ರಾಷ್ಟ್ರೀಯ ತನಿಖಾ ಸಂಸ್ಥೆ ( NIA ) ಬೆಂಗಳೂರಿನ ಎರಡು ಕಡೆಗಳಲ್ಲಿ ದಾಳಿ ನಡೆಸಿದೆ. ಬಾಂಗ್ಲಾದೇಶದ ವಲಸಿಗರಿಗೆ ನಕಲಿ ಗುರುತಿನ ದಾಖಲೆ ತಯಾರಿಸಿಕೊಡುತ್ತಿದ್ದ ಎರಡು ಅಡ್ಡೆ ಮೇಲೆ ಎನ್ಐಎ ರೇಡ್ ಮಾಡಿದೆ. ದಾಳಿ ವೇಳೆ ಹಲವು ನಕಲಿ ದಾಖಲೆಗಳು, ಮೊಬೈಲ್ ಫೋನ್, ಒಂದು ಹಾರ್ಡ್ ಡಿಸ್ಕ್ ಸೇರಿದಂತೆ ನಕಲಿ ದಾಖಲೆ ಪತ್ರಗಳನ್ನು ತಯಾರಿಸಲು ಬಳಸುತ್ತಿದ್ದ ಆರು ಡಿಜಿಟಿಲ್ ಉಪಕರಣಗಳನ್ನು ರಾಷ್ಟ್ರೀಯ ತನಿಖಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅಂದಹಾಗೆ, ಈ ದಾಳಿ ಆಗಸ್ಟ್ 8ರಂದು ಬೆಳ್ಳಗ್ಗಿನ ಜಾವ ನಡೆದಿದೆ.
ಜೂನ್ ತಿಂಗಳಿನಲ್ಲಿ ಮಾನವಕಳ್ಳಸಾಗಣಿಕೆಗೆ ಸಂಬಂಧಿಸಿದಂತೆ ಬೆಂಗಳೂರಿನ ರಾಮಮೂರ್ತಿ ನಗರದ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿತ್ತು. ಈ ವೇಳೆ ಈ ಠಾಣಾ ವ್ಯಾಪ್ತಿಯಲ್ಲಿನ ಬಾಡಿಗೆ ಮನೆಯೊಂದರಿಂದ 7 ಬಾಂಗ್ಲಾದೇಶಿ ಮಹಿಳೆಯರು ಹಾಗೂ ಒಂದು ಮಗುವನ್ನು ಈ ಸಂಬಂಧ ಪೊಲೀಸರು ರಕ್ಷಣೆ ಮಾಡಿದ್ರು. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಒಟ್ಟು 13 ಜನರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿತ್ತು. ಬಾಂಗ್ಲಾದೇಶದಿಂದ ಇವರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದು ಬೆಂಗಳೂರಿನಲ್ಲಿ ವೇಷ್ಯಾವಾಟಿಕೆ ದಂಧೆಗೆ ಬಳಸಿಕೊಳ್ಳಲಾಗ್ತಿದೆ ಎಂದು ಪೊಲೀಸರ ಪ್ರಾರ್ಥಮಿಕ ತನಿಖೆಯಲ್ಲಿ ಬಯಲಾಗಿತ್ತು.
ಬೆಂಗಳೂರಿನಲ್ಲಿ ಬಾಂಗ್ಲಾದೇಶಿ ಮಹಿಳೆಯರನ್ನು ವೇಷ್ಯಾವಾಟಿಕೆಗೆ ಬಳಸಿಕೊಳ್ಳಲಾಗ್ತಿದೆ ಎಂಬ ಮಾಹಿತಿ ಮೇರೆಗೆ ರಾಮಮೂರ್ತಿನಗರದ ಪೊಲೀಸರು ಈ ಕಾರ್ಯಚರಣೆ ನಡೆಸಿತ್ತು. ಈ ವೇಳೆ ಬಾಂಗ್ಲಾ ಮಹಿಳೆಯರಿಗೆ ಕಿರುಕುಳ ಕೊಟ್ಟು ದಂಧೆಗೆ ಬಳಸಿಕೊಳ್ಳುವುದು ಖಚಿತವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯರನ್ನು ರಕ್ಷಣೆ ಮಾಡಿದ ಸ್ಥಳದಿಂದ ಪೊಲೀಸರಿಗೆ ಹಲವು ಆಧಾರ್ ಕಾರ್ಡ್ಗಳು, 46 ಬಗೆಯ ವಿವಿಧ ದಾಖಲೆ ಪತ್ರಗಳು ಸಿಕ್ಕಿತ್ತು. ಇದು ಈಗ ಎಎನ್ಐ ದಾಳಿಗೆ ಪ್ರಮುಖ ಕಾರಣ ಎಂದು ದಿ ಹಿಂದೂ ವರದಿ ಮಾಡಿದೆ.
![](https://pratidhvani.com/wp-content/uploads/2021/08/download-1-1.jpg)
ಇನ್ನು ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಗಂಭೀರವಾಗಿ ಪರಿಗಣಿಸಿದ್ದು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 370 (ಮಾನವ ಕಳ್ಳಸಾಗಣೆ) ಮತ್ತು 343 (ಅಕ್ರಮವಾಗಿ ವಶದಲ್ಲಿಟ್ಟುಕೊಳ್ಳುವುದು) ಜೊತೆಗೆ, ವಿದೇಶಿ ಪ್ರವಾಸಿ ಕಾಯ್ದೆ ಹಾಗೂ ವೇಷ್ಯಾವಾಟಿಕೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ರಾಷ್ಟ್ರೀಯ ತನಿಖಾಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ವರದಿ : ಮಣಿಕಂಠ ಡಿ