ಪಂಜಾಬ್ ಚುನಾವಣೆ (Punjab poll) ಮುಗಿದಿದೆ. ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಈ ರಾಜ್ಯದ ಚುನಾವಣೆಯ ಫಲಿತಾಂಶವು (poll results) ಭಾರತದ ರಾಜಕೀಯದಲ್ಲಿ ಬಹಳಷ್ಟು ಬದಲಾವಣೆ ತರಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಸದ್ಯ ಆಡಳಿತದಲ್ಲಿರುವ ಕಾಂಗ್ರೆಸ್, ರಾಷ್ಟ್ರೀಯ ಪಕ್ಷದ (National Party’s) ಮಾನ್ಯತೆ ಗಳಿಸಲು ಯತ್ನಿಸುತ್ತಿರುವ ಆಮ್ ಆದ್ಮಿ (AAP) ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ (BJP) ಈ ಮೂರೂ ಪಕ್ಷಗಳಿಗೂ ಪಂಜಾಬಿನ ಚುನಾವಣೆ ಮಹತ್ವದ್ದಾಗಿದ್ದು, ಮೂರು ಪಕ್ಷಗಳ ನಾಯಕರಿಗೂ ಸಾಕಷ್ಟು ನಿರೀಕ್ಷೆಗಳಿವೆ. ಆದರೆ ರಾಷ್ಟ್ರ ರಾಜಕಾರಣದೆಡೆಗೆ ಕಣ್ಣಿಟ್ಟಿರುವ ಆಪ್ಗೆ ಈ ಚುನಾವಣೆ ಉಳಿದೆಲ್ಲಾ ಪಕ್ಷಗಳಿಗಿಂತ ಒಂದು ಕೈ ಹೆಚ್ಚೇ ಮಹತ್ವಪೂರ್ಣವಾಗಿದೆ.
ರಾಜ್ಯದಲ್ಲಿ ಎಎಪಿಯ ಚೊಚ್ಚಲ ಚುನಾವಣೆ 2014 ರ ಸಾರ್ವತ್ರಿಕ ಚುನಾವಣೆಯಾಗಿತ್ತು. ಮೋದಿ ಅಲೆಯ ನಡುವೆಯೂ ಪಕ್ಷವು 13 ರಲ್ಲಿ ನಾಲ್ಕು ಸ್ಥಾನಗಳನ್ನು ಗೆಲ್ಲಲು ಯಶಸ್ವಿಯಾಗಿತ್ತು. 2017 ರ ವಿಧಾನಾಸಭಾ ಚುನಾವಣೆಯಲ್ಲಿ ಆಪ್ ಪಂಜಾಬ್ನಲ್ಲಿ (AAP Punjab) ತನ್ನ ಸಂಪೂರ್ಣ ಬಲದೊಂದಿಗೆ ಹೋರಾಡಿತ್ತು. ಆದರೆ ಆ ಚುನಾವಣೆಯಲ್ಲಿ ಆಪ್ ಕೇವಲ 20 ಸೀಟ್ ಗೆಲ್ಲಲಷ್ಟೇ ಶಕ್ತವಾಗಿತ್ತು. ಮತ್ತು ಅದರ 25ರಷ್ಟು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.
2017 ರ ಪಂಜಾಬ್ ಚುನಾವಣೆಯಲ್ಲಿ AAP ಏಕೆ ಸೋತಿತು?
2017 ರ ಚುನಾವಣೆಯಲ್ಲಿ ಎಎಪಿ ಏಕೆ ಸೋತಿದೆ ಎಂಬುದರ ಕುರಿತು ಹಲವಾರು ವಿಶ್ಲೇಷಣೆಗಳಿವೆ. ಚುನಾವಣೆಗೆ ಕೆಲವೇ ದಿನಗಳಿರುವಾಗ ಎಎಪಿ ತನ್ನ ರಾಜ್ಯ ಸಂಚಾಲಕ ಸುಚಾ ಸಿಂಗ್ ಛೋಟೆಪುರ್ (Sucha Singh Chhotepur) ಅವರನ್ನು ಪಕ್ಷದಿಂದ ಉಚ್ಛಾಟಿಸಿತು, ಅವರು ಶಿರೋಮಣಿ ಅಕಾಲಿದಳಕ್ಕೆ (Shiromani Akali Dal) ಸೇರಿದರು. ಅವರ ಪದಚ್ಯುತಿಯು ಪಕ್ಷದೊಳಗೆ ಭಾರಿ ಬಂಡಾಯಕ್ಕೆ ಕಾರಣವಾಯಿತು. ಮತ್ತು ಅದು ಚುನಾವಣಾ ಪ್ರಚಾರದ ಮೇಲೆ ಪರಿಣಾಮ ಬೀರಿತು.
2017 ರ ಜನವರಿಯ ಕೊನೆಯ ಶನಿವಾರದ ರಾತ್ರಿ ಕೇಜ್ರಿವಾಲ್ (Arvind Kejriwal) ಖಲಿಸ್ತಾನ್ ಉಗ್ರಗಾಮಿ ಗುರಿಂದರ್ ಸಿಂಗ್ ಅವರ ಮನೆಯಲ್ಲಿ ಉಳಿದಾಗ ಸಮಸ್ಯೆ ಮತ್ತಷ್ಟು ತೀವ್ರಗೊಂಡಿತು. ಆದರೆ ಇಂಗ್ಲೆಂಡ್ ನಿವಾದಿಯಾಗಿರುವ ಗುರಿಂದರ್ ಸಿಂಗ್ (Gurinder Singh) ಮನೆಯಲ್ಲಿ ಇರಲಿಲ್ಲ ಮತ್ತು ತಮ್ಮ ಮನೆಯನ್ನು ತನ್ನ ಸ್ನೇಹಿತ ಸಂತಾಮ್ ಸಿಂಗ್ಗೆ ಗುತ್ತಿಗೆಗೆ ನೀಡಿದ್ದರು ಎಂದು ಆಪ್ ಮೂಲಗಳು ಹೇಳಿತ್ತು.ಆದರೆ ವರದಿಗಳ ಪ್ರಕಾರ, ಗುರಿಂದರ್ ಮನೆಯಲ್ಲಿದ್ದರು. ಇದು ಪಂಜಾಬಿನಲ್ಲಿ ದೊಡ್ಡ ರಾಜಕೀಯ ಗದ್ದಲವನ್ನು ಹುಟ್ಟುಹಾಕಿತು ಮತ್ತು ಇದು ನೇರವಾಗಿ ಚುನಾವಣೆಯ ಮೇಲೆ ಪರಿಣಾಮ ಬೀರಿತು.
ಅಂತೆಯೇ, ಕೇಜ್ರಿವಾಲ್ ರಾಜ್ಯ ನಾಯಕರನ್ನು ಬದಿಗಿಟ್ಟು ದೆಹಲಿಯಲ್ಲಿ ಕೂತು ಪಂಜಾಬ್ ರಾಜ್ಯ ಘಟಕವನ್ನು ನಿಯಂತ್ರಿಸುತ್ತಿದ್ದಾರೆ ಎಂಬ ಆರೋಪಗಳು ಪಂಜಾಬಿಗಳನ್ನು ಕೆರಳಿಸಿತು. ಇದೂ ಸಹ ಚುನಾವಣೆಯ ಮೇಲೆ ಪರಿಣಾಮ ಬೀರಿತು.
ಚುನಾವಣಾ ಸೋಲು ಆಪ್ ಮೇಲೆ ಬೀರಿದ ಪರಿಣಾಮಗಳು ಪಂಜಾಬ್ನಲ್ಲಿ ಎಎಪಿ ನಾಯಕತ್ವದ ಬಿಕ್ಕಟ್ಟಿನಿಂದ ಬಳಲುತ್ತಿದೆ. 2014 ರಿಂದ 2022 ರ ಅಸೆಂಬ್ಲಿ ಚುನಾವಣೆಯ ತನಕ, ಪಕ್ಷವು ಸುಮಾರು ಐದು ರಾಜ್ಯ ಸಂಚಾಲಕರನ್ನು ನೇಮಿಸಿತ್ತು. ಅಂತೆಯೇ, ಕಳೆದ ಎಂಟು ವರ್ಷಗಳಲ್ಲಿ ಪಕ್ಷವು ಸುಮಾರು ಮೂರು ಪಂಜಾಬ್ ರಾಜ್ಯ ಉಸ್ತುವಾರಿಗಳು ಮತ್ತು ಇಬ್ಬರು ಸಹ-ಪ್ರಭಾರಿಗಳನ್ನು ನೇಮಿಸಿದೆ. ಎಎಪಿಯ ಪಂಜಾಬ್ ಘಟಕದೊಳಗೆ ಹೆಚ್ಚುತ್ತಿರುವ ಎಲ್ಲಾ ಆಂತರಿಕ ಕಲಹಗಳಿಗೆ ಶೋಚನೀಯ ಚುನಾವಣಾ ಫಲಿತಾಂಶಗಳೇ ಕಾರಣವಾಗಿದೆ.
ಪಕ್ಷದ ಮೊದಲ ಪಂಜಾಬ್ ಸಂಚಾಲಕರಾದ ಸುಚಾ ಸಿಂಗ್ ಛೋಟೆಪುರ್ ಅವರನ್ನು 2016 ರಲ್ಲಿ ತೆಗೆದುಹಾಕಲಾಯಿತು ಮತ್ತು ಗುರ್ಪ್ರೀತ್ ಸಿಂಗ್ ವಾರೈಚ್ ಅವರನ್ನು ರಾಜ್ಯ ಸಂಚಾಲಕರಾಗಿ ನೇಮಿಸಲಾಯಿತು. 2017 ರಲ್ಲಿ, AAPನ ಈಗಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಭಗವಂತ್ ಮಾನ್ ಅವರನ್ನು AAP ರಾಜ್ಯ ಸಂಚಾಲಕರಾಗಿ ಮತ್ತು ಅಮನ್ ಅರೋರಾ ಅವರನ್ನು ಸಹ-ಪ್ರಭಾರಿಯಾಗಿ ನೇಮಿಸಿತು. ಇದರಿಂದ ಬೇಸರಗೊಂಡ ವಾರೈಚ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದರು. ಮಾರ್ಚ್ 2018 ರಲ್ಲಿ ಕೇಜ್ರಿವಾಲ್ ಅವರು ಶಿರೋಮಣಿ ಅಕಾಲಿದಳದ ನಾಯಕ ವಿಕ್ರಮ್ ಸಿಂಗ್ ಮಜಿಥಿಯಾ ವಿರುದ್ಧ ತಾನು ಮಾಡಿದ್ದ ಡ್ರಗ್ ಟೀಕೆಗಳಿಗಾಗಿ ಕ್ಷಮೆಯಾಚಿಸಿದ ನಂತ ಈ ಇಬ್ಬರೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.
ಭಾರೀ ಆಂತರಿಕ ಕಲಹದ ನಡುವೆ, AAP ಬಲ್ಬೀರ್ ಸಿಂಗ್ ಅವರನ್ನು ಹಂಗಾಮಿ ರಾಜ್ಯ ಸಂಚಾಲಕರನ್ನಾಗಿ ನೇಮಿಸಿತು. ಆದಾಗ್ಯೂ, ಭಗವಂತ್ ಮಾನ್-ಅರೋರಾ ಜೋಡಿಯು 2019 ರಲ್ಲಿ ತಮ್ಮ ಮೊದಲಿನ ಪೋಸ್ಟ್ಗಳಿಗೆ ಮರಳಿದರು.
ಅದೇ ರೀತಿ, ಎಎಪಿ ತನ್ನ 2014 ಮತ್ತು 2017 ರ ಚುನಾವಣೆಗಳನ್ನು ಹಿರಿಯ ನಾಯಕ ಮತ್ತು ಈಗ ರಾಜ್ಯಸಭಾ ಸಂಸದರಾಗಿರುವ ಸಂಜಯ್ ಸಿಂಗ್ ನೇತೃತ್ವದಲ್ಲಿ ಎದುರಿಸಿತತ್ತು. 2016 ರಲ್ಲಿ, ಎಎಪಿ ಪಕ್ಷವು ವಿಶ್ವಾಸಾರ್ಹ ಸಿಖ್ ಮುಖದ ಕೊರತೆಯಿಂದಾಗಿ ಪತ್ರಕರ್ತರಾಗಿದ್ದ ದೆಹಲಿ ಶಾಸಕ ಜರ್ನೈಲ್ ಸಿಂಗ್ ಅವರನ್ನು ಪಂಜಾಬ್ ವ್ಯವಹಾರಗಳ ಸಹ-ಪ್ರಭಾರಿಯಾಗಿ ನೇಮಿಸಿತು. ಈ ಮಧ್ಯೆ, 2017 ರ ಚುನಾವಣೆಯಲ್ಲಿ ಎಎಪಿಯ ಕಳಪೆ ಪ್ರದರ್ಶನದ ನಂತರ ಸಂಜಯ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಪಂಜಾಬ್ ರಾಜ್ಯ ಉಸ್ತುವಾರಿಯಾದರು.
ಇಷ್ಟಾಗಿಯೂ ಪಕ್ಷದ ಒಳಜಗಳ ನಿಲ್ಲಲಿಲ್ಲ ಮತ್ತು 2019 ರ ಸಂಸತ್ತಿನ ಚುನಾವಣೆಯಲ್ಲಿ ಎಎಪಿ ಕೇವಲ ಒಂದು ಸ್ಥಾನವನ್ನು ಮಾತ್ರ ಗೆದ್ದಿತು. ಅದರ ನಂತರ, ಕೇಜ್ರಿವಾಲ್ ದೆಹಲಿಯ ತಿಲಕ್ ನಗರದಿಂದ ಮೂರು ಅವಧಿಯ ಶಾಸಕರಾದ ಜರ್ನೈಲ್ ಸಿಂಗ್ ಅವರನ್ನು 2020 ರಲ್ಲಿ ಪಂಜಾಬ್ನ ಉಸ್ತುವಾರಿಯಾಗಿ ನೇಮಿಸಿದರು.
ಈ ಮಧ್ಯೆ ಎಎಪಿಯು ದೆಹಲಿಯಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ಕೇಜ್ರಿವಾಲ್ ಸ್ವತಃ ಪಂಜಾಬ್ ಘಟಕದ ನಿಯಂತ್ರಣವನ್ನು ತೆಗೆದುಕೊಳ್ಳಲು ಯೋಜಿಸಿದರು ಮತ್ತು 2021 ರಲ್ಲಿ ಪಂಜಾಬ್ ಸಹ-ಪ್ರಭಾರಿಯಾಗಿ ನಿಕಟ ವಿಶ್ವಾಸಿಗಳಲ್ಲಿ ಒಬ್ಬರಾದ ಶಾಸಕ ರಾಘವ್ ಚಡ್ಡಾ ಅವರನ್ನು ನೇಮಿಸಿದರು.
ಪಂಜಾಬ್ ಘಟಕದ ನಿಯಂತ್ರಣವನ್ನು ಕೇಜ್ರಿವಾಲ್ ಹೇಗೆ ವಹಿಸಿಕೊಂಡರು?
ದೆಹಲಿ ವಿಜಯದ ನಂತರ ಕೇಜ್ರಿವಾಲ್ ತಮ್ಮ ಅಧಿಕಾರ ವಿಸ್ತರಣೆ ಯೋಜನೆಯನ್ನು ಜಾರಿಗೆ ತಂದರು. ಇದನ್ನು ಪೂರೈಸಲು ಅವರು ಮನೀಷ್ ಸಿಸೋಡಿಯಾ ಅವರನ್ನು ಉತ್ತರಾಖಂಡದ ಉಸ್ತುವಾರಿಯಾಗಿ, ಸಂಜಯ್ ಸಿಂಗ್ ಅವರನ್ನು ಉತ್ತರ ಪ್ರದೇಶದ ಉಸ್ತುವಾರಿಯಾಗಿ, ಅತಿಶಿ ಅವರನ್ನು ಗೋವಾದ ಉಸ್ತುವಾರಿಯಾಗಿ ಮತ್ತು ರಾಘವ್ ಚಡ್ಡಾ ಅವರನ್ನು ಪಂಜಾಬ್ ಸಹ-ಪ್ರಭಾರಿಯಾಗಿ ನೇಮಿಸಿದರು.
ಈ ಮೂಲಕ ಕೇಜ್ರಿವಾಲ್ ತುಂಬಾ ಸ್ಪಷ್ಟ ಸಂದೇಶ ನೀಡಿದ್ದರು. ಚಡ್ಡಾ ಕೇಜ್ರಿವಾಲರಿಗೆ ಅತ್ಯಂತ ಆಪ್ತರಾಗಿದ್ದು ದೆಹಲಿಯಲ್ಲೂ ತನಗೆ ಬೇಕಾದ ಆಯಕಟ್ಟಿನ ಸ್ಥಳಗಳಲ್ಲಿ ಚಡ್ಡಾ ಅವರನ್ನೇ ನೇಮಿಸಿದ್ದರು. ಈಗ ಪಂಜಾಬ್ಗೆ ಸಂಬಂಧಪಟ್ಟ ನಿರ್ಧಾರಗಳನ್ನು ಅವರು ನೇರವಾಗಿ ಚಡ್ಡಾ ಮೂಲಕ ತೆಗೆದುಕೊಳ್ಳುತ್ತಾರೆ. ಅದೇ ರೀತಿ ಕೇಜ್ರಿವಾಲ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಭಗವಂತ್ ಸಿಂಗ್ ಮಾನ್ ಅವರನ್ನು ನೇಮಿಸುತ್ತಾರೆ ಎಂಬ ಮಾತು ಪಕ್ಷದೊಳಗೆ ಮೊದಲಿನಿಂದಲೂ ಕೇಳಿ ಬರುತ್ತಿತ್ತು.
ಮಾನ್ ದೆಹಲಿ ನಾಯಕತ್ವಕ್ಕೆ ತುಂಬಾ ಹತ್ತಿರವಾಗಿದ್ದಾರೆ ಮಾತ್ರವಲ್ಲದೆ ಕೇಜ್ರಿವಾಲ್ ಅವರು ಸಂಪೂರ್ಣವಾಗಿ ನಂಬುಬಹುದಾದ ವ್ಯಕ್ತಿಯಾಗಿದ್ದಾರೆ ಅವರು. ಅಲ್ಲದೆ ಪಕ್ಷದ ದೆಹಲಿ ನಾಯಕತ್ವವು ನೀಡಿದ ಸೂಚನೆಗಳನ್ನು ಶಿರಸಾವಹಿಸಿ ಪಾಲಿಸಿದ ಪಂಜಾಬ್ನ ಕೆಲವೇ ಕೆಲವು ಎಎಪಿ ರಾಜಕಾರಣಿಗಳಲ್ಲಿ ಮಾನ್ ಸಹ ಒಬ್ಬರು.
ಕೇಜ್ರಿವಾಲ್ ಅವರ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಪಂಜಾಬ್ ಹೇಗೆ ಪೂರೈಸುತ್ತದೆ?
ಕೇಜ್ರಿವಾಲ್ ಬಿಜೆಪಿಗೆ ಪರ್ಯಾಯವಾಗುವ ಸಾಮರ್ಥ್ಯ ಹೊಂದಿದ್ದಾರೆ. ಹಿಂದಿ ಹೃದಯಭಾಗದಲ್ಲಿ ಅವರ ಉಪಸ್ಥಿತಿ, ವಯಸ್ಸು, ಅಧಿಕಾರದ ಹಸಿವು ಮತ್ತು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುವುದು ಅವರನ್ನು ಪ್ರಬಲ ಸ್ಪರ್ಧಿಯನ್ನಾಗಿ ಮಾಡುತ್ತದೆ. ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹೊರತುಪಡಿಸಿ ಬೇರೆ ಯಾವುದೇ ನಾಯಕರಲ್ಲಿ ಈ ಎಲ್ಲಾ ಗುಣಗಳಿಲ್ಲ.
ಸತತ ಎರಡು ಅವಧಿಗೆ ಬಿಜೆಪಿಯನ್ನು ಸೋಲಿಸಿ ದೆಹಲಿಯಲ್ಲಿ ಕಾಂಗ್ರೆಸ್ ಅನ್ನು ನೆಲಸಮಗೊಳಿಸಿದ್ದರೂ, ಎಎಪಿಗೆ ದೆಹಲಿಯ ಪೂರ್ತಿ ಅಧಿಕಾರ ಸಿಕ್ಕಿಲ್ಲ. ಯಾಕೆಂದರೆ ದೆಹಲಿಯು ಭಾರತದ ರಾಷ್ಟ್ರ ರಾಜಧಾನಿಯಾಗಿದ್ದು ಕ್ಯಾಬಿನೆಟ್ ಮತ್ತು ಅಸೆಂಬ್ಲಿಯ ಅಧಿಕಾರವು ತುಂಬಾ ಸೀಮಿತವಾಗಿದೆ.
ಈ ಪರಿಸ್ಥಿತಿಯಲ್ಲಿ, ಪಂಜಾಬ್ ಕೇಜ್ರಿವಾಲ್ ಅವರ ಬಹಳಷ್ಟು ಕನಸುಗಳನ್ನು ಈಡೇರಿಸಬಹುದು. ಮೊದಲನೆಯದಾಗಿ, ಪಂಜಾಬ್ನಲ್ಲಿ ಎಎಪಿ ಸರ್ಕಾರ ರಚಿಸಿದರೆ, ಅದು ಪಕ್ಷದ ಮೊದಲ ಪೂರ್ಣ ರಾಜ್ಯವಾಗಲಿದೆ. ತಮ್ಮ ಪಕ್ಷವು ಪೊಲೀಸರ ಮೇಲೆ ಹಿಡಿತ ಸಾಧಿಸಿದರೆ, ಹಲವು ಬದಲಾವಣೆಗಳನ್ನು ತರಬಹುದು ಎಂದು ಕೇಜ್ರಿವಾಲ್ ನಂಬಿದ್ದಾರೆ. ಅದರ ನಂತರ ಅವರು ಭವಿಷ್ಯದಲ್ಲಿ ಅವರ ರಾಷ್ಟ್ರೀಯ ವಿಸ್ತರಣೆಗಳ ಸಮಯದಲ್ಲಿ ಅವುಗಳನ್ನು ಬಳಸಲು ಸಾಧ್ಯವಾಗುತ್ತದೆ ಎನ್ನುವುದು ಕೇಜ್ರಿವಾಲ್ ಅವರ ಆಲೋಚನೆ.
ಪಂಜಾಬ್ ಏಳು ಸಂಸದರನ್ನು ರಾಜ್ಯಸಭೆಗೆ ಕಳುಹಿಸಿದ್ದು, ಅವರೆಲ್ಲರ ಅವಧಿ ಈ ವರ್ಷ ಕೊನೆಗೊಳ್ಳಲಿದೆ. ಎಎಪಿ ರಾಜ್ಯವನ್ನು ಗೆದ್ದರೆ ಅಥವಾ ಅದರ ಶಾಸಕರ ಸಂಖ್ಯೆ ಹೆಚ್ಚಿದರೆ, ಕೇಜ್ರಿವಾಲ್ ಅವರು ರಾಜ್ಯಸಭೆಗೆ ಹೆಚ್ಚಿನ ಸಂಸದರನ್ನು ಕಳುಹಿಸುವ ಅಧಿಕಾರವನ್ನು ಪಡೆಯತ್ತಾರೆ. ಇದು ಸಂಸತ್ತಿನಲ್ಲಿ ಪಕ್ಷದ ಉಪಸ್ಥಿತಿಯನ್ನು ಹೆಚ್ಚಿಸುವುದಲ್ಲದೆ, ವಿರೋಧ ಪಕ್ಷದೊಳಗೆ ಗಮನಾರ್ಹ ಧ್ವನಿಯಾಗಲು ಸಹಾಯ ಮಾಡುತ್ತದೆ.
ಕೊನೆಯದಾಗಿ, ಗೋವಾ ಮತ್ತು ಉತ್ತರಾಖಂಡದಲ್ಲಿ ಎಎಪಿ ಶೇಕಡಾ 6 ಕ್ಕಿಂತ ಹೆಚ್ಚು ಮತಗಳನ್ನು ಪಡೆದರೆ, ಪಂಜಾಬ್ ಮತ್ತು ದೆಹಲಿಯ ಮತ ಹಂಚಿಕೆಯೊಂದಿಗೆ ಅದು ರಾಷ್ಟ್ರೀಯ ಪಕ್ಷದ ಮಾನ್ಯತೆಯನ್ನು ಪಡೆಯುತ್ತದೆ.
ಕೇಜ್ರಿವಾಲ್ ಮೇಲಿನ ಖಲಿಸ್ತಾನ್ ಪರ ಆರೋಪ
2022 ರ ಪಂಜಾಬ್ ಅಸೆಂಬ್ಲಿ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿಯಿಂದ ನರೇಂದ್ರ ಮೋದಿಯವರೆಗೆ ಎಲ್ಲರೂ ಕೇಜ್ರಿವಾಲ್ ಖಾಲಿಸ್ತಾನ ಪರ ಇರುವವರು ಎಂದಿದ್ದಾರೆ. ಅವರ ಒಂದು ಕಾಲದ ನಿಕಟವರ್ತಿ ಕುಮಾರ್ ವಿಶ್ವಾಸ್ ಸಹ -ಕೇಜ್ರಿವಾಲ್ ಖಲಿಸ್ತಾನ್ ಪರ ಎಂದು ಆರೋಪಿಸಿದ್ದಾರೆ. ರಾಜಕೀಯದಲ್ಲಿ ಯಾರೂ ಇಂತಹ ಭಯೋತ್ಪಾದಕ ಸಂಬಂಧದ ಆರೋಪಗಳೊಂದಿಗೆ ಇರಲು ಬಯಸುವುದಿಲ್ಲ. ಎಎಪಿ ಪಂಜಾಬ್ ಗೆಲ್ಲಲು ಸಾಧ್ಯವಾದರೆ, ಖಲಿಸ್ತಾನ್ ಪರ ಎಂಬ ಟ್ಯಾಗ್ ಹೋಗುತ್ತದೆ. ಆದರೆ ಪಕ್ಷ ಸೋತರೆ, ಈ ಟ್ಯಾಗ್ ಅವರ ರಾಜಕೀಯ ಭವಿಷ್ಯಕ್ಕೆ ಊಹಿಸಿದ್ದಕ್ಕಿಂತ ಹೆಚ್ಚು ಹಾನಿ ಮಾಡುವ ಸಾಧ್ಯತೆಯಿದೆ.
ಸಮೀಕ್ಷೆಗಳು ಮತ್ತು ಸಾಮಾನ್ಯ ಗ್ರಹಿಕೆಯಲ್ಲಿ, ಈ ಪಂಜಾಬ್ ಚುನಾವಣೆಯಲ್ಲಿ ಎಎಪಿ ಇತರ ರಾಜಕೀಯ ಪಕ್ಷಗಳಿಗಿಂತ ಹೆಚ್ಚು ಅವಕಾಶ ಹೊಂದಿದೆ ಎಂಬುದು ಸ್ಪಷ್ಟವಾಗಿದೆ. ಆದರೆ, 2017 ರಲ್ಲೂ, AAP ಬಗ್ಗೆ ಅಂತಹ ಹೈಪ್ ಇತ್ತು ಆದರೆ ಫಲಿತಾಂಶವು ತುಂಬಾ ವಿಭಿನ್ನವಾಗಿತ್ತು. 2017 ರಲ್ಲಿ ಆಪ್ ಮತಗಳ ವಿಭಜನೆ ಕೊನೆಯ ಕ್ಷಣದಲ್ಲಿ ಸಂಭವಿಸಿದೆ ಎಂದು ಹಲವಾರು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು. ಈ ಬಾರಿಯೂ ಕೊನೆಯ ಕ್ಷಣದಲ್ಲಿ ಖಾಲಿಸ್ತಾನ ಪರ ಎನ್ನುವ ಆರೋಪ ಕೇಳಿಬಂದಿದೆ. ಇದು ಮತ್ತೆ ಮತಗಳನ್ನು ವಿಭಜಿಸಲಿದೆಯಾ ಎಂಬುವುದನ್ನು ಚುನಾವಣಾ ಫಲಿತಾಂಶಗಳು ಮಾತ್ರ ಹೇಳಬಲ್ಲವು.
ಆದರೆ ಗೆಲುವೇ ಇರಲಿ ಅಥವಾ ಸೋಲೇ ಆಗಿರಲಿ, ಪಂಜಾಬ್ ಚುನಾವಣೆ ಕೇಜ್ರಿವಾಲ್ಗೆ ತುಂಬಾ ಮುಖ್ಯವಾಗಿದೆ. ಮತ್ತು ಫಲಿತಾಂಶಗಳ ಹೊರತಾಗಿಯೂ, ಈ ಚುನಾವಣೆಯು ಅವರ ರಾಜಕೀಯ ಭವಿಷ್ಯವನ್ನು ಮರು ವ್ಯಾಖ್ಯಾನಿಸಲಿದೆ ಎಂಬುವುದು ಮಾತ್ರ ಖಾತ್ರಿ.
ಮೂಲ: ಸಯಂತನ್ ಘೋಷ್, firstpost.com
(ಲೇಖಕರು ಕೋಲ್ಕತ್ತಾ ಮೂಲದ ಸ್ವತಂತ್ರ ಪತ್ರಕರ್ತ ಮತ್ತು ದೆಹಲಿ ಅಸೆಂಬ್ಲಿ ಸಂಶೋಧನಾ ಕೇಂದ್ರದಲ್ಲಿ ಮಾಜಿ ಸಂಶೋಧನಾರ್ಥಿ).