ದೆಹಲಿ : ದೆಹಲಿಯ ಅಬಕಾರಿ ನೀತಿಯಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಪುತ್ರಿ ಕೆ. ಕವಿತಾರಿಗೆ ಜಾರಿ ನಿರ್ದೇಶನಾಲಯ ಮಾರ್ಚ್ 9ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತ್ ರಾಷ್ಟ್ರ ಸಮಿತಿ ಪಕ್ಷದ ಎಂಎಲ್ಸಿ ಆಗಿರುವ 44 ವರ್ಷದ ಕವಿತಾರ ಆಪ್ತ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈರನ್ನು ಸೋಮವಾರ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಈ ಪ್ರಕರಣದಲ್ಲಿ ಅರುಣ್ ಪಿಳ್ಳೈ ಆರೋಪಿಯಾಗಿದ್ದು ಇವರೊಂದಿಗೆ ಕವಿತಾ ರಾವ್ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು ಎನ್ನಲಾಗಿದೆ.
ಇಂಡೋಸ್ಪಿರಿಟ್ಸ್ ಹೆಸರಿನ ಮದ್ಯದ ಕಂಪನಿಯಲ್ಲಿ ಬಿಆರ್ಎಸ್ ನಾಯಕಿ ಕವಿತಾ 65 ಪ್ರತಿಶತ ಪಾಲನ್ನು ಹೊಂದಿದ್ದಾರೆ. ಹೀಗಾಗಿ ಜಾರಿ ನಿರ್ದೇಶನಾಲಯ ಕವಿತಾ ರಾವ್ರನ್ನು ಆರೋಪಿಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. 2022ರ ಡಿಸೆಂಬರ್ 11ರಲ್ಲಿಯೂ ಜಾರಿ ನಿರ್ದೇಶನಾಲಯ ಕವಿತಾರ ನಿವಾಸದಲ್ಲಿ ಇಡಿ ಕವಿತಾರನ್ನು ವಿಚಾರಣೆಗೆ ಒಳಪಡಿಸಿತ್ತು.
ಮುಂಬರುವ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವಂತೆ ಕೋರಿ ಮಾರ್ಚ್ 10 ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕವಿತಾ ಹೇಳಿದ್ದರು.
ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ದೆಹಲಿ ಸರ್ಕಾರವು 2021-22ರ ಅಬಕಾರಿ ನೀತಿಯ ಅಡಿಯಲ್ಲಿ ಲಂಚ ಸ್ವೀಕರಿಸುವ ಮೂಲಕ ಡೀಲರ್ಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಈ ಆರೋಪಗಳನ್ನು ದೆಹಲಿಯ ಆಡಳಿತಾರೂಢ ಆಪ್ ಪಕ್ಷವು ಬಲವಾಗಿ ನಿರಾಕರಿಸಿದೆ.