ಪಂಜಾಬ್ನ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಾವು ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿರುವುದಾಗಿ ಗುರುವಾರ ಘೋಷಿಸಿದ್ದಾರೆ.
ʻʻನಾನು ಕಾಂಗ್ರೆಸ್ ಅನ್ನು ತೊರೆಯುತ್ತಿದ್ದೇನೆ ಆದರೆ, ಬಿಜೆಪಿ ಸೇರುವುದಿಲ್ಲ ನನ್ನಿಂದ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ, ನವಜೋತ್ ಸಿಂಗ್ ಸಿದ್ದು ಒಬ್ಬ ಬಾಲಿಶ ಮನಸ್ಥಿತಿಯುಳ್ಳ ವ್ಯಕ್ತಿ ಪಿಸಿಸಿ ಅಧ್ಯಕ್ಷರಾಗಿರುವವರು ದೃಢ ಸ್ಥಿರತೆಯನ್ನು ಹೊಂದಿರಬೇಕು” ಸಿದ್ದು ಅಂತಹ ವ್ಯಕ್ತಿಯಲ್ಲ ಎಂದು ಅವರು ಹೇಳಿದ್ದಾರೆ.
ಪಕ್ಷದಲ್ಲಿನ ನಾಯಕತ್ವ ಬಿಕ್ಕಟ್ಟಿನಿಂದ ಕಾಂಗ್ರೆಸ್ ಪಕ್ಷ ಕುಗ್ಗುತ್ತಿದೆ ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ರಾಜೀನಾಮೆ ಘೋಷಿಸಿದ ನಂತರ ಹೇಳಿದ್ದಾರೆ. ನಿನ್ನೆ ಗೃಹ ಸಚಿವ ಅಮಿತ್ ಷಾರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಕ್ಯಾಪ್ಟನ್ ಬಿಜೆಪಿ ಸೇರುವ ಬಗ್ಗೆ ಪುಷ್ಟಿ ನೀಡಿದ್ದವು. ಆದರೆ, ಅದನ್ನು ಅಲ್ಲಗಳೆದಿರುವ ಕ್ಯಾಪ್ಟನ್ ತಾವು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪಂಜಾಬ್ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿದ್ದು ಅವರನ್ನು ಕಾಂಗ್ರೆಸ್ ಹೈಕಮಾಂಡ್ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ತೀವ್ರ ವಿರೋಧದ ನಡುವೆ ಸಿದ್ದು ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು.
ಇದಾದ ಕೆಲವು ದಿನಗಳ ಬಳಿಕ ಪಂಜಾಬ್ನಲ್ಲಿ ಮುಖ್ಯಮಂತ್ರಿ ವಿರುದ್ಧ ಪಕ್ಷದ 40ಕ್ಕೂ ಹೆಚ್ಚು ಶಾಸಕರು, ನಾಲ್ವರು ಸಚಿವರು ಸೇರಿದಂತೆ ಅನೇಕರು ಹೃಕಮಾಂಡ್ಗೆ ದೂರು ನೀಡಿದ ಕಾರಣ ಮತ್ತು ದಿಢೀರನೆ ಶುರುವಾದ ಬಣ ರಾಜಕೀಯದ ಬಿಕ್ಕಟ್ಟಿನಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದರು. ಇದಾದ ಬಳಿಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಚರಣಜಿತ್ ಸಿಂಗ್ ಚುನ್ನಿ ಅವರನ್ನು ಪಕ್ಷದ ಹೈಕಮಾಂಡ್ ಆಯ್ಕೆ ಮಾಡಿತ್ತು.

ಇದಾದ ಬಳಿಕ ರಾಜಕೀಯ ಬೆಳವಣಿಗೆಯೊಂದರಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಿದ್ದು ದಿಢೀರ್ ಎಂದು ರಾಜೀನಾಮೆ ಘೋಷಿಸಿದರು. ರಾಜೀನಾಮೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ, ಮೂಲಗಳು ಹೇಳುವ ಪ್ರಕಾರ ಸಂಪುಟ ರಚನೆ ಸಮಯದಲ್ಲಿ ತಮ್ಮನ್ನು ಪರಿಗಣನೆಗೆ ತೆಗೆದುಕೊಂಡಿಲ್ಲದ ಕಾರಣ ಸಿದ್ದು ಅವರು ರಾಜೀನಾಮೆ ನೀಡಿರಬಹುದು ಎಂದು ಹೇಳಲಾಹುತ್ತಿದೆ. ಅದರೆ, ಚುನಾವಣೆ ಹೊಸ್ತಿಲಲ್ಲಿ ಪಂಜಾಬ್ನಲ್ಲಿ ರಾಜಕೀಯ ಮೇಲಾಟ ನಡೆಯುತ್ತಿರುವ ಕಾರಣ ಇದು ಕಾಂಗ್ರೆಸ್ ಪಕ್ಷಕ್ಕೆ ಯಾವ ರೀತಿ ಪರುಣಾಮ ಬೀರುತ್ತದೆ ಏಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.










