ಕಳೆದ ಬಾರಿಯಂತೆ ಈ ಬಾರಿಯೂ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲಿ ಮಳೆ ಅವಾಂತರ ಹೆಚ್ಚಾಗಿದೆ. ಕಳೆದ ವರ್ಷ ಹಲವಾರು ಕುಟುಂಬಗಳು ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿಯೂ ಅದೇ ಪರಿಸ್ಥಿತಿ ಪುನರಾವರ್ತನೆಯಾಗುವ ಸಂಭವವಿದೆ.
ಕೃಷ್ಣಾ ನದಿ ತೀರದ ಜಿಲ್ಲೆಗಳು ಹಾಗು ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ ಕಡಿಮೆಯಾದರೂ ಪ್ರವಾಹ ಪರಿಸ್ಥಿತಿ ಮಾತ್ರ ಇನ್ನೂ ತಗ್ಗಲಿಲ್ಲ. ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದ್ದು, ನದಿಯಲ್ಲಿ ನೀರಿನ ಹರಿವು ಅಪಾಯದ ಮಟ್ಟದಲ್ಲಿದೆ. ಹಲವು ಪ್ರದೇಶಗಳ ಸಂಪರ್ಕ ಕಡಿತಗೊಂಡರೆ, ಹಲವು ಹಳ್ಳಿಗಳು ಜಲಾವೃತವಾಗಿದೆ. ನೀರಿನ ರಭಸಕ್ಕೆ ನೂರಾರು ಎಕರೆಗಳಲ್ಲಿ ಬೆಳೆದಿದ್ದ ಬೆಳೆ ಹಾಗೂ ರಸ್ತೆ ವ್ಯವಸ್ಥೆ ಕೊಚ್ಚಿ ಹೋಗಿದೆ. ಮೂಲಭೂತ ಸೌಕರ್ಯಗಳಿಗೆ ಬಹುದೊಡ್ಡ ಹೊಡೆತ ಬಿದ್ದಿದೆ.
ಮಹಾರಾಷ್ಟ್ರದಿಂದ ಎರಡೂವರೆ ಲಕ್ಷಕ್ಕು ಅಧಿಕ ಕ್ಯೂಸೆಕ್ ನೀರು ಬಿಡುಗಡೆಗೊಳ್ಳುತ್ತಿರುವುದರಿಂದ ಕೃಷ್ಣಾ ನದಿ ಹಾಗೂ ಅದರ ಉಪನದಿಗಳಲ್ಲಿ ನೀರು ತಾಂಡವವಾಡುತ್ತಿದೆ. ಪುಣೆ ಬೆಂಗಳೂರು ಹೆದ್ದಾರಿ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಸಂಕೇಶ್ವರದಲ್ಲಿ ಹಿರಣ್ಯಾಕ್ಷಿ ನದಿಯ ಆರ್ಭಟದಿಂದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಬೆಳಗಾವಿ-ಪಣಜಿ ರಸ್ತೆಯಲ್ಲಿ ಬರುವ ಲೋಂಡಾದಲ್ಲಿ ಭೂಕುಸಿತದಿಂದಾಗಿ ವಾಹನಗಳು ಸಂಚರಿಸಲು ರಸ್ತೆಯೇ ಇಲ್ಲದಂತಾಗಿದೆ.
ಪ್ರವಾಹ ಪೀಡಿತ ಸ್ಥಳಗಳಿಂದ ಸಂತ್ರಸ್ಥರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ಕೆಲಸದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಪೊಲೀಸರು ಶ್ರಮಿಸುತ್ತಿದ್ದಾರೆ. ಗೋಕಾಕ್ ತಾಲ್ಲೂಕಿನ ಹಲವು ಜನವಸತಿ ಪ್ರದೇಶಗಳಿಗೆ ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಯ ನೀರು ನುಗ್ಗಿ ಬದುಕನ್ನು ದುಸ್ತರಗೊಳಿಸಿದೆ. ಚಿಕ್ಕೋಳಿ, ಲೋಲಾಸುರ ಗ್ರಾಮಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ಮೆಕ್ಕೆಜೋಳ ಮತ್ತು ಕಬ್ಬು ಬೆಳೆ ನೀರು ಪಾಲಾಗಿದೆ.
ಈವರೆಗೆ ಪ್ರವಾಹ ಪೀಡಿದ ಪ್ರದೇಶಗಳಿಂದ ಒಟ್ಟು 19,035 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. 8,795 ಜನರಿಗೆ 89 ಕಾಳಜಿ ಕೇಂದ್ರದಲ್ಲಿ ವಸತಿ ಕಲ್ಪಿಸಲಾಗಿದೆ. 37 ರಸ್ತೆಗಳಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿದೆ ಹಾಗೂ ಪ್ರವಾಹದಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ್ ತಿಳಿಸಿದ್ದಾರೆ.
ಬಸವಸಾಗರ ಜಲಾಶಯದಿಂದ ಮುರು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡುಗಡೆಗೊಂಡಿದ್ದರಿಂದ ಲಿಂಗಸುಗೂರು ಹಾಗೂ ರಾಯಚೂರು ತಾಲ್ಲೂಕಿನ ಹಲವು ಗ್ರಾಮಗಳು ದ್ವೀಪದಂತಾಗಿದೆ. ಇತರ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸುವ ರಸ್ತೆಗಳು ಮುಳುಗಡೆಯಾಗಿವೆ.
ಇನ್ನು, ಉತ್ತರ ಕನ್ನಡದಲ್ಲಿಯೂ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ. ಜಿಲ್ಲೆಯ ಅಘನಾಶಿನಿ, ಕಾಳಿ ಹಾಗೂ ಗಂಗಾವಳಿ ನದಿಗಳು ಜನರ ಜೀವಕ್ಕೆ ಸಂಚಕಾರ ತಂದೊಡ್ಡಿವೆ. 81 ಗ್ರಾಮಗಳು ಮುಳುಗಡೆಯಾಗಿವೆ. ಮೂವತ್ತು ಸೇತುವೆ ಮತ್ತು ಐವತ್ತು ಮನೆಗಳು ಹಾನಿಗೊಳಗಾಗಿವೆ. ಜಿಲ್ಲೆಯಲ್ಲಿ ನಾಲ್ವರು ಈಗಾಗಲೇ ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ.