ಆದಾಯ ಮೀರಿ ಆಸ್ತಿ ಗಳಿಸಿದ್ದ ಆರೋಪದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ಗೆ ರಾಜ್ಯ ಹೈಕೋರ್ಟ್ನಲ್ಲಿ ಕೊಂಚ ರಿಲೀಫ್ ಸಿಕ್ಕಿದೆ. ಪ್ರಕರಣ ಸಂಬಂಧ ಈ ಹಿಂದೆ ಸಿಬಿಐ ತನಿಖೆಗೆ ಆದೇಶಿಸಿದ್ದ ಬಿಜೆಪಿ ಸರ್ಕಾರದ ಅನುಮತಿ ರದ್ದುಪಡಿಸಿತ್ತು. ರಾಜ್ಯ ಸರ್ಕಾರ ಹೈಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇದ್ದ ರಿಟ್ ಅರ್ಜಿ ಮತ್ತು ಈ ಸಂಬಂಧದ ಮೇಲ್ಮನವಿಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ರಿಟ್ ಅರ್ಜಿ ಮತ್ತು ಮೇಲ್ಮನವಿಯನ್ನು ಹಿಂಪಡೆಯುವುದಾಗಿಯೂ ಡಿ.ಕೆ ಶಿವಕುಮಾರ್ ಪರ ವಕೀಲರು ನ್ಯಾಯಪೀಠಕ್ಕೆ ಲಿಖಿತ ಮೆಮೊ ಸಲ್ಲಿಸಿದ್ದಾರೆ. ಮೆಮೊ ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿ ಹಿಂಪಡೆಯುವ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದೆ. ಇದೇ ವೇಳೆ ಸಿಬಿಐ ಅನುಮತಿ ಹಿಂಪಡೆದ ಸಚಿವ ಸಂಪುಟದ ನಿರ್ಧಾರವನ್ನು ಯಾರೂ ಬೇಕಾದರೂ ಕೋರ್ಟ್ನಲ್ಲಿ ಪ್ರಶ್ನಿಸಲು ಮುಕ್ತ ಅವಕಾಶ ಇದೆ ಎಂದಿದೆ.
ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ ಗೃಹ ಸಚಿವರು..!
ರಾಜ್ಯ ಹೈಕೋರ್ಟ್ ಆದೇಶದ ಬಗ್ಗೆ ಮಾತನಾಡಿರುವ ಗೃಹ ಸಚಿವ ಡಾ ಜಿ. ಪರಮೇಶ್ವರ್, ಅದು ಒಳ್ಳೆದಲ್ವಾ..? ನಾವು ಅದನ್ನೇ ಬಯಸಿದ್ವಿ.. ಈ ಹಿಂದೆ ಬಿಜೆಪಿ ಸರ್ಕಾರ ತಪ್ಪು ಮಾಡಿದ್ದರು. ಸ್ಪೀಕರ್ ಅನುಮತಿ ಇಲ್ಲದೆ ಪ್ರಕರಣ ಸಿಬಿಐಗೆ ಕೊಟ್ಟಿದ್ರು ಅಂತ ಕೇಸ್ ವಾಪಸ್ ಪಡೆದಿದ್ವಿ. ಅದಕ್ಕೆ ಹೈಕೋರ್ಟ್ನಲ್ಲಿ ರಿಲೀಫ್ ಸಿಕ್ಕಿದೆ ಎಂದು ಹೇಳಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರ ವಿರುದ್ಧದ ಸಿಬಿಐ ವಿಚಾರಣೆ ವಾಪಸ್ ಪಡೆದಿರೋ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಹೈಕೋರ್ಟ್ ತೀರ್ಮಾನದ ಬಗ್ಗೆ ನಾನು ಏನನ್ನೂ ಹೇಳಲ್ಲ ಅಂದಿದ್ದಾರೆ. ನಾವೇನು ಡಿ.ಕೆ ಶಿವಕುಮಾರ್ ಅವರ ವಿರೋಧಿಗಳಲ್ಲ. ಹೀಗಾಗಿ ನಾನೇನು ಹೇಳೋದಿಕ್ಕೆ ಆಗಲ್ಲ ಅಂದಿದ್ದಾರೆ.
ಹೈಕೋರ್ಟ್ ನಿರ್ಧಾರ.. ಬಿಜೆಪಿ ನಾಯಕರು ಏನಂದ್ರು..?
ಡಿ.ಕೆ ಶಿವಕುಮಾರ್ ಕೇಸ್ ಹಿಂಪಡೆದಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಕೇಸ್ ವಾಪಸ್ ಪಡೆಯುವ ಸಂಪುಟ ತೀರ್ಮಾನವೇ ಕಾನೂನು ಬಾಹಿರ ಅಂದಿದ್ದಾರೆ.. ಏನೇ ಪ್ರಯತ್ನ ಮಾಡಿದ್ರು ಡಿ.ಕೆ ಶಿವಕುಮಾರ್ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅಂದಿದ್ದಾರೆ. ಇನ್ನು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡ ಸರ್ಕಾರದ ನಿರ್ಧಾರವನ್ನ ವಿರೋಧಿಸಿದ್ದಾರೆ. ಕಾಂಗ್ರೆಸ್ ಜನರ ಮುಂದೆ ಬಟ್ಟೆ ಬಿಚ್ಚಿ ನಿರ್ವಾಣ ನಿಂತಿರುವುದು ನಾಚಿಕೆಗೇಡಿನ ಸಂಗತಿ. ಸಿಬಿಐ ತನಿಖೆ ಶೇಕಡ 90 ರಷ್ಟು ಮುಗಿದಿದೆ. ಈ ಹಂತದಲ್ಲಿ ತನಗೆ ಶಿಕ್ಷೆಯಾಗುವುದು ಖಚಿತ ಅಂತ ಡಿ.ಕೆ ಶಿವಕುಮಾರ್ ಮನಗಂಡಿದ್ದರು. ಸರ್ಕಾರದ ಮೇಲೆ ಒತ್ತಡ ಹೇರಿ ಡಿ.ಕೆ ಶಿವಕುಮಾರ್ ಇದನ್ನು ಮಾಡಿಸಿದ್ದಾರೆ. ಸಿದ್ಧರಾಮಯ್ಯ ಕೂಡ ದುರುದ್ದೇಶಪೂರ್ವಕವಾಗಿ ಮಾಡಿದ್ದಾರೆ ಎಂದಿದ್ದಾರೆ.
![](https://pratidhvani.com/wp-content/uploads/2023/11/20s5u99g_-dk-shivakumared_625x300_19_September_22-1024x630.jpg)
ಪ್ರಶ್ನೆ ಮಾಡಲು ಅವಕಾಶ ಕೊಟ್ಟಿದೆ ಹೈಕೋರ್ಟ್..!
ಕರ್ನಾಟಕ ಹೈಕೋರ್ಟ್ ಸರ್ಕಾರದ ನಿರ್ಧಾರವನ್ನು ಒಪ್ಪಿಕೊಂಡಿದೆ. ಜೊತೆಗೆ ನ್ಯಾಯಪೀಠ ಮೇಲ್ಮನವಿ ವಿಲೇವಾರಿ ಮಾಡಿದೆ. ಅಲ್ಲೊಂದು ಅವಕಾಶದ ಕಿಂಡಿಯನ್ನೂ ಕೋರ್ಟ್ ಬಿಟ್ಟಿದೆ. ಯಾರಾದರೂ ಹೈಕೋರ್ಟ್ನಲ್ಲಿ ಸರ್ಕಾರದ ನಿರ್ಧಾರವನ್ನು ಪ್ರಶ್ನೆ ಮಾಡಬಹುದು. ಆಗ ಮತ್ತೆ ಹೈಕೋರ್ಟ್ ವಿಚಾರಣೆ ನಡೆಸಲಿದ್ದು, ಸರ್ಕಾರದ ನಿರ್ಧಾರ ಸರಿಯೋ ತಪ್ಪೋ ಎಂದು ವಿಶ್ಲೇಷಣೆ ಮಾಡಲಿದೆ. ಜೊತೆಗೆ ಸಿಬಿಐ ಕೂಡ ಮೇಲ್ಮನವಿ ಸಲ್ಲಿಸಲು ಅವಕಾಶ ಕೊಟ್ಟಿದೆ. ಆದರೆ ಈಗ ಸರ್ಕಾರದ ನಿರ್ಧಾರ ಪ್ರಶ್ನೆ ಮಾಡೋದು ಯಾರು..? ಕಾಂಗ್ರೆಸ್ನ ಡಿ.ಕೆ ಶಿವಕುಮಾರ್ ನಮ್ಮ ವಿರೋಧಿ ಅಲ್ಲ ಎಂದಿರುವ ಯಡಿಯೂರಪ್ಪ ಮುಂದಾಳತ್ವದ ಬಿಜೆಪಿ ಕೋರ್ಟ್ ಮೊರೆ ಹೋಗುತ್ತಾ..? ಅಥವಾ ಕಾಂಗ್ರೆಸ್ ನಾಯಕರನ್ನು ಕಟುವಾಗಿ ಟೀಕಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗಾಗಲೇ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ಮತ್ತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡ್ತಾರಾ..? ಅಥವಾ ಸುಮ್ಮನಾಗ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.