ಮಧ್ಯಮ ವೇಗಿ ರೇಣುಕಾ ಸಿಂಗ್ ಮಾರಕ ದಾಳಿ ನೆರವಿನಿಂದ ಭಾರತ ವನಿತೆಯರ ತಂಡ 16 ರನ್ ಗಳಿಂದ ಜಯಭೇರಿ ಬಾರಿಸಿ ಇಂಗ್ಲೆಂಡ್ ನೆಲದಲ್ಲಿ ಮೊದಲ ಬಾರಿ 3-0ಯಿಂದ ಕ್ಲೀನ್ ಸ್ವೀಪ್ ಮಾಡುವ ಮೂಲಕ ಜೂಲನ್ ಗೋಸ್ವಾಮಿ ಅವರಿಗೆ ಗೆಲುವಿನ ವಿದಾಯ ಕೋರಲಾಯಿತು.
ಲಾರ್ಡ್ಸ್ ಮೈದಾನದಲ್ಲಿ ಶನಿವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಸ್ಮೃತಿ ಮಂದಾನ ಮತ್ತು ದೀಪ್ತಿ ಶರ್ಮ ಅರ್ಧಶತಕಗಳ ನೆರವಿನಿಂದ 45.4 ಓವರ್ ಗಳಲ್ಲಿ 169 ರನ್ ಗಳಿಗೆ ಆಲೌಟಾಯಿತು.
ಸುಲಭ ಗುರಿ ಬೆಂಬತ್ತಿದ ಇಂಗ್ಲೆಂಡ್ ರೇಣುಕಾ ಸಿಂಗ್ ಮಾರಕ ದಾಳಿಗೆ ತತ್ತರಿಸಿ 43.3 ಓವರ್ ಗಳಲ್ಲಿ 153 ರನ್ ಗಳಿಗೆ ಆಲೌಟಾಯಿತು.
ಇಂಗ್ಲೆಂಡ್ ತಂಡದ ಪರ ಚಾರ್ಲಿ ಡೀನ್ (31), ನಾಯಕಿ ಆಮಿ ಜೋನ್ಸ್ (28) ಮತ್ತು ಎಮ್ಮಾ ಲ್ಯಾಂಬ್ (21) ಪ್ರತಿರೋಧ ಒಡ್ಡಿದರು. ರೇಣುಕಾ ಸಿಂಗ್ 4 ವಿಕೆಟ್ ಪಡೆದರೆ, ಜೂಲನ್ ಗೋಸ್ವಾಮಿ 2, ರಾಜೇಶ್ವರಿ ಗಾಯಕ್ವಾಡ್ 2, ದೀಪ್ತಿ ಶರ್ಮಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ಕೇಟ್ ಕ್ರಾಸ್ ಮಾರಕ ದಾಳಿಗೆ ತತ್ತರಿಸಿ 29 ರನ್ ಗೆ 4 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮ ಮತ್ತು ಸ್ಮೃತಿ ಮಂದಾನ 58 ರನ್ ಜೊತೆಯಾಟದ ಮೂಲಕ ತಂಡವನ್ನು ಆಧರಿಸಿದರು.
ಸ್ಮೃತಿ ಮಂದಾನ 79 ಎಸೆತಗಳಲ್ಲಿ 5 ಬೌಂಡರಿ ಸೇರಿದ 50 ರನ್ ಗಳಿಸಿದರೆ, ದೀಪ್ತಿ ಶರ್ಮ 106 ಎಸೆತಗಳಲ್ಲಿ 7 ಬೌಂಡರಿ ಒಳಗೊಂಡ 68 ರನ್ ಸಿಡಿಸಿ ಅಜೇಯರಾಗಿ ಉಳಿದರು.
ಇಂಗ್ಲೆಂಡ್ ಪರ ಕೇಟ್ ಕ್ರಾಸ್ 4 ವಿಕೆಟ್ ಕಬಳಿಸಿದರೆ, ಫ್ರೇಯಿ ಕೆಂಪ್ ಮತ್ತು ಸೋಫಾಯಿ ಎಕ್ಲಿಸ್ಟೋನ್ ತಲಾ 2 ವಿಕೆಟ್ ಪಡೆದರು.