ಶಿವಮೊಗ್ಗ:ಮಾ.15: ಶಿವಮೊಗ್ಗದ ಸರ್ಜಿ ಫೌಂಡೇಶನ್, ಉತ್ತಿಷ್ಠ ಭಾರತ ಮಲೆನಾಡು ಮತ್ತು ಸಿಹಿಮೊಗೆ ಕ್ರಿಕೆಟ್ ಅಕಾಡೆಮಿ ಹಾಗೂ ಪರಿಸರಾಸಕ್ತರು ಒಡಗೂಡಿ ಬಿದರೆ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಎದುರು ಶ್ರೀ ಸಾಯಿಬಾಬಾ ಮಂದಿರ ಬಳಿ ನೂತನ ಕೆರೆ ನಿರ್ಮಿಸಿದ್ದಾರೆ. ಬಿಸಿಲ ಬೇಗೆಗೆ ಪ್ರಾಣಿ, ಪಕ್ಷಿಗಳ ನೀರಡಿಕೆ ನೀಗಲು ಹಾಗೂ ಜಲಸಂವರ್ಧನೆ ಆಶಯದಿಂದ ಈ ಪರಿಸರಾಸಕ್ತರು ನೀರಿನ ಚಿಲುಮೆ ಹರಿಸಿದ್ದಾರೆ.
ಸರ್ಜಿ ಫೌಂಡೇಶನ್ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ, ಶಿವಮೊಗ್ಗಕ್ಕೆ ಪರಿಸರ ಪ್ರೇಮಿಗಳು, ಪರೋಪಕಾರಂ, ಪರ್ಯಾವರಣ ಟ್ರಸ್ಟ್ ಕಾರ್ಯವನ್ನ ಶಿವಮೊಗ್ಗ ಜನ ಶ್ಲಾಘಿಸಿದ್ದಾರೆ. ಈ ಸಾಮಾಜಿಕ ಕಾರ್ಯದ ಬಗ್ಗೆ ಮಾತನಾಡಿದ ಸರ್ಜಿ ಫೌಂಡೆಶನ್ ನ ಡಾ. ಧನಂಜಯ ಸರ್ಜಿ, ಪುಷ್ಕರಣಿ, ಕೆರೆ-ಕಟ್ಟೆಗಳ ನಿರ್ಮಾಣ ಈ ಹೊತ್ತಿಗೆ ಅವಶ್ಯ ಕಾರ್ಯ ಎಂದರು.
ಮನುಷ್ಯ ಬಾಳಬೇಕಾದರೆ ಪರಿಸರವನ್ನು ಉಳಿಸುವುದು ತುಂಬಾ ಅಗತ್ಯವಿದೆ. ನೀರಿನ ಸಂಗ್ರಹಣೆ ತುಂಬಾ ಅಗತ್ಯವಿದೆ. ಭಗವಂತನ ಸೃಷ್ಟಿ ಇದು, ಕರ್ನಾಟಕ ನೀರಿನ ಲೆವೆಲ್ 4 ರಿಂದ 5 ಮೀಟರ್ಗೆ ಬಂದಿದೆ, ಸುಮಾರು 4 ಸಾವಿರ ಬಿಲಿಯನ್ ಕ್ಯೂಬಿಕ್ ಮೀಟರ್ ಮಳೆಯಿಂದ ಲಭ್ಯವಾಗುತ್ತದೆ. ಈ ಪೈಕಿ ಮೂರನೇ ಒಂದು ಭಾಗದಷ್ಟು ನೀರು ವಿವಿಧ ಕೆರೆ, ಕಟ್ಟೆ, ಜಲಾಶಯ ಸೇರಿದಂತೆ ನೀರು ಸಂಗ್ರಹವಾಗುತ್ತದೆ. ಉಳಿದೆಲ್ಲಾ ನೀರು ಸಮುದ್ರದ ಪಾಲು ಆಗುತ್ತದೆ. ಭೂಮಿಯು ನೀರನ್ನು ಹೀರಿಕೊಂಡಷ್ಟು ನೀರಿನ ಸೆಲೆ ಹೆಚ್ಚಾಗುತ್ತ ಹೋಗುತ್ತದೆ. ಇಲ್ಲವಾದರೆ ಭೂಕುಸಿತ, ಭೂಕಂಪ ಸೇರಿದಂತೆ ಪ್ರಕೃತಿ ವಿಕೋಪಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ನೀರಿನ ಸಂಗ್ರಹ ಮತ್ತು ನೀರನ್ನು ಉಳಿಸುವಲ್ಲಿ ಕೆರೆ ಕಟ್ಟೆಗಳು ಅಭಿವೃದ್ಧಿ ಅತಿ ಮುಖ್ಯ. ಒಟ್ಟು ನೀರಿನ ಪ್ರಮಾಣದಲ್ಲಿ ಶೇ.70 ರಷ್ಟು ಕೃಷಿಗೆ ಬಳಕೆಯಾದರೆ, ಶೇ.8 ರಿಂದ 9 ರಷ್ಟು ನೀರು ಗೃಹ ಬಳಕೆ ಇತ್ಯಾದಿಗೆ ಹೋಗುತ್ತದೆ. 2 ರಷ್ಟು ಕೈಗಾರಿಕೆಗಳಿಗೆ ಹೋಗುತ್ತದೆ, ಇತ್ತೀಚಿನ ಎರಡು ವರ್ಷಗಳಲ್ಲಿ ಮಳೆ ಪ್ರಮಾಣ ಇಳಿಕೆ ಆಗಿತ್ತು, ಮಳೆ ಹೆಚ್ಚಾದ್ದರಿಂದ ಶೇ. 14 ರಿಂದ 15 ರಷ್ಟು ಏರಿಕೆ ಕಂಡಿದೆ. ಕೆರೆ -ಕಟ್ಟೆಗಳ ನಿರ್ಮಾಣದಂತಹ ಕೆಲಸಗಳು ನಮಗೆ ಪೂರಕವಾಗುತ್ತವೆ. ಇಲ್ಲದಿದ್ದರೆ ಕುಡಿಯಲಿಕ್ಕೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಮಳೆ ನೀರನ್ನು ಉಳಿಸಬೇಕಾದರೆ ಕೆರೆ ಕಟ್ಟೆಗಳ ಜೀರ್ಣೋದ್ಧಾರ ಅತೀ ಅವಶ್ಯ ಎಂದು ಅಭಿಪ್ರಾಯಪಟ್ಟರು.
ಶಿವಮೊಗ್ಗ ಬಿದರೆ ಗ್ರಾಮದ ಸಾಯಿಬಾಬ ಮಂದಿರದ ಎದುರು, ಒಂದು ಪುಷ್ಕರಣಿಯಂತಹ ಕೆರೆ ( ಕಲ್ಯಾಣಿ) ಮಾಡಿದ್ದೇವೆ. ಸುಮಾರು ನೂರು ಅಡಿ ಉದ್ದ, ನೂರೈವತ್ತು ಅಡಿ ಅಗಲ ಹಾಗೂ ಹದಿನೈದು ಅಡಿ ಆಳದ ಈ ಕೆರೆ ಹತ್ತೇ ದಿನದಲ್ಲಿ ಸಿದ್ಧವಾಗಿದೆ. ಶಿವಮೊಗ್ಗ ನಗರಾಭಿವೃದ್ಧಿ ಮಂಡಳಿಯೇ ಅನುಮತಿ ನೀಡಿ ಪಾಳು ಬಿದ್ದಿದ್ದ ಜಾಗದಲ್ಲಿ ನೀರಿನ ಸೆಲೆ ಮೂಡಿದೆ. ಬಹಳ ಮುಖ್ಯವಾಗಿ ಪುಷಕರಣಿ ಯಾಕೆ ಬೇಕು, ಕೆರೆ-ಕಟ್ಟೆಗಳೇಕೆ ಇರಬೇಕು ಎಂಬುದಕ್ಕೆ ವೈಜ್ಞಾನಿಕ ಕಾರಣಗಳಿವೆ. ಮಳೆ ನೀರಿನ ಇಂಗುಗುಂಡಿಗಳಂತೆ ಈ ಜಲಮೂಲಗಳು ಕೆಲಸ ಮಾಡುತ್ತವೆ. ಬಿದ್ದ ಮಳೆ ಸಮುದ್ರ ಸೇರುವುದನ್ನ ತಡೆಯಲು ಇವು ಅವಶ್ಯ. ಈ ತರಹದ ಕೆಲಸಗಳನ್ನ ಮಾಡುವುದರಿಂದ ಮಣ್ಣು ನೀರನ್ನ ಹಿಡಿದಿಟ್ಟುಕೊಳ್ಳುವ ಮೂಲಕ ಸಾಂದ್ರತೆ ಹೆಚ್ಚುತ್ತೆ. ಭೂಮಿ ಕುಸಿತ ತಡೆಯಬಹುದು. ಸಹಜವಾಗಿ ಅಂತರ್ಜಲ ಮಟ್ಟ ಕೂಡ ಹೆಚ್ಚುತ್ತೆ. ಕೆರೆ, ಪುಷ್ಕರಣಿ ಹಿಂದಿನ ಕಾಲದಲ್ಲಿ ನಿರ್ಮಾಣ ಮಾಡುತ್ತಿದ್ದದ್ದೇ ಇಂತಹ ವೈಜ್ಞಾನಿಕ ಕಾರಣಗಳಿಂದ. ಹಾಗಾಗಿ ಬಿದ್ದ ಮಳೆ ನೀರನ್ನ ಹಿಡಿದಿಡುವುದು ಮಹತ್ಕಾರ್ಯ. ಜಲಮೂಲಗಳ ರಕ್ಷಣೆ ಪ್ರಾಣಿ-ಪಕ್ಷಿಗಳ ನೀರಡಿಕೆ ನೀಗಲೂ ಕೂಡ ಅನುವಾಗುತ್ತೆ. ಈ ವರ್ಷದ ಬೇಸಿಗೆ ತಾಪ ಹೆಚ್ಚಿದೆ. ದೇವರ ದಯೆ ಯಿಂದ ಪುಷ್ಕರಣಿ ಹತ್ತೇ ದಿನದಲ್ಲಿ ಸಿದ್ಧವಾಗಿ ನೀರು ಜಿನುಗುತ್ತಿದೆ ಎಂದು ಡಾ.ಸರ್ಜಿ ಹೇಳಿದರು.