ದೇಶದಲ್ಲಿನ ಜಾತಿ ವ್ಯವಸ್ಥೆಗೆ ಇತಿಹಾಸವಿದ್ದು, ಪ್ರಸ್ತುತದಲ್ಲಿಯೂ ಮುಂದುವರೆಯುತ್ತಿದೆ. ಅಸಮಾನತೆ ಹೋಗಲಾಡಿಸಲು ಮೀಸಲಾತಿ ವ್ಯವಸ್ಥೆ ಭರವಸೆಯ ಬೆಳಕಿದ್ದಂತೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಲಾ ಏಷ್ಯಾದ 36ನೇ ಸಮಾವೇಶದ ಭಾಷಣದಲ್ಲಿ ಮಾತನಾಡಿ, ಪ್ರಸ್ತುತದ ದಿನಗಳಲ್ಲಿಯೂ ಜಾತಿ ವ್ಯವಸ್ಥೆ ಮುಂದುವರೆಯುತ್ತಿದೆ. ಸಮಾಜದಲ್ಲಿನ ಅಸಮಾನತೆಗಳನ್ನು ಹೋಗಲಾಡಿಸಲು ದೃಢ ನಿರ್ಧಾರಗಳು ಹಾಗೂ ಮೀಸಲಾತಿ ವ್ಯವಸ್ಥೆ ಭರವಸೆಯ ಬೆಳಕಾಗಿದೆ ಎಂದು ಸಿಜೆಐ ಚಂದ್ರಚೂಡ್ ಹೇಳಿದರು.
ಅಸಮಾನತೆಯನ್ನು ಶಾಶ್ವತವಾಗಿ ಕಾನೂನಿನ ಅಂತರ್ಗತ ಸಂಕೀರ್ಣತೆಗಳಾಗಿ ಒಪ್ಪಿಕೊಳ್ಳಬೇಕಾಗಿದೆ. ಕಾನೂನಿನಲ್ಲಿ ಅಂತರ್ಗತವಾಗಿರುವ ಕೆಲವು ಸಂಕೀರ್ಣ ವ್ಯವಸ್ಥೆಗಳು ಸಮಾಜವನ್ನು ವಿಭಜನೆಗೊಳಿಸುತ್ತಿವೆ. ಈ ವಿಚಾರದಲ್ಲಿ ನಮ್ಮ ದೃಷ್ಟಿಕೋನವನ್ನು ವಿಸ್ತರಣೆ ಮಾಡಬೇಕು. ಸಾರ್ವಭೌಮತ್ವದ ಕಲ್ಪನೆಯ ಮಧ್ಯದಲ್ಲಿ ಬಹುತ್ವ ಒಳಗೊಂಡಿರುವಂತೆ ಮಾಡಬೇಕಾಗಿದೆ. ಸಕಾರಾತ್ಮಕ ಕಾರ್ಯವು ಪರಿವರ್ತನೆಯಿಂದ ಹೊರ ಬರುತ್ತದೆ. ಇದು ಹಳೆ ಜಾತಿಯ ಅಸಮಾನತೆಗಳನ್ನು ಹೋಗಲಾಡಿಸುವ ಭರವಸೆಯ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.
ಸೈದ್ಧಾಂತಿಕ ವಿಚಾರದಲ್ಲಿ ಜ್ಞಾನ ಎಂಬುದು ತಟಸ್ಥವಾಗಿರುವ ನಿಂತ ನೀರಲ್ಲ. ಅಧಿಕಾರದ ಆಧಾರದಲ್ಲಿ ಬದಲಾಗುತ್ತಿರುತ್ತದೆ. ಜತೆಗೆ, ನಮ್ಮದೇ ಸ್ವಾತಂತ್ರ್ಯವು ರೂಪಾಂತರಗೊಂಡು ಬದಲಾಗುತ್ತಿರುತ್ತದೆ. ಸಮಾಜದ ಆಧಾರವಾಗಿರುವ ವ್ಯವಸ್ಥಿತ ತಾರತಮ್ಯ ತೊಡೆದುಹಾಕಲು ವಿಭಿನ್ನ ಗುರುತುಗಳಿರುತ್ತವೆ. ಉದಾಹರಣೆಗೆ, ಅಂಗವಿಕಲರು ಅರ್ಹತೆಗಳನ್ನು ಗುರುತಿಸಲು ಪ್ರಮಾಣಪತ್ರ ಪಡೆಯಲು ಸೂಚಿಸಲಾಗುತ್ತಿದ್ದು, ಈ ರೀತಿಯಲ್ಲಿ ಸೂಚನೆ ಮಾನದಂಡಗಳನ್ನು ರೂಪಿಸಲು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇದರಿಂದಾಗಿ ಅವರಿಗೆ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ ಎದುರಾಗುತ್ತಿದೆ. ಇಂತಹ ವಿಚಾರಗಳಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೂ ಮುನ್ನ ಅಂಗವಿಕಲರಿಗೆ ರಕ್ಷಣೆ ನೀಡುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ನಾನು ಕನ್ನಡಕ ಹಾಕಿಕೊಳ್ಳುತ್ತೇನೆ. ಆದರೆ ನನ್ನನ್ನು ಅಂಗವಿಕಲ ಎಂದು ಪರಿಗಣಿಸಲು ಆಗುವುದಿಲ್ಲ. ನನ್ನಂತಹ ಜನರು ಯಾವುದು ಅವಕಾಶದಿಂದ ವಂಚಿತರಾಗುವುದಿಲ್ಲ. ಆದರೆ ವ್ಯವಸ್ಥಿತ ಅಡೆತಡೆಗಳು ಮತ್ತು ಅಸಮಾನತೆಗಳನ್ನು ತೊಡೆದುಹಾಕುವುದು ಮತ್ತು ಸ್ವಾತಂತ್ರ್ಯವನ್ನು ನೆನಪಿಟ್ಟುಕೊಳ್ಳುವುದು ನಮ್ಮ ಕರ್ತವ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.