2026ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹೀನಾಯ ಪ್ರದರ್ಶನ ನೀಡಿದ್ದು, ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಆರ್ಸಿಬಿ ವಿರುದ್ಧದ ಸೋಲಿನೊಂದಿಗೆ ಮುಂಬೈ ತಂಡ ಪ್ಲೇಆಫ್ ರೇಸ್ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆದರೆ ಈ ಸಂಭ್ರಮದ ನಡುವೆಯೇ ಆರ್ಸಿಬಿ ತಂಡಕ್ಕೆ ಬಿಸಿಸಿಐ ಶಾಕ್ ನೀಡಿದ್ದು, ಮುಖ್ಯ ಕೋಚ್ ಆಂಡಿ ಫ್ಲವರ್ ಅವರಿಗೆ ಭಾರೀ ದಂಡ ವಿಧಿಸಿದೆ.
ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 18ನೇ ಓವರ್ ವೇಳೆ ಹೈಡ್ರಾಮಾ ನಡೆಯಿತು. ಆರ್ಸಿಬಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಕ್ರೀಸ್ನಲ್ಲಿದ್ದ ಕೃನಾಲ್ ಪಾಂಡ್ಯ ಹೊಡೆದ ಚೆಂಡನ್ನು ಮುಂಬೈ ಆಟಗಾರ ನಮನ್ ಧೀರ್ ಬೌಂಡರಿ ಲೈನ್ ಬಳಿ ತಡೆಯಲು ಯತ್ನಿಸಿದರು. ಈ ವೇಳೆ ಅವರು ಬೌಂಡರಿ ಲೈನ್ಗೆ ಸ್ಪರ್ಶಿಸಿದ್ದಾರೆಯೇ ಎಂಬ ಬಗ್ಗೆ ಗೊಂದಲ ಉಂಟಾಯಿತು. ಮೂರನೇ ಅಂಪೈರ್ ಹಲವು ಬಾರಿ ಪರಿಶೀಲನೆ ನಡೆಸಿ ಅದು ಸಿಕ್ಸರ್ ಅಲ್ಲ ಎಂದು ತೀರ್ಪು ನೀಡಿದರು. ಈ ನಿರ್ಧಾರ ಆರ್ಸಿಬಿ ಕ್ಯಾಂಪ್ನಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.
ಅಂಪೈರ್ ತೀರ್ಪಿನ ಬಗ್ಗೆ ಅಸಮಾಧಾನಗೊಂಡ ಆರ್ಸಿಬಿ ಮುಖ್ಯ ಕೋಚ್ ಆಂಡಿ ಫ್ಲವರ್ ಹಾಗೂ ತಂಡದ ಮೆಂಟರ್ ದಿನೇಶ್ ಕಾರ್ತಿಕ್ ನಾಲ್ಕನೇ ಅಂಪೈರ್ ಬಳಿ ತೆರಳಿ ಪ್ರಶ್ನಿಸಿದರು. ಈ ವೇಳೆ ನಿಯಮ ಉಲ್ಲಂಘನೆಯ ರೀತಿಯಲ್ಲಿ ವರ್ತಿಸಿದ ಆರೋಪದಡಿ ಐಪಿಎಲ್ ಆಡಳಿತ ಮಂಡಳಿ, ಕೋಡ್ ಆಫ್ ಕಂಡಕ್ಟ್ನ ಲೆವೆಲ್-1 ನಿಯಮದಡಿ ಆಂಡಿ ಫ್ಲವರ್ ಅವರ ಪಂದ್ಯ ಶುಲ್ಕದ ಶೇಕಡಾ 15ರಷ್ಟು ದಂಡ ವಿಧಿಸಿದೆ. ಮ್ಯಾಚ್ ರೆಫರಿ ಅಮಿತ್ ಶರ್ಮಾ ಈ ಶಿಕ್ಷೆಯನ್ನು ಖಚಿತಪಡಿಸಿದ್ದಾರೆ.
ಪಂದ್ಯದ ಅಂತಿಮ ಕ್ಷಣಗಳು ಕೂಡ ರೋಚಕತೆಯಿಂದ ಕೂಡಿದ್ದವು. ಕೊನೆಯ ಮೂರು ಎಸೆತಗಳಲ್ಲಿ 9 ರನ್ ಅಗತ್ಯವಿದ್ದಾಗ ಭುವನೇಶ್ವರ್ ಕುಮಾರ್ ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ತಿರುವು ನೀಡಿದರು. ಅಂತಿಮ ಎಸೆತದಲ್ಲಿ ಎರಡು ರನ್ ಕಲೆಹಾಕಿದ ಆರ್ಸಿಬಿ ಸ್ಮರಣೀಯ ಗೆಲುವು ದಾಖಲಿಸಿತು.ಈ ಜಯದೊಂದಿಗೆ 14 ಅಂಕಗಳಿಸಿರುವ ಆರ್ಸಿಬಿ ಅಗ್ರಸ್ಥಾನಕ್ಕೇರಿದ್ದು, ಮುಂಬೈ ಇಂಡಿಯನ್ಸ್ ಅಧಿಕೃತವಾಗಿ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ.ಆರ್ಸಿಬಿ ಮುಂದಿನ ಪಂದ್ಯವನ್ನು ಮೇ 13ರಂದು ರಾಯ್ಪುರದಲ್ಲೇ ಕೆಕೆಆರ್ ವಿರುದ್ಧ ಆಡಲಿದೆ. ನಂತರ ಮೇ 17ರಂದು ಧರ್ಮಶಾಲಾದಲ್ಲಿ ಪಂಜಾಬ್ ವಿರುದ್ಧ ಹಾಗೂ ಮೇ 22ರಂದು ಹೈದರಾಬಾದ್ನಲ್ಲಿ ಎಸ್ಆರ್ಎಚ್ ವಿರುದ್ಧ ಸೆಣಸಲಿದೆ. ಟಾಪ್-2 ಸ್ಥಾನ ಕಾಯ್ದುಕೊಳ್ಳಲು ಈ ಮೂರು ಪಂದ್ಯಗಳೂ ಆರ್ಸಿಬಿಗೆ ಮಹತ್ವದ್ದಾಗಿವೆ.
ಇದರ ನಡುವೆ ಗಾಯದ ಸಮಸ್ಯೆಗಳು ಆರ್ಸಿಬಿಯನ್ನು ಕಾಡುತ್ತಿವೆ. ಫಿಲ್ ಸಾಲ್ಟ್ ಗೈರಾಗಿರುವುದು ಆರಂಭಿಕ ಬ್ಯಾಟಿಂಗ್ಗೆ ಹಿನ್ನಡೆಯಾಗಿದ್ದು, ಕೃನಾಲ್ ಪಾಂಡ್ಯ ಕ್ರ್ಯಾಂಪ್ ಸಮಸ್ಯೆ ಎದುರಿಸಿದ್ದಾರೆ. ಭುವನೇಶ್ವರ್ ಕುಮಾರ್ ಹೊರತುಪಡಿಸಿ ಉಳಿದ ವೇಗದ ಬೌಲರ್ಗಳ ಫಿಟ್ನೆಸ್ ಕೂಡ ಚಿಂತೆ ಹುಟ್ಟಿಸಿದೆ.






