ಕೋವಿಡ್ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದ ಜನಕ್ಕೆ ಬೆಲೆಯೇರಿಕೆಯ ಬಿಸಿ ಮುಟ್ಟಿದೆ. ಪೆಟ್ರೋಲ್, ಡಿಸೇಲ್, ವಿದ್ಯುತ್ ದರ ಏರಿಕೆಯ ಬೆನ್ನೆಲೆ, ತರಕಾರಿಗಳ ಬೆಲೆ ಕೂಡ ಗಗನಕ್ಕೇರಿದೆ. ಲಾಕ್ಡೌನ್ ಹಿನ್ನೆಲೆ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೊಳಗಾದ ಸಾಮಾನ್ಯರಿಗಿದು ಹಸಿ ಗಾಯದ ಬೇಲೆ ಬರೆ ಎಳೆದಂತಾಗಿದೆ.
ಈ ಸಂಬಂಧ ತೋಟಗಾರಿಕಾ ಉತ್ಪಾದಕರ ಸಹಕಾರಿ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿ (ಹಾಪ್ಕಾಮ್ಸ್)ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮಿರ್ಜಿ ಪ್ರತಿಕ್ರಿಯಿಸಿ ಸಾಂಕ್ರಾಮಿಕ ರೋಗದ ಪರಿಣಾಮ ಮತ್ತು ದೇಶದಲ್ಲಿ ಇಂಧನ ಬೆಲೆಗಳಲ್ಲಿ ಏರಿಕೆ ಹಾಗು ವಾಹನಗಳ ಸಂಚಾರಕ್ಕೆ ನಿರ್ಬಂಧವಿರುವುದರಿಂದ ಬೆಲೆಯಲ್ಲಿ ಏರಿಕೆ ಕಂಡಿದೆ ಎಂದಿದ್ದಾರೆ.
ಬೀನ್ಸ್ ಬೆಲೆ ಕೆ.ಜಿ ಗೆ 60 ರಿಂದ 90 ರೂ ಗೆ ಏರಿಕೆಯಾಗಿದೆ. ಊಟಿ ಕ್ಯಾರೆಟ್ ಕೆ.ಜಿ ಗೆ 52-62 ರೂ ಆಲೂಗೆಡ್ಡೆ ಮತ್ತು ಟೊಮೋಟೊ ಸ್ಥಳೀಯವಾಗಿಯೇ ಬೆಳೆಯುವುದರಿಂದ ಬೆಲೆ ಏರಿಕೆ ಕಂಡುಬಂದಿಲ್ಲ, ಆದರೆ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಕಾರಣ ನಾಸಿಕ್ ನಿಂದ ಈರುಳ್ಳಿಯನ್ನು ಖರೀದಿ ಮಾಡಲಾಗುತ್ತಿದ್ದು, ಅಲ್ಲಿ ಪ್ರಯಾಣ ನಿರ್ಬಂಧಗಳಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಕರೋನಾ ಲಾಕ್ಡೌನ್ ನಿರ್ಬಂಧ ಹಿನ್ನೆಲೆ, ಬೆಳಿಗ್ಗೆ 6 ಯಿಂದ 9 ಗಂಟೆ ವರೆಗೆ ಮಾತ್ರ ಮಾರುಕಟ್ಟೆ ತೆರೆಯಲಾಗುತ್ತಿದೆ. ಇತ್ತ ತರಕಾರಿ ಸಾಗಿಸುವ ಹಲವು ಲಾರಿಗಳು ಸಂಚಾರಕ್ಕೆ ಇಳಿಯುತ್ತಿಲ್ಲ ಹೀಗಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂಬುವುದು ವ್ಯಾಪಾರಸ್ಥರೊಬ್ಬರು ಹೇಳಿದ್ದಾರೆ.
ಮಳೆಗಾಲದ ವೇಳೆ ತರಕಾರಿ ಬೆಲೆಯಲ್ಲಿ ಏರಿಕೆಯಾಗುವುದು ಸಾಮಾನ್ಯ ಆದರೀಗ ಕರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಬೆಲೆ ಹೆಚ್ಚಳವಾಗದಂತೆ ನೋಡಿಕೊಳ್ಳಬೇಕೆಂದು ಬೆಂಗಳೂರಿನ ನಿವಾಸಿ ನೀತು ಕೆ. ಎಂಬುವವರು ಹೇಳಿದ್ದಾರೆ.