ದಿಡ್ಡಳ್ಳಿ ಆದಿವಾಸಿಗಳ ಭೂಮಿ ಹೋರಾಟದ ಮೂಲಕ ರಾಜ್ಯದ ಸಾರ್ವಜನಿಕ ಬದುಕಿನಲ್ಲಿ ಗಮನ ಸೆಳೆದ ನಟ ಚೇತನ್ ಅಹಿಂಸಾ, ಕಳೆದ ಒಂದು ವಾರದಿಂದ ಭಾರೀ ಸುದ್ದಿಯಲ್ಲಿದ್ದಾರೆ.
ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದದ ಟೀಕೆಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಚೇತನ್, ಹೇಳಿಕೆ, ಪ್ರತಿ ಹೇಳಿಕೆಗಳ ಮೂಲಕ ಸಿದ್ದರಾಮಯ್ಯ ಅಭಿಮಾನಿಗಳ ಟೀಕೆಗೆ, ಆಕ್ರೋಶಕ್ಕೆ ಗುರಿಯಾಗಿದ್ದಾರೆ.
‘ಸಿದ್ದರಾಮಯ್ಯ ಬ್ರಾಹ್ಮಣ್ಯದಲ್ಲಿ ಆಳವಾಗಿ ಬೇರೂರಿರುವ ಜಾತಿವಾದಿ’ ಎಂದು ಟೀಕಿಸಿದ್ದ ಚೇತನ್, “ನಿಜವಾದ ಬದಲಾವಣೆಗೆ ಕರ್ನಾಟಕ ಮತ್ತು ಭಾರತಕ್ಕೆ ‘ಜಾತಿ ವಿರೋಧಿ ‘ ನಾಯಕತ್ವ ಬೇಕಾಗಿದೆ. ಸಿದ್ದರಾಮಯ್ಯನವರ ಸೇವೆ ‘ಹುಟ್ಟಿದ ಜಾತಿ’ಗೆ ಮಾತ್ರ ಸೀಮಿತವಾಗಿದ್ದು, ಇತರೆ ಬಹುಜನರಿಂದ ಸಿಗುವ ಮತಗಳಿಗಾಗಿ ಮಾತ್ರ ಬಣ್ಣದ ಮಾತಾಡುತ್ತಾರೆ” ಎಂದು ನೇರ ವಾಗ್ದಾಳಿ ಮಾಡಿದ್ದರು. ಸಿದ್ದರಾಮಯ್ಯ ವಿರುದ್ಧದ ವೈಯಕ್ತಿಕ ದಾಳಿಯ ಬಳಿಕ, ಚೇತನ್ ಕಾಂಗ್ರೆಸ್ ಪಕ್ಷದ ವಿರುದ್ಧ ತಮ್ಮ ಟೀಕಾಸ್ತ್ರ ಪ್ರಯೋಗಿಸಿದ್ದರು.
“ಕಾಂಗ್ರೆಸ್ ಪಕ್ಷದ ಸದಸ್ಯರಾದ ಕೆಬಿ ಹೆಡ್ಗೆವಾರ್ 1925 ರಲ್ಲಿ ಆರ್.ಎಸ್.ಎಸ್ ಸ್ಥಾಪಿಸಿದರು. ಕಾಂಗ್ರೆಸ್ನ ಮತ್ತೊಬ್ಬ ಸದಸ್ಯರಾದ ಬಾಲ ಗಂಗಾಧರ ತಿಲಕ್ ಅವರು ಹೆಡ್ಗೆವಾರ್ ಅವರನ್ನು ಪ್ರಭಾವಿಸಿದ್ದರು. ಕಾಂಗ್ರೆಸ್ ಮತ್ತು ಆರ್ ಎಸ್ ಎಸ್ (ಸಂಘ ಪರಿವಾರ ) ಯಾವತ್ತಿನಿಂದಲೂ ಒಂದಕ್ಕೊಂದು ಬೆಸೆದುಕೊಂಡೇ ಇದೆ. ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳುವುದರಿಂದ ಕಾಂಗ್ರೆಸ್ ಮತ್ತು ಆರ್ ಎಸ್ ಎಸ್, ಎರಡಕ್ಕೂ ಲಾಭವಾಗುತ್ತದೆ” ಎಂದು ಕಾಂಗ್ರೆಸ್ಸಿನ ಸೈದ್ಧಾಂತಿಕ ಬದ್ಧತೆಯನ್ನೇ ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೆ, “ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ಮಣಿಸಬೇಕು – ಹೇಗೆ? ಅಧಿಕಾರಕ್ಕೋಸ್ಕರ ಕಾಂಗ್ರೆಸ್ ಪಕ್ಷವು ಏನನ್ನು ಬೇಕಾದರೂ ಮಾಡುತ್ತದೆ. ಬಿಜೆಪಿ ಪಕ್ಷವು ದ್ವೇಷದ ಸಿದ್ದಾಂತ ಹೊಂದಿದೆ. ನಾವು ಮೊದಲು ಬಿಜೆಪಿಯನ್ನು ತೊಡೆದು ಹಾಕಿದರೆ, ಕಾಂಗ್ರೆಸ್ ಅದರಿಂದ ಲಾಭ ಪಡೆದು ಇನ್ನಷ್ಟು ಬಲಗೊಳ್ಳುತ್ತದೆ. ಆದರೆ ಮೊದಲು ಕಾಂಗ್ರೆಸ್ಸನ್ನು ತೊಡೆದು ಹಾಕಿದರೆ, ನಂತರ ಬಿಜೆಪಿಯ ಸಿದ್ದಾಂತವನ್ನು ನಮ್ಮ ಸಮಾನತೆಯ ಸಿದ್ಧಾಂತದಿಂದ ಧ್ವಂಸ ಮಾಡಬಹುದು” ಎಂದು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ನಾಶ ಮಾಡುವ ವಿನೂತನ ಸೂತ್ರವನ್ನೂ ಮಂಡಿಸಿದ್ದರು.
ಸಹಜವಾಗೇ ಚೇತನ್ ಅವರ ಈ ಹೇಳಿಕೆಗಳು, ಕೋಮುವಾದಿ ವಿರೋಧಿ, ಪುರೊಹಿತಶಾಹಿ ವಿರೋಧಿ ಧೊರಣೆಯ ಮೂಲಕವೇ ಹಿಂದುಳಿದವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನಾಯಕ ಎಂದು ಬಿಂಬಿತವಾಗಿರುವ ಜನಪ್ರಿಯ ನಾಯಕ ಸಿದ್ದರಾಮಯ್ಯ ಅವರ ಅಭಿಮಾನಿಗಳ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದ್ದವು. ಜೊತೆಗೆ ಕಾಂಗ್ರೆಸ್ ಮತ್ತು ಆರ್ ಎಸ್ ಎಸ್ ಒಂದೇ ಎಂಬ ಕುರಿತ ಅವರ ಹೇಳಿಕೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರನ್ನೂ ಕೆರಳಿಸಿದೆ.
ಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಟಿವಿ ಡಿಬೇಟುಗಳಲ್ಲಿ ಚೇತನ್ ಹೇಳಿಕೆಯ ಪರ, ವಿರೋಧಿ ವಾದಗಳು ಸದ್ದು ಮಾಡುತ್ತಿವೆ. ಸಿದ್ದರಾಮಯ್ಯ ಜಾತಿವಾದಿ ಎಂಬ ಮಾತಿನ ಬಗ್ಗೆ ದೊಡ್ಡ ಮಟ್ಟದಲ್ಲಿ ಪರ ವಿರೋಧದ ಚರ್ಚೆ ಪ್ರಗತಿಪರರ ಮತ್ತು ದಲಿತ ಹೋರಾಟಗಾರರ ನಡುವೆ ಬಿಸಿಯೇರಿದೆ. ಅದೇ ಹೊತ್ತಿಗೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವ, ನಾಗರಿಕ ಹಕ್ಕುಗಳನ್ನು, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರ ಬದುಕನ್ನು ಸಂಕಷ್ಟಕ್ಕೆ ದೂಡಿರುವ ದೇಶದ ಸದ್ಯದ ಆಡಳಿತ ವ್ಯವಸ್ಥೆಯ ಎದುರು ಕೋಮುವಾದಿ, ಮತೀಯವಾದಿ ಶಕ್ತಿಗಳ ವಿರುದ್ಧ ಇರುವ ಎಲ್ಲರೂ ಒಟ್ಟಾಗಿ ಹೋರಾಡಬೇಕಾದ ಹೊತ್ತಲ್ಲಿ, ಒಬ್ಬ ಸಾಮಾಜಿಕ ಕಾಳಜಿಯ ವ್ಯಕ್ತಿಯ ಆದ್ಯತೆ ಯಾವುದಾಗಬೇಕು? ಸದ್ಯ ಅಧಿಕಾರದಲ್ಲಿರುವ ಪಕ್ಷ ಮತ್ತು ವ್ಯಕ್ತಿಗಳ ಜನವಿರೋಧಿ, ದಮನ ನೀತಿಯ ವಿರುದ್ಧ ದನಿ ಎತ್ತಬೇಕೆ? ಅಥವಾ ಈಗ ಯಾವ ಅಧಿಕಾರವನ್ನೂ ಹೊಂದಿರದ ವ್ಯಕ್ತಿಗಳ ವಿರುದ್ಧ ಹೋರಾಡಬೇಕೆ? ಎಂಬುದನ್ನು ಚೇತನ್ ಅರಿಯಬೇಕಿತ್ತು ಎಂಬ ಮಾತುಗಳೂ ಕೇಳಿಬಂದಿವೆ.
ಅದರಲ್ಲೂ ಬಿಜೆಪಿಯನ್ನು ಮಣಿಸುವ ಕುರಿತ ಅವರ ಹೇಳಿಕೆ ತೀರಾ ನಗೆಪಾಟಲಿನ ಮಾತು. ಇಂತಹ ಹೇಳಿಕೆಯ ಮೂಲಕ ಚೇತನ್, ತಾವೆಷ್ಟು ಅಪ್ರಬುದ್ಧರು, ರಾಜಕಾರಣ ಮತ್ತು ಹೋರಾಟದ ಕುರಿತ ತಮ್ಮ ಅಮಾಯಕತನ ಎಷ್ಟು ಎಂಬುದನ್ನು ಸ್ವತಃ ತಾವೇ ಬಯಲುಮಾಡಿದ್ದಾರೆ. ಇಂತಹ ಬಾಲಿಶತನವನ್ನು ಚೇತನ್ ಅವರಿಂದ ನಿರೀಕ್ಷಿಸಿರಲಿಲ್ಲ ಎಂದು ಬಹಳಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ದಿಡ್ಡಳ್ಳಿ ಹೋರಾಟದ ದಿನಗಳಿಂದಲೂ ಚೇತನ್ ಅವರೊಂದಿಗೆ ಹೋರಾಟಗಳಲ್ಲಿ ಪಾಲುದಾರರಾಗಿದ್ದ ಹಲವು ಮಂದಿ ಅವರ ಗೆಳೆಯರೇ ಇಂತಹ ಅಭಿಪ್ರಾಯ ವ್ಯಕ್ತಪಡಿಸಿರುವುದು ಗಮನಾರ್ಹ.
ಅಷ್ಟೇ ಅಲ್ಲದೆ, ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡು ಚೇತನ್ ಅವರ ಸರಣಿ ಹೇಳಿಕೆಗಳು ಹೊರಬರುತ್ತಿರುವುದರ ಹಿಂದೆ ಯಾರಿದ್ದಾರೆ? ಯಾವ ಉದ್ದೇಶದಿಂದ ಇದೀಗ ಸಿದ್ದರಾಮಯ್ಯ ಅವರನ್ನು ಹೀಗೆ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಪ್ರಶ್ನೆಗಳೂ ಕೇಳಿಬಂದಿವೆ.
ಈ ಪ್ರಶ್ನೆಗಳಿಗೆ ಹಲವು ಆಯಾಮದ ಉತ್ತರಗಳೂ ಸಾಮಾಜಿಕ ಜಾಲತಾಣದ ಚರ್ಚೆಗಳಲ್ಲಿ ವ್ಯಕ್ತವಾಗುತ್ತಿವೆ. ಮುಖ್ಯವಾಗಿ ಚೇತನ್, ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವುದರ ಹಿಂದೆ ಬಿಎಸ್ ಪಿ ಮತ್ತು ಕೆಲವು ದಲಿತ ಸಂಘಟನೆಗಳ ನಾಯಕರ ಕುಮ್ಮಕ್ಕಿದೆ. ಸಿದ್ದರಾಮಯ್ಯ ಸಿಎಂ ಅವಧಿಯಲ್ಲಿ ಒಳ ಮೀಸಲಾತಿ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲಿಲ್ಲ. ಜೊತೆಗೆ ಜಾತಿ ಗಣತಿ ನಡೆಸಿ ಅದನ್ನು ಬಹಿರಂಗಪಡಿಸದೇ ಅನ್ಯಾಯ ಮಾಡಿದರು. ದಲಿತರಿಗೆ ಭೂಮಿ ಹಕ್ಕು ಕೊಡುವ ಕುರಿತ ಹೋರಾಟಗಳಿಗೆ ಸ್ಪಂದಿಸಲಿಲ್ಲ ಎಂಬುದೂ ಸೇರಿದಂತೆ ಹಲವು ಅಸಮಾಧಾನಗಳನ್ನೇ ಮುಂದಿಟ್ಟುಕೊಂಡು ಅವರನ್ನು ಟೀಕಿಸಲಾಗುತ್ತಿದೆ. ಅದರಲ್ಲೂ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ದಲಿತ ವಿರೋಧಿ ಎಂದು ಚಿತ್ರಿಸುವ ಯತ್ನಗಳು ನಡೆಯುತ್ತಿವೆ. ಅಂತಹ ಯತ್ನಗಳ ಭಾಗವಾಗಿ ಚೇತನ್ ಅವರು ಮಾತನಾಡುತ್ತಿದ್ದಾರೆ ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ.
ಅದಕ್ಕೆ ಪೂರಕವಾಗಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ ಎಸ್ ದ್ವಾರಕನಾಥ್ ಹದಿನೈದು ದಿನಗಳ ಹಿಂದೆ ಕಾಂಗ್ರೆಸ್ಸಿಗೆ ಸೇರಿರುವುದು ಮತ್ತು ಚೇತನ್ ಹೆಚ್ಚಾಗಿ ಅವರೊಂದಿಗೆ ಗುರುತಿಸಿಕೊಂಡಿರುವುದನ್ನು ಕೂಡ ತಳಕು ಹಾಕಲಾಗುತ್ತಿದೆ. ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಪರೋಕ್ಷ ಪ್ರತಿಪಕ್ಷ ನಾಯಕರಂತೆ ಅವರ ವಿರುದ್ಧ ನಿರಂತರ ಟೀಕೆಗಳ ಮೂಲಕವೇ ಸುದ್ದಿಯಲ್ಲಿದ್ದ ದ್ವಾರಕನಾಥ್, ಕಾಂಗ್ರೆಸ್ ಸೇರ್ಪಡೆಗೂ, ಅವರ ಪರಮಾಪ್ತ ಚೇತನ್ ಸಿದ್ದರಾಮಯ್ಯ ವಿರುದ್ಧ ನೇರ ವಾಗ್ದಾಳಿ ಆರಂಭಿಸಿರುವುದಕ್ಕೂ ನೇರ ಸಂಬಂಧವಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಅಷ್ಟೇ ಅಲ್ಲ; ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಅವರ ಆಪ್ತ ವಲಯದಲ್ಲಿದ್ದ ಹಿರಿಯ ಪತ್ರಕರ್ತರೊಬ್ಬರು ಮತ್ತು ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷರ ನಡುವಿನ ಭಿನ್ನಾಭಿಪ್ರಾಯಗಳೂ ಈ ಚೇತನ್ ಪ್ರಹಾರದ ಹಿಂದಿರುವ ಸಾಧ್ಯತೆ ಇದೆ ಎಂಬ ಚರ್ಚೆಯೂ ಇದೆ.
ಜೊತೆಗೆ, ಸಿದ್ದರಾಮಯ್ಯ ಅವರನ್ನು ಬದಿಗೆ ಸರಿಸಿ, ಮುಖ್ಯಮಂತ್ರಿ ಗಾದಿಗೆ ಏರುವ ನಿಟ್ಟಿನಲ್ಲಿ ಭರ್ಜರಿ ತಂತ್ರಗಳನ್ನು ಹೆಣೆಯುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಅಂತಹ ತಮ್ಮ ತಂತ್ರಗಳ ಭಾಗವಾಗಿ ತಮ್ಮ ವರ್ಚಸ್ಸು ವೃದ್ಧಿಯ ಉದ್ದೇಶದಿಂದಲೇ, ಸಲಹೆ ಮತ್ತು ಮಾರ್ಗದರ್ಶನದ ಲೆಕ್ಕಾಚಾರದ ಮೇಲೆಯೇ ದ್ವಾರಕನಾಥ್ ಅವರನ್ನು ಪಕ್ಷಕ್ಕೆ ಕರೆತಂದಿದ್ದಾರೆ. ಸಿದ್ದರಾಮಯ್ಯ ಸಿಎಂ ಅವಧಿಯಲ್ಲಿ ಅವರಿಗೆ ಸಲಹೆಗಾರರಾಗಿದ್ದು ಅವರ ವರ್ಚಸ್ಸು ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯ ಪತ್ರಕರ್ತರಿಗೆ ಪರ್ಯಾಯವಾಗಿ, ಈ ಆಯ್ಕೆಯಾಗಿದೆ ಎಂಬ ಆಯಾಮದ ಬಗ್ಗೆಯೂ ಕೆಲವರು ಗಮನ ಸೆಳೆದಿದ್ದಾರೆ.
ಈ ನಡುವೆ, ಸಿದ್ದರಾಮಯ್ಯ ಅವರನ್ನು ದಲಿತರ ವಿರೋಧಿ ಎಂದು ಬಿಂಬಿಸುವ ಮೂಲಕ, ಜಾತಿ ಎಂದು ಬಿಂಬಿಸುವ ಮೂಲಕ ಅವರು ಮತ್ತೊಮ್ಮೆ ಅಧಿಕಾರಕ್ಕೇರುವುದನ್ನು ತಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ಸಿನ ಒಳಗೇ ಹಲವು ಶಕ್ತಿಗಳು ಪ್ರಯತ್ನ ನಡೆಸುತ್ತಿವೆ. ಅಂತಹ ಪ್ರಯತ್ನಗಳ ಭಾಗವಾಗಿಯೇ ಇದೀಗ ಚೇತನ್ ಅಹಿಂಸಾ ಅವರ ಮೂಲಕ ಸಿದ್ದರಾಮಯ್ಯ ಅವರ ಮೇಲೆ ದಾಳಿ ನಡೆಯುತ್ತಿದೆ ಎಂಬುದಂತೂ ಸಾಮಾಜಿಕ ಜಾಲತಾಣಗಳಲ್ಲು ಜೋರಾಗಿ ಕೇಳಿಬರುತ್ತಿದೆ.
ಒಟ್ಟಾರೆ, ನಟ ಚೇತನ್ ಅಹಿಂಸಾ ಅವರ ಸರಣಿ ಹೇಳಿಕೆಗಳು ದಲಿತರ ಪರ ಅವರ ನಿಲುವು ಮತ್ತು ಕಾಳಜಿಗಿಂತ, ಅವರ ಹೇಳಿಕೆಗಳ ಹಿಂದೆ ಇನ್ನಾರೋ ಇದ್ದಾರೆ ಎಂಬ ಕಾರಣಕ್ಕೆ ಹೆಚ್ಚು ಸದ್ದು ಮಾಡುತ್ತಿವೆ. ಚೇತನ್ ಹೆಗಲ ಮೇಲೆ ಬಂದೂಕು ಇಟ್ಟು, ಟ್ರಿಗರ್ ಒತ್ತುತ್ತಿರುವವರು ಸಿದ್ದರಾಮಯ್ಯ ಅವರದೇ ಪಕ್ಷದ ನಾಯಕರು ಮತ್ತು ಆ ನಾಯಕರು ಕರೆತಂದಿರುವ ‘ಬುದ್ದಿಜೀವಿ’ಗಳು ಎಂಬ ಚರ್ಚೆಗಳು ಸ್ವತಃ ಚೇತನ್ ವ್ಯಕ್ತಿತ್ವಕ್ಕೂ ಮಸಿ ಬಳಿಯುತ್ತಿವೆ. ಹಾಗಾಗಿ ಈ ಚರ್ಚೆ ಅಂತಿಮವಾಗಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಎಷ್ಟರಮಟ್ಟಿಗೆ ಮಸಿ ಬಳಿಯುತ್ತದೆ ಎಂಬುದನ್ನು ಕಾಲ ನಿರ್ಣಯಿಸಲಿದೆ. ಆದರೆ, ಸದ್ಯಕ್ಕೆ ಸ್ವತಃ ಚೇತನ್ ಮುಜುಗರದ ಸ್ಥಿತಿ ಎದುರಿಸುವಂತಾಗಿರುವುದು ಮಾತ್ರ ನಿಜ.