ನಾವು ಕಟ್ಟಿ ಬೆಳೆಸಿರುವುದನ್ನು ಮಾರಿಕೊಳ್ಳುವುದೇ ಇವರ ಕೆಲಸವಾಗಿದೆ. ಬಿಎಸ್ ಎನ್ಎಲ್ ಅವರನ್ನು ದುರ್ಬಲಗೊಳಿಸಿ ಬೇರೆಯವರಿಗೆ ಮಾರಲು ಹೊರಟಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾಡಿದ್ಧಾರೆ.
ರಾಜೀವ್ ಗಾಂಧಿ ಅವರ 31ನೇ ಪುಣ್ಯಸ್ಮರಣೆ ಅಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜೀವ್ ಗಾಂಧಿ ಅವರು ಯುವಕರಾಗಿ ಯುವಕರಲ್ಲಿ ಚೈತನ್ಯ ಮೂಡಿಸಿದ ಮಹಾನ್ ನಾಯಕ. ಅವರು ವಿಯೆನ್ನಾದಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾತನಾಡಿದಾಗ ವಿಶ್ವದ ಅನೇಕ ನಾಯಕರು ದೇಶಗಳು ಆಕರ್ಷಿತರಾಗಿ ನಮ್ಮ ವಿದೇಶ ನೀತಿಗೆ ಅಲಿಪ್ತ ನೀತಿಗೆ ಬದ್ಧವಾಗಿ ರಷ್ಯಾ ಅಥವಾ ಅಮೆರಿಕ ಪರವಾಗಿ ನಿಲ್ಲಬಾರದು ಎಂಬ ಧೋರಣೆಯನ್ನು ಮುಂದುವರಿಸಿದರು. ಇದೇ ನೀತಿಯನ್ನು ಉಕ್ರೇನ್ ರಷ್ಯಾ ಯುದ್ಧದಲ್ಲಿ ಅನುಸರಿಸಲಾಯಿತು. ಆದರೆ ಇವರು ತಮ್ಮ ನೀತಿ ಎಂದು ಹೇಳಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಇವರು ಕೇವಲ ಹೆಸರು ಬದಲಾವಣೆ ಮಾಡುವುದಷ್ಟೇ. ಇವರ ಸ್ವಂತ ಬಂಡವಾಳ ಯಾವುದೂ ಇಲ್ಲ. ಅವರು ಜೈಪುರದಲ್ಲಿ ಚಿಂತನ ಶಿಬಿರ ನಡೆಸುತ್ತಿದ್ದು, ಮೋದಿ ಅವರು ಮನೆ ಮನೆಗೆ ಹೋಗಿ ನಮ್ಮ ಕೆಲಸ ತಿಳಿಸಬೇಕು ಎಂದು ಹೇಳುತ್ತಿದ್ದಾರೆ. ಅಂದರೆ ಅವರು ಮಾಡಿರುವ ಕೆಲಸ ಜನರಿಗೆ ಗೊತ್ತೇ ಇಲ್ಲ. ಅವರು ಏನಾದರೂ ಮಾಡಿದ್ದರಲ್ಲವೇ ಗೊತ್ತಿರಲು.
ಬಿಜೆಪಿಯವರಿಗೆ ಎರಡು ಗುರಿ ಇವೆ. ಸಾರ್ವಜನಿಕ ವಲಯ ಮಾರಿದರೆ ಬಡವರಿಗೆ ಕೆಲಸ ಹಾಗೂ ಮೀಸಲಾತಿ ಸಿಗುವುದಿಲ್ಲ. ಹೀಗಾಗಿ ಬಡವರ 60% ಮೀಸಲಾತಿ ದಲಿತರು, ಹಿಂದುಳಿದವರು ಹಾಗೂ ಆರ್ಥಿಕ ಹಿಂದುಳಿದವರಿಗಿದೆ. ದೇಶದ 26 ಲಕ್ಷ ಉದ್ಯೋಗಳು ತುಂಬಿಲ್ಲ. ಇದರಲ್ಲಿ ಶೇ.60ರಷ್ಟು ಬಡವರಿಗೆ ನೀಡಬೇಕಲ್ಲ, ಅದಕ್ಕಾಗಿ ಈ ಷಡ್ಯಂತ್ರ ಮಾಡಿದ್ದಾರೆ. ಹೀಗಾಗಿ ನಾವು ಈ ವಲಯಗಳ ರಕ್ಷಣೆ ಮಾಡಿ, ನಿರುದ್ಯೋಗ ಸಮಸ್ಯೆ ನಿವಾರಿಸಲು ಹೋರಾಡಬೇಕಿದೆ ಎಂದು ಹೆಳಿದ್ಧಾರೆ.
ಇನ್ನು ರಾಜೀವ್ ಗಾಂಧಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ ತಂದು ಅನೇಕ ಕೇಂದ್ರಿಯ ವಿದ್ಯಾಲಯ, ವಸತಿ ಶಾಲೆ ತಂದರು. ಅದರಿಂದ ಯುವಕರು ಉತ್ತಮ ಸ್ಥಾನಮಾನಕ್ಕೆ ತಲುಪುವಂತಾಯಿತು. ಈಗ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪಠ್ಯ ಕ್ರಮ ಬಲಾವಣೆ, ಸಮಾಜದಲ್ಲಿ ಬೆಂಕಿ ಹಚ್ಚುವುದು, ಸೂಲಿಬೆಲೆ ಹೇಳಿದ ಎಂಬ ಕಾರಣಕ್ಕೆ ಭಗತ್ ಸಿಂಗ್ ಅವರ ಪಠ್ಯವನ್ನು ತೆಗೆಯುತ್ತಿದ್ದೀರಿ. ಹೆಡೆಗೆವಾರ್ ಅವರ ನಡುವಳಿಕೆಯಿಂದ ದೇಶ ಇಬ್ಬಾಗವಾಗುತ್ತಿರುವಾಗ ಅವರ ವಿಚಾರ ಪಠ್ಯದಲ್ಲಿ ಸೇರಿಸಲಾಗುತ್ತಿದೆ. ನಾರಾಯಣಗುರು ಅವರಂತಹ ವ್ಯಕ್ತಿಗಳ ಮಾಹಿತಿ ಮಕ್ಕಳಿಗೆ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಹೆಡೆಗೆವಾರ್ ಅವರ ಪಠ್ಯವನ್ನು ಯಾಕೆ ಸೇರಿಸಬೇಕು? ಅವರು ದೇಶಕ್ಕೆ ಕೊಟ್ಟಿರುವ ಕೊಡುಗೆಗಳೇನು? 1929ರಲ್ಲಿ ಹುಟ್ಟಿದ ಆರ್ ಎಸ್ಎಸ್ ಅನ್ನು ಕೇವಲ 4 ಮಂದಿ ನೋಂದಣಿ ಮಾಡಿದ್ದರು. 5 ವರ್ಷಗಳ ನಂತರ ಪದಾಧಿಕಾರಿಗಳ ಮಂಡಳಿಯಲ್ಲಿ ಕೇವಲ 90 ಜನ ಇದ್ದರು. ಅಂತಹವರು ಇಂದು ಬೆಳೆದು ನಿಂತು ಬಡವರನ್ನು, ಸಂವಿಧಾನ, ಪ್ರಜಾಪ್ರಭುತ್ವ ಮುಗಿಸಲು ಪ್ರಯತ್ನಿಸುತ್ತಿದ್ದಾರೆ.
ಅವರು 25 ವರ್ಷಗಳ ಮುಂದೆ ಹೇಗೆ ನಾವು ಆಳಬೇಕು ಎಂದು ಮೋದಿ ಅವರು ಜೈಪುರದಲ್ಲಿ ಹೇಳುತ್ತಿದ್ದಾರೆ. ಈ ವ್ಯಕ್ತಿ ಎಲ್ಲ ಪ್ರಜಾಸತಾತ್ಮಕ ಸಂಸ್ಥೆಗಳನ್ನು ನಾಶ ಮಾಡುತ್ತಿದ್ದಾರೆ. ಸ್ವಾಯತ್ತ ಸಂಸ್ಥೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದಿದ್ದಾರೆ.
ದೇಶ ಒಡೆಯಬಾರದು ಎಂಬ ಕಾರಣಕ್ಕೆ ಇಂದಿರಾ ಗಾಂಧಿ ಅವರು ದೇಶಕ್ಕಾಗಿ ಬಲಿದಾನ ಕೊಟ್ಟರು. ರಾಜೀವ್ ಗಾಂಧಿ ಅವರು ಒಗ್ಗಟ್ಟಿನಿಂದ ಇರಲು ಪ್ರಯತ್ನಿಸಿದರು. ಆದರೆ ಎಲ್ ಟಿಟಿ ಅವರು ಹತ್ಯೆ ಮಾಡಿದರು. ದೇಶಕ್ಕಾಗಿ ಪ್ರಾಣ ಬಿಟ್ಟವರ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ನಾವು ದೇಶಭಕ್ತರಲ್ಲ, ಅವರು ದೇಶಭಕ್ತರಂತೆ. ದೇಶಕ್ಕೆ ಸ್ವಾತಂತ್ರ್ಯಕ್ಕೆ ಹೋರಾಟ ಮಾಡುವಾಗ ಇವರ ಪಾತ್ರ ಏನೂ ಇಲ್ಲ.
ಸಾರ್ವಕರ್ ಅವರು, ಭಾಗವತ್ ಅವರು ಗಾಂಧಿ ಅವರ ಜತೆಯಲ್ಲಿ ಭಾರತ ಬಿಟ್ಟು ತೊಲಗಿ ಹೋರಾಟದಲ್ಲಿ ಭಾಗವಹಿಸುತ್ತೀರಿ. ಬ್ರಿಟೀಷರ ಕೆಳಗೆ ಸರ್ಕಾರಿ ನೌಕರಿ ಪಡೆಯಿರಿ ಹಣ ಸಂಪಾದಿಸಿ ಎಂದು ಜನರಿಗೆ ಹೇಳುತ್ತಿದ್ದರು. ಇಂತಹವರು ದೇಶಪ್ರೇಮದ ಬಗ್ಗೆ ಮಾತನಾಡುತ್ತಾರೆ. ದೇಶಕ್ಕಾಗಿ ಹೋರಾಡಿದವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.
ಇದರ ವಿರುದ್ಧ ನಾವು ಹೋರಾಡಬೇಕು. ಯುವಕರಲ್ಲಿರುವ ತಪ್ಪು ತಿಳುವಳಿಕೆ ಅಳಿಸಬೇಕು. ಸ್ವಾತಂತ್ರ್ಯದ ಸಮಯದಲ್ಲಿ ಹೋರಾಡಿದವರ ಬಗ್ಗೆ ತಿಳಿಸಬೇಕು. ನಾವು ಕಟ್ಟಿದ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದವರು ಇಂದು ಮೋದಿ ಎನ್ನುತ್ತಿದ್ದಾರೆ.
ಕರ್ನಾಟಕ ವಿಚಾರದಲ್ಲಿ ಲಕ್ಷಾಂತರ ಎಕರೆ ಜಮೀನನ್ನು ಬಡವರಿಗೆ ಹಂಚಲಾಯಿತು. 6.60 ಲಕ್ಷ ಜನರಿಗೆ ಟ್ರಿಬ್ಯುನಲ್ ರಚಿಸಿ ಬಡವರಿಗೆ ಭೂಮಿ ಕೊಟ್ಟೆವು. ಆದರೆ ಇಂದು ಕರಾವಳಿ ಭಾಗದಲ್ಲಿ ಲಕ್ಷಾಂತರ ಜನರಿಗೆ ಸಹಾಯ ಮಾಡಿದ್ದರೂ ಅವರೇ ಕಾಂಗ್ರೆಸ್ ವಿರುದ್ಧ ನಿಂತಿದ್ದಾರೆ ಎಂದು ಹೇಳಿದ್ದಾರೆ.
ಸಂವಿಧಾನ ತಯಾರಾದ ದಿನ ಅದರಲ್ಲಿ ಹೆಣ್ಣು ಗಂಡಿಗೆ ವ್ಯತ್ಯಾಸವಿಲ್ಲದೇ ಸಮಾನ ಅಧಿಕಾರ ನೀಡಿದ್ದೇವೆ. ಪಂಚಾಯತ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಿದ್ದು ಕಾಂಗ್ರೆಸ್ ಪಕ್ಷ, ಈಗ ಅವರೇ ನಮ್ಮನ್ನು ಯಾರು ಎಂದು ಕೇಳುತ್ತಾರೆ.
ರಾಜೀವ್ ಗಾಂಧಿ ಅವರು ಕಲ್ಬುರ್ಗಿ ಅವರಿಗೆ ಬಂದಿದ್ದರು, ಅಲ್ಲಿ ಪಂಚಾಯ್ತಿ ಚುನಾವಣೆಯಲ್ಲಿ ರೊಟೇಷನ್ ವ್ಯವಸ್ಥೆ ಜಾರಿಗೆ ತರಲು ಶಿಫಾರಸ್ಸು ಕೊಟ್ಟೆ. ಆಗ ಅವರು ಇಲ್ಲಿ ಯಾಕೆ ನಿಂತಿದ್ದೀರಿ ವೇದಿಕೆ ಮೇಲೆ ಬನ್ನಿ ಎಂದು ಕರೆದರು. ನಾವು ಅಲ್ಲಿ ಕೂರುವಂತಿಲ್ಲ ಎಂದಿತ್ತು ಆಗ ರಾಜೀವ್ ಗಾಂಧಿ ಅವರು ವೇದಿಕೆ ಮೇಲೆ 2 ಕುರ್ಚಿ ಹಾಕಿಸಿ ನಮ್ಮನ್ನು ಕೂರಿಸಿದರು.
ಪಂಚಾಯ್ತಿ ಸದಸ್ಯರಿಗೆ ಮತದಾನ ಹಕ್ಕು ನೀಡಿದ್ದು ನಮ್ಮ ಸರ್ಕಾರ ಮಾತ್ರ. ತಳಮಟ್ಟದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬೇರೂರಿರುವುದು ಕಾಂಗ್ರೆಸ್ ಪಕ್ಷದಿಂದ. ಇಷ್ಟೆಲ್ಲಾ ಕೆಲಸ ಮಾಡಿದರು ನಾವು ಮಾಡಿದ ತಪ್ಪೇನು? ಇನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನ ತಿದ್ದುಪಡಿ ತಂದು ಪ್ರದೇಶವಾರು ಮೀಸಲಾತಿ ನೀಡುವ ಕೆಲಸ ಯಾರೂ ಮಾಡಿರಲಿಲ್ಲ. ಅದನ್ನು ನಾವು ಮಾಡಿದೆವು. ಈ ತಿದ್ದುಪಡಿಗೆ ಆಡ್ವಾಣಿ ಅವರಿಗೆ ಪತ್ರ ಬರೆದಾಗ ಇದು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಕಾಂಗ್ರೆಸ್ ಕೇವಲ 208 ಸೀಟುಗಳಿದ್ದರೂ ಮಾಡಿ ತೋರಿಸಿದೆವು. ಇದರಿಂದ ಈ ಭಾಗದ 1 ಸಾವಿರ ಜನರಿಗೆ ಸರ್ಕಾರಿ ಸೀಟು ಸಿಗುತ್ತಿದೆ. ನೇಮಕಾತಿ, ಶಿಕ್ಷಣ ಸೇರಿದಂತೆ ಎಲ್ಲದರಲ್ಲೂ ಮೀಸಲಾತಿ ನೀಡಿದ್ದೇವೆ. ಈ ಮೀಸಲಾತಿ ಪಡೆದ ಯುವಕರು ಎಲ್ಲಿದ್ದಾರೆ? ಅವರಿಗೆ ಮೋದಿ ಏನು ಕೊಟ್ಟಿದ್ದಾರೆ?

ಮೋದಿ ಅವರು ಅವರಿಗೆ ಪಕೋಡ ಮಾರಿ ಎಂದು ಹೇಳಿದ್ದಾರೆ. ನಾವು ಇಷ್ಟೆಲ್ಲಾ ಮಾಡಿದರು ನಮ್ಮ ಮೇಲೆ ಮುನಿಸಿಕೊಂಡಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
ಇಂಗ್ಲೆಂಡ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದ 250 ವರ್ಷಗಳ ನಂತರ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಗಿತ್ತು. ಆದರೆ ಭಾರತದಲ್ಲಿ ಭಾರತದ ಸಂವಿಧಾನ ಜಾರಿಯಾದ ದಿನವೇ ಅವರಿಗೆ ಮತದಾನದ ಹಕ್ಕು ಸಿಕ್ಕಿತು. ಆದರೂ ಮಹಳಿಯರು ನಮ್ಮ ಪರವಾಗಿ ನಿಲ್ಲುವುದಿಲ್ಲ. ಅಮೆರಿಕದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗಿದ್ದು 1776ರಲ್ಲಿ 150 ವರ್ಷಗಳ ನಂತರ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಯಿತು. ನೂರು ವರ್ಷಗಳಾದರೂ ಅಲ್ಲಿನ ಮಹಿಳೆಯರಿಗೆ ಮತದಾನದ ಹಕ್ಕು ನೀಡಿರಲಿಲ್ಲ. ಬ್ರೆಜಿಲ್, ಫ್ರಾನ್ಸ್, ಇಟಲಿ ಮಹಿಳೆಯರಿಗೆ ತಡವಾಗಿ ಮತದಾನದ ಹಕ್ಕು ನೀಡಿದವು.
ಎಲ್ಲರೂ ಗೌರವಯುತವಾಗಿ ಬದುಕಲು ಮೂಲಭುತ ಹಕ್ಕು ನೀಡಲಾಯಿತು. ಆದರೆ ಈಗಿನ ಸರ್ಕಾರದಲ್ಲಿ ಸತ್ಯ ನುಡಿದವರನ್ನು ಜೈಲಿಗೆ ಹಾಕಿ ದೇಶದ್ರೋಹ ಪ್ರಕರಣ ದಾಖಲಿಸುತ್ತಾರೆ. ದೆಹಲಿ ವಿವಿ ಫ್ರೋಫೆಸರ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ದೇಶದಲ್ಲಿ ವಾಕ್, ಅಭಿವ್ಯಕ್ತಿ, ಧರ್ಮ, ಬೋಧನೆ, ಹೋರಾಟದ ಹಕ್ಕಿದ್ದರೂ ಕೇಂದ್ರ ಸರ್ಕಾರ ಸಂವಿಧಾನಕ್ಕೆ ಯಾವುದೇ ಗೌರವ ನೀಡುತ್ತಿಲ್ಲ. ಹೀಗೆ ಮುಂದುವರಿದರೆ ಸಂವಿಧಾನ ಹೋಗಿ ಮನುಸ್ಮೃತಿ ಜಾರಿಗೆ ಬರುತ್ತದೆ.
ಮೂರು ತಿಂಗಳ ಹಿಂದೆ ಈ ವಿಚಾರವಾಗಿ ಕಲ್ಬುರ್ಗಿಯಲ್ಲಿ 2 ದಿನ ಸಭೆ ಮಾಡಿದ್ದಾರೆ. ಚಿತ್ತಾಪುರದಲ್ಲಿ ಪಥಸಂಚಲನ ಮಾಡಿದ್ದಾರೆ. ಹೀಗೆ ಧರ್ಮದ ಹೆಸರಿನ ಮೇಲೆ ಅವರು ಭಾ,ಣ ಮಾಡಿ ಮನಸ್ಸು ಪರಿವರ್ತಿಸುತ್ತಿದ್ದಾರೆ.
ಅದಕ್ಕಾಗಿ ಉದಯಪುರದಲ್ಲಿ ಚಿಂತನೆ ಶಿಬಿರ ಮಾಡಿ ಅಲ್ಲಿ ಆರು ತಂಡಗಳನ್ನು ಮಾಡಿ ಒಂದು ತಂಡದಲ್ಲಿ 9 ತಜ್ಞರ ನೇತೃತ್ವದಲ್ಲಿ ಸಭೆ ಮಾಡಲಾಯಿತು. ನಂತರ ಪಕ್ಷ ಕೆಲವು ನಿರ್ಧಾರ ಮಾಡಿದ್ದು, ಅದರಂತೆ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಭಾರತ್ ಜೋಡೋ ಪಾದಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮಾಡಬೇಕು ಎಂದು ಒಮ್ಮತದ ತೀರ್ಮಾನ ಮಾಡಲಾಗಿದೆ. ಇದಕ್ಕೆ ನೀವು ಬೆಂಬಲ ನೀಡಬೇಕು ಎಂದು ಹೇಳಿದ್ದಾರೆ.
ಜನರಿಗೆ ಜಾಗೃತಿ ಮಾಡಬೇಕು. ನಾವು ಮನೆ ಮನೆ ಪ್ರಚಾರ, ಹಳ್ಳಿ ಹಳ್ಳಿಗೆ ಪ್ರಚಾರ ಮಾಡಬೇಕು. ನಮ್ಮ ನಾಯಕರು ಯಾರೇ ಅಭಿಪ್ರಾಯ ವ್ಯಕ್ತಪಡಿಸಿದರೂ ನೀವು ಅದನ್ನು ಹಂಚಿಕೊಳ್ಳಬೇಕು. ಪಕ್ಷದಲ್ಲಿ ನಮ್ಮ ಪರವಾಗಿರುವ ಅಲ್ಪಸಂಖ್ಯಾತರಿಗೆ ಅನ್ಯಾಯ ಆದರೆ ನಾವು ಮಾತನಾಡಬೇಕು. ಇನ್ನು ದುರ್ಬಲರ ಮೇಲೆ ಆಗುವ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಬೇಕು. ಆಗ ಮಾತ್ರ ನಮಗೆ ಬೆಲೆ ಹಾಗೂ ಶಕ್ತಿ ಬರುತ್ತದೆ.
ದೇಶದ ಒಗ್ಗಟ್ಟಿಗಾಗಿ ನಮ್ಮ ನಾಯಕರು ಪ್ರಾಣ ತ್ಯಾಗ ಮಾಡಿದ್ದು, ಅದಕ್ಕೆ ಬೆಲೆ ಸಿಗಬೇಕಾದರೆ ನಾವು ಒಗ್ಗಟ್ಟಾಗಿರಬೇಕು ಎಂದು ಆಗ್ರಹಿಸಿದ್ದಾರೆ.






