
ರಾಜ್ಯದಲ್ಲಿ ರಾಜಭವನ ವರ್ಸಸ್ ವಿಧಾನಸೌಧ (Raj Bhavan vs Vidhana Soudha) ಎನ್ನುವಂತಾಗಿದೆ. ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ (T J Abraham) ರಾಜ್ಯಪಾಲರಿಗೆ ದೂರು ನೀಡಿದ್ದು, ರಾಜ್ಯಪಾಲರು ಸಿಎಂ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ರಾಜ್ಯಪಾಲರ ಈ ಕ್ರಮ ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತೆ ಎಂದು ಕಾಂಗ್ರೆಸ್ ಆರೋಪ ಮಢೇಇದೆ. ಕೇಂದ್ರ ಸರ್ಕಾರದ ತಾಳಕ್ಕೆ ರಾಜ್ಯಪಾಲರು ಕುಣಿಯುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಇಡೀ ಸಚಿವ ಸಂಪುಟ ರಾಜ್ಯಪಾಲರ ವಿರುದ್ಧ ಸಮರ ಸಾರಿದೆ. ರಾಜ್ಯಪಾಲರು ಶೋಕಾಸ್ ನೋಟಿಸ್ ವಾಪಸ್ ಪಡೆಯಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ. ಆದರೆ ರಾಜ್ಯಪಾಲರ ನಿರ್ಧಾರ ಮಾತ್ರ ಇನ್ನೂ ನಿಗೂಢವಾಗಿದೆ.
ಸಿಎಂ ಆದವರು ತಪ್ಪು ಮಾಡಿದ್ರೆ ತಪ್ಪಲ್ವಾ..?

ಕಾನೂನು ಪ್ರಕಾರ ಎಲ್ಲರೂ ಸಮಾನರು. ಸಿಎಮ ಆದರೂ ಸರಿ, ಪಿಎಂ ಆದರೂ ಸರಿ ಅನ್ನೋ ಮಾತಿದೆ. ಅದು ಸತ್ಯವೂ ಹೌದು. ಸಿಎಂ ತಪ್ಪು ಮಾಡಿದಾಗ ನೋಡಿಕೊಂಡು ಇರಬೇಕಾ..? ಅಂದ್ರೆ ನೋ.. ಕಾನೂನು ಮುಂದೆ ಯಾರೂ ದೊಡ್ಡವರಲ್ಲ. ತನಿಖೆ ಆಗ್ಬೇಕು, ಕಾನೂನು ಪ್ರಕಾರ ಯಾವ ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳಬೇಕು. ಆದರೆ ಹೀಗೆ ಯಾರೋ ಒಬ್ಬರು ರಾಜಭವನಕ್ಕೆ ಬಂದು ದೂರು ಕೊಟ್ಟರು ಅಂದ ಮಾತ್ರಕ್ಕೆ ಇಡೀ ಸರ್ಕಾರದ ಮುಖ್ಯಸ್ಥನಾಗಿರುವ ಮುಖ್ಯಮಂತ್ರಿಯನ್ನೇ ಬರ್ಕಾಸ್ತು ಮಾಡುವಂತೆ ಕ್ರಮಕ್ಕೆ ಮುಂದಾಗುವುದು ಪ್ರಜಾಪ್ರಭುತ್ವಕ್ಕೆ ಮಾರಕ ಆಗುತ್ತದೆ. ಯಾಕಂದ್ರೆ ಮುಂದಿನ ದಿನದಲ್ಲಿ ಯಾರೇ ಮುಖ್ಯಮಂತ್ರಿ ಆದರೂ ಯಾರಾದರೂ ಒಬ್ಬರು ರಾಜ್ಯಪಾಲರಿಗೆ ಸಾಕ್ಷಿಗಳ ಸಮೇತ ದೂರು ನೀಡುತ್ತಾರೆ. ಆಗಲೂ ಇದೇ ರೀತಿಯ ಕ್ರಮ ಸಾಧ್ಯವೇ..? ಎನ್ನುವ ಪ್ರಶ್ನೆ ಎದುರಾಗುತ್ತದೆ.
ರಾಜ್ಯಪಾಲರು ಕಾನೂನು ಮೀರಿ ಕ್ರಮಕ್ಕೆ ಮುಂದಾದ್ರಾ..?

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(Governor Thawar Chand Gehlot), ಮುಖ್ಯಮಂತ್ರಿ ಸಿದ್ದರಾಮಯ್ಯಗೆ(Chief Minister Siddaramaiah) ಶೋಕಾಸ್ ನೋಟಿಸ್ ಕೊಡುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ ಕೋರ್ಟ್ಗೆ ಖಾಸಗಿ ದೂರು ದಾಖಲು ಮಾಡಿ ಕೋರ್ಟ್ನಿಂದ ನಿರ್ದೇಶನ ಪಡೆಯುವುದಕ್ಕೆ ಅವಕಾಶವಿತ್ತು. ಸಾಕ್ಷ್ಯಗಳನ್ನು ಪರಿಶೀಲನೆ ಮಾಡಿದ ಬಳಿಕ ಕೋರ್ಟ್ ಆರೋಪ ಸೂಕ್ತವಾಗಿದ್ಯಾ..? ವಿಚಾರಣೆಗೆ ಅರ್ಹವಾಗಿದ್ಯಾ ಎಂದು ನಿರ್ಧಾರ ಮಾಡುವ ಅವಶ್ಯಕತೆ ಇತ್ತು. ಆದರೆ ರಾಜ್ಯಪಾಲರೇ ತನಿಖೆಗೆ ಅವಕಾಶ ಕೊಡುವ ಬಗ್ಗೆ ನಿಮ್ಮ ಅಭಿಪ್ರಾಯವೇನು..? ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ರಾಜ್ಯಪಾಲರು ಯಾವ ಸಾಕ್ಷಿಗಳನ್ನು ಪರಿಗಣಿಸಿದ್ದಾರೆ..? ಟಿ.ಜೆ ಅಬ್ರಹಾಂ(T J Abraham) ಕೊಟ್ಟ ಸಾಕ್ಷ್ಯ ತನಿಖೆಗೆ ಕೊಡುವಷ್ಟು ಪ್ರಬಲ ಆಗಿದ್ಯಾ..? ಅನ್ನೋದನ್ನು ರಾಜ್ಯಪಾಲರೇ ನಿರ್ಧಾರ ಮಾಡಬಹುದಾ..? ಅನ್ನೋದು ಯಕ್ಷ ಪ್ರಶ್ನೆ ಆಗಿದೆ.
ಮುಖ್ಯಮಂತ್ರಿ ಕಾನೂನು ಸಲಹೆಗಾರರು ಏನಂತಾರೆ..?

ಕೊಡಗಿನಲ್ಲಿ ಮಾತನಾಡಿರುವ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ, ರಾಜ್ಯಪಾಲರು ಸಿಎಂ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ಕೊಟ್ಟಿರುವುದು ಸರಿಯಲ್ಲ. ಪ್ರಾಸಿಕ್ಯೂಸನ್ಗೆ ಅನುಮತಿ ಕೊಡೋದಕ್ಕೆ ಸಾಧ್ಯವಿಲ್ಲ, ಕಾನೂನು ತೊಡಕಾಗುತ್ತದೆ. ಈಗಾಗಲೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸೋಕಾಸ್ ನೋಟಿಸ್ ವಾಪಸ್ಸು ಪಡೆಯುವಂತೆ ಸಲಹೆ ನೀಡಲಾಗಿದೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ಆಗಿದ್ದಾರೆ. ಮೂಡ ಹಗರಣ ಆರೋಪ ವಿಚಾರ ಬೇರೆ, ಸೈಟು ಹಂಚಿಕೆ ವಿಚಾರ ಬೇರೆ. ಸಿಎಂ ಸಿದ್ದರಾಮಯ್ಯ ಅವರ ಸೈಟಿನ ಬಗ್ಗೆ ಬಿಜೆಪಿ ಮಾತನಾಡುತ್ತಿದೆ. ಆದ್ರೆ ಎಷ್ಟೋ ಜನರಿಗೆ ಸೈಟ್ ಕೊಟಿರುವುದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಕುಶಾಲನಗರದಲ್ಲಿ ಪೊನ್ನಣ ವಾಗ್ದಾಳಿ ಮಾಡಿದ್ದಾರೆ.

ಬಲಾಢ್ಯರು ಪ್ರಭಾವ ಬಳಸಿ ಅಕ್ರಮ ಸಂಪತ್ತು ಸಂಪಾದನೆ ಮಾಡಿದಾಗ ಕಾನೂನು ಕ್ರಮ ಆಗಬೇಕು. ಅಂದಮಾತ್ರಕ್ಕೆ ಸರ್ಕಾರವನ್ನು ಅಸ್ತಿರಗೊಳಿಸುವ ಕುಕೃತ್ಯ ಆಗಬಾರದು. ಒಂದು ವೇಳೆ ಪದೇ ಪದೇ ಇದೇ ರೀತಿಯ ತನಿಖೆಯ ನೆಪದಲ್ಲಿ ಸಿಎಂ ಬದಲಾವಣೆ ಅಥವಾ ಸಿಎಂ ಆದವರ ಮೇಲೆ ತನಿಖೆಯ ನೆಪದಲ್ಲಿ ಸಿಎಂ ಬದಲಾಗುತ್ತಿದ್ದರೆ ಸ್ಥಿರ ಸರ್ಕಾರ ನೀಡಲು ಸಾಧ್ಯವೇ..? ರಾಜ್ಯದ ಅಭಿವೃದ್ಧಿ ನಿರೀಕ್ಷೆ ಮಾಡಬಹುದೇ ಅನ್ನುವ ಪ್ರಶ್ನೆ ಎದುರಾಗುತ್ತದೆ. ಇನ್ನಾದರೂ ಕಾನೂನು ಸಲಹೆ ಪಡೆದು ರಾಜ್ಯಪಾಲರು ಮುಂದುವರಿದರೆ ಸೂಕ್ತ ಎನ್ನಬಹುದು. ಅಲ್ಲದಿದ್ರೆ ಮುಂದಿನ ದಿನಗಳಲ್ಲಿ ಕೋರ್ಟ್ ಚಾಟಿ ಬೀಸುತ್ತದೆ. ಆದರೆ ಅಷ್ಟರೊಳಗಾಗಿ ಆಗಬೇಕಿರುವ ಅನಾಹುತ ನಡೆದು ಬಿಟ್ಟಿರುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ.

ಕೃಷ್ಣಮಣಿ











