ಬೆಂಗಳೂರು : ನೂತನವಾಗಿ ಮುಖ್ಯಮಂತ್ರಿಯಾದ ಬಳಿಕ ಡಿಕೆ ಶಿವಕುಮಾರ್ ಇಂದು ಕನಕಪುರ ಕ್ಷೇತ್ರಕ್ಕೆ ತೆರಳಿದ್ದಾರೆ. ನಗರದಲ್ಲಿ ಪ್ರಯಾಣಿಕರಿಗೆ ಟ್ರಾಫಿಕ್ ಕಿರಿ ಕಿರಿ ತಪ್ಪಿಸುವ ನಿಟ್ಟಿನಲ್ಲಿ ಸಿಎಂ ಜನಸ್ನೇಹಿ ನಡೆಯನ್ನು ಅನುಸರಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಿಂದ ನೇರವಾಗಿ ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಕನಪುರ ರಸ್ತೆಯವರೆಗೆ ಮೆಟ್ರೋದಲ್ಲೇ ಪ್ರಯಾಣಿಸಿದ್ದಾರೆ. ನಗರದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಪಡೆದು ವಾಹನಸವಾರರಿಗೆ ತೊಂದರೆ ನೀಡುವುದು ಬೇಡ ಎಂಬ ಕಾರಣಕ್ಕೆ ಡಿಕೆ ಶಿವಕುಮಾರ್ ಮೆಟ್ರೋ ಮೊರೆಹೋಗಿದ್ದಾರೆ.
ಪ್ರಮುಖವಾಗಿ ಬೆಳಗ್ಗೆ 9.00 ಗಂಟೆಗೆ ವಿಧಾನಸೌಧದ ಎದುರಿನ ಮೆಟ್ರೋ ಸ್ಟೇಷನ್ ನಿಂದ ಕನಕಪುರ ರಸ್ತೆ ಕೊನೇ ಮೆಟ್ರೋ ಸ್ಟೇಷನ್ ವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸಿರುವ ಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ಮತ್ತು ಕನಕಪುರ ತಾಲೂಕಿನ ನಾನಾ ಕಡೆ ಜನರಿಗೆ ಕೃತಜ್ಞತೆ ಸಲ್ಲಿಸಲು ರಾತ್ರಿ 9.00 ರವರೆಗೆ ಕೃತಜ್ಞತೆ ಸಮರ್ಪಣಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಡಿಕೆ ಶಿವಕುಮಾರ್ ಸ್ವಾಗತಕ್ಕೆ ರಸ್ತೆಯುದ್ಧಕ್ಕೂ ಅಭಿಮಾನಿಗಳು ಹಾಗೂ ಬೆಂಬಲಿಗರು ಸಿದ್ಧವಾಗಿದ್ದಾರೆ. ಡಿಕೆ ಶಿವಕುಮಾರ್ ಜೊತೆ ಸಹೋದರ ಹಾಗೂ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಸಹ ಪ್ರಯಾಣ ಬೆಳೆಸಿದ್ದಾರೆ.
ಮೆಟ್ರೋ ಪ್ರಯಾಣದ ವೇಳೆ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಪ್ರಯಾಣಿಕರು ಕೈ ಕುಲುಕಿ, ಸಮಸ್ಯೆಗಳ ಜೊತೆ ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಅಲ್ಲದೆ ನೂತನವಾಗಿ ಮುಖ್ಯಮಂತ್ರಿಯಾಗಿರುವುದಕ್ಕೆ ಅವರಿಗೆ ಶುಭಹಾರೈಸಿದ್ದಾರೆ. ಇದಕ್ಕೆ ನಗು ನಗುತ್ತಲೇ ಸಿಎಂ ಧನ್ಯವಾದಗಳನ್ನು ತಿಳಿಸಿದ್ದಾರೆ.






