ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುವುದು ಭಾರತದಲ್ಲಿ ಸರ್ವೇ ಸಾಮಾನ್ಯವೆಂಬಂತಾಗಿದೆ. ರೋಗಿ ಸಾವನ್ನಪ್ಪಿದರೆ ಆಸ್ಪತ್ರೆಯನ್ನು ಧ್ವಂಸಗೊಳಿಸಿ, ವೈದ್ಯರ ಹಾಗು ಇತರೆ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುವುದು ಕಾನೂನಾರ್ಹ ಅಪರಾಧವಾದರು, ಈ ಘಟನೆಗಳು ಮರುಕಳಿಸುತ್ತಲೇ ಇವೆ. ಇದಕ್ಕೆ ಶಾಶ್ವತ ಪರಿಹಾರ ನೀಡಲು, ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳ ಮೇಲಿನ ಹಿಂಸಾಚಾರದ ವಿರುದ್ದ ಸಮಗ್ರ, ಪರಿಣಾಮಕಾರಿಯಾದ ಹಾಗೂ ಏಕರೂಪದ ಕಾನೂನು ಜಾರಿಗೊಳಿಸುವಂತೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಪತ್ರ ಬರೆದಿದೆ.
ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ ರೋಗಿಯೊಬ್ಬರು ಸಾವನ್ನಪ್ಪಿದ್ದರು. ಇದರಿಂದ ಕುಪಿತರಾದ ರೋಗಿಯ ಸಂಬಂಧಿಕರು, ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯ ನಂತರ ಐಎಂಎ ಪತ್ರವನ್ನು ಬರೆದಿದೆ.
ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳ ವಿರುದ್ದ ನಿರಂತರವಾಗಿ ಹಲ್ಲೆಗಳು ನಡೆಯುತ್ತಲೇ ಇವೆ. ಇವುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದು ವಯದ್ಯಕೀಯ ಅಭ್ಯಾಸಕ್ಕೆ ತೀವ್ರ ಅಪಾಯವನ್ನು ತಂದೊಡ್ಡುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
“ಇಂತಹ ಹಿಂಸಾಚಾರದ ವಿರುದ್ದ ದೇಶದಲ್ಲಿ ಸಮಗ್ರ, ಪರಿಣಾಮಕಾರಿಯಾದ ಹಾಗೂ ಏಕರೂಪದ ಕಾನೂನು ಜಾರಿಗೊಳಿಸಬೇಕು. ವೈದ್ಯರ ಮೇಲಿನ ಹಿಂಸಾಚಾರದ ವಿರುದ್ದ ಬಲವಾದ ಕ್ರಮವನ್ನು ಕೈಗೊಳ್ಳಬೇಕು,” ಎಂದು ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಕೋವಿಡ್’ನಂತಹ ಸಾಂಕ್ರಾಮಿಕದ ಸಂದರ್ಭದಲ್ಲಿ ದಣಿವರಿಯದೆ ವೈದ್ಯ ಲೋಕ ಕೆಲಸ ಮಾಡುತ್ತಿದೆ. ಸಂಪೂರ್ಣ ವೈದ್ಯಕೀಯ ಕ್ಷೇತ್ರ ನಿಮ್ಮೊಂದಿಗೆ ನಿಂತಿದೆ. ಆದರೆ, ಈಗ ವೈದ್ಯಕೀಯ ಕ್ಷೇತ್ರ ಬೆದರಿಕೆಯನ್ನು ಎದುರಿಸುತ್ತಿದೆ. ಇಂತಹ ಘಟನೆಗಳು ದೇಶದಾದ್ಯಂತ ನಡೆಯುತ್ತಿವೆ, ಎಂದು ಪತ್ರದಲ್ಲಿ ಬರೆಯಲಾಗಿದೆ.