ಪಂಚರಾಜ್ಯ ಚುನಾವಣೆಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ಗೆ ಕೇರಳ ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಗಮನಾರ್ಹ ಸಾಧನೆ ಕಾಣಿಸಲಿಲ್ಲ. ಇದೇ ವೇಳೆ ತಮಿಳುನಾಡು ಚುನಾವಣೆಯ ಹಿನ್ನೆಲೆ ಅಚ್ಚರಿಯ ವಿಚಾರವೊಂದು ಹೊರಬಂದಿದ್ದು, ರಾಹುಲ್ ಗಾಂಧಿ ನೀಡಿದ್ದ ಸಲಹೆಯನ್ನು ಅನುಸರಿಸದದ್ದೇ ಕಾಂಗ್ರೆಸ್ನ ದುರ್ಬಲ ಪ್ರದರ್ಶನಕ್ಕೆ ಕಾರಣವೇ ಎಂಬ ಚರ್ಚೆ ಇದೀಗ ತೀವ್ರಗೊಂಡಿದೆ.
ಹಿರಿಯ ನಾಯಕರ ಮಾತಿಗೆ ಮನ್ನಣೆ ನೀಡಿ ರಾಹುಲ್ ಗಾಂಧಿ ಮೌನವಾಗಿದ್ದೇ ತಮಿಳುನಾಡಿನಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗಿತ್ತೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಗೆ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಜೊತೆ ಮೈತ್ರಿ ಮಾಡಿಕೊಳ್ಳುವಂತೆ ರಾಹುಲ್ ಗಾಂಧಿ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಈ ಪ್ರಸ್ತಾವನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹಿರಿಯ ನಾಯಕ P. Chidambaram ಒಪ್ಪಿಗೆ ನೀಡಲಿಲ್ಲ. ಬದಲಾಗಿ ಡಿಎಂಕೆ ಜೊತೆ ಕೈಜೋಡಿಸುವುದೇ ಉತ್ತಮ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಹಿರಿಯರ ಸಲಹೆಗೆ ಮೌಲ್ಯ ನೀಡಿ ರಾಹುಲ್ ಗಾಂಧಿ ಕೂಡ ಮೌನವಾಗಿದ್ದರು ಎನ್ನಲಾಗಿದೆ. ಈ ನಿರ್ಧಾರವೇ ಕಾಂಗ್ರೆಸ್ಗೆ ಹಿನ್ನಡೆಯಾಗಿ ಪರಿಣಮಿಸಿದೆ ಎಂಬ ಚರ್ಚೆ ಪಕ್ಷದೊಳಗೇ ನಡೆಯುತ್ತಿದೆ.

234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 118 ಸ್ಥಾನಗಳ ಅವಶ್ಯಕತೆ ಇದೆ. ವಿಜಯ್ ನೇತೃತ್ವದ ಟಿವಿಕೆ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದ್ದರೂ ಬಹುಮತಕ್ಕೆ ಕೆಲವು ಸ್ಥಾನಗಳ ಕೊರತೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಚುನಾವಣಾ ಫಲಿತಾಂಶ ಭಾರೀ ಕುತೂಹಲ ಮೂಡಿಸಿದ್ದು, ಸರ್ಕಾರ ರಚನೆಗಾಗಿ ವಿಜಯ್ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಯೂ ಎದ್ದಿದೆ.
ಇದರ ನಡುವೆ ಕಾಂಗ್ರೆಸ್ ಮತ್ತು ಟಿವಿಕೆ ನಡುವೆ ಮಾತುಕತೆ ನಡೆದಿರುವ ಸುಳಿವುಗಳು ದೊರೆತಿವೆ. ಈ ಮೈತ್ರಿಗೆ ವಿಜಯ್ ಅವರ ತಂದೆಯೂ ಬೆಂಬಲ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.






