ಹಾವೇರಿ : ಬಿಜೆಪಿ ವಿಧಾನಪರಿಷತ್ ಸದಸ್ಯ ಆರ್.ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವಿಚಾರವಾಗಿ ಇಂದು ರಾಣೆಬೆನ್ನೂರಿನಲ್ಲಿ ಸುದ್ದಿಗೋಷ್ಠಿ ನಡೆಸುವ ಮೂಲಕ ಆರ್.ಶಂಕರ್ ಸ್ಪಷ್ಟನೆ ನೀಡಿದ್ದಾರೆ. ಕಾನೂನು ಪರೀಕ್ಷೆ ಮಾಡಲಿ ನನಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಏಕಾಏಕಿ ಮಾಡಿದ್ದಾರೆ ಎಂದು ಹೇಳಿದರು.
ನಾನು ರಾಣೆಬೆನ್ನೂರಿಗೆ ಕಾಲಿಟ್ಟಾಗಿನಿಂದಲೂ ದಾನ -ಧರ್ಮ ಮಾಡುತ್ತಲೇ ಬಂದಿದ್ದೇನೆ. ಚುನಾವಣೆ ಇದೆ ಅಂತಾ ನಾನು ಈ ರೀತಿ ದಾನ ಮಾಡುತ್ತಿಲ್ಲ. ನನ್ನ ಆದಾಯದ ಒಂದು ಭಾಗವನ್ನು ನಾನು ಎಂದಿಗೂ ದಾನ ಧರ್ಮಕ್ಕೆ ಇಟ್ಟಿದ್ದೇನೆ. ಆದರೆ ಇಲ್ಲಿ ಹಗಲು ದರೋಡೆ ನಡೀತಾ ಇದೆ. ಆದರೆ ಅವೆಲ್ಲವನ್ನು ಬಿಟ್ಟು ಆರ್.ಶಂಕರ್ರನ್ನು ಟಾರ್ಗೆಟ್ ಮಾಡಲಾಗಿದೆ. ನಾನು ಬೆಳೆಯಲು ಬಾರದು ಎಂಬ ಉದ್ದೇಶ ಇರಬಹುದು ಎಂದು ಗುಡುಗಿದ್ದಾರೆ.
ನಾನು ಈ ಹಿಂದೆಯೂ ಮಕ್ಕಳಿಗೆ ಸ್ಕೂಲ್ ಬ್ಯಾಗ್ ನೀಡಿದ್ದೇನೆ. ಇಲ್ಲಿ ತಾಲೂಕಿನ ಮಕ್ಕಳಿಗಾಗಿ ಶಾಲೆ ಆರಂಭಿಸಬೇಕು ಎಂಧುಕೊಂಡೆ. ಆದರೆ ಅದು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಕೊಡೋಣ ಎಂದು ನಿರ್ಧರಿಸಿದೆ. ನನ್ನ ಆಸ್ತಿ ಮಾರಿ ನಾನು ದಾನ ಧರ್ಮ ಮಾಡುತ್ತಿದ್ದೇನೆ. ನಾನೇನು ಕೊಳ್ಳೆ ಹೊಡೆದಿರುವ ದುಡ್ಡಿನಲ್ಲಿ ಇದನೆಲ್ಲ ಮಾಡುತ್ತಿದ್ದೇನಾ..? ನನ್ನ ಬಳಿ ಎಲ್ಲದಕ್ಕೂ ಬಿಲ್ ಇದೆ, ದಾಖಲೆ ಕೂಡ ಇದೆ, ಬಿಲ್ ನೋಡಿ ಸುಮ್ಮನೇ ಬಿಡಬೇಕು. ಆದರೆ ಇವರು ರಾತ್ರಿ ಅವುಗಳನ್ನು ಸೀಜ್ ಮಾಡುತ್ತೇನೆ ಎಂದು ಹೇಳಿದರು. ನಾನು ಎರಡ್ಮೂರು ದಿನಗಳಲ್ಲಿ ಎಲ್ಲದಕ್ಕೂ ದಾಖಲೆ ನೀಡುತ್ತೇನೆ ಎಂದು ಹೇಳಿದ್ದಾರೆ.
19ರಂದು ನಾನು ಎಲ್ಲರಿಗೂ ಔತಣಕೂಟ ಆಯೋಜಿಸಿದ್ದೇನೆ. ನೋವಿನ ನಡುವೆಯೇ ನನ್ನ ಜೊತೆ ಇರುವ ಜನರಿಗಾಗಿ ನಾನು ಔತಣ ಏರ್ಪಡಿಸಿದ್ದೇನೆ . ನಾನು ಕೊಡುವ ಸೀರೆ, ಬ್ಯಾಗುಗಳ ಮೇಲೆ ನಾನು ಯಾವುದಾದರೂ ಪಕ್ಷದ ಚಿಹ್ನೆ ಹಾಕಿದ್ದೇನಾ..? ಕಣ್ಣು ಕಿವಿ ಇಲ್ಲದೇ ಇರುವವರು ಬಂದರೆ ನಾನಾದರೂ ಏನು ಮಾಡಲು ಸಾಧ್ಯ..? ಬಿಲ್ ತೋರಿಸಲು ಒಂದು ವಾರ ಸಮಯಾವಕಾಶ ಕೇಳಿದ್ದೇನೆ ಎಂದು ಹೇಳಿದರು.