ಹಿಂದೂ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿದ್ದ ಮುಸ್ಲಿಂ ವಿದ್ಯಾರ್ಥಿಗೆ ಅದೇ ಕಾಲೇಜಿನ ಕೆಲ ಪುಂಡ ವಿದ್ಯಾರ್ಥಿಗಳ ತಂಡವೊಂದು ಥಳಿಸಿ ಜೀವಬೆದರಿಕೆಯೊಡ್ಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕಸಬಾ ಗ್ರಾಮದ ಕೊಡಿಯಾಲಬೈಲು ಎಂಬಲ್ಲಿ ನಿನ್ನೆ ನಡೆದಿದೆ.
ವಿದ್ಯಾರ್ಥಿ ಮಹಮ್ಮದ್ ಸನೀಫ್ ಎಂಬುವವರು ಸುಳ್ಯ ಕಸಬಾ ಗ್ರಾಮದ ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಓದುತಿದ್ದು, ಆತನಿಗೆ ಅದೇ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯೊಬ್ಬಳ ಜೊತೆ ಸ್ನೇಹವಿತ್ತು. ಇದು ಕೆಲ ಸಹಪಾಠಿಗಳಿಗೆ ಹಿಡಿಸುತ್ತಿರಲಿಲ್ಲ. ಈ ಹಿನ್ನೆಲೆ ಆ.30 ರಂದು ಬೆಳಗ್ಗೆ 10:30ಕ್ಕೆ ಮಹಮ್ಮದ್ ಸನೀಫ್ ತರಗತಿಗೆ ಬಂದ ದೀಕ್ಷಿತ್ ಮತ್ತು ಧನುಷ್ ಎಂಬುವವರು ಮಾತನಾಡಲು ಇದೆ ಎಂದು ಹೇಳಿ ಕಾಲೇಜಿನ ಗ್ರೌಂಡ್ಗೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿಗೆ ಇನ್ನುಳಿದ ಪುಂಡ ವಿದ್ಯಾರ್ಥಿಗಳ ಗುಂಪು ಈತನ ಕಾಲರ್ ಪಟ್ಟಿ ಹಿಡಿದು ನೀನ ಯಾಕೆ ಅ ಹುಡುಗಿ ಜೊತೆ ಮಾತನಾಡುತ್ತಿಯಾ ಎಂದು ಪ್ರಶ್ನಿಸಿದ್ದಾರೆ. ನಂತರ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿ ಇನ್ನು ಮುಂದಕ್ಕೆ ಆಕೆಯೊಂದಿಗೆ ಮಾತನಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವಬೆದರಿಕೆಯೊಡ್ಡಿದ್ದಾರೆ. ಇಷ್ಟು ವಿಷಯವನ್ನು ಸ್ಥಳೀಯ ಪೊಲೀಸ್ ಠಾಣೆಗೆ ದೂರಿನಲ್ಲಿ ತಿಳಿಸಲಾಗಿದೆ.
ಸದ್ಯ ವಿದ್ಯಾರ್ಥಿ ಸುಳ್ಯ ಸರ್ಕಾರಿ ಆಸ್ಪತ್ರೆ ತೆರಳಿ ಚಿಕಿತ್ಸೆ ಪಡೆದಿದ್ದಾನೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ದೀಕ್ಷಿತ್, ಧನುಷ್, ಪ್ರಜ್ವಲ್, ತನುಜ್, ಅಕ್ಷಯ್, ಮೋಕ್ಷಿತ್ ಹಾಗೂ ಸುಳ್ಯದ ಗೌತಮ್ ಎಂದು ಗುರುತಿಸಲಾಗಿದೆ.