ಕೊನೆಗೂ ಸಿಎಂ ಖುರ್ಚಿಯಿಂದ ಯಡಿಯೂರಪ್ಪ ಕೆಳಗಿಳಿದಿದ್ದಾರೆ. ಆಪರೇಷನ್ ಕಮಲ ನಡೆಸಿ ಮೈತ್ರಿ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬಂದ ಬಿಎಸ್ವೈ ಎರಡು ವರ್ಷಗಳ ಕಾಲ ಸಿಎಂ ಆಗಿ ಆಳಿದರು. ಇದೀಗ ಕಮಲ ಹೈಕಮಾಂಡ್ ನಿರ್ಧಾರದಂತೆ ಎರಡು ವರ್ಷಗಳ ಬಳಿಕ ಆಡಳಿತದಿಂದ ದೂರ ಸರಿದಿದ್ದಾರೆ.
ಹಾಗಾಗಿ, ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬಿಜೆಪಿಯಿಂದ ಸಿಗಲಿದೆ. ಲಿಂಗಾಯತರ ಪ್ರಬಲ ನಾಯಕ ಎನಿಸಿಕೊಂಡಿದ್ದ ಯಡಿಯೂರಪ್ಪ ವರ್ಚಸ್ಸು, ನಾಯಕತ್ವ ಗುಣ ಹೋಲುವ ಮತ್ತೊಬ್ಬ ರಾಜಕಾರಣಿ ಭಾಜಪದಲ್ಲಿ ಇಲ್ಲವೆನ್ನುದೇನೋ ನಿಜ. ಆದರೂ ಬಿಎಸ್ವೈ ಬಳಿಕ ಯಾರು ಎನ್ನುವ ಯಕ್ಷಪ್ರಶ್ನೆಗೆ ಉತ್ತರಕಂಡು ಕೊಳ್ಳುವ ಪ್ರಯತ್ನಕ್ಕೆ ಕೇಂದ್ರ ಬಿಜೆಪಿ ಕೈ ಹಾಕಿದೆ. ಈ ನಡುವೆ ಹಲವು ಹೆಸರುಗಳು ಸಿಎಂ ಸ್ಥಾನಕ್ಕೆ ಕೇಳಿ ಬಂದರೂ, ಲಿಂಗಾಯತರನ್ನು ಕಡೆಗಣಿಸಿ ʻಬ್ರಾಹ್ಮಣರಿಗೆʼ ಮಣೆ ಹಾಕುತ್ತಾ ಎನ್ನುವುದು ಸದ್ಯ ರಾಜ್ಯ ರಾಜಕೀಯ ಪಡಸಾಲೆಯ ಮುಂದಿರುವ ಪ್ರಶ್ನೆ. ಇದಕ್ಕೆ ದೆಹಲಿಯ ವಿಶ್ವಾಸಾರ್ಹ ಮೂಲಗಳು ʻಇಲ್ಲʼ ಎನ್ನುವ ಉತ್ತರ ಕೊಡುತ್ತಿದೆ.
ಹೊಸ ನಾಯಕನಿಗೆ ಮಣೆ ಹಾಕುವುದಷ್ಟೇ ಉದ್ದೇಶ ಹೊಂದಿರುವ ಮೋದಿ ಹಾಗೂ ಅಮಿತ್ ಶಾಗೆ ಲಿಂಗಾಯತರನ್ನು ಎದುರು ಹಾಕಿಕೊಳ್ಳುವ ಉದ್ದೇಶವಾಗಲಿ, ತಾಕತ್ತಾಗಲಿ ಸದ್ಯಕ್ಕಿಲ್ಲ. ಇದೇ ಕಾರಣಕ್ಕೆ ಲಿಂಗಾಯತ ಸಮುದಾಯದ ಒಬ್ಬ ನಾಯಕನಿಗೇ ಸಿಎಂ ಪಟ್ಟ ಕಟ್ಟಿ ಲಿಂಗಾಯತ Lingayat ವಿಶ್ವಾಸವನ್ನು ಕಾಪಾಡಿಕೊಳ್ಳಲಿದೆ ಕೇಂದ್ರ ಬಿಜೆಪಿ ಎನ್ನಲಾಗಿದೆ.
ಹೊಸ ಸಿಎಂ ಘೋಷಣೆಗೆ ಬಿಜೆಪಿ ವರಿಷ್ಠರ ಮೀನಾಮೇಷ ಏಕೆ?
ಈಗಾಗಲೇ ಲಿಂಗಾಯತ ಸ್ವಾಮೀಜಿಗಳು ಕೂಡ ಸಿಎಂ ಜಾಗದಿಂದ ಯಡಿಯೂರಪ್ಪನವರನ್ನು ಇಳಿಸುವುದೇ ಆದರೆ ಮತ್ತೆ ʻನಮ್ಮವರನ್ನೇʼ ಸಿಎಂ ಮಾಡಬೇಕು ಎಂಬ ಸ್ಪಷ್ಟ ಸಂದೇಶವನ್ನು ಭಾಜಪ ಹೈಕಮಾಂಡ್ ಗೆ ರವಾನಿಸಿದೆ. ಅಕಸ್ಮಾತ್, ಬಿಜೆಪಿ ಲಿಂಗಾಯತೇತರ ನಾಯಕನಿಗೆ ಮಣೆ ಹಾಕಿದ್ದೇ ಆದಲ್ಲಿ ರಾಜ್ಯ ರಾಜಕೀಯದಲ್ಲಿ ಹಿಂದೆಂದೂ ಕಾಣದ ರೀತಿಯ ಹೊಡೆತ ಬಿಜೆಪಿಗೆ ಬೀಳಲಿದೆ. ಈ ಮೊದಲು ಬಿಎಸ್ವೈ ಬಿಜೆಪಿಯಿಂದ ಹೊರ ಬಂದು ಕೆಜೆಪಿ ಪಕ್ಷ ಕಟ್ಟಿದಾಗ, ರಾಜ್ಯದಲ್ಲಿ ಬಿಜೆಪಿ ನೆಲೆ ಕಳೆದುಕೊಂಡು, ಕೇಂದ್ರ ಬಿಜೆಪಿ ನಾಯಕರು ಅಲ್ಲೋಲ ಕಲ್ಲೋಲವಾಗಿದ್ದನ್ನು ಈ ಕ್ಷಣ ನೆಪಿಸಿಕೊಳ್ಳಬಹುದು.
ಗೊಂದಲದ ಗೂಡಾದ ರಾಜ್ಯ ರಾಜಕಾರಣ: ಬಿಎಸ್ವೈ ಪರ ಜೆಪಿ…
ಲಿಂಗಾಯತರ ಬದಲಿಗೆ ಬೇರೆ ಸಮುದಾಯದ ನಾಯಕರ ಕೈ ಹಿಡಿಯಲು ಹೊರಟರೆ ಕೇಂದ್ರ ಬಿಜೆಪಿಯ ಎಲ್ಲಾ ಲೆಕ್ಕಾಚಾರವೂ ಬುಡಮೇಲಾಗುವ ಸಂಭವವಿದೆ. ಹೀಗೆ ಮಾಡಿ ಲಿಂಗಾಯತರ ಅವಕೃಪೆಗೆ ಗುರಿಯಾಗುವುದಲ್ಲದೇ ಕಾಂಗ್ರೆಸ್ ಹಾಗೂ ಜೆಡಿಎಸ್ ಕೈಗೆ ಬಿಜೆಪಿ ಮೇಲೆ ಬೀಸಲು ಉರುಗೋಲು ಕೊಟ್ಟಂತಾಗಲಿದೆ.
ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಲಿಂಗಾಯತ ಸಮುದಾಯ ʻಆಂತರಿಕʼ ವಿಚಾರಕ್ಕೆ ಮೂಗು ತುರಿಸಿ ಚುನಾವಣೆಯಲ್ಲಿ ಸೋತಿದ್ದಲ್ಲದೆ ʻಧರ್ಮ ಹೊಡೆದರುʼ ಎಂಬ ಟೀಕೆಗೆ ಬಲಿಯಾದರು. ಈಗಲೂ ಲಿಂಗಾಯತರಿಗೆ ಆ ಕೋಪ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮೇಲೆ ಇದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಚುನಾವಣಾ ಅಸ್ತ್ರವಾಗಿದ್ದು ಸಿದ್ದರಾಮಯ್ಯನವರ ಇದೇ ಎಡವಟ್ಟು. ಇನ್ನೂ ಕೆಲ ಕಾಲ ಕಾಂಗ್ರೆಸ್ನಿಂದ ರಾಜ್ಯದ ಪ್ರಬಲ ಸಮುದಾಯವಾದ ಲಿಂಗಾಯತರನ್ನು ದೂರ ಇಡಲು ಈ ವಿಚಾರ ಬಿಜೆಪಿ ಬಳಸಿಕೊಳ್ಳಲಿದೆ. ಮತ್ತು ಅದು ಪ್ರಯೋಜನಕಾರಿ ಅಸ್ತ್ರ ಕೂಡ.
ಸಿಎಂ ಪುತ್ರ ವಿಜಯೇಂದ್ರಗೆ ದೆಹಲಿಯಲ್ಲಿ ಸಿಕ್ಕ ಸೂಚನೆ ಏನು?
ಹೀಗಿರುವಾಗ ಲಿಂಗಾಯತರನ್ನು ಎದುರಾಕಿಕೊಂಡು ಶತ್ರುವಿನ ಶತ್ರು ಮಿತ್ರ ಎಂಬಂತೆ ಲಿಂಗಾಯತರು ಕಾಂಗ್ರೆಸ್ ಕಡೆ ವಾಲಿದರೂ ಅಚ್ಚರಿ ಪಡಬೇಕಿಲ್ಲ. ಇಂಥಾ ಒಂದು ಅವಕಾಶಕ್ಕಾಗಿಯೇ ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ಸಿದ್ದರಾಮಯ್ಯ ಆಪ್ತರೂ ಆಗಿರುವ ಎಂಬಿ ಪಾಟೀಲ್ ಕೂಡ ಕಾದು ಕುಳಿತಿದ್ದಾರೆ.
ಬಹಳ ವರ್ಷಗಳಿಂದ ಇಂಥದ್ದೊಂದು ಅವಕಾಶಕ್ಕಾಗಿ ಕಾಂಗ್ರೆಸ್ ಹೊಂಚು ಹೂಡಿ ಕೂತಿರುವ ಹೊತ್ತಲ್ಲೇ ಲಿಂಗಾಯತ ಸಮುದಾಯದಿಂದ ಸಿಎಂ ಖುರ್ಚಿ ಕಿತ್ತುಕೊಂಡು ಅವರ ಅವಕೃಪೆಗೆ ತುತ್ತಾಗಲು ಬಿಜೆಪಿ ಕೇಂದ್ರ ನಾಯಕರು ಮನಸ್ಸು ಮಾಡುವುದಿಲ್ಲ. ಹೀಗಾಗಿ ಬ್ರಾಹ್ಮಣರಿಗೆ ಈ ಬಾರಿಯೂ ಸಿಎಂ ಸ್ಥಾನ ಒಲಿಯುವುದಿಲ್ಲ ಎಂಬ ಮಾತು ರಾಜ್ಯ ರಾಜಕೀಯ ಪಡಸಾಲೆಯಲ್ಲಿದೆ.
ಇದೇ ವೇಳೆ ಆಪರೇಷನ್ ಕಮಲಕ್ಕೆ ಒಳಗಾದ ಶಾಸಕರ ಬಗ್ಗೆಯೂ ಭಾಜಪ ಕೇಂದ್ರ ನಾಯಕರು ಕರುಣೆ ತೋರಲಿದ್ದಾರೆ ಎನ್ನಲಾಗಿದ್ದು, ಲಿಂಗಾಯತರ ವಿಶ್ವಾಸ ಉಳಿಸಿಕೊಳ್ಳುವುದು ಎಷ್ಟು ಮುಖ್ಯವೋ, ಈ ವಲಸಿಗ ಶಾಸಕರನ್ನು ಉಳಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ ಎಂಬ ಧೋರಣೆಗೆ ಬಂದಿದೆ. ಮೊದಲನೇದಾಗಿ ವಲಸಿಗರನ್ನು ಗೌರವಯುತವಾಗಿ ನಡೆಸಿಕೊಳ್ಳದೇ ಹೋದರೆ, ಮತ್ತೆಂದೂ ಬಿಜೆಪಿಗೆ ರಾಜ್ಯದಲ್ಲಿ ಆಪರೇಷನ್ ಕಮಲ ಎಂಬ ಕುತಂತ್ರದ ರಾಜಕೀಯಕ್ಕೆ ಅವಕಾಶ ಇರುವುದಿಲ್ಲ. ಇದ್ದರೂ ಹೀಗೆ ದೊಡ್ಡ ಪ್ರಮಾಣದ ಕದುರೆ ವ್ಯಾಪರಕ್ಕೆ ಕಡಾಖಂಡಿತವಾಗಿಯೂ ಅವಕಾಶ ಇರುವುದಿಲ್ಲ. ಈ ಮೂಲಕ ಬಿಜೆಪಿ ಪಕ್ಷ ಸೇಫಲ್ಲ ಎಂಬ ಸಂದೇಶ ಸ್ಪಷ್ಟವಾಗಿ ರವಾನೆಯಾಗಲಿದೆ.
ವಲಸಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಇನ್ನುಳಿದ ಅವಧಿಯನ್ನೂ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಬೇಕಿದೆ. ಒಂದು ವೇಳೆ ಆಗಿದ್ದಾಯ್ತು ಎಂದು ಕಡೆಗಣಿಸಿದರೆ ವಿಪಕ್ಷಗಳ ಕೈಗೆ ಲೇವಡಿ ಮಾಡಲು ತಾವೇ ಒಂದು ಕಾರಣ ಮಾಡಿಕೊಟ್ಟಂತಾಗಲಿದೆ. ಜೊತೆಗೆ ಬಿಎಸ್ ಯಡಿಯೂರಪ್ಪ ಅವರ ಮುನಿಸಿಗೂ ಕೇಂದ್ರ ನಾಯಕರು ಗುರಿಯಾಗಬೇಕಿದೆ. ಹೀಗೆ ಹಲವು ದೃಷ್ಟಿಕೋನದಲ್ಲಿ ಕತ್ತಿಯ ಅಲಗಿನ ಮೇಲಿನ ನಡಿಗೆ ಬಿಜೆಪಿಯದ್ದು. ಹೀಗಾಗಿ ಯಾವುದೇ ಕಾರಣಕ್ಕೂ ಲಿಂಗಾಯತರನ್ನು ಕೆಣಕಿಕೊಂಡು ಲಿಂಗಾಯತ ಏತರ ಸಮುದಾಯಕ್ಕೆ ಸಿಎಂ ಸ್ಥಾನ ಬಿಜೆಪಿಯ ಕೇಂದ್ರ ನಾಯಕರು ಕಟ್ಟುವುದಿಲ್ಲ ಎಂದೇ ಹೇಳಲಾಗಿದೆ.
ನಾಯಕತ್ವ ಬದಲಾವಣೆ; ಲಿಂಗಾಯತರು, ಬ್ರಾಹ್ಮಣರ ನಡುವೆ ತೀವ್ರ ಪೈಪೋಟಿ;…
ವೀರಣ್ಣ ಚರಂತಿಮಠ, ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ್, ಬಸವರಾಜ್ ಬೊಮ್ಮಾಯಿ, ಬಸವನಗೌಡ ಪಾಟೀಲ್ ಯತ್ನಾಳ್ ಎಂಬಂತ ಲಿಂಗಾಯತ ಸಮುದಾಯದ ಹಿರಿಯ ನಾಯಕರಿಗೇ ಸಿಎಂ ಅದೃಷ್ಟ ಖುಲಾಯಿಸಲಿದೆ. ಇದರ ಹೊರತು ಇತರೆ ಯಾವುದೇ ಕಾರಣಕ್ಕೂ ಇತರೆ ಸಮುದಾಯದ ರಾಜಕಾರಣಿ ʻಪ್ರತಿನಿಧಿʼಗಳಿಗೆ ಸಿಎಂ ಪಟ್ಟ ಒಲಿಯುವುದಿಲ್ಲ. ಇಷ್ಟೂ ನಾಯಕರ ಪೈಕಿ ಮುರುಗೇಶ್ ನಿರಾಣಿಗೆ ಸಿಎಂ ಖುರ್ಚಿ ಧಕ್ಕುವ ಸಾಧ್ಯತೆ ಹೆಚ್ಚೇ ಇದೆ.
ಸಿಎಂ ರಾಜೀನಾಮೆ ಕೊಟ್ಟ ಮೇಲೂ ದೆಹಲಿಯಲ್ಲಿ ಅಮಿತ್ ಶಾ ಜೊತೆಗೆ ಮಾತುಕತೆಯಲ್ಲಿದ್ದ ನಿರಾಣಿ, ರಾತ್ರಿ ಹೊತ್ತಿಗೆ ಬೆಂಗಳೂರಿನತ್ತ ಮುಖ ಮಾಡಲಿದ್ದಾರೆ. ಮತ್ತು ಹಣ ಬಲ, ಬೆಂಬಲಿಗರ ಬಲ ಹಾಗೂ ಯಡಿಯೂರಪ್ಪ ಬಿಟ್ಟರೆ ಅತಿ ಹೆಚ್ಚು ಮಠಾಧೀಶರುಗಳು ನಿರಾಣಿ ಪರವಾಗಿಯೇ ಬ್ಯಾಟ್ ಬೀಸುವವರಾಗಿದ್ದಾರೆ. ಆದರೆ ಸದ್ಯಕ್ಕಂತೂ ಮೌನದ ಮೊರೆ ಹೋಗಿರುವ ಕೇಂದ್ರ ಭಾಜಪ ನಾಯಕರು ಸ್ವಲ್ಪದರಲ್ಲೇ ತಮ್ಮ ನಿರ್ಧಾರ ಬಹಿರಂಗಗೊಳಿಸಲಿದ್ದಾರೆ. ಅಲ್ಲಿವರೆಗೂ ʻಯಡಿಯೂರಪ್ಪನವರ ಉತ್ತರಾಧಿಕಾರು ಯಾರುʼ ಎಂಬ ಪ್ರಶ್ನೆ ಯಕ್ಷವಾಗಿಯೇ ಉಳಿಯಲಿದೆ.