ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಸಂಹಿತೆಗಳು ಹಾಗೂ ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದದ ವಿರುದ್ಧ ಫೆಬ್ರವರಿ 12, 2026ರಂದು ದೇಶಾದ್ಯಂತ ಭಾರತ್ ಬಂದ್ಗೆ(Bharat Bandh) ಕರೆ ನೀಡಲಾಗಿದೆ. ಕೇಂದ್ರ ಕಾರ್ಮಿಕ ಸಂಘಗಳು ಮತ್ತು ರೈತ ಸಂಘಟನೆಗಳು ಈ ಮುಷ್ಕರವನ್ನು ಘೋಷಿಸಿವೆ.

ಈ ಮುಷ್ಕರ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯಿಂದ ನಡೆಯುತ್ತಿದೆ. INTUC, AITUC, HMS, CITU, AIUTUC, TUCC, SEWA, AICCTU, LPF ಮತ್ತು UTUC ಸೇರಿದಂತೆ 10 ಕೇಂದ್ರ ಕಾರ್ಮಿಕ ಸಂಘಗಳು ಕರೆ ನೀಡಿವೆ. ರೈತ ಸಂಘಟನೆಗಳಾದ ಸಂಯುಕ್ತ ಕಿಸಾನ್ ಮೋರ್ಚಾ (SKM) ಮತ್ತು ಅಖಿಲ ಭಾರತ ಕಿಸಾನ್ ಸಭಾ (AIKS) ಸಂಪೂರ್ಣ ಬೆಂಬಲ ನೀಡಿವೆ.

ಮುಷ್ಕರದ ಮುಖ್ಯ ಕಾರಣಗಳು
ನವೆಂಬರ್ 2025ರಲ್ಲಿ ಅಧಿಸೂಚಿಸಲಾದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳಿಗೆ ಕಾರ್ಮಿಕರು ವಿರೋಧ ಸೂಚಿಸಿದ್ದು, ಕಾರ್ಮಿಕರ ಹಕ್ಕುಗಳು ಕುಗ್ಗುತ್ತವೆ ಎಂಬ ಆರೋಪ ಜೋರಾಗಿ ಕೇಳಿಬರುತ್ತಿದೆ. ಅಲ್ಲದೇ ಖಾಸಗೀಕರಣ ಮತ್ತು ಉದ್ಯೋಗ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಜೊತೆಗೆ MGNREGA ಯೋಜನೆ ಮರುಸ್ಥಾಪನೆ ಒತ್ತಾಯಿಸಿದ್ದಾರೆ. ಇನ್ನು ವಿದ್ಯುತ್ ತಿದ್ದುಪಡಿ ಮಸೂದೆ ಮತ್ತು ಕರಡು ಬೀಜ ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿರುವ ರೈತ ಸಂಘಟನೆಗಳು ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಭಾರತ್ ಬಂದ್ನಿಂದ ಸಾರ್ವಜನಿಕ ವಲಯದ ಬ್ಯಾಂಕುಗಳು, ಸರ್ಕಾರಿ ಕಚೇರಿಗಳು, ಬಸ್ ಹಾಗೂ ಇತರೆ ಸಾರಿಗೆ ಸೇವೆಗಳು, ಕೆಲವು ಶಾಲಾ-ಕಾಲೇಜುಗಳು ಬಂದ್ ಆಗುವ ಸಾಧ್ಯತೆಯಿದ್ದು, ತುರ್ತು ಸೇವೆಗಳು ಮಾತ್ರ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.






