ಕೊನೆಗೂ ಜುಲೈ 26 ನಿರೀಕ್ಷಿತ ಘಟನಾವಳಿಗಳಿಗೆ ಸಾಕ್ಷಿಯಾಗಿದೆ.
ಬಹುತೇಕ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೇ ಆರಂಭವಾಗಿ, ಎರಡು ವರ್ಷಗಳ ಕಾಲ ನಿರಂತರ ಭಿನ್ನಮತ, ಹಗ್ಗ ಜಗ್ಗಾಟ, ರಾಜೀನಾಮೆಯ ಹಕ್ಕೊತ್ತಾಯದ ನಡುವೆಯೇ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹಾಗೆ ನೋಡಿದರೆ ಇದೇನು ಹೊಸ ಬೆಳವಣಿಗೆಯಲ್ಲ. ಸ್ವತಃ ಯಡಿಯೂರಪ್ಪ ಅವರೇ ಎರಡು ತಿಂಗಳ ಹಿಂದೆಯೇ, “ಹೈಕಮಾಂಡ್ ಹೇಳಿದರೆ ಯಾವುದೇ ಕ್ಷಣದಲ್ಲಿ ರಾಜೀನಾಮೆ ನೀಡಲು ಸಿದ್ಧ” ಎಂದು ಘೋಷಿಸಿದ್ದರು. ಅದಾದ ಬಳಿಕ ಕಳೆದ ಎರಡು ಮೂರು ದಿನಗಳಿಂದ ಅವರು “ಜುಲೈ 25ರ ಹೈಕಮಾಂಡ್ ಸಂದೇಶಕ್ಕಾಗಿ ಕಾಯುತ್ತಿದ್ದೇನೆ. ಆ ಸಂದೇಶ ಬಂದಕೂಡಲೇ ಪಕ್ಷದ ವರಿಷ್ಠರು ರಾಜೀನಾಮೆ ನೀಡಿ ಎಂದರೆ ನೀಡುತ್ತೇನೆ. ಅಥವಾ ಮುಂದುವರಿಯಿರಿ ಎಂದರೆ ಮುಂದುವರೆಯುತ್ತೇನೆ” ಎಂದು ಹೇಳಿದ್ದರು.
ಹಾಗಾಗಿ, ಜುಲೈ 25ರಂದು ದೆಹಲಿ ಸಂದೇಶ ಬರುತ್ತದೆ ಅದರ ಮಾರನೇ ದಿನ; ಜುಲೈ 26ರಂದು ತಮ್ಮ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹೊತ್ತಲ್ಲಿ ಯಡಿಯೂರಪ್ಪ ತಮ್ಮ ಸ್ಥಾನವನ್ನು ತ್ಯಜಿಸುತ್ತಾರೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು.
ನಿರೀಕ್ಷೆಯಂತೆ ಜುಲೈ25 ಪಕ್ಷದ ಹೈಕಮಾಂಡ್ ಇಂದ ಸಂದೇಶ ಬಂದಿದೆಯೋ, ಇಲ್ಲವೋ ಎಂಬುದು ಸಾರ್ವಜನಿಕವಾಗಿ ಬಹಿರಂಗವಾಗಿಲ್ಲ. ಆದರೆ 26ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಮಾತ್ರ ಬಹಿರಂಗವಾಗಿದೆ.
ಎರಡು ವರ್ಷದ ತಮ್ಮ ಆಡಳಿತದ ನೆನಪಿಗಾಗಿ ಆಯೋಜಿಸಿದ್ದ ಸಂಭ್ರಮೋತ್ಸವದಲ್ಲೇ ಯಡಿಯೂರಪ್ಪ ರಾಜೀನಾಮೆ ಘೋಷಿಸಿದ್ದಾರೆ ಎಂಬುದು ವಿಪರ್ಯಾಸ.
ಆ ಹಿನ್ನೆಲೆಯಲ್ಲಿ, ಪಕ್ಷಕ್ಕಾಗಿ ಜೀವಮಾನವಿಡೀ ದುಡಿದ ಹಿರಿಯ ಜನನಾಯಕರಿಗೆ ಹೀಗೆ ಅವಮಾನ ಮಾಡುವುದು ಸರಿಯೇ ಎಂಬ ಪ್ರಶ್ನೆ ಬಿಜೆಪಿ ಹೈಕಮಾಂಡ್ ಗುರಿ ಮಾಡಿ ಚರ್ಚೆಗೆ ಗ್ರಾಸವಾಗಿದೆ.
ಆದರೆ, ರಾಜೀನಾಮೆ ಘೋಷಿಸಿದ ಬಿಎಸ್ ವೈ, “75 ವರ್ಷದ ಬಳಿಕವೂ ತಮಗೆ ಎರಡು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳನ್ನು ಹೇಳ್ತೀನಿ ಮತ್ತು ನಾನು ಖುಷಿಯಿಂದಲೇ, ಸಂತೋಷದಿಂದಲೇ ರಾಜಿನಾಮೆ ನೀಡುತ್ತಿದ್ದೇನೆ” ಎಂದು ಹೇಳಿದ್ದಾರೆ. ಆದರೆ, ಹಾಗೆ ಹೇಳುವಾಗ ಯಡಿಯೂರಪ್ಪ ಅವರ ಧ್ವನಿ ಗದ್ಗದಿತವಾಗಿತ್ತು ಮತ್ತು ಅವರ ಕಣ್ಣಂಚಲ್ಲಿ ವೀರ ಆಡುತ್ತಿತ್ತು ಎಂಬುದು ಯಡಿಯೂರಪ್ಪ ಆ ಹಿಂದಿನ ಬಾಳಷ್ಟು ಕಥೆಗಳನ್ನು ಹೇಳುತ್ತಿತ್ತು.
ಸುಮಾರು 40 ವರ್ಷಗಳ ಕಾಲ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಯಡಿಯೂರಪ್ಪ, ಶಿಕಾರಿಪುರ ಪುರಸಭೆಯ ಸದಸ್ಯರಾಗಿ ಮೊದಲಬಾರಿ ಆಯ್ಕೆಯಾದಾಗಿನಿಂದ 2007ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಅಧಿಕಾರ ಸ್ವೀಕರಿಸುವ ವರೆಗೆ ಸಾಗಿ ಬಂದ ದಾರಿ ಸುದೀರ್ಘವಾದದ್ದು ಮತ್ತು ಹೋರಾಟದ ಹಾದಿ. ಆ ಕಾರಣಕ್ಕಾಗಿಯೇ ಯಡಿಯೂರಪ್ಪ ಕರ್ನಾಟಕ ಕಂಡ ಅಪರೂಪದ ಜನನಾಯಕರಲ್ಲಿ ಒಬ್ಬರು.
ಹಾಗಾಗಿ ಯಡಿಯೂರಪ್ಪ ಅಧಿಕಾರದಲ್ಲಿರುವಾಗ ಅವರ ಆಡಳಿತದ ಲೋಪದೋಷಗಳ ಬಗ್ಗೆ, ಅವರ ಮೇಲಿನ ಮತ್ತು ಅವರ ಕುಟುಂಬದ ಮೇಲಿನ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಯಾರು ಏನೇ ಮಾತಾಡಿದರೂ, ಅವರು ಸಿಎಂ ಕುರ್ಚಿ ಬಿಟ್ಟು ಕೆಳಗಿಳಿಯುವ ಹೊತ್ತಲ್ಲಿ ಅವರ ಕಡು ವಿರೋಧಿಗಳು ಕೂಡ ಅವರ ಪರ ಮರಗುತ್ತಾರೆ ಮತ್ತು ಅವರು ಬಿಜೆಪಿಯ ಇತರ ನಾಯಕರಿಗೆ ಹೋಲಿಸಿದರೆ ನೂರು ಪಾಲು ಉತ್ತಮ ನಾಯಕ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.
ಇದೀಗ ಯಡಿಯೂರಪ್ಪ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಮತ್ತು ರಾಜಿನಾಮೆ ನೀಡಿದ ಬಳಿಕ ಮಾತನಾಡುತ್ತಾ ತಾವು ಸಕ್ರಿಯ ರಾಜಕಾರಣದಿಂದ ನಿವೃತ್ತರಾಗುವ ಪ್ರಶ್ನೆಯಿಲ್ಲ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ ಎಂದು ಹೇಳಿದ್ದಾರೆ.
ಜೊತೆಗೆ ಈ ರಾಜೀನಾಮೆ ಹಿಂದೆ ಪ್ರಧಾನಿ ಮೋದಿ, ಅಮಿತ್ ಶಾ ಅವರಾಗಲೀ ಅಥವಾ ಪಕ್ಷದ ಯಾವುದೇ ವರಿಷ್ಠರ ಒತ್ತಡವಿಲ್ಲ. ತಮ್ಮ ವಯಸ್ಸಿನ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.
ಹಾಗಾಗಿ ಈಗ ಚೆಂಡು ಬಿಜೆಪಿಯ ದೆಹಲಿ ವರಿಷ್ಠರ ಅಂಗಳದಲ್ಲಿದೆ.
ಈ ನಡುವೆ ಯಡಿಯೂರಪ್ಪ ಅವರು 2 ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸುವಾಗಲೇ ಅವರಿಗೆ ಎರಡು ವರ್ಷಗಳ ಅವಧಿಗೆ ಮಾತ್ರ ನೀವು ಸಿಎಂ ಆಗಿ ಮುಂದುವರಿಯಬೇಕು ಆ ಬಳಿಕ ರಾಜೀನಾಮೆ ನೀಡಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಆ ಪ್ರಕಾರವೇ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಯಡಿಯೂರಪ್ಪ ರಾಜೀನಾಮೆಯಲ್ಲಿ ಏನು ವಿಶೇಷ ಇಲ್ಲ ಎಂಬ ಮಾತು ಬಿಜೆಪಿಯ ಯಡಿಯೂರಪ್ಪ ವಿರೋಧಿ ಬಣದಿಂದಲೇ ಕೇಳಿ ಬರುತ್ತಿದೆ.
ಯಡಿಯೂರಪ್ಪ ಕೂಡ ತಾವು ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡಲು ಮುಂದಾಗಿದ್ದಾಗಿಯೂ ಮತ್ತು ವರಿಷ್ಠರಿಗೆ ಆಗಲೇ ಪರ್ಯಾಯ ನಾಯಕರನ್ನು ಆಯ್ಕೆಮಾಡುವಂತೆ ತಿಳಿಸಿದ್ದಾಗಿಯೂ ಹೇಳಿದ್ದಾರೆ.
ಹಾಗಾಗಿ, ಯಡಿಯೂರಪ್ಪ ಜುಲೈ 26 ಕ್ಕೆ ತಮ್ಮ ಸರ್ಕಾರಕ್ಕೆ ಎರಡು ವರ್ಷ ತುಂಬುತ್ತಿರುವ ಹೊತ್ತಲ್ಲಿ ರಾಜೀನಾಮೆ ನೀಡುತ್ತಾರೆ ಎಂಬುದು ಈ ಮೊದಲೇ ನಿರ್ಧಾರವಾಗಿತ್ತು. ಕನಿಷ್ಟ ಬಿಜೆಪಿ ಹೈಕಮಾಂಡಿಗಂತೂ ಇದು ಸ್ಪಷ್ಟವಾಗಿತ್ತು.
ಆದರೆ, ಕನಿಷ್ಠ ಎರಡು ತಿಂಗಳ ಮುಂಚೆಯೇ ನಿರ್ಧಾರಿತವಾಗಿದ್ದ ಈ ವಿಷಯದ ಕುರಿತು ಬಿಜೆಪಿಯ ವರಿಷ್ಠರು ಯಾಕೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂಬುದು ಪ್ರಶ್ನೆ. ಅಂದರೆ ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಕೂಡ ಪರ್ಯಾಯ ನಾಯಕನ ಹೆಸರನ್ನು ಈವರೆಗೂ ಘೋಷಿಸಿಲ್ಲ. ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಇಲ್ಲಿವರೆಗೆ ಬಿಜೆಪಿಯ ವರಿಷ್ಠರು ಹೇಳಿಲ್ಲ. ಆ ಹಿನ್ನೆಲೆಯಲ್ಲಿಯೇ ರಾಜ್ಯಪಾಲರು ಯಡಿಯೂರಪ್ಪ ಅವರನ್ನು ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಸೂಚಿಸಿದ್ದಾರೆ. ಮುಂದಿನ ಮುಖ್ಯಮಂತ್ರಿ ನೇಮಕವಾಗುವ ವರೆಗೆ ಯಡಿಯೂರಪ್ಪ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ.
ಗುಜರಾತ್, ಗೋವಾ, ಅಸ್ಸಾಂ, ಮಧ್ಯಪ್ರದೇಶ ಮುಂತಾದ ಉತ್ತರಭಾರತದ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ರಾತ್ರಿ ಬೆಳಗಾಗುವುದರಲ್ಲಿ ಸಿಎಂಗಳನ್ನು ಬದಲಾಯಿಸಿದ, ಅನಿರೀಕ್ಷಿತ ವ್ಯಕ್ತಿಗಳನ್ನು ಸಿಎಂ ಕುರ್ಚಿಯಲ್ಲಿ ಕೂರಿಸಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ ಬಿಜೆಪಿ ವರಿಷ್ಠರು ಕರ್ನಾಟಕದ ವಿಷಯದಲ್ಲಿ ತಿಂಗಳುಗಳು ಉರುಳಿದರೂ ಪರ್ಯಾಯ ನಾಯಕರನ್ನು ಆರಿಸಲು ಸಾಧ್ಯವಾಗಿಲ್ಲ ಏಕೆ ಈಗ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಅಂದರೆ, ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಬಿಟ್ಟರೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವಂತಹ ಸಾಮರ್ಥ್ಯ ಇರುವ ಮತ್ತೊಬ್ಬ ನಾಯಕನಿಲ್ಲ ಎಂದು ಇದರರ್ಥವೇ? ಅಥವಾ ಬೇರೆಲ್ಲ ರಾಜ್ಯಗಳಲ್ಲಿ ಮನಸೋಇಚ್ಛೆ ರಾಜಕೀಯ ಆಟಗಳನ್ನು ಆಡಿದಂತೆ ಕರ್ನಾಟಕದಲ್ಲಿ ಆಡಲಾಗದು ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರವೇ?
ಒಟ್ಟಾರೆ ಇತರೆ ರಾಜ್ಯಗಳಲ್ಲಿ ಮಾಡಿದಂತೆ ಬಿಜೆಪಿಯ ವರಿಷ್ಠರು ಕರ್ನಾಟಕದ ವಿಷಯದಲ್ಲಿ; ನಾಯಕತ್ವ ಬದಲಾವಣೆ ವಿಷಯದಲ್ಲಿ ಮನಸೋಇಚ್ಛೆ ನಿರ್ಧಾರಗಳನ್ನು ಕೈಗೊಳ್ಳಲಾಗದು ಎಂಬುದನ್ನು ವರಿಷ್ಠರ ಈ ನಿಧಾನಗತಿಯ ಪ್ರತಿಕ್ರಿಯೆ ಸೂಚಿಸುತ್ತಿದೆಯೇ? ಅಥವಾ ಯಡಿಯೂರಪ್ಪ ವರ್ಚಸ್ಸು ಮತ್ತು ಅವರ ಬೆನ್ನಿಗೆ ನಿಂತಿರುವ ಪ್ರಭಾವಿ ಲಿಂಗಾಯತ ಸಮುದಾಯದ ಬಲ ವರಿಷ್ಠರನ್ನು ಕಟ್ಟಿಹಾಕಿದೆಯೇ?, ಯಡಿಯೂರಪ್ಪ ವರಿಷ್ಢರ ಮುಂದೆ ಮುಂದಿನ ಸಿಎಂ ಕುರಿತು ಇಟ್ಟಿರುವ ಷರತ್ತು ಭಾರತದ ರಾಜಕೀಯ ಚಾಣಾಕ್ಷರೆನಿಸಿಕೊಂಡವರಿಗೇ ಚಳ್ಳೆ ಹಣ್ಣು ತಿನ್ನಿಸುವ ಮಟ್ಟಿಗೆ ಕಠಿಣವಾಗಿದೆಯೇ? ಎಂಬ ವಿಷಯ ಕೂಡ ಚರ್ಚೆಯ ವಸ್ತುವಾಗಿದೆ.
ಆ ಹಿನ್ನೆಲೆಯಲ್ಲಿ ಕರ್ನಾಟಕದ ರಾಜಕಾರಣ ಎಂಬುದು ಉತ್ತರ ಭಾರತದ ಇತರ ರಾಜ್ಯಗಳ ರಾಜಕಾರಣದಂತೆ ಅಲ್ಲ ಎಂಬುದು ಇದೀಗ ಈ ಪ್ರಕರಣದಲ್ಲಿ ಕೂಡ ಮತ್ತೊಮ್ಮೆ ಸಾಬೀತಾಗಿದೆ.