ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತದಾರರು ಕಳೆದ ಏಳು ಬಾರಿ ಬಸವರಾಜ ಹೊರಟ್ಟಿಯವರಿಗೆ ಅಧಿಕಾರ ನೀಡಿದ್ದರು. ಆದರೆ ಅವರ ಅಧಿಕಾರ ಅವಧಿಯಲ್ಲಿ ಶಿಕ್ಷಕರ ಬಹಳಷ್ಟು ಸಮಸ್ಯೆ ಹಾಗೇ ಉಳಿದುಕೊಂಡಿವೆ. ಹಾಗಾಗಿ ಈ ಬಾರಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತದಾರರು ನಮ್ಮ ಪರ ಹೆಚ್ಚು ಒಲವು ಹೊಂದಿದ್ದಾರೆ. ಈ ಬಾರಿ ನಮ್ಮ ಗೆಲುವು ನಿಶ್ಚಿತ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ವಿಶ್ವಾಸ ವ್ಯಕ್ತಪಡಿಸಿದರು.
ಧಾರವಾಡ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಲವು ಕಡೆಗಳಲ್ಲಿ ಪ್ರಚಾರ ಕಾರ್ಯಕ್ಕೆ ತೆರಳಿದ ಸಂದರ್ಭದಲ್ಲಿ ಕಾಂಗ್ರೆಸ್ ಪರ ಮತದಾರರು ತಮ್ಮ ಒಲವು ಹೆಚ್ಚಿನ ರೀತಿಯಲ್ಲಿ ತೋರಿಸುತ್ತಿದ್ದಾರೆ. ಏಳು ಬಾರಿ ನಮ್ಮ ಶಿಕ್ಷಕ ಮತದಾರರು ಹೊರಟ್ಟಿಯವರಿಗೆ ಅವಕಾಶ ನೀಡಿದ್ದರು. ಆದರೆ ಅವರು ಶಿಕ್ಷಕರ ಸಮಸ್ಯೆ ಪರಿಹಾರ ಮಾಡುವಲ್ಲಿ ವಿಫಲರಾಗಿದ್ದಾರೆ. ಈಗ ಮತದಾರರು ಬದಲಾವಣೆ ಬಯಸುತ್ತಿದ್ದಾರೆ. ನಮ್ಮಿಂದ ಶಿಕ್ಷಕರ ಸಮಸ್ಯೆಗಳು ಪರಿಹಾರ ಆಗುವ ವಿಶ್ವಾಸವನ್ನು ಮತದಾರರು ಹೊಂದಿದ್ದಾರೆ ಎಂದರು.

ಪ್ರಚಾರ ಕಾರ್ಯದಲ್ಲಿ ಪಕ್ಷದ ಎಲ್ಲ ಮುಖಂಡರು ನಮಗೆ ಕೈ ಜೋಡಿಸಿದ್ದಾರೆ.
ನಮ್ಮ ಪಕ್ಷದಿಂದ ಪಶ್ಚಿಮ ಶಿಕ್ಷಕರ ಕೇತ್ರದ ಅಭ್ಯರ್ಥಿಯಾಗಿ ನನಗೆ ಸ್ಪರ್ಧೆಗೆ ಅವಕಾಶ ನೀಡಿದ್ದಾರೆ. ಟಿಕೆಟ್ ನೀಡಿದಾಗಿನಿಂದಲೂ ನಮ್ಮ ಕ್ಷೇತ್ರ ವ್ಯಾಪ್ತಿಯ ಎಲ್ಲ ಸ್ಥಳೀಯ ನಾಯಕರು ನಮ್ಮ ಪರ ಪ್ರಚಾರ ಕಾರ್ಯದಲ್ಲಿ ತೋಡಿಗಿಸಿಕೊಂಡಿದ್ದಾರೆ. ಕೆಲವು ಚುನಾವಣೆ ಪ್ರಚಾರಗಳು ಮಾಧ್ಯಮಗಳಲ್ಲಿ ಬಂದಿಲ್ಲ ಅಷ್ಟೇ, ರಾಜ್ಯ ಮಟ್ಟದಿಂದ ಹಿಡಿದು ಸ್ಥಳೀಯ ಮಟ್ಟದ ಎಲ್ಲ ನಾಯಕರು ನಮ್ಮ ಗೆಲುವಿಗಾಗಿ ಎಲ್ಲರು ಕೈ ಜೋಡಿಸುತ್ತಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡಾ. ಇಂದೂ ಧಾರವಾಡದಲ್ಲಿ ನಮ್ಮ ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿ ಹಲವು ನಾಯಕರು ಭಾಗವಹಿಸಲ್ಲಿದ್ದಾರೆ ಎಂದು ಹೇಳಿದರು.






