ಬೆಂಗಳೂರು : ಮೇ.೨೯: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮರುದಿನವೇ ಐದು ಗ್ಯಾರಂಟಿಗಳನ್ನ ಜಾರಿ ಮಾಡುತ್ತೇವೆ ಎಂದು ಹೇಳಿ ಇದುವೆರಗೂ ಜಾರಿ ಮಾಡಿಲ್ಲ ಎಂದು ಬಿಜೆಪಿ ಕಿಡಿಕಾರಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಕಾಂಗ್ರೆಸ್ ಸರ್ಕಾರ ಮೀನಮೇಷ ಎಣಿಸುತ್ತಿರುವುದರ ಪರಿಣಾಮವಾಗಿ ರಾಜ್ಯದ ಸ್ವಾಸ್ಥ್ಯ ಸಂಪೂರ್ಣವಾಗಿ ಹದಗೆಡುತ್ತಿದೆ. ಗ್ಯಾರಂಟಿಗಳಿಗಾಗಿ ಜನಸಾಮಾನ್ಯರು ಮತ್ತು ಅಧಿಕಾರಿ ವರ್ಗದ ನಡುವೆ ರಾಜ್ಯದಲ್ಲಿ ಗಲಾಟೆಗಳು-ಸಂಘರ್ಷಗಳು ದಿನನಿತ್ಯ ವರದಿಯಾಗುತ್ತಲೇ ಇವೆ ಎಂದು ಬಿಜೆಪಿ ಟ್ವೀಟ್ ಹೇಳಿದೆ.
ಶಾಂತಿ-ಸಮೃದ್ಧಿಯ ನಾಡಾಗಿದ್ದ ಕರ್ನಾಟಕ ರಾಜ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಶಾಂತಿಯ ಬೀಡಾಗಿ, ಗೊಂದಲದ ಗೂಡಾಗಿ ಪರಿವರ್ತಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ೨೪ ಗಂಟೆಯೊಳಗೆ 5 ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು. ಇದರಲ್ಲಿ ಪ್ರಮುಖವಾಗಿ 200 ಯೂನಿಟ್ ಉಚಿತ ವಿದ್ಯುತ್ ಮತ್ತು ಸರ್ಕಾರಿ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ವಿಕ ಅನುಮೋದನೆ ನೀಡಿದ್ದಾರೆ. ಆದರೆ ಇನ್ನೂ ಅಧಿಕೃತವಾಗಿ ಆದೇಶ ಮಾಡಿಲ್ಲ. ಈ ಮಧ್ಯೆ ರಾಜ್ಯದಲ್ಲಿ ಉಚಿತ ಕರೆಂಟ್ ಹಾಗೂ ಬಸ್ ಪ್ರಯಾಣಕ್ಕಾಗಿ ಗ್ಯಾರಂಟಿ ಗಲಾಟೆ ಆರಂಭವಾಗಿದ್ದು, ಗ್ರಾಹಕರ ಹಾಗೂ ಪ್ರಯಾಣಿಕರ ಮನವೊಲಿಸಲು ಬೆಸ್ಕಾಂ ಮತ್ತು ಕೆಎಸ್ಆರ್ಟಿಸಿ ಸಿಬ್ಬಂದಿ ಹೈರಾಣಾಗಿ ಹೋಗಿದ್ದಾರೆ.