ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರನ್ನು ಬಲಿತೆಗೆದುಕೊಂಡಿರುವ ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನದ ಕುರಿತು ಪ್ರಧಾನಿ ಮೋದಿಯವರು ದೇಶದ ಜನತೆಗೆ ವಿವರಣೆ ನೀಡಬೇಕು ಎಂದು ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಉಡುಪಿಗೆ ಆಗಮಿಸಿದ್ದ ಅವರು, ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಘಟನೆಯಿಂದ ಆಘಾತವಾಗಿದೆ. ದೇಶ ಮತ್ತು ನಮ್ಮ ಸೇನಾ ಪಡೆಗಳ ಕಾಪ್ಟರ್ ಮತ್ತು ವಿಮಾನಗಳ ಸುರಕ್ಷತೆಯ ವಿಷಯದಲ್ಲಿ ಇದೊಂದು ಎಚ್ಚರಿಕೆಯ ಘಂಟೆ. ದೇಶದ ಜನತೆ ಘಟನೆಯಿಂದ ಆತಂಕಗೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ದೇಶದ ಜನತೆಗೆ ಘಟನೆಯ ಬಗ್ಗೆ ವಿವರ ನೀಡಬೇಕು ಎಂದಿದ್ದಾರೆ.
ಅಲ್ಲದೆ, ದೇಶದ ಸುರಕ್ಷತೆಯ ವಿಷಯದಲ್ಲಿ ಇದೊಂದು ಆತಂಕಕಾರಿ ಘಟನೆ. ಹಾಗಾಗಿ ಘಟನೆಯ ಕುರಿತು ಸಾಮಾನ್ಯ ತನಿಖೆ ನಡೆದರೆ ಸಾಲದು. ಆ ಬಗ್ಗೆ ಸುಪ್ರೀಂಕೋರ್ಟಿನ ಹಿರಿಯ ನ್ಯಾಯಮೂರ್ತಿಗಳಿಂದಲೇ ಗಂಭೀರ ತನಿಖೆ ನಡೆಯಬೇಕಿದೆ. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ನಿರ್ಧಾರ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ.
ತಮಿಳುನಾಡಿನ ಕೂನೂರಿನಲ್ಲಿ ಬುಧವಾರ ಮಧ್ಯಾಹ್ನ ನಡೆದಿರುವ ದುರ್ಘಟನೆಯಲ್ಲಿ ದೇಶದ ಮೂರೂ ಸೇನಾಪಡೆಗಳ ಮೊಟ್ಟಮೊದಲ ಮುಖ್ಯಸ್ಥ(ಸಿಡಿಎಫ್) ಬಿಪಿನ್ ರಾವತ್ ಮತ್ತು ಜೊತೆಗಿದ್ದ ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಸಾವುಕಂಡಿದ್ದಾರೆ. ಸೇನಾ ಪಡೆಗಳ ಮುಖ್ಯಸ್ಥರು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಗೆ ಸೇರಿದ ಅತ್ಯಾಧುನಿಕ ಎಂಐ 17 ವಿ5 ತಮಿಳುನಾಡಿನ ಕೂನೂರು ವಲಯದ ಕಾಡಿನ ನಡುವೆ ಪತನವಾಗಿತ್ತು.
ಸೇನಾಪಡೆಯ ಅತ್ಯಾಧುನಿಕ ಹೆಲಿಕಾಪ್ಟರ್ ಅತ್ಯಧಿಕ ಸುರಕ್ಷತೆಯ ಹೊರತಾಗಿಯೂ, ಸೇನಾ ಪಡೆ ಮುಖ್ಯಸ್ಥರನ್ನು ಹೊತ್ತೊಯ್ಯುವಾಗಲೇ ದಿಢೀರನೇ ಸ್ಫೋಟಿಸಿ ಪತನವಾಗಿರುವುದು ಕೇವಲ ಆಕಸ್ಮಿಕವೇ ಅಥವಾ ಇನ್ನಾವುದಾದರೂ ಕಾರಣಗಳಿರಬಹುದೆ ಎಂಬ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯಸಭಾ ಸದಸ್ಯ ಹಾಗೂ ನಿರ್ಭಿಡೆಯ ಮಾತುಗಳಿಗೆ ಹೆಸರಾಗಿರುವ ಮುತ್ಸದ್ಧಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರ ಈ ಹೇಳಿಕೆಗೆ ಇನ್ನಿಲ್ಲದ ಮಹತ್ವ ಬಂದಿದೆ.