ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಹಾಗೂ ಪ್ಲೇಆಫ್ ಪಂದ್ಯಗಳು ದಿಢೀರ್ ಅಹಮದಾಬಾದ್ಗೆ ಸ್ಥಳಾಂತರಗೊಂಡಿರುವುದು ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರದಿಂದ ಕ್ರಿಕೆಟ್ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದು, ಇದೀಗ ಇದರ ಹಿಂದೆ ರಾಜಕೀಯ ಒತ್ತಡ ಹಾಗೂ “ವಿವಿಐಪಿ ಟಿಕೆಟ್ ವ್ಯಾಮೋಹ” ಕಾರಣ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಈ ವಿವಾದದ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಟಿಕೆಟ್ ಬೇಡಿಕೆ ಮತ್ತು ಪಂದ್ಯ ಸ್ಥಳಾಂತರಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಇದು ಸಂಪೂರ್ಣ ಸುಳ್ಳು. ಬೇರೆ ಕ್ರೀಡಾಂಗಣಗಳಲ್ಲಿ ಇನ್ನೂ ಹೆಚ್ಚು ಟಿಕೆಟ್ ನೀಡುತ್ತಾರೆ. ದೊಡ್ಡ ಕ್ರೀಡಾಂಗಣ, ಹೆಚ್ಚು ಜನ ಸೇರಬಹುದು ಎಂಬ ಕಾರಣಕ್ಕೆ ಪಂದ್ಯ ಸ್ಥಳಾಂತರ ಮಾಡಿರಬಹುದು. ಟಿಕೆಟ್ ವಿಚಾರಕ್ಕೂ ಇದಕ್ಕೂ ಸಂಬಂಧ ಇಲ್ಲ. ಬಿಸಿಸಿಐ ಅಧಿಕೃತವಾಗಿ ಹೇಳಿಕೆ ನೀಡಲಿ, ನಂತರ ನಾನು ಉತ್ತರಿಸುತ್ತೇನೆ” ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣದಿಂದ ಪಂದ್ಯಗಳನ್ನು ಸ್ಥಳಾಂತರಿಸಿರುವ ಬಿಸಿಸಿಐ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಐಪಿಎಲ್ ಆರಂಭಕ್ಕೂ ಮುನ್ನವೇ ಪಂದ್ಯ ಆಯೋಜನೆಗೆ ಸಂಬಂಧಿಸಿದ ಸಿದ್ಧತೆಗಳ ವರದಿಯನ್ನು ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಬಿಸಿಸಿಐಗೆ ಸಲ್ಲಿಸಿದ್ದರು.
ಆದರೆ ಕೆಎಸ್ಸಿಎ ಮನವಿಯನ್ನು ಲೆಕ್ಕಿಸದೇ ಬಿಸಿಸಿಐ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಸಂಸ್ಥೆ ಬೇಸರ ಹೊರಹಾಕಿದೆ.

ಇತ್ತ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಈ ವಿಚಾರವಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಶಾಸಕರ ವಿವಿಐಪಿ ಟಿಕೆಟ್ ವ್ಯಾಮೋಹದಿಂದಲೇ ಪಂದ್ಯಗಳು ಬೆಂಗಳೂರಿನಿಂದ ಕೈತಪ್ಪಿವೆ” ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, “ಕ್ರಿಕೆಟ್ ಸ್ಟೇಡಿಯಂ ಇರುವುದು ಅಭಿಮಾನಿಗಳಿಗಾಗಿ, ಉಚಿತ ಟಿಕೆಟ್ಗಾಗಿ ಅಲ್ಲ. ಬಿಸಿಸಿಐ ತೆಗೆದುಕೊಂಡ ನಿರ್ಧಾರ ಸರ್ಕಾರಕ್ಕೆ ಎಚ್ಚರಿಕೆ. ಇದರಿಂದ ರಾಷ್ಟ್ರಮಟ್ಟದಲ್ಲಿ ಬೆಂಗಳೂರಿನ ಗೌರವಕ್ಕೆ ಧಕ್ಕೆ ಬಂದಿದೆ” ಎಂದು ವಾಗ್ದಾಳಿ ನಡೆಸಿದರು.

ಈ ವಿವಾದದ ನಡುವೆ ಹಳೆಯ ವಿಚಾರವೂ ಮತ್ತೆ ಚರ್ಚೆಗೆ ಬಂದಿದೆ. ಈ ಹಿಂದೆ ವಿಧಾನಸಭೆಯಲ್ಲೇ ಕೆಲವು ಶಾಸಕರು ಐಪಿಎಲ್ ಉಚಿತ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದರು. ಶಾಸಕ ವಿಜಯಾನಂದ ಕಾಶಪ್ಪನವರ್ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದ ವೇಳೆ ಹಲವು ಶಾಸಕರು ಪಕ್ಷಾತೀತವಾಗಿ ಬೆಂಬಲ ಸೂಚಿಸಿದ್ದರು. ಜೆಡಿಎಸ್ ಪರಿಷತ್ ಸದಸ್ಯ ಶರವಣ ಕೂಡ ಈ ಬೇಡಿಕೆಗೆ ಧ್ವನಿಯಾಗಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ, ಚಿನ್ನಸ್ವಾಮಿ ಕ್ರೀಡಾಂಗಣದಿಂದ ಐಪಿಎಲ್ ಫೈನಲ್ ಕೈತಪ್ಪಿರುವುದು ಕೇವಲ ಆಡಳಿತಾತ್ಮಕ ನಿರ್ಧಾರವೇ ಅಥವಾ ಅದರ ಹಿಂದೆ ರಾಜಕೀಯ ಒತ್ತಡವೂ ಇದೆಯೇ ಎಂಬ ಪ್ರಶ್ನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.






