ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆಗೆ ಚಾಲನೆ ನೀಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಚಿವರ ಕುರ್ಚಿಗಳಿಗೆ ಬಿಳಿ ಟವಲ್ ಹಾಕುವ ದೀರ್ಘಕಾಲದ ಸಂಪ್ರದಾಯವನ್ನು ರದ್ದುಪಡಿಸುವ ಮೂಲಕ ‘ಸಾಮಾನ್ಯರ ಮುಖ್ಯಮಂತ್ರಿ’ ಎಂಬ ಸಂದೇಶವನ್ನು ನೀಡಿದ್ದಾರೆ.
ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್ಅವರು ಸಾಮಾಜಿಕ ಜಾಲತಾಣ X ಮೂಲಕ ವಿಜಯ್ ಅವರಿಗೆ ಮನವಿ ಸಲ್ಲಿಸಿ, ಸರ್ಕಾರಿ ಕಚೇರಿಗಳಲ್ಲಿನ ‘ವೈಟ್ ಟವಲ್ ಸಂಸ್ಕೃತಿ’ ವಿಐಪಿ ವ್ಯವಸ್ಥೆಯ ಸಂಕೇತವಾಗಿದ್ದು, ಅದನ್ನು ಕೊನೆಗೊಳಿಸಬೇಕು ಎಂದು ಕೋರಿದ್ದರು. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ವಿಜಯ್ ಯಾವುದೇ ದೊಡ್ಡ ಘೋಷಣೆ ಇಲ್ಲದೆ ಮೌನವಾಗಿಯೇ ಕ್ರಮ ಕೈಗೊಂಡಿದ್ದಾರೆ.

ಮೇ 14ರಂದು ನಡೆದ ಕೈಗಾರಿಕಾ ಇಲಾಖೆಯ ಸಭೆಯಲ್ಲಿ ವಿಜಯ್ ಅವರ ಕುರ್ಚಿಗೆ ಬಿಳಿ ಟವಲ್ ಕಾಣಿಸಿಕೊಂಡಿದ್ದರೆ, ಬಳಿಕ ನಡೆದ ಸಭೆಗಳ ಚಿತ್ರಗಳಲ್ಲಿ ಅದು ಕಾಣಿಸದಿರುವುದು ಗಮನ ಸೆಳೆದಿದೆ. ವಿಶೇಷವಾಗಿ ಮಲ್ಲಿಕಾ ಶ್ರೀನಿವಾಸನ್ ಅವರೊಂದಿಗಿನ ಸಭೆಯ ಫೋಟೋಗಳಲ್ಲಿ ಟವಲ್ ತೆಗೆದುಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕುರ್ಚಿಗಳಿಗೆ ಬಿಳಿ ಟವಲ್ ಹಾಕುವ ಪದ್ಧತಿ ಬ್ರಿಟಿಷರ ಆಳ್ವಿಕೆಯ ಕಾಲದಿಂದ ನಡೆದುಕೊಂಡು ಬಂದಿದೆ. ಬ್ರಿಟಿಷ್ ಅಧಿಕಾರಿಗಳು ಬಳಸುತ್ತಿದ್ದ ತೈಲದಿಂದ ಪೀಠೋಪಕರಣಗಳು ಕಲೆಗೊಳ್ಳದಂತೆ ರಕ್ಷಿಸಲು ‘ಆಂಟಿ-ಮಕಾಸರ್’ ಬಟ್ಟೆ ಬಳಕೆಯಲ್ಲಿತ್ತು. ನಂತರ ಭಾರತದ ಉಷ್ಣ ಹವಾಮಾನಕ್ಕೆ ಅನುಗುಣವಾಗಿ ಅದು ಬಿಳಿ ಟವಲ್ ರೂಪಕ್ಕೆ ಬದಲಾಗಿತ್ತು. ಆದರೆ ಕಾಲಕ್ರಮೇಣ ಅದು ಕೇವಲ ಸ್ವಚ್ಛತೆಯ ಸಂಕೇತವಲ್ಲದೆ, ಅಧಿಕಾರ ಮತ್ತು ವಿಐಪಿ ಸಂಸ್ಕೃತಿಯ ಚಿಹ್ನೆಯಾಗಿ ಪರಿಣಮಿಸಿತ್ತು.

ಲಿಸಿಪ್ರಿಯಾ ಕಂಗುಜಮ್ ಅವರು ವಿಜಯ್ ಅವರ ಕ್ರಮವನ್ನು ಶ್ಲಾಘಿಸಿ, “ಜನಸಾಮಾನ್ಯರ ಧ್ವನಿಯನ್ನು ಆಲಿಸುವ ನಾಯಕ ಎಂಬುದನ್ನು ವಿಜಯ್ ಸಾಬೀತುಪಡಿಸಿದ್ದಾರೆ” ಎಂದು ಹೇಳಿದ್ದಾರೆ.ಇತ್ತೀಚೆಗಷ್ಟೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ವಿಜಯ್, ತಮ್ಮ Tamilaga Vettri Kazhagam ಪಕ್ಷದ ಮೂಲಕ ಹೊಸ ರಾಜಕೀಯ ಶೈಲಿ ಮತ್ತು ಸರಳ ಆಡಳಿತದ ಸಂದೇಶ ನೀಡುತ್ತಿದ್ದಾರೆ.





