ಇನ್ನೇನು ಚಾಮರಾಜಪೇಟೆ ಮೈದಾನದ ವಿವಾದ ಮುಗಿದು, ಪರಿಸ್ಥಿತಿ ತಿಳಿಯಾಯ್ತು ಅನ್ನುವಾಗಲೇ ಮತ್ತೊಂದು ಕಿಚ್ಚು ಹೊತ್ತಿಕೊಂಡಿದೆ. ಚಾಮರಾಜಪೇಟೆ ಮೈದಾನ ಸರ್ಕಾರದ್ದು ಎಂಬ ಆದೇಶ ಹೊರಬೀಳುತ್ತಿದ್ದಂತೆ ಮೈದಾನದಲ್ಲಿ ಗಣೇಶ ಮೂರ್ತಿ ಕೂರಿಸಲು ಸಿದ್ದತೆ ನಡೆಸಲಾಗ್ತಾಯಿತ್ತು. ಆದರೆ ಶಾಸಕ ಜಮೀರ್ ಅಹ್ಮದ್ ಹೇಳಿಕೆ ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿದ್ದು ಹಿಂದೂ ಸಂಘಟನೆಗಳನ್ನ ಕೆರಳಿಸಿದೆ.
ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಹಬ್ಬಕ್ಕೆ ಅವಕಾಶ ಇಲ್ಲ ಎಂದ ಶಾಸಕ ಜಮೀರ್ ಅಹಮ್ಮದ್
ಚಾಮರಾಜಪೇಟೆ ಮೈದಾನವನ್ನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತನ್ನ ಸುಪರ್ದಿಯಿಂದ ಕಂದಾಯ ಇಲಾಖೆಗೆ ನೀಡಿದೆ. ಈ ಮೂಲಕ ಮೈದಾನ ವಿವಾದಕ್ಕೆ ತೆರೆ ಏಳೆದಿದೆ. ಇಲ್ಲಿಗೆ ಎಲ್ಲ ಸಮಸ್ಯೆ, ವಿವಾದ ಬಗೆಹರಿಯಿತು ಎನ್ನುವಾಗಲೇ ಶಾಸಕ ಜಮೀರ್ ಅಹಮ್ಮದ್ ಹೇಳಿಕೆ ಮತ್ತೊಂದು ವಿವಾದದ ಕಿಚ್ಚು ಹೊತ್ತಿಸಿದೆ. ಚಾಮರಾಜಪೇಟೆ ಮೈದಾನದಲ್ಲಿ 75 ನೇ ಸ್ವಾತಂತ್ರ್ಯ ದಿವಸದ ಅಂಗವಾಗಿ ಅದ್ದೂರಿಯಾಗಿ ಅಮೃತ ಮಹೋತ್ಸವ ಆಚರಣೆ ಮಾಡುತ್ತೆವೆ. ಈ ವರ್ಷದಿಂದ ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಾಡಲಿದೆ. ಆದರೆ ಯಾವುದೇ ಕಾರಣಕ್ಕೂ ಗಣೇಶ ಹಬ್ಬ ಆಚರಣೆ ಮಾಡಲು ಅವಕಾಶ ಇಲ್ಲ ಎಂದಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ಚಾಮರಾಜಪೇಟೆ ಮೈದಾನಕ್ಕೆ ಸ್ಥಳಿಯ ಶಾಸಕ ಜಮೀರ್ ಅಹಮ್ಮದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ವಾತಂತ್ರ್ಯ ದಿನದ ಸಿದ್ದತೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಜಮೀರ್, ಎಷ್ಟೇ ಜನ ಸೇರಿದರೂ ಎಲ್ಲರೂ ಒಟ್ಟಾಗಿ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತೆವೆ. ಆದ್ರೆ ಈ ಮೈದಾನದಲ್ಲಿ ಗಣೇಶ ಹಬ್ಬಕ್ಕೆ ಅವಕಾಶ ಇಲ್ಲ ಎಂದರು.
ಶಾಸಕ ಜಮೀರ್ ಅಹ್ಮದ್ ಖಾನ್ ಈ ಹೇಳಿಕೆ ನೀಡ್ತಿದ್ದಂತೆ ಹಿಂದೂ ಪರ ಸಂಘಟನೆಗಳು ಮತ್ತೊಂದು ಹೋರಾಟಕ್ಕೆ ಮುಂದಾಗಿವೆ. ಚಾಮರಾಜಪೇಟೆ ಮೈದಾನ ಕಂದಾಯ ಇಲಾಖೆಗೆ, ಸರ್ಕಾರಕ್ಕೆ ಸೇರಿದ್ದು. ಸರ್ಕಾರಿ ಮೈದಾನದಲ್ಲಿ ಕಾರ್ಯಕ್ರಮ ಮಾಡಲು ಎಲ್ಲರಿಗೂ ಅಧಿಕಾರವಿದೆ. ಇಲ್ಲಿ ಗಣೇಶ ಹಬ್ಬ ಮಾಡಬಾರದು ಅನ್ನೋದಕ್ಕೆ ಜಮೀರ್ ಗೆ ಯಾವ ಅಧಿಕಾರವು ಇಲ್ಲ ಎಂದರು. ಜೊತೆಗೆ ಚಾಮರಾಜಪೇಟೆ ಮೈದಾನ ಸರ್ಕಾರದ್ದಾಗಿರುವುದರಿಂದ ಸರ್ಕಾರಿ ಜಾಗದಲ್ಲಿ ಒಂದು ಸಮುದಾಯದ ಕಟ್ಟಡ ಇರಬಾರದು ಹಾಗಾಗಿ ಈದ್ಗಾ ಟವರನ್ನು ಸರ್ಕಾರ ತೆರವು ಮಾಡಿಸಬೇಕು. ಈದ್ಗಾ ಟವರ್ ತೆರವು ಮಾಡಲು ಸರ್ಕಾರಕ್ಕೆ ನವೆಂಬರ್ 15 ರವರೆಗೂ ಗಡುವು ನೀಡುತ್ತೆವೆ. ಒಂದು ವೇಳೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಹೋದರೆ ಈದ್ಗಾ ಮೈದಾನದಲ್ಲಿರಯವ ಟವರ್ ಅನ್ನು ನಾಚೇ ತೆರವು ಮಾಡುತ್ತೆವೆ. ಅದಕ್ಕೂ ಮುನ್ನ ಮೈದಾನದಲ್ಲಿ ಗಣೇಶೋತ್ಸವನ್ನ ಆಚರಣೆ ಮಾಡುತ್ತೆವೆ ಎಂದು ಪಟ್ಟು ಹಿಡಿದಿದ್ದಾರೆ. ಒಟ್ಟಾರೆ ಜಮೀರ್ ಹೇಳಿಕೆ ಉರಿಯುವ ಗಾಯಕ್ಕೆ ಉಪ್ಪು ಸುರಿದಂತಾಗಿದ್ದು, ಈ ನಡುವೆ ಮೈದಾನದಲ್ಲಿ ಗಣೇಶ ಕೂರಿಸಲು ಹಿಂದೂ ಸಂಘಟನೆಗಳು ಸಿದ್ದತೆ ಮಾಡಿಕೋಳ್ತಿವೆ. ಆದರೆ ಯಾವ ಕಾರ್ಯಕ್ರಮಕ್ಕೆ, ಯಾರಿಗೆ ಅನುಮತಿ ನೀಡಬೇಕು ಎಂಬುದು ಕಂದಾಯ ಇಲಾಖೆಗೆ ಬಿಟ್ಟಿದ್ದು. ಈ ಸಂಬಂಧ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಕಾದು ನೋಡಬೇಕಿದೆ.