ಬಿಜೆಪಿ ತಾನು ಅಧಿಕಾರ ಕಳೆದುಕೊಂಡ ರಾಜ್ಯಗಳಿಗೆ ED, IT, CBI ಅನ್ನೊ ಮೂವರು ಅಳಿಯಂದಿರನ್ನು ಕಳಿಸುತ್ತದೆ ಎಂದು ಬಿಜೆಪಿ ವಿರುದ್ಧ ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಲೇವಡಿ ಮಾಡಿದ್ದಾರೆ.
ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪ್ರಕ್ರಿಯೆ ವೇಳೆ ಮಾತನಾಡಿದ ತೇಜಸ್ವಿ ಯಾದವ್, ಬಿಜೆಪಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಇದ್ದಾಗ, ಅಧಿಕಾರ ಇಲ್ಲದೆ ಇದ್ದಾಗ ಅಥವಾ ಯಾರ ಮೇಲಾದ್ರೂ ಭಯ ಇದ್ದಾಗ ಸಿಬಿಐ, ಇಡಿ ಹಾಗೂ ಐಟಿಯನ್ನು ಛೂ ಬಿಡುತ್ತೆ. ಅಷ್ಟೇ ಅಲ್ಲ, ನಾನು ಯಾವುದೇ ವಿದೇಶ ಪ್ರವಾಸಕ್ಕೆ ಹೋದಾಗ ಬಿಜೆಪಿ ನನ್ನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡುತ್ತೆ. ಆದರೆ ನೀರವ್ ಮೋದಿ ರೀತಿಯ ಹಲವು ವಂಚಕರು ದೇಶದಿಂದ ಪರಾರಿಯಾದರೂ ಬಿಜೆಪಿ ಏನೂ ಮಾಡಲಿಲ್ಲ ಎಂದು ವಿಶ್ವಾಸಮತ ಯಾಚನೆ ದಿನವೇ ಬಿಹಾರದಲ್ಲಿ ಆರ್ಜೆಡಿ ನಾಯಕರ ಬಿಜೆಪಿ ವಿರುದ್ಧ ಮೇಲೆ ಸಿಬಿಐ ದಾಳಿ ನಡೆದ ಹಿನ್ನೆಲೆ ತೇಜಸ್ವಿ ಯಾದವ್ ಕಾರವಾಗಿ ಟೀಕಿಸಿದ್ದಾರೆ.
ಜೆಡಿಯು ಹಾಗೂ ಆರ್ಜೆಡಿ ನಡುವಣ ದೋಸ್ತಿಯು ಬಿಹಾರದ ಅಭಿವೃದ್ದಿಗಾಗಿ ನಿರಂತರವಾಗಿ ಶ್ರಮಿಸುತ್ತದೆ ಎಂದ ತೇಜಸ್ವಿ ಯಾದವ್, ಬಿಹಾರ ಹಾಗೂ ದೇಶದ ಅಭಿವೃದ್ದಿಗಾಗಿ ಶ್ರಮಿಸುತ್ತೇವೆ ಎಂದರು. ಅಷ್ಟೇ ಅಲ್ಲ, ಈ ಬಾರಿ ನಮ್ಮನ್ನು ರನ್ ಔಟ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಹೇಳಿದರು.