ನಾ ದಿವಾಕರ
2024ರ ಲೋಕಸಭಾ ಚುನಾವಣೆಗಳ ನಾಲ್ಕನೆಯ ಹಂತದ ಮತದಾನ ಮುಗಿಯುವ ವೇಳೆಗೆ ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸುವಂತಹ ಅಂಕಿಅಂಶಗಳನ್ನು ಚುನಾವಣಾ ತಜ್ಞರು, ವಿಶ್ಲೇಷಕರು ಒದಗಿಸುತ್ತಿದ್ದಾರೆ. “ ಅಬ್ ಕಿ ಬಾರ್ ಚಾರ್ ಸೌ ಪಾರ್” ಎಂಬ ಘೋಷಣೆಯೊಡನೆ ತನ್ನ ಅಬ್ಬರದ ಪ್ರಚಾರವನ್ನು ಆರಂಭಿಸಿದ BJP ಎರಡನೆ ಹಂತದ ಮತದಾನದ ವೇಳೆಗೇ ತನ್ನ ಪ್ರಚಾರ ಚಹರೆಯನ್ನು ಬದಲಾಯಿಸಿದ್ದು, ಕಳೆದ ಎರಡು ಹಂತಗಳ ಪ್ರಚಾರಗಳಲ್ಲಿ ತನ್ನ ಮೂಲ ಕೋಮುವಾದಿ ಕಾರ್ಯಸೂಚಿಗೇ ಮರಳಿದಂತೆ ಕಾಣುತ್ತಿದೆ. ಪ್ರಧಾನಿ ಮೋದಿಯವರನ್ನೂ (Prime Minister Narendra Modi) ಸೇರಿದಂತೆ ಬಿಜೆಪಿ ನಾಯಕರ ಪ್ರಚಾರ ಭಾಷಣಗಳಲ್ಲಿ ಮುಸ್ಲಿಂ ದ್ವೇಷದ ಉದ್ವೇಗ ಎದ್ದು ಕಾಣುತ್ತಿದ್ದು, ಪಾಕಿಸ್ತಾನದ ಬಗ್ಗೆಯೇ ಹೆಚ್ಚು ಮಾತನಾಡಲಾಗುತ್ತಿದೆ.Lokshabha Elections 2024
![](https://pratidhvani.com/wp-content/uploads/2024/04/congress-flag.webp)
![](https://pratidhvani.com/wp-content/uploads/2024/05/Screenshot-2024-05-14-at-16-12-53-narendra-modi-Google-Search.png)
ಆರ್ಥಿಕ ಅಭಿವೃದ್ಧಿ, ಜಿಡಿಪಿ ದರದ ಏರಿಕೆ ಹಾಗೂ ವಿಶ್ವಗುರು ಮುಂತಾದ ಆಕರ್ಷಣೀಯ ವಿಚಾರಗಳಿಂದ ವಿಮುಖವಾಗಿರುವ ಆಡಳಿತಾರೂಢ ಬಿಜೆಪಿ ತನ್ನ ವಿಕಾಸ ಸಂಕಲ್ಪವನ್ನೂ ಬದಿಗೊತ್ತಿ ಹಳೆಯ ಚಾಳಿಯನ್ನೇ ಮುಂದುವರೆಸಿದೆ. ಗೆಲ್ಲಲೇಬೇಕೆಂಬ ಹಟ ಮತ್ತು ಆವರಿಸುತ್ತಿರುವ ಸೋಲಿನ ಛಾಯೆ ಸಹಜವಾಗಿಯೇ ಇಂತಹ ಅಸಹಾಯಕತೆಯನ್ನು ಸೃಷ್ಟಿಸುತ್ತದೆ. ಬಹುಶಃ ಬಿಜೆಪಿ ಈ ಕಾರಣದಿಂದಲೇ ತನ್ನ ಹತಾಶೆಯನ್ನು ಹೊರಗೆಡಹುತ್ತಿದೆ. ಹರಿಯಾಣದಲ್ಲಿ ಸರ್ಕಾರ ಬಹುಮತ ಕಳೆದುಕೊಂಡಿರುವುದು, ಗುಜರಾತ್ , ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಲ್ಲಿ ರಜಪೂತ ಮತದಾರರ ಆಕ್ರೋಶ, ಪಶ್ಚಿಮ ಉತ್ತರ ಪ್ರದೇಶದ ಜಾಟ್ ಸಮುದಾಯದ ವಿರೋಧ, ಒಡಿಷಾದಲ್ಲಿ ನವೀನ್ ಪಟ್ನಾಯಕ್ ಅವರ ಬಿಜೆಡಿಯೊಡನೆ ಮೈತ್ರಿ ಸಾಧಿಸಲು ವಿಫಲವಾಗಿರುವುದು, ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಕೇಜ್ರಿವಾಲ್ ಬಿಡುಗಡೆಯಿಂದ ಉಂಟಾಗುವ ಪ್ರಭಾವ ಇವೆಲ್ಲವೂ ಬಿಜೆಪಿ ನಾಯಕರ ನಿದ್ದೆಗೆಡಿಸಿರುವುದು ಸ್ಪಷ್ಟ.
![](https://pratidhvani.com/wp-content/uploads/2024/05/WhatsApp-Image-2024-05-14-at-10.26.17-AM.jpeg)
Graphics Mr. Jawahar , scholar and political analyst
ಹರಿಯಾಣದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುತ್ತಿದ್ದು ಕೆಲವು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್ನಲ್ಲಿ ಬಿಜೆಪಿ ಕಳೆದ ಬಾರಿಯಂತೆ ಕ್ಲೀನ್ ಸ್ವೀಪ್ ಮಾಡುವ ಸಾಧ್ಯತೆಗಳು ಕ್ಷೀಣಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಮೋದಿ-ಶಾ ಜೋಡಿಯ ಅಬ್ಬರದ ಪ್ರಚಾರವೂ ಈ ರಾಜ್ಯಗಳ ಮತದಾರರನ್ನು ಹೆಚ್ಚಾಗಿ ಆಕರ್ಷಿಸುತ್ತಿಲ್ಲ ಎಂದು ತಳಮಟ್ಟದ ವರದಿಗಳು ಹೇಳುತ್ತಿವೆ. ಕೋಮು ಧೃವೀಕರಣದ ಹೊರತಾಗಿಯೂ ಜನಸಾಮಾನ್ಯರನ್ನು ಕಾಡುತ್ತಿರುವ ನಿರುದ್ಯೋಗ, ಬೆಲೆ ಏರಿಕೆ ಮುಂತಾದ ಜಟಿಲ ಸಮಸ್ಯೆಗಳು ಮತದಾನದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳು ಕಾಣುತ್ತಿವೆ. ಪ್ರತಿ ಚುನಾವಣೆಯಲ್ಲೂ ಆಗುವಂತೆ ಈ ಬಾರಿಯೂ ಮತದಾನದ ಏರಿಳಿತದ (Vote Swing) ವ್ಯತ್ಯಯಗಳು ಅಂತಿಮ ಫಲಿತಾಂಶಗಳ ಮೇಲೆ ಪರಿಣಾಮ ಬೀರಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
![](https://pratidhvani.com/wp-content/uploads/2024/04/4vajgd1o_narendra-modi-ani_625x300_13_May_23-1024x630.webp)
2019ರಲ್ಲಿ ಪುಲ್ವಾಮಾ ದಾಳಿಯ ಪರಿಣಾಮವಾಗಿ ಬಿಜೆಪಿಯ ಪರವಾದ ಅಲೆ ಹೆಚ್ಚಾಗಿದ್ದು, ಪಕ್ಷದ ಮತಗಳಿಕೆಯ ಹೆಚ್ಚಳವನ್ನೂ ಗುರುತಿಸಲಾಗಿತ್ತು. ಆದರೆ 2024ರ ಚುನಾವಣೆಗಳಲ್ಲಿ vote percentage ಈ ಏರಿಳಿತದ ಪ್ರಭಾವ ಹೆಚ್ಚಿರುವುದಿಲ್ಲ. ಇದರ ಹೊರತಾಗಿಯೂ ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಶೇಕಡಾ 6 ರಿಂದ 7ರಷ್ಟು ಮತ ಏರಿಳಿತ (Vote Swing) ಉಂಟಾದರೂ ಅಚ್ಚರಿಯೇನಿಲ್ಲ. ಬೆಲೆ ಏರಿಕೆ, ಗ್ರಾಮೀಣ ಹಾಗೂ ಕೃಷಿ ಬಿಕ್ಕಟ್ಟು ಮತ್ತು ನಿರುದ್ಯೋಗದ ಸಮಸ್ಯೆಗಳು ತಳಮಟ್ಟದ ಸಮಾಜವನ್ನು ಬಾಧಿಸುತ್ತಿದ್ದು ಬಿಜೆಪಿ ತನ್ನ ಮತಗಳಿಕೆ ಪ್ರಮಾಣದಲ್ಲಿ ಕುಸಿತ ಎದುರಿಸಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಎನ್ಡಿಎ-ಬಿಜೆಪಿ ಪರವಾಗಿ ಮತ ಏರಿಳಿತ ಪ್ರಮಾಣವು ಶೇಕಡಾ 1 ರಿಂದ ಶೇಕಡಾ 2ರಷ್ಟೂ ಇರಲಾರದು ಎಂದು ಹೇಳಲಾಗುತ್ತಿದೆ. ಕೋಮುವಾದಿ ವಿಚಾರಗಳು, ಮುಸ್ಲಿಂ ವಿರೋಧಿ ಭಾಷಣಗಳು, ಭಯೋತ್ಪಾದನೆ ವಿರೋಧಿ ಅಂಶಗಳು, ಕೋವಿಡ್ ಲಸಿಕೆಯ ವಿಚಾರಗಳು ಇದಾವುದೂ ಈ ಬಾರಿ ಬಿಜೆಪಿ ಪರವಾದ ಅಲೆಯನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ. ಏಕೆಂದರೆ ಸಾಮಾನ್ಯ ಜನರಿಗೆ ಬೆಲೆ ಏರಿಕೆ, ನಿರುದ್ಯೋಗ ಮತ್ತು ಗ್ರಾಮೀಣ ಬಿಕ್ಕಟ್ಟು ಮುಖ್ಯವಾಗಿ ಕಾಣುತ್ತಿದೆ.
![](https://pratidhvani.com/wp-content/uploads/2024/05/rahul-gandhi-pti1-1681645429-1024x576.jpg)
2019ರಲ್ಲೇ ಬಿಜೆಪಿ ತನ್ನ ಮತಗಳಿಕೆ ಸಾಮರ್ಥ್ಯದ ಪರಾಕಾಷ್ಠೆ ತಲುಪಿದ್ದು, ಅದನ್ನೂ ಮೀರಿದ ಮತಗಳಿಕೆಗೆ ಯಾವುದೇ ರಾಜ್ಯಗಳಲ್ಲೂ ಅವಕಾಶ ಇಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ತದ್ವಿರುದ್ಧವಾಗಿ ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ಪಶ್ಚಿಮ ಉತ್ತರಪ್ರದೇಶದಲ್ಲಿ ರಜಪೂತ ಮತ್ತು ಜಾಟ್ ಸಮುದಾಯಗಳ ಮತಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ. ಇದು 2024ರ ಚುನಾವಣೆಗಳಲ್ಲಿ ನಿರ್ಣಾಯಕ ಪರಿಣಾಮವನ್ನು ಬೀರಲಿದೆ. ಚುನಾವಣಾ ತಜ್ಞ ಯೋಗೇಂದ್ರ ಯಾದವ್ ಅವರ ಅಭಿಪ್ರಾಯದಲ್ಲಿ ನಾಲ್ಕನೆ ಹಂತದ ಮತದಾನದ ವೇಳೆಗೇ ಅಂತಿಮ ಫಲಿತಾಂಶಗಳ ಚಿತ್ರಣ ಸ್ಪಷ್ಟವಾಗುತ್ತಿದ್ದು, ಈಗಾಗಲೇ ಮಗ್ಗುಲು ಬದಲಿಸಿರುವ ಸೂಚನೆಗಳು ಲಭ್ಯವಾಗಿದೆ. ಬಿಜೆಪಿ ತನ್ನ ಸ್ವಂತ ಬಲದ ಮೇಲೆ 272 ಸ್ಥಾನಗಳನ್ನು ಗಳಿಸುವುದೂ ದುಸ್ತರವಾಗಬಹುದು ಎಂದು ಹೇಳಿರುವ ಯಾದವ್, ಎನ್ಡಿಎ ಮೈತ್ರಿಕೂಟವೂ ಸಹ ಈ ಮಟ್ಟವನ್ನು ತಲುಪುವುದು ದುಸ್ಸಾಧ್ಯವಾಗಬಹುದು ಎಂದು ತಮ್ಮ ಟ್ವಿಟರ್ ಖಾತೆಯ ಮೂಲಕ ಹೇಳಿದ್ದಾರೆ.
![](https://pratidhvani.com/wp-content/uploads/2024/04/Mallikarjun-Kharge-1-1-1024x576.webp)
2019ರಲ್ಲಿ ಬಿಜೆಪಿ ಸ್ವತಃ 303 ಸ್ಥಾನಗಳಲ್ಲೂ ಎನ್ಡಿಎ ಮೈತ್ರಿಕೂಟ 353 ಸ್ಥಾನಗಳಲ್ಲೂ ಗೆಲುವು ಸಾಧಿಸಿತ್ತು. ಯೋಗೇಂದ್ರ ಯಾದವ್ ಅವರ ಸಮೀಕ್ಷೆಯ ಅನುಸಾರ 2024ರ ಚುನಾವಣೆಗಳಲ್ಲಿ ಬಿಜೆಪಿ-ಎನ್ಡಿಎ ಕರ್ನಾಟಕದಲ್ಲಿ 10 ಸ್ಥಾನಗಳನ್ನು, ಮಹಾರಾಷ್ಟ್ರದಲ್ಲಿ 10 ಸ್ಥಾನಗಳನ್ನು, ರಾಜಸ್ಥಾನ-ಗುಜರಾತ್ನಲ್ಲಿ ಕನಿಷ್ಠ 10 ಸ್ಥಾನಗಳನ್ನು, ಹರಿಯಾಣ-ಪಂಜಾಬ್-ದೆಹಲಿ-ಚಂದಿಘಡ್ -ಹಿಮಾಚಲ ಪ್ರದೇಶದಲ್ಲಿ 10 ಸ್ಥಾನಗಳನ್ನು, ಮಧ್ಯಪ್ರದೇಶ-ಛತ್ತಿಸ್ಘಡ್ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಕನಿಷ್ಠ 10 ಸ್ಥಾನಗಳನ್ನು, ಉತ್ತರಪ್ರದೇಶ ಮತ್ತು ಉತ್ತರಖಂಡ್ ರಾಜ್ಯಗಳಲ್ಲಿ ಕನಿಷ್ಠ 15 ಸ್ಥಾನಗಳನ್ನು, ಬಿಹಾರದಲ್ಲಿ ಕನಿಷ್ಠ 15 ಸ್ಥಾನಗಳನ್ನು, ಪಶ್ಚಿಮ ಬಂಗಾಲ-ಈಶಾನ್ಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕನಿಷ್ಠ 10 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಯೋಗೇಂದ್ರ ಯಾದವ್ ಅವರ ಸಮೀಕ್ಷೆಯ ಅನುಸಾರ ಬಿಜೆಪಿ ಸ್ವತಃ 75 ಸ್ಥಾನಗಳನ್ನೂ, ಎನ್ಡಿಎ ಮೈತ್ರಿಕೂಟ 100 ಸ್ಥಾನಗಳನ್ನೂ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಮತ್ತೊಂದು ಬದಿಯಲ್ಲಿ ತಮಿಳುನಾಡು-ಕೇರಳ-ತೆಲಂಗಾಣದಲ್ಲಿ 5 ಸ್ಥಾನಗಳಲ್ಲಿ, ತೆಲುಗು ದೇಶಂ ಪಕ್ಷದೊಂದಿಗೆ ಮೈತ್ರಿ ಹೊಂದಿರುವ ಆಂಧ್ರ ಪ್ರದೇಶದಲ್ಲಿ 10 ಸ್ಥಾನಗಳಲ್ಲಿ, ಎನ್ಡಿಎ ಮೈತ್ರಿಕೂಟ ಗೆಲುವು ಸಾಧಿಸುವ ಸಾಧ್ಯತೆಗಳಿವೆ.
![](https://pratidhvani.com/wp-content/uploads/2024/04/Congress_leader_Priyanka_Gandhi_Vadra_1713597255479_1713597255654-1024x576.webp)
ಒಟ್ಟಾರೆಯಾಗಿ 2024ರ ಚುನಾವಣೆಗಳಲ್ಲಿ ಬಿಜೆಪಿ (BJP) 70 ಸ್ಥಾನಗಳನ್ನು ಕಳೆದುಕೊಳ್ಳಲಿದ್ದು ಎನ್ಡಿಎ ಮೈತ್ರಿಕೂಟಕ್ಕೆ 15 ಸ್ಥಾನಗಳ ನಷ್ಟವಾಗಲಿದೆ ಎಂದು ಯೋಗೇಂದ್ರ ಯಾದವ್ ಹೇಳುತ್ತಾರೆ. ಈ ಅಂಕಿಅಂಶಗಳನ್ನು ಗಮನಿಸಿದರೆ ಎನ್ಡಿಎ ಮೈತ್ರಿಕೂಟವೇ ಬಹುಮತಕ್ಕೆ ಅಗತ್ಯವಾದ 272 ಸ್ಥಾನಗಳನ್ನು ಗಳಿಸುವುದು ಕಷ್ಟವಾಗಿದೆ. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಈ ತಳಮಟ್ಟದ ವಾಸ್ತವಗಳನ್ನು ಮರೆಮಾಚಿ ಬಿಜೆಪಿ 400 ಸ್ಥಾನಗಳನ್ನು ಗಳಿಸಲಿದೆ ಎಂಬ ಪ್ರಚಾರ ಮಾಡಲಾಗುತ್ತಿದೆ ಎಂದು ಯೋಗೇಂದ್ರ ಯಾದವ್ ಆರೋಪಿಸುತ್ತಾರೆ. ಇದೇ ಅಭಿಪ್ರಾಯವನ್ನು ಬಹುಮಟ್ಟಿಗೆ ಅನುಮೋದಿಸುವ ಒಂದು ಸ್ವತಂತ್ರ ಸಮೀಕ್ಷೆಯೂ ಹೊರಬಿದ್ದಿದ್ದು, ಏಳು ಹಂತಗಳ ಮತ ಏರಿಳಿತದ ಪ್ರಮಾಣವನ್ನು ಅಂದಾಜು ಮಾಡಿ, ಸಂಭಾವ್ಯ ಫಲಿತಾಂಶದ ವಿವರಗಳನ್ನು ಪ್ರಕಟಿಸಲಾಗುತ್ತಿದೆ. ಮತ ಏರಿಳಿಕೆಯ ಪ್ರಮಾಣವು ಬಿಜೆಪಿ-ಎನ್ಡಿಎ ವಿರುದ್ಧ ಶೇ 5ರಷ್ಟಿದ್ದರೆ ಇಂಡಿಯಾ ಒಕ್ಕೂಟಕ್ಕೆ 188, ಎನ್ಡಿಎ ಗೆ 284, ಅನ್ಯರಿಗೆ 71 ಸ್ಥಾನಗಳು ಲಭಿಸುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಬಿಜೆಪಿ ವಿರೋಧಿ ಮತ ಏರಿಳಿಕೆ ಶೇ 10ರಷ್ಟಾದರೆ ಆಗ ಇಂಡಿಯಾ ಒಕ್ಕೂಟಕ್ಕೆ 227, ಎನ್ಡಿಎಗೆ (NDA) 238 ಮತ್ತು ಅನ್ಯರಿಗೆ 78 ಸ್ಥಾನಗಳು ಲಭಿಸಲಿವೆ. ಬಿಜೆಪಿ ವಿರೋಧಿ ಮತ ಏರಿಳಿಕೆಯ ಪ್ರಮಾಣವು ಶೇ 15ರಷ್ಟಾದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ 245, ಎನ್ಡಿಎಗೆ 218 ಮತ್ತು ಅನ್ಯರಿಗೆ 80 ಸ್ಥಾನಗಳು ಲಭಿಸಲಿವೆ ಎಂದು ಚುನಾವಣಾ ತಜ್ಞರು ಅಭಿಪ್ರಾಯ ಪಡುತ್ತಾರೆ.
(ಯೋಗೆಂದ್ರ ಯಾದವ್ ಅವರ ಸಮೀಕ್ಷೆಯ ವರದಿಗಾಗಿ ಜಿಗ್ನೇಶ್ ಮೆವಾನಿ ಅವರ ಎಕ್ಸ್-ಟ್ವಿಟರ್ ಖಾತೆಯನ್ನು ನೋಡಬಹುದು. @jigneshmevani )
![](https://pratidhvani.com/wp-content/uploads/2024/04/MODI-2.webp)
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಪ್ರಭು, ಮತದಾರರ ನಿರ್ಧಾರವೇ ಅಂತಿಮ ಮತ್ತು ನಿರ್ಣಾಯಕ. ಈ ವಾಸ್ತವದ ಅರಿವಿದ್ದರೂ ರಾಜಕೀಯ ಪಕ್ಷಗಳು ಜಾತಿ, ಮತ, ಧರ್ಮ, ಕೋಮು ಹೀಗೆ ವಿಭಜಕ ತಂತ್ರಗಳ ಮೂಲಕ ಮತದಾರರನ್ನು ಓಲೈಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ. ಆದರೆ ತಳಮಟ್ಟದ ಸಮಾಜದಲ್ಲಿ ಶ್ರೀಸಾಮಾನ್ಯನಿಗೆ ಮುಖ್ಯವಾಗುವುದು ಜೀವನ ಮತ್ತು ಜೀವನೋಪಾಯದ ಮಾರ್ಗಗಳು, ಸುಸ್ಥಿರ ಬದುಕು ಹಾಗೂ ಭವಿಷ್ಯ, ರೋಟಿ ಕಪಡಾ ಮತ್ತು ಮಕಾನ್. ಇದನ್ನು ಪೂರೈಸದ ಯಾವುದೇ ಸರ್ಕಾರವೂ ಸಹ ಎಷ್ಟೇ ಭಾವನಾತ್ಮಕ ಉನ್ಮಾದದ ಸನ್ನಿವೇಶವನ್ನು ಸೃಷ್ಟಿಸಿದರೂ ಅದು ಕೊನೆಗಾಣಲೇಬೇಕಾಗುತ್ತದೆ. ಬಹುಶಃ 2024ರ ಮಹಾಚುನಾವಣೆಗಳು ಇದನ್ನು ಸಾಬೀತುಪಡಿಸುವತ್ತ ಸಾಗುತ್ತಿವೆ.