್ಮನೆ ಅಷ್ಟೇ ಇನ್ಫೋಸಿಸ್ ಎಂದೂ ಎಡಪಂಥೀಯ ಅಲ್ಲ. ಅದು ಪಕ್ಕಾ ಹಿಂದುತ್ವವಾದಿ ಎಂಬುದುಕ್ಕೆ ಸಾಕ್ಷಿ ಸುಧಕ್ಕ!
ಆರ್ಎಸ್ಎಸ್-ಇನ್ಫೋಸಿಸ್ ಭಾಯಿ ಭಾಯಿ….ಅಥವಾ ಭಾಯಿ-ಬಹನ್!ಜಾಸ್ತಿ ತಲೆಗೆಡಿಸಿಕೊಳ್ಳಬೇಡಿ ಅಷ್ಟೇ.