ಪೆಟ್ರೋಲ್, ಡಿಸೇಲ್ ಬೆಲೆಯೇರಿಕೆ ವಿರೋಧಿಸಿ ಜೂನ್ 11 ರಂದು ದೇಶಾದ್ಯಂತ ಕಾಂಗ್ರೆಸ್ ಪಕ್ಷ ಪೆಟ್ರೋಲ್ ಬಂಕ್ಗಳ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಈಗಾಗಲೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 100 ರೂ ತಲುಪಿದ್ದು ಡಿಸೇಲ್ ದರದಲ್ಲಿಯೂ ಏರಿಕೆ ಕಂಡಿದೆ. ಕರೋನಾ ಸಂಕಷ್ಟದ ನಡುವೆ ವಾಹನ ಸವಾರರಿಗೆ ಬೆಲೆಯೇರಿಕೆಯ ಬಸಿ ಮುಟ್ಟಿದೆ.
ಮೇ 4 ರಿಂದ ಇವರೆಗೂ ಒಟ್ಟು 20 ಬಾರಿ ಪೆಟ್ರೋಲ್ ದರದಲ್ಲಿ ಏರಿಕೆ ಕಂಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದ್ದಂತೆ ದೇಶದ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸುತ್ತಿರುತ್ತವೆ. ಇದೀಗ ಬೆಲೆಯೇರಿಕೆ ಗರಿಷ್ಟ ಮಟ್ಟ ತಲುಪಿದ್ದು, ಜನಸಾಮಾನ್ಯರು ಪರದಾಡುವಂತಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಹಾಗು ಜನಪ್ರತಿನಿಧಿಗಳ ಗಮನ ಸೆಳೆಯಲು ಕಾಂಗ್ರೆಸ್ ನಾಯಕರು ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಜೂನ್ 11 ರಂದು ಪಕ್ಷದ ಎಲ್ಲಾ ರಾಜ್ಯ ಘಟಕಗಳಿಂದ ಪ್ರತಿಭಟಿಸುವಂತೆ ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್ ಸೂಚನೆ ನೀಡಿದ್ದು, ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕ ಸಮಸ್ಯೆ, ನಿರುದ್ಯೋಗ, ಉದ್ಯೋಗ, ವೇತನ ಕಡಿತದಿಂದಾಗಿ ಜನ ಸಂಕಷ್ಟಕ್ಕೊಳಗಾಗಿರುವ ಹೊತ್ತಲ್ಲಿ ಅನಿಯಂತ್ರಿತ ಇಂಧನ ಬೆಲೆ ಏರಿಕೆಯೂ ಜನರನ್ನು ಮತ್ತಷ್ಟು ಸಮಸ್ಯೆಗೆ ನೂಕಿದೆ. ಈ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಲು ಅಭಿಯಾನ ನಡೆಸುವಂತೆ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದಾರೆ.