ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೆಹಲಿ ಪ್ರವಾಸ ಮುಗಿಸಿಕೊಂಡು ಕರ್ನಾಟಕಕ್ಕೆ ವಾಪಸ್ಸಾಗಿದೆ. ಭೇಟಿ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರೊಂದಿಗೆ ಮಹತ್ವದ ವಿಚಾರಗಳನ್ನು ಚರ್ಚಿಸಿದ್ದರು. ಒಂದೆಡೆ ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಲು ಸಿಎಂ ಬಸವರಾಜ್ ಬೊಮ್ಮಾಯಿ ಭಾರೀ ಸರ್ಕಸ್ ನಡೆಸುತ್ತಿದ್ದಾರೆ. ಈ ಮಧ್ಯೆ ಬೊಮ್ಮಾಯಿಗೆ ಮತ್ತೊಂದು ಸವಾಲು ಎದುರಾಗಿದೆ. ಅದುವೇ ವಿಧಾನಮಂಡಲ ಅಧಿವೇಶನ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಮತ್ತು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರವನ್ನ ಹಣಿಯಲು ಎಲ್ಲಾ ರೀತಿಯ ಅಸ್ತ್ರಗಳನ್ನ ಈಗಿನಿಂದಲೇ ಮಸಿಯುತ್ತಿವೆ. ಹೀಗಾಗಿ ಸಿಎಂಗೆ ಕಠಿಣ ಸವಾಲುಗಳು ಎದುರಾಗೋದು ಪಕ್ಕಾ ಎನ್ನಬಹುದು.
ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಮೊದಲ ಬಾರಿಗೆ ವಿಧಾನಮಂಡಲ ಅಧಿವೇಶನಕ್ಕೆ ವೇದಿಕೆ ಸಜ್ಜಾಗಿದೆ. ಇದೇ ಸೆಪ್ಟಂಬರ್ 13ರಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ. ಈ ವೇಳೆ ವಿಪಕ್ಷ ನಾಯಕರು ಸಿಎಂ ಮತ್ತು ಸಚಿವರನ್ನ ಇಕ್ಕಟ್ಟಿಗೆ ಸಿಲುಕಿಸಲು ಭಾರೀ ರಣತಂತ್ರಗಳನ್ನ ಹೆಣೆಯುತ್ತಿವೆ. ಬೊಮ್ಮಾಯಿ ಸಿಎಂ ಆದ ಬಳಿಕ ಎದುರಾದ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಸರ್ಕಾರಕ್ಕೆ ಚಾಟಿ ಬೀಸಲು ಸಜ್ಜಾಗಿವೆ. ಹೀಗಾಗಿ ಅಧಿವೇಶನದತ್ತ ನಿಗಾವಹಿಸಲು ಸಿಎಂ ಬೊಮ್ಮಾಯಿ ಸಜ್ಜಾಗಿದ್ದಾರೆ.
ವಿಧಾನಮಂಡಲ ಅಧಿವೇಶದಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಸಾಲು ಸಾಲು ಸವಾಲುಗಳು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತವರ ತಂಡ ಈಗಾಗಲೇ ವಿಪಕ್ಷಗಳ ಬಾಣದಿಂದ ತಪ್ಪಿಸಿಕೊಳ್ಳಲು ರಕ್ಷಾ ಕವಚಗಳನ್ನ ಸಿದ್ಧಗೊಳಿಸಿಕೊಳ್ಳುತ್ತಿದೆ. ಜೊತೆಗೆ ಮುಂದೆ ಎದುರಾಗಬಹುದಾದ ಸಮಸ್ಯೆಗಳು, ಪ್ರತಿಪಕ್ಷಗಳ ಟೀಕೆಗಳಿಗೆ ತಕ್ಕ ಉತ್ತರ ಕೊಡಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ.
ಸಿಎಂಗೆ ‘ಸದನ’ ಸವಾಲು
1 ರಾಜ್ಯದಲ್ಲಿ ನಡೆದ ನಾಯಕತ್ವ ಬದಲಾವಣೆ ವಿಚಾರ
2 ಸಂಪುಟ ರಚನೆಯ ಸಂದರ್ಭದಲ್ಲಾದ ಗೊಂದಲ
3 ಖಾತೆ ಹಂಚಿಕೆಯ ವೇಳೆ ಕೆಲ ಸಚಿವರ ಬಂಡಾಯ
4 ಸಂಪುಟದಲ್ಲಿ ಸ್ಥಾನಮಾನ ಬೇಡ ಎಂದಿದ್ದ ಶೆಟ್ಟರ್ ವಿಚಾರ
5 ರಾಜ್ಯ ಪ್ರವಾಸ ಆರಂಭಿಸುತ್ತೇನೆ ಎಂದ ಮಾಜಿ ಸಿಎಂ ನಡೆ
6 ಭ್ರಷ್ಟಾಚಾರದ ಆರೋಪ ಹೊತ್ತ ಜೊಲ್ಲೆಗೆ ಸ್ಥಾನಮಾನ
7 ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್ ರೇಪ್ ಪ್ರಕರಣ
8 ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಇಲ್ಲದೇ ಇರುವ ಆರೋಪ
ರಾಜ್ಯದಲ್ಲಿ ನಡೆದ ನಾಯಕತ್ವ ಬದಲಾವಣೆ ವಿಚಾರವೇ ಸಿಎಂಗೆ ಮೊದಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಜೊತೆಗೆ ಸಂಪುಟ ರಚನೆಯ ಸಂದರ್ಭದಲ್ಲಾದ ಗೊಂದಲಗಳು. ಖಾತೆ ಹಂಚಿಕೆಯ ವೇಳೆ ಕೆಲ ಸಚಿವರ ಬಂಡಾಯ ಇದು ಮತ್ತೊಂದು ಬಗೆಯ ಸವಾಲಾಗಿ ಸಿಎಂಗೆ ಎದುರಾಗಲಿದೆ.
ಇನ್ನು ಸಂಪುಟದಲ್ಲಿ ಸ್ಥಾನಮಾನ ಬೇಡ ಎಂದಿದ್ದ ಶೆಟ್ಟರ್ ವಿಚಾರ ಕೂಡಾ ಸದನದಲ್ಲಿ ಸಿಡಿದೇಳುವ ಸಾಧ್ಯತೆ ಇದೆ. ಇದೆಲ್ಲದ ಮಧ್ಯೆ ರಾಜ್ಯ ಪ್ರವಾಸ ಆರಂಭಿಸುತ್ತೇನೆ ಎಂದ ಮಾಜಿ ಸಿಎಂ ಯಡಿಯೂರಪ್ಪ ನಡೆಯನ್ನೂ ಕೂಡಾ ವಿಪಕ್ಷಗಳು ಸದನದಲ್ಲಿ ಎಳೆದು ತರುವ ಸಾಧ್ಯತೆ ಇದೆ.
ಈ ಮಧ್ಯೆ ಎಲ್ಲದಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಶಶಿಕಲಾ ಜೊಲ್ಲೆ ಭ್ರಷ್ಟಾಚಾರ ಆರೋಪ, ಕಳಂಕಿತ ಸಚಿವೆಗೆ ಮತ್ತೆ ಸಚಿವ ಸ್ಥಾನ ನೀಡಿದ್ದು ಕೂಡಾ ಭಾರೀ ಸದ್ದು ಮಾಡೋದು ಪಕ್ಕಾ ಎನ್ನುವಂತಾಗಿದೆ. ಜೊತೆಗೆ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್ ರೇಪ್ ಪ್ರಕರಣವನ್ನೇ ಇಟ್ಟುಕೊಂಡು ವಿಪಕ್ಷಗಳು ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಇಲ್ಲದೇ ಇರುವ ಆರೋಪವನ್ನು ಮಾಡೋದು ಗ್ಯಾರಂಟಿ ಎನ್ನಲಾಗಿದೆ.
ಇಷ್ಟೆಲ್ಲಾ ಸವಾಲುಗಳು ಸಿಎಂ ಬಸವರಾಜ ಬೊಮ್ಮಾಯಿಗೆ ಮೊದಲ ಬಾರಿ ಎದುರಾಗಲಿವೆ. ಹೀಗಾಗಿ ವಿಪಕ್ಷಗಳ ಈ ಎಲ್ಲಾ ಏಟುಗಳಿಗೆ ಸಿಎಂ ಯಾವ ರೀತಿ ಉತ್ತರಿಸುತ್ತಾರೆ. ಬಿಎಸ್ವೈ ರೀತಿ ಸೇರಿಗೆ ಸವ್ವಾ ಸೇರು ಅಂತಾ ತಿರುಗೇಟು ನೀಡ್ತಾರಾ? ಅಥವಾ ಅವರದ್ದೇ ಶೈಲಿಯಲ್ಲಿ ಎಲ್ಲಾ ಚಾಲೆಂಜ್ಗಳನ್ನ ಸ್ವೀಕರಿಸಿ ಬಗೆಹರಿಸಲು ಮುಂದಾಗುತ್ತಾರಾ? ಎಂಬುದಕ್ಕೆ ಸದನದಲ್ಲೇ ಉತ್ತರ ಸಿಗಲಿದೆ.