ಹಳ್ಳಿಗಾಡಿನ ಸರ್ಕಾರಿ ಶಾಲೆ ಮಕ್ಕಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲು ನಿಟ್ಟಿನಲ್ಲಿ ‘ಶಾಲೆಗೊಂದು ವಾಹನ’ ಯೋಜನೆ ಜಾರಿಗೆ ಚಿಂತನೆ ನಡೆಸಲಾಗಿದೆ ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ನಗರದಲ್ಲಿಂದು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಶಾಲೆಗೆ ಒಳ್ಳೆಯ ಸಮವಸ್ತ್ರ ಧರಿಸಬೇಕು ಎನ್ನುವ ಆಸೆ ಇರುತ್ತೇ. ಅದೇ ರೀತಿ, ತಾವು ವಾಹನದಲ್ಲಿ ತೆರಳಬೇಕು ಎನ್ನುವ ಆಸೆಯೂ ಇದೆ. ಹಾಗಾಗಿ, ಅಗತ್ಯಕ್ಕೆ ತಕ್ಕಂತೆ ಆಯಾ ಕ್ಷೇತ್ರವಾರು ಶಾಸಕರ ಅನುದಾನದಲ್ಲಿ ಶಾಲೆಗೆ ಒಂದು ವಾಹನ ಖರೀದಿ ಮಾಡಲಾಗುವುದು.ಆನಂತರ, ಇದನ್ನು ಆಯಾ ಶಾಲೆಯ ಎಸ್ ಡಿಎಂಸಿ ಸಮಿತಿಗಳೇ ನಿರ್ವಹಣೆ ಮಾಡಲಿವೆ ಎಂದು ಅವರು ವಿವರಿಸಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಕನ್ನಡ ಭಾಷೆ ಉಳಿಸುವುದಕ್ಕೆ ಮಾದರಿ ಶಾಲೆಗಳನ್ನು ರೂಪಿಸಲು ಯೋಚಿಸುತ್ತಿದ್ದೇವೆ. ಶೀಘ್ರದಲ್ಲಿಯೇ ಇದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದ ಅವರು, ಮಾದರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ಮಾತ್ರ ಕಲಿಸಿ ಇನ್ನುಳಿದವುಗಳನ್ನು ಕನ್ನಡ ಮಾಧ್ಯಮದಲ್ಲಿ ಕಲಿಸುವುದಕ್ಕೆ ಯೋಚಿಸುತ್ತಿದ್ದೇವೆ. ಪ್ರತಿ ಕ್ಲಾಸ್ಗೂ ಒಂದು ಕೊಠಡಿ ಇರಬೇಕು, ಪ್ರತಿ ಕ್ಲಾಸ್ಗೊಂದು ಶಿಕ್ಷಕರಿರಬೇಕು ಎಂಬುದನ್ನು ಯೋಚನೆ ಮಾಡುತ್ತಿದ್ದೇವೆ. ರಾಜ್ಯದ 1,500 ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿಸುವ ಗುರಿಯಿದೆ ಎಂದರು.
1 ರಿಂದ 8 ನೇ ಕ್ಲಾಸ್ ಮಕ್ಕಳಿಗೆ ಊಟದ ಜತೆ ಮೊಟ್ಟೆ ವಿತರಿಸಲು ನಿರ್ಧರಿಸಲಾಗಿದ್ದು, ಅದರಂತೆ ಶೈಕ್ಷಣಿಕ ಸಾಲಿನ 46 ವಾರಗಳಲ್ಲಿ ಯಾರು ಮೊಟ್ಟೆ ತಿನ್ನಲು ಇಚ್ಛೆ ಪಡುತ್ತಾರೆ, ಆ ವಿದ್ಯಾರ್ಥಿಗಳಿಗೆ ಮಾತ್ರ ಮೊಟ್ಟೆ ನೀಡಲಾಗುವುದು. ಯಾರಿಗೂ ಬಲವಂತವಾಗಿ ಮೊಟ್ಟೆ ತಿನ್ನಿಸುವ ಹಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಅದರ ಜೊತೆಗೆ ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಪೌಷ್ಠಿಕಯುಕ್ತ ಚಿಕ್ಕಿ ಅಥವಾ ಬಾಳೆ ಹಣ್ಣನ್ನು ವಿತರಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಸುಮಾರು 200 ಕೋಟಿ ರೂ. ವೆಚ್ಚವಾಗಬಹುದು ಎಂದು ಸ್ಪಷ್ಟಪಡಿಸಿದರು.

ಪ್ರೌಢಶಾಲಾ ಶಿಕ್ಷಕರ ಮುಂಬಡ್ತಿ ಕುರಿತು ಪ್ರತಿಕ್ರಿಯಿಸಿದ ಅವರು, ಶಿಕ್ಷಕರ ಮುಂಬಡ್ತಿ ಪ್ರಕ್ರಿಯೆ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಅದರಲ್ಲೂ 60:40 ಅನುಗುಣವಾಗಿ ನೇಮಕ ಮಾಡುವ ಇದೊಂದು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದ ಅವರು, ಅತಿಥಿ ಶಿಕ್ಷಕರು ಶಾಲಾ ಆರಂಭದಿಂದ ಬರಬೇಕೆಂದು ಸೂಚಿಸಲಾಗಿದ್ದು, 36 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ನುಡಿದರು. ಕೊರೋನಾ ಕಾರಣದಿಂದ ಕಲಿಕೆಯಲ್ಲಿಆಗಿದ್ದ ಹಿನ್ನಡೆಯಿಂದ ಮಕ್ಕಳ ಮೇಲೆ ಗಂಭಿರ ಪರಿಣಾಮ ಬೀರಿದೆ. ಅದನ್ನು ಸರಿ ಮಾಡಲು ಕಲಿಕಾ ಚೇತರಿಕೆಗೆ ಒತ್ತು ನೀಡಿದ್ದೇವೆ. ಶಾಲೆಗಳಲ್ಲಿ ಶೇ.100ರಷ್ಟು ಮಕ್ಕಳ ಹಾಜರಾತಿ ಮಾಡುವ ಗುರಿಯಿದೆ ಎಂದು ನುಡಿದರು.
ಸಂವಾದದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್ ಪ್ರಸ್ತಾಪಿಸಿ, ಶಾಲಾ ಮಕ್ಕಳಿಗೆ ಅನುಕೂಲ ಆಗುವ ರೀತಿಯಲ್ಲಿ ಬಸ್ ನಿಲ್ದಾಣಗಳಲ್ಲಿ ಬಸ್ ಗಳನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವ ಬಿ.ಸಿ.ನಾಗೇಶ್, ಇಂದೇ ಕೆಎಸ್ ಆರ್ ಟಿಸಿ, ಬಿಎಂಟಿಸಿ ಎಂಡಿಗಳೊಂದಿಗೆ ಸಭೆ ನಡೆಸಿ, ಸೂಚನೆ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.