ಬೆಂಗಳೂರು : ಪ್ರತಿಷ್ಠಿತ ಬೆಳಗಾವಿಯ(Belagavi) ಡಿಸಿಸಿ ಬ್ಯಾಂಕ್ ಆಡಳಿತ ಚುಕ್ಕಾಣಿಯನ್ನು ತಮ್ಮ ಕೈಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಜಾರಕಿಹೊಳಿ(Jarakiholi) ಬ್ರದರ್ಸ್ ಇದೀಗ ಹೊಸ ರಾಜಕೀಯ ದಾಳ ಉರುಳಿಸುತ್ತಿದ್ದಾರೆ. ಈಗಾಗಲೇ ತಮ್ಮ ಕುಟುಂಬದ ಇಬ್ಬರಿಗೆ ನಿರ್ದೇಶಕ ಸ್ಥಾನ ಕಲ್ಪಿಸಿಕೊಡುವಲ್ಲಿ ಬ್ರದರ್ಸ್ ತಂತ್ರಗಾರಿಕೆ ಫಲ ನೀಡಿದೆ. ಈ ಮೂಲಕ ತಮ್ಮ ರಾಜಕೀಯ ಶಕ್ತಿಯನ್ನು ಎಲ್ಲರಿಗೂ ಜಾರಕಿಹೊಳಿ ಸಹೋದರರು ತೋರಿಸಿಕೊಟ್ಟಿದ್ದಾರೆ.

ಡಿಸಿಸಿ ಬ್ಯಾಂಕ್ ಚುನಾವಣೆಯ ಆರಂಭದಿಂದಲೂ ತಾವು ಹಾಕಿದ್ದ ಯೋಜನೆ, ಯೋಚನೆಗಳಿಗ ಸಾಕಷ್ಟು ಎಫರ್ಟ್ ಹಾಕುವ ಮೂಲಕ ಗುರಿ ಸಾಧಿಸಿದ್ದರು. ಇದರ ಫಲವಾಗಿ ಡಿಸಿಸಿ ಬ್ಯಾಂಕ್ ಅನ್ನು ತಮ್ಮ ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದರು. ಅಂದುಕೊಂಡಂತೆ ಲಿಂಗಾಯತರಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷಗಿರಿಯನ್ನು ಕಟ್ಟುವಲ್ಲಿಯೂ ಹಿಂದೆಬೀಳಲಿಲ್ಲ. ಈ ಮೂಲಕ ಎದುರಾಳಿಗಳಾಗಿದ್ದ ಮಾಜಿ ಸಂಸದ ರಮೇಶ್ ಕತ್ತಿ(Ŗamesh Katti) ಹಾಗೂ ಶಾಸಕ ಲಕ್ಷ್ಮಣ್ ಸವದಿಗೆ(Laxman Savadi) ಶಾಕ್ ನೀಡಿದ್ದರು.
ತೀವ್ರ ಜಿದ್ದಾಜಿದ್ದಿನ ಕಣವಾಗಿ ಪರಿಣಮಿಸಿದ್ದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದು ಬೀಗಿರುವ ಜಾರಕಿಹೊಳಿ ಬ್ರದರ್ಸ್ ಮತ್ತೆ ವಿರೋಧಿಗಳಿಗೆ ಚೆಕ್ ಮೆಟ್ ನೀಡಲು ಮುಂದಾಗಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕ್ ನಿಂದ ಅಫೆಕ್ಸ್ ಬ್ಯಾಂಕ್ ಗೆ ಪ್ರತಿನಿಧಿ ಆಯ್ಕೆ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ. ಹೀಗಾಗಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಗೆ ಇನ್ನಷ್ಟು ಹಿನ್ನಡೆಯಾಗುವಂತೆ ರಣತಂತ್ರ ರೂಪಿಸಿದ್ದಾರೆ.

ಈಗಾಗಲೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷಗಿರಿಯ ಮೇಲೆ ಕಣ್ಣಿಟ್ಟಿರುವ ಸವದಿಗೆ ಕನಸಿಗೆ ಸಾಹುಕಾರ್ ಟೀಂ ತಣ್ಣೀರು ಎರಚಿದೆ. ಅಪೆಕ್ಸ್ ಬ್ಯಾಂಕ್ಗೆ ಸವದಿ ಬದಲಿಗೆ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ಗೆ ಚಾನ್ಸ್ ನೀಡಲಾಗಿದೆ. ಪ್ರಮುಖವಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಣತಿಯಂತೆ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಅಲ್ಲದೆ ಪ್ರತಿ ಡಿಸಿಸಿ ಬ್ಯಾಂಕ್ನಿಂದ ರಾಜ್ಯ ಅಪೆಕ್ಸ್ ಬ್ಯಾಂಕ್ಗೆ ಒಬ್ಬರನ್ನು ಪ್ರತಿನಿಧಿಗಳಾಗಿ ಆಯ್ಕೆ ಮಾಡಲಾಗುತ್ತದೆ.

ಜಿಲ್ಲಾ ಪ್ರತಿನಿಧಿಗಳು ಸೇರಿ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷರ ಆಯ್ಕೆಯನ್ನು ಮಾಡುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ರಾಜ್ಯದಲ್ಲಿನ ಪ್ರತಿಷ್ಠಿತ ಹುದ್ದೆಗಳಲ್ಲಿ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನವು ಒಂದಾಗಿದ್ದು, ಬಹುತೇಕ ಶಾಸಕರು, ಸಹಕಾರಿ ರಂಗದಲ್ಲಿ ಕೆಲಸ ಮಾಡಿರುವವರಿಗೆ ಅಧ್ಯಕ್ಷಗಿರಿ ಒಲಿಯುತ್ತ ಬಂದಿದೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಈ ಹಿನ್ನೆಲೆಯಲ್ಲಿ ಈ ಬಾರಿ ಅಧ್ಯಕ್ಷ ಸ್ಥಾನ ಪಡೆಯಲೇಬೇಕೆಂದು ಸವದಿ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಜಿಲ್ಲಾ ರಾಜಕೀಯದಲ್ಲಿನ ಸಾಕಷ್ಟು ಬೆಳವಣಿಗೆಗಳಿಂದ ಇದೀಗ ಬ್ರದರ್ಸ್ ರಚಿಸಿದ ರಾಜಕೀಯ ತಂತ್ರಗಾರಿಕೆ ವರ್ಕೌಟ್ ಆಗಿದ್ದು, ಲಕ್ಷ್ಮಣ್ ಸವದಿಗೆ ತೀವ್ರ ನಿರಾಸೆಯಾದಂತಾಗಿದೆ.












