ಜಾರಿ ನಿರ್ದೇಶನಾಲಯ ಭಾನುವಾರ ಬೆಳಗ್ಗೆ ಮುಂಬೈನಲ್ಲಿರುವ ಶಿವಸೇನೆ ಸಂಸದ ಸಂಜಯ್ ರಾವತ್ ನಿವಾಸದ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿರುವ ಸಂಜಯ್ ರಾವತ್, ಸತ್ತರೂ ಸರಿ ಇಡಿಗೆ ಶರಣಾಗುವುದಿಲ್ಲ ಎಂದಿದ್ದಾರೆ.
ಹೌದು, ಪತ್ರಾ ಚಾಲ್ ಭೂ ಹಗರಣ ಪ್ರಕರಣದ ಸಂಬಂಧ ದಾಳಿ ನಡೆಸಿದ ಕುರಿತು ಟ್ವೀಟ್ ಮಾಡಿರುವ ಸಂಸದ, ಸುಳ್ಳು ಕ್ರಮ..ಸುಳ್ಳು ಸಾಕ್ಷ್ಯ… ನಾನು ಶಿವಸೇನೆ ಬಿಡುವುದಿಲ್ಲ.. ನಾನು ಸತ್ತರೂ.. ನಾನು ಶರಣಾಗುವುದಿಲ್ಲ..ಜೈ ಮಹಾರಾಷ್ಟ್ರ ಎಂದು ಹೇಳಿದ್ದಾರೆ.

ನನಗೂ ಯಾವುದೇ ಹಗರಣಕ್ಕೂ ಸಂಬಂಧವಿಲ್ಲ. ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ ಮೇಲೆ ಪ್ರಮಾಣ ಮಾಡಿ ಇದನ್ನು ಹೇಳುತ್ತಿದ್ದೇನೆ. ಬಾಳಾಸಾಹೇಬರು ನಮಗೆ ಹೋರಾಡಲು ಕಲಿಸಿದರು. ನಾನು ಶಿವಸೇನೆಗಾಗಿ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಇಂದು ಬೆಳಿಗ್ಗೆ ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.






