ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಪಂಜಾಬ್ನಲ್ಲಿ ಮಾತ್ರ 4 ಸಾವು ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಶುಕ್ರವಾರ ಸಂಸತ್ತಿಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರಗಳು ಕಳಿಸಿದ ವರದಿ ಆಧಾರದಲ್ಲಿ ಆರೋಗ್ಯ ಸಚಿವರು ಹೀಗೆ ಉತ್ತರಿಸಿದ್ದಾರೆ. ಅಂದರೆ ನಮ್ಮ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ವರದಿ ಕಳಿಸುವಾಗ, ವೈದ್ಯಕೀಯ ಸೌಲಭ್ಯದ ಕೊರತೆ ಅಥವಾ ಚಿಕಿತ್ಸೆಯ ವ್ಯತ್ಯಯದಿಂದಾಗಿ ಒಂದೂ ಕೋವಿಡ್ ಸಾವು ಸಂಭವಿಸಿಲ್ಲ ಎಂದು ತಿಳಿಸಿರಬೇಕು.. ಈ ಸುಳ್ಳನ್ನೇ ಕೇಂದ್ರ ನಂಬಿದೆ. ಅಥವಾ ರಾಜ್ಯ ಸರ್ಕಾರ ಕೇಂದ್ರಕ್ಕೆ ವಿವರವನ್ನೇ ನೀಡದೇ ಕಳ್ಳಾಟ ಆಡಿದೆ.
ಕರ್ನಾಟಕದಲ್ಲಿ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ವೈದ್ಯಕೀಯ ವ್ಯವಸ್ಥೆಯ ಕೊರತೆಯಿಂದಾಗಿ, ಆಸ್ಪತ್ರೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣದಿಂದಾಗಿ ಸಾವಿರಾರು ಕೋವಿಡ್ ರೋಗಿಗಳು ಅಸು ನೀಗಿದ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.
ಎಲ್ಲಕ್ಕಿಂತ ಮುಖ್ಯವಾಗಿ ಚಾಮರಾಜನಗರದ ಕೋವಿಡ್ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕ ಕೊರತೆಯಿಂದ 24 ಕೋವಿಡ್ ರೋಗಿಗಳು ಸಾವಿಗೀಡಾದ ದುರಂತ ದೇಶಾದ್ಯಂತ ಸುದ್ದಿಯಾಗಿತ್ತು.

ನ್ಯೂಸ್ 18 ಪ್ರಕಾರ, ಸಾವನ್ನಪ್ಪಿದ ಎಲ್ಲಾ ರೋಗಿಗಳು ಆಮ್ಲಜನಕದ ಸಪೋರ್ಟ್ನಲ್ಲಿದ್ದರು.ಎರಡನೇ ಅಲೆಯ ಸಮಯದಲ್ಲಿ ಕೇಂದ್ರವು ನಿಜವಾದ ಸಾವಿನ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ ಎಂಬ ಪ್ರತಿಪಕ್ಷಗಳ ಹೇಳಿಕೆಗೆ ಮಾಂಡವಿಯಾ ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ.
ಜುಲೈ 26 ಮತ್ತು 30 ರ ನಡುವೆ ಕೇಂದ್ರವು ರಾಜ್ಯಗಳಿಗೆ ಮೂರು ಬಾರಿ ಪತ್ರ ಬರೆದು ಕೋವಿಡ್ -19 ಸಾವಿನ ಅಂಕಿಅಂಶಗಳನ್ನು ಕೋರಿತ್ತು ಎಂದು ಆರೋಗ್ಯ ಸಚಿವರು ಹೇಳಿದರು.
“ಆಗಸ್ಟ್ 21 ರಂದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು, ಉತ್ತರ ಪ್ರದೇಶ, ತೆಲಂಗಾಣ, ಒಡಿಶಾ, ಅಸ್ಸಾಂ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಪುದುಚೇರಿ, ಅರುಣಾಚಲ ಪ್ರದೇಶ, ಉತ್ತರಾಖಂಡ, ನಾಗಾಲ್ಯಾಂಡ್ , ಸಿಕ್ಕಿಂ, ತ್ರಿಪುರಾ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ನಮ್ಮ ಮನವಿಗೆ ಸ್ಪಂದಿಸಿದವು” ಎಂದಿದ್ದಾರೆ.
ನವೆಂಬರ್ 29 ರಂದು ರಾಜ್ಯಗಳಿಗೆ ಕೊನೆಯ ಇಮೇಲ್ ಕಳುಹಿಸಲಾಗಿದ್ದು, ಪಂಜಾಬ್ ಮತ್ತು ಅರುಣಾಚಲ ಪ್ರದೇಶಗಳು ಮಾತ್ರ ಪ್ರತಿಕ್ರಿಯಿಸಿವೆ ಎಂದು ಅವರು ಹೇಳಿದ್ದಾರೆ.
ಅಂದರೆ ಕರ್ನಾಟಕ ಸರ್ಕಾರವು ಎರಡೂ ಬಾರಿಯೂ ಅಂಕಿಅಂಶ ನೀಡಿಲ್ಲ. ಮೊದಲಿನಿಂದಲೂ ಕೋವಿಡ್ ಸಾವಿನ ಸಂಖ್ಯೆಗಳನ್ನು ಕಡಿಮೆ ತೋರಿಸುತ್ತ ಬಂದಿದ್ದ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಅಂಕಿಅಂಶ ಕಳಿಸದೇ ಇರುವುದು ಆಶ್ಚರ್ಯವೇನಲ್ಲ. ಕೇಂದ್ರ ಸರ್ಕಾರ ಕೂಡ ಕೊವಿಡ್ ಸಾವುಗಳ ಕುರಿತಂತೆ ತಪ್ಪಾದ ಅಂಕಿಅಂಶ ನೀಡುತ್ತ ಬಂದಿತ್ತಲ್ಲವೇ?
ಏಪ್ರಿಲ್-ಮೇನಲ್ಲಿ ಎರಡನೇ ತರಂಗದ ಸಮಯದಲ್ಲಿ, ರಾಜ್ಯಗಳಾದ್ಯಂತ ಹಲವಾರು ಆಸ್ಪತ್ರೆಗಳು ಆಮ್ಲಜನಕದ ಕೊರತೆಯಿಂದಾಗಿ ಸಾವುಗಳನ್ನು ವರದಿ ಮಾಡಿವೆ. ದೆಹಲಿಯಲ್ಲಿ, ಕನಿಷ್ಠ 12 ರೋಗಿಗಳು ಬಾತ್ರಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸಾವನ್ನಪ್ಪಿದ್ದಾರೆ. ಆಮ್ಲಜನಕದ ಕೊರತೆಯಿಂದ ಸಾವು ಸಂಭವಿಸಿದೆ ಎಂದು ಆಸ್ಪತ್ರೆ ಖಚಿತಪಡಿಸಿತ್ತು.
ಏಪ್ರಿಲ್ 23 ರಂದು, ರಾಜಧಾನಿಯ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ ನಿರ್ಣಾಯಕ ಆರೈಕೆಯಲ್ಲಿ ಕನಿಷ್ಠ 20 ರೋಗಿಗಳು ಸಾವನ್ನಪ್ಪಿದ್ದರು.
ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ, ಖಾಸಗಿ ಆಸ್ಪತ್ರೆಯೊಂದು ಮಾಕ್ ಡ್ರಿಲ್ನ (ಅಣಕು ಪ್ರದರ್ಶನ) ಭಾಗವಾಗಿ ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸಿದ ದಿನದಂದು ಹಲವಾರು ರೋಗಿಗಳು ಸಾವನ್ನಪ್ಪಿದ್ದರು. ಆಸ್ಪತ್ರೆಯ ಆಮ್ಲಜನಕದ ಪೂರೈಕೆ ಮುಗಿದರೆ ಯಾರು ಬದುಕುಳಿಯುತ್ತಾರೆ ಎಂಬುದನ್ನು ಪರಿಶೀಲಿಸಲು ಅಣಕು ಡ್ರಿಲ್ ಮಾಡಲಾಗಿದೆ ಎಂದು ಆಸ್ಪತ್ರೆಯ ಮಾಲೀಕರು ಹೇಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಚಾಮರಾಜನಗರದ ದುರಂತ
ಕರ್ನಾಟಕದ ಚಾಮರಾಜನಗರದಲ್ಲಿ, ಮೇ 2 ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ 24 ರೋಗಿಗಳು ಸಾವನ್ನಪ್ಪಿದ್ದಾರೆ, ಎಲ್ಲಾ ಸಾವುಗಳು ಆಮ್ಲಜನಕ ಕೊರತೆಯಿಂದ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಚಾಮರಾಜನಗರ ವೈದ್ಯಕೀಯ ಸಂಸ್ಥೆಯ ಭೋದನಾ ಆಸ್ಪತ್ರೆಯು ಆಮ್ಲಜನಕ ಪೂರೈಕೆ ಕೆಲಸ ಮಾಡುತಿತ್ತು. ಅದು ಪೂರೈಕೆಯಾ ವಿಧಾನವನ್ನು ವಿವರಿಸಿ ಬರೆದ ಪತ್ರದಲ್ಲಿ ʻಆಮ್ಲಜನಕ ಕೊರತೆಯಿಂದಾದ ಸಾವಿನ ಪ್ರಕರಣʼ ಎಂದೇ ಬರೆದಿದೆ.
ಜುಲೈನಲ್ಲಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ, ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಯಾವುದೇ ಸಾವುಗಳನ್ನು ರಾಜ್ಯಗಳು ನಿರ್ದಿಷ್ಟವಾಗಿ ವರದಿ ಮಾಡಿಲ್ಲ ಎಂದು ಕೇಂದ್ರವು ಹೇಳಿಕೊಂಡಿತ್ತು.

ಅದರ ನಿರಾಕರಣೆಗೆ ಟೀಕೆಗಳು ಬಂದ ನಂತರ, ಅದು ರಾಜ್ಯಗಳಿಂದ ಸಾವಿನ ಬಗ್ಗೆ ಡೇಟಾವನ್ನು ಕೇಳಿತ್ತು. ಕರ್ನಾಟಕದ ಚಾಮರಾಜನಗರ ಕೋವಿಡ್ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕ ಪೂರೈಕೆಯ ಕೊರತೆಯಿಂದ 24 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ʼಎಲ್ಲಾ ಸಾವುಗಳು ಆಮ್ಲಜನಕದ ಕೊರತೆಯಿಂದ ಸಂಭವಿಸಿಲ್ಲʼ ಎಂದು ಚಾಮರಾಜನಗರದ ಅಂದಿನ ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದ್ದರು. ಒಟ್ಟಿನಲ್ಲಿ ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿವೆ ಎಂಬುದನ್ನು ಅವರು ಒಪ್ಪಿಕೊಂಡಿದ್ದರು.

ಈ ಕುರಿತು ವರದಿ ನೀಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯ ಸಮಿತಿ ರಚಿಸಿತ್ತು. ಸಮಿತಿಯು ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿರುವುದನ್ನು ದೃಢಪಡಿಸಿತ್ತು.
ರಾಜ್ಯದ ಬೇರೆ ಭಾಗಗಳಲ್ಲೂ ಆಮ್ಲಜನಕ ಕೊರತೆ, ವೆಂಟಿಲೇಟರರ್ ಕೊರತೆ ಮತ್ತು ಆಸ್ಪತ್ರೆ, ಹಾಸಿಗೆಗಳ ಕೊರತೆಯಿಂದಾಗಿ ನೂರಾರು ಸಾವು ಸಂಭವಿಸಿದ ವರದಿಗಳಿವೆ. ಇದೆಲ್ಲವನ್ನೂ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ತಿಳಿಸದೇ ಇದ್ದುದು ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು. ಇಲ್ಲಿ ಸುಮೊಟೋ ಅಡಿ ಹೈಕೋರ್ಟ್ ಪ್ರಕರಣ ದಾಖಲಿಸಲೂ ಅವಕಾಶವಿದೆ.
ಈ ಕುರಿತು ʼಪ್ರತಿಧ್ವನಿʼಯೊಂದಿಗೆ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್ ದ್ವಾರಕಾನಾಥ್, ʼ ಸುಳ್ಳೇ ಬಿಜೆಪಿಯ ಮನೆದೇವ್ರು. ಯಾವ ಅಂಕಿಅಂಶವನ್ನು ಅವರು ಸರಿಯಾಗಿ ಕೊಟ್ಟಿದ್ದಾರೆ ಹೇಳಿ. ಪ್ರಧಾನಮಂತ್ರಿಯಂತಹ ಘನತೆಯ ಹುದ್ದೆಯಲ್ಲಿರುವ ನರೇಂದ್ರ ಮೋದಿಯವರೇ ಪದೇ ಪದೇ ಸುಳ್ಳುಗಳನ್ನು ಹೇಳುತ್ತಾರೆ. ಇದೇ ಆ ಪಾರ್ಟಿಯ ನಾಯಕರಿಗೆ ಚಟವೂ ಆಗಿದೆʼ ಎಂದರು.

ʼಪ್ರತಿಧ್ವನಿʼಗೆ ಪ್ರತಿಕ್ರಿಯಿಸಿದ ಹೈಕೋರ್ಟ್ ವಕೀಲೆ ರಾಜಲಕ್ಷ್ಮಿ ಅಂಕಲಗಿ, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿನ ಕೋವಿಡ್ ಸಾವುಗಳ ಸಂಖ್ಯೆಯನ್ನು ಕಡಿಮೆ ತೋರಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿತ್ತು. ಎನ್ಡಿಟಿವಿ, ನ್ಯೂಸ್ ಲಾಂಡ್ರಿ, ದಿ ವೈರ್ ಮುಂತಾದ ಮಾಧ್ಯಮಗಳು, ವೈದ್ಯಕೀಯ ಸೌಲಭ್ಯ ಅಥವಾ ಚಿಕಿತ್ಸೆ ಸಕಾಲದಲ್ಲಿ ಸಿಗದೇ ನೂರಾರು ಕೋವಿಡ್ ರೋಗಿಗಳು ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಮೃತರಾಗಿದ್ದನ್ನು ದಾಖಲೆ ಸಮೇತ ತೋರಿಸಿದ್ದವು. ಆದರೆ ನಿಲಜ್ಜ ಕೇಂದ್ರ ಸರ್ಕಾರ ಇದನ್ನು ಒಪ್ಪಿಕೊಳ್ಳಲೇ ಇಲ್ಲ. ಈಗ ಸಂಸತ್ತಿನಲ್ಲೂ ಸುಳ್ಳುಗಳ ಸರಣಿ ಮುಂದುವರೆದಿದೆʼ ಎಂದರು.
ಭಾರತದಾದ್ಯಂತ ಕೊರೋನಾ ಎರಡನೇ ಅಲೆ ಸಂದರ್ಭದಲ್ಲಿ ರೋಗಿಗಳ ಸಾವಿರಾರು ಕುಟುಂಬಗಳು ಆಸ್ಪತ್ರೆ ಹಾಸಿಗೆ ಪಡೆಯಲು, ಔಷಧಿಗಳು ಮತ್ತು ಆಮ್ಲಜನಕಕ್ಕಾಗಿ ಪರದಾಡಿದ್ದವು. ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಆಮ್ಲಜನಕ ಪೂರೈಕೆಯಲ್ಲಿನ ವ್ಯತ್ಯಯವನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ʼಸಾಕು ಸಾಕು. ಹೇಗೆ ತರುತ್ತಿರೋ ಗೊತ್ತಿಲ್ಲ, ಒಟ್ಟಿನಲ್ಲಿ ಆಮ್ಲಜನಕ ಪೂರೈಸಿ. ಕದ್ದಾದರೂ ತನ್ನಿ ಅಥವಾ ಭಿಕ್ಷೆ ಬೇಡಿಯಾದರೂ ತನ್ನಿʼ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು.
ಅಂಕಿಅಂಶ ಇಲ್ಲವೆಂದರೆ ಅದನ್ನು ರಾಜ್ಯಗಳಿಂದ ತರಿಸಿಕೊಳ್ಳುವುದು ಕೇಂದ್ರದ ಜವಾಬ್ದಾರಿ. ಅದು ಬಿಟ್ಟು, ವೈದ್ಯಕೀಯ ಸೌಲಭ್ಯಗಳ ಕೊರತೆ ಮತ್ತು ಚಿಕಿತ್ಸೆಯ ವ್ಯತ್ಯಯದಿಂದ ಪಂಜಾಬಿನಲ್ಲಿ ಮಾತ್ರ 4 ಸಾವು ಸಂಭವಿಸಿವೆ ಎಂದು ಗೊಂದಲ ಮೂಡಿಸುವುದು ಅಪಾಯಕಾರಿ ಅಲ್ಲವೇ? ತನ್ನ ಜವಾಬ್ದಾರಿಯಿಂದ ನುಣುಚಿಕೊಂಡ ರಾಜ್ಯ ಸರ್ಕಾರದ ಹೊಣೆಗೇಡಿತನ ಖಂಡನೀಯ. ಸಾವಿನ ಸಂಖ್ಯೆಯಲ್ಲೂ ರಾಜಕೀಯ ಮಾಡಿದ ʼಹೆಗ್ಗಳಿಕೆʼ ಬಿಜೆಪಿ ಪಕ್ಷ ಮತ್ತು ಬಿಜೆಪಿ ಸರ್ಕಾರಗಳಿಗೆ ಸಲ್ಲಬೇಕು.






