ಹುಬ್ಬಳ್ಳಿಯ (Hubli) ರೈಲ್ವೆ ಕಾಲೋನಿಯಲ್ಲಿರುವ 13 ಎಕರೆ ರೈಲ್ವೆ ಇಲಾಖೆಯ ಸ್ವತ್ತನ್ನು ಕೇವಲ 83 ಕೋಟಿ ರೂ.ಗೆ 99 ವರ್ಷ ಪರಭಾರೆ ಮಾಡಲು ಹುನ್ನಾರ ನಡೆಸಲಾಗಿತ್ತು. ಐದು ಬಾರಿ ಟೆಂಡರ್ ಕರೆದು ರಿಜೆಕ್ಟ್ ಮಾಡಿದ ಹಾಗೆ ಮಾಡಿ, ಯಾರೂ ಬಂದಿಲ್ಲ ಎಂದು ಪರಭಾರೆ ಕೊಡೋಣ ಎಂಬ ಹುನ್ನಾರ ನಡೆಸಲಾಗಿತ್ತು. ಕೇಂದ್ರ ಮಂತ್ರಿಯಾಗಿರುವ ಪ್ರಹ್ಲಾದ್ ಜೋಶಿಯವರು (Prahald joshi) ಮತ್ತು ಅವರ ಸಹಪಾಠಿಗಳು ಈ ಸ್ವತ್ತನ್ನು ಕಬಳಿಸಲು ಹುನ್ನಾರ ನಡೆಸಿದ್ದರು ಎಂದು ಕಾಂಗ್ರೆಸ್ ನಾಯಕ ಉಗ್ರಪ್ಪ (Ugrappa) ಆರೋಪಿಸಿದರು.
![](https://pratidhvani.com/wp-content/uploads/2024/01/ugrappa-jpg.webp)
ಬಾಯಿ ಬಿಡದ ಮೌನಿ ಬಾಬಾ ಆಗಿದ್ದ ಪ್ರಹ್ಲಾದ್ ಜೋಶಿ ಅವರು ಈ ವಿಚಾರದ ಬಗ್ಗೆ ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸುರ್ಜೆವಾಲರವರು ಪ್ರಸ್ತಾಪ ಮಾಡಿದ ಮೇಲೆ ಇದ್ದಕ್ಕಿದ್ದಂತೆ ನಾನು ಕಾಂಗ್ರೆಸ್ ಮತ್ತು ಸುರ್ಜೆವಾಲರವರ ಮೇಲೆ ಕೇಸ್ ಹಾಕುತ್ತೇನೆ ಎಂದಿದ್ದರು.
![](https://pratidhvani.com/wp-content/uploads/2024/01/Shri_Pralhad_Joshi_Minister_of_Coal-1024x796.webp)
ಜೋಶಿ ಅವರು ಕೇಸ್ ಹಾಕಿದರೆ ಅವರ ಚರಿತ್ರೆ ಬಿಚ್ಚಿಡಲು ನಮಗೂ ಒಳ್ಳೆಯ ಅವಕಾಶ ಎಂದು ಕೇಸ್ ಹಾಕುವಂತೆ ತಿಳಿಸಿದೆವು. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯ ನಂತರ ರೈಲ್ವೇ ಇಲಾಖೆಯವರು ಸಂಪೂರ್ಣ ಟೆಂಡರ್ ಪ್ರಕ್ರಿಯೆಯನ್ನು ವಾಪಸ್ ತೆಗೆದುಕೊಂಡರು.
![](https://pratidhvani.com/wp-content/uploads/2024/01/85029445.jpg)
ಯಾರು ಟೆಂಡರ್ ಹಾಕದ ಕಾರಣ ಈ ಟೆಂಡರ್ ಪ್ರಕ್ರಿಯೆ ಕೈ ಬಿಡಲಾಗಿದೆ ಎಂದು ಪ್ರಹ್ಲಾದ್ ಜೋಶಿಯವರು ಹೇಳುತ್ತಾರೆ. ಟೆಂಡರ್ ಓಪನ್ ಮಾಡದೆಯೇ ಟೆಂಡರ್ ಯಾರು ಹಾಕಿದ್ದಾರೆ, ಯಾರೂ ಟೆಂಡರ್ ಹಾಕಿಲ್ಲ ಅನ್ನುವ ವಿಚಾರವೆಲ್ಲ ಪ್ರಹ್ಲಾದ್ ಜೋಶಿಯವರಿಗೆ ಗೊತ್ತಿದೆ. ಅಂದಮೇಲೆ ಈ ಟೆಂಡರ್ ಪ್ರಕ್ರಿಯೆಯಲ್ಲಿ ಜೋಶಿಯವರ ಕೈವಾಡ ಇದೆ ಅನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?
ರಾಜ್ಯ ಕಂಡಂತಹ ಭ್ರಷ್ಟ ರಾಜಕಾರಣಿಗಳಲ್ಲಿ ಪ್ರಹ್ಲಾದ್ ಜೋಶಿ ಒಬ್ಬರು. ನಮಗೆ ಕೇಸ್ ಹಾಕುವ ಸವಾಲ್ ಹಾಕಿದ ಕರ್ನಾಟಕದ ಉತ್ತರ ಕುಮಾರ ಪ್ರಹ್ಲಾದ್ ಜೋಶಿಯವರೆ ಈ ಆದೇಶ ಆದಮೇಲೆ ಯಾವ ಮುಖ ಹೊತ್ತುಕೊಂಡಿದ್ದೀರಿ. ನಿಮಗೆ ದಮ್ ಇದ್ದರೆ, ತಾಕತ್ ಇದ್ದರೆ, ಬದ್ಧತೆಯಿದ್ದರೆ ಈಗ ನಮ್ಮ ಮೇಲೆ ಕೇಸ್ ಹಾಕಿ. ನಿಮ್ಮ ಚರಿತ್ರೆಯನ್ನು ಎಳೆ ಎಳೆಯಾಗಿ ಬಿಡಿಸಿ ಇಡುತ್ತೇವೆ.
ಸಾವಿರದ ಮುನ್ನೂರು ಕೋಟಿ(1300) ರೂಪಾಯಿ ಬೆಲೆ ಬಾಳುವ ಜಮೀನನ್ನು ಲಪಟಾಯಿಸುವ ಸಂಚು ಮಾಡಿದ್ದೀರ. ನಿಮಗೆ ಮಾನ ಮರ್ಯಾದೆ ಇದ್ದರೆ, ಶ್ರೀರಾಮನ ಹೆಸರು ಹೇಳುವ ನೈತಿಕತೆ ಇದ್ದರೆ, ಆಡಳಿತದಲ್ಲಿ ಪಾರದರ್ಶಕತೆ ಇರಬೇಕು ಎಂಬ ಶ್ರೀರಾಮನ ಸಂದೇಶ ಇವರಲ್ಲಿ ಎಲ್ಲಿದೆ. ನಿಮಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು ಎಂದು ಒತ್ತಾಯ ಪೂರ್ವಕವಾಗಿ ಆಗ್ರಹಿಸುತ್ತೇನೆ.
ಮಾಜಿ ಸಚಿವ ಹೆಚ್.ಎಂ ರೇವಣ್ಣ ಹೇಳಿಕೆ
ಈ ರಾಷ್ಟ್ರದಲ್ಲಿ ಬಿಜೆಪಿಯವರು ಮಾಡುವಂತಹ ಅನ್ಯಾಯದ ಬಗ್ಗೆ ಪ್ರಸ್ತಾವನೆ ಮಂಡಿಸುತ್ತೇನೆ.
ಈ ರಾಷ್ಟ್ರದಲ್ಲಿ ಅನೇಕ ಪಾದಯಾತ್ರೆಗಳು ನಡೆಯುತ್ತವೆ ನಾನು ಸಹ ಗುಜರಾತ್ ನಲ್ಲಿ ನಡೆದ ಅಣಕು ಉಪ್ಪಿನ ದಂಡಿಯಾತ್ರೆಯಲ್ಲಿ ಭಾಗಿಯಾಗಿದ್ದವನು.
ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 4 ಸಾವಿರ ಕಿ.ಮೀಟರ್ ದೂರವನ್ನು ನಡೆದು ನಾನಾ ತರಹದ ಜನರನ್ನು ಭೇಟಿ ಮಾಡಿ ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಗೊಳಿಸಿದರು. ಬಿಜೆಪಿಯವರು ಇಂತಹ ಒಂದು ಯಾತ್ರೆಯನ್ನು ಮಾಡಿ ಸಾಮಾನ್ಯ ಜನರನ್ನು ನೇರವಾಗಿ ಭೇಟಿ ಮಾಡಲಿಲ್ಲ.
ಈಗ ರಾಹುಲ್ ಗಾಂಧಿಯವರು ಮಾಡುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಬಿಜೆಪಿ ಸರ್ಕಾರ ಅಡ್ಡಿಪಡಿಸುತ್ತಿದೆ. ಮಣಿಪುರದಲ್ಲಿ ಗಲಭೆಗಳಾಗಿ ಸಾವು ನೋವುಗಳಾಗಿ ರಾಜ್ಯವೇ ಹೊತ್ತಿ ಉರಿಯುತ್ತಿರಬೇಕಾದರೆ ಪ್ರಧಾನಮಂತ್ರಿಗಳು ಮಣಿಪುರಕ್ಕೆ ಭೇಟಿ ನೀಡಲಿಲ್ಲ. ಮಣಿಪುರದಿಂದ ಪ್ರಾರಂಭವಾದ ನ್ಯಾಯ ಯಾತ್ರೆಗೆ ಬಿಜೆಪಿ ಸರ್ಕಾರ ಅಡ್ಡಿಪಡಿಸುವ ಕೆಲಸ ಮಾಡುತ್ತಿರುವುದು ಸಂವಿಧಾನದ ಕಗ್ಗೊಲೆ ಮಾಡಿದಂತೆ. ಈ ದೇಶದ ರೈತರು ಪ್ರತಿಭಟಿಸಿದರೆ ಅವರ ಮೇಲೆ ಕಾರು ಟ್ರಾಕ್ಟರ್ ಹತ್ತಿಸುತ್ತಾರೆ.
ಭೇಟಿ ಬಚಾವೋ, ಭೇಟಿ ಪಡಾವೋ ಅನ್ನುತ್ತಾರೆ ಆದರೆ ಸ್ತ್ರೀ ರಕ್ಷಣೆ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ,
ರಾಮ ಮಂದಿರ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮವಾಗಿ ಮಾಡುತ್ತಿರುವುದು ಎಷ್ಟು ಸರಿ. ನಾನು ಕೂಡ ಮಾಗಡಿಯಲ್ಲಿ ಸೀತಾ ರಾಮ ಲಕ್ಷ್ಮಣರ ಮತ್ತು ಆಂಜನೇಯರ ದೇವಸ್ಥಾನವನ್ನು ಕಟ್ಟಿಸಿದ್ದೇನೆ. ಇಂತಹ ಕಾರ್ಯಗಳು ಎಲ್ಲಾ ಗ್ರಾಮಗಳಲ್ಲೂ ನಡೆದಿವೆ. ಇಂತಹ ಕಾರ್ಯಗಳನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಸರ್ವೇ ಜನಃ ಸುಖಿನೋಭವಂತು ಎಂಬ ಮಾತಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಚಂದ್ರಪ್ಪನವರ ಹೇಳಿಕೆ
ಪ್ರಧಾನ ಮಂತ್ರಿಗಳಿಗೆ ಬೇಕಾದಷ್ಟು ಕೆಲಸವಿದ್ದರೂ ಶ್ರೀರಾಮಚಂದ್ರನ ಸೇವೆ ಮಾಡಿದ್ದಾರೆ. ಈ ದೇಶ ರಾಮರಾಜ್ಯ ಆಗಿದೆಯಾ ಎನ್ನುವ ಪ್ರಶ್ನೆಯನ್ನು ಬಿಜೆಪಿಯವರೇ ಹಾಕಿಕೊಳ್ಳಬೇಕು. ರಾಮರಾಜ್ಯವನ್ನು ಮಾಡೋದಕ್ಕೆ ಪ್ರಯತ್ನಪಡಬೇಕೆ ವಿನಃ ಶ್ರೀರಾಮನನ್ನೇ ಚುನಾವಣೆಗೆ ಬಳಸಿಕೊಳ್ಳಬಾರದು. ಚುನಾವಣೆಗೊಸ್ಕರ ಶ್ರೀರಾಮನನ್ನು ಬಳಸಿಕೊಳ್ಳುತ್ತಿರುವುದು ಎಷ್ಟು ಸಮಂಜಸ.