ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಹಾಗೂ ಓಮಿಕ್ರಾನ್ ಸೋಂಕಿನ ನಡುವೆ ಮಧ್ಯಪ್ರದೇಶ ಸರ್ಕಾರವು ಎಲ್ಲಾ ತರಹದ ಧಾರ್ಮಿಕ, ವಾಣಿಜ್ಯ ಹಾಗೂ ರಾಜಕೀಯ ಸಭೆಗಳಿಗೆನಿರ್ಬಂಧವನ್ನು ಹೇರಿದೆ. ಆದರೆ, ಮಕರ ಸಂಕ್ರಾಂತಿಯಂದು ನಡೆಯುವ ಪವಿತ್ರ ಸ್ನಾನಕ್ಕೆ ಮಾತ್ರ ರಾಜ್ಯ ಸರ್ಕಾರ ವಿನಾಯ್ತಿ ನೀಡಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಜನವರಿ 15ರಿಂದ -31ರ ವರೆಗೆ 1-12ನೇ ತರಗತಿಗಳಿಗೆ ರಜೆಯನ್ನು ಘೋಷಿಸಲಾಗಿದೆ. ಜನವರಿ 2ರಿಂದ ಪ್ರಾರಂಭವಾಗಬೇಕಿದ್ದ ಪೂರ್ವಭಾವಿ ಪರೀಕ್ಷೆಗಳಿಗೆ ಪ್ರತ್ಯೇಕ ಆದೇಶವನ್ನ ಶಿಕ್ಷಣ ಇಲಾಖೆ ಹೊರಡಿಸಲಿದೆ. ಒಳಾಂಗಣದಲ್ಲಿ ನಡೆಯುವ ಸಭೆಗಳನ್ನು ಶೇ.50ರಷ್ಟು ಆಸನ ಭರ್ತಿಯೊಂದಿಗೆ ನಡೆಸಬೇಕು ಮತ್ತು ಹೊರಾಂಗಣ ಸಭೆಗಳಿಗೆ ಯಾವುದೇ ರೀತಿಯ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಗುರುವಾರ 4,031 ಪ್ರಕರಣಗಳು ದಾಖಲಾಗಿದ್ದು ಒಟ್ಟು COVID-19 ಸೊಂಕಿತರ ಸಂಖ್ಯೆ 8,14,473 ಕ್ಕೆ ಏರಿದೆ. ಮೂರು ರೋಗಿಗಳು ಸೋಂಕಿಗೆ ಬಲಿಯಾದ್ದು ಸಾವಿನ ಸಂಖ್ಯೆ 10,543 ಕ್ಕೆ ಏರಿದೆ. ಗುರುವಾರ ಪಾಸಿಟಿವಿಟಿ ರೇಟ್ ಶೇ.5.1ರಷ್ಟಿದೆ. ರಾಜ್ಯದಲ್ಲಿ 17,652 ಸಕ್ರಿಯ ಕೋವಿಡ್-19 ಪ್ರಕರಣಗಳಿವೆ ಎಂದು ಅಲ್ಲಿಯ ಆರೋಗ್ಯ ಇಲಾಖೆ ತಿಳಿಸಿದೆ.
ಪೋಟೋ : ಸಾಂದರ್ಭಿಕ ಚಿತ್ರ