ರಾಜ್ಯ ರಾಜಕಾರಣದಲ್ಲಿ ಭದ್ರಬುನಾದಿ ಹಾಕಿಕೊಂಡು ಲೋಕಸಭಾ ಚುನಾವಣಾ ಕಡೆಗೆ ಮುನ್ನುಗ್ಗಿ ಹೋಗುತ್ತಿರುವ ಕಾಂಗ್ರೆಸ್ ಕಟ್ಟಿ ಹಾಕಲು ಬಿಜೆಪಿ ಹಾಗು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿವೆ. ಶತ್ರುವಿನ ಶತ್ರು ಮಿತ್ರ ಅನ್ನೋ ರೀತಿಯಲ್ಲಿ ಕಾಂಗ್ರೆಸ್ಗೆ ಸಮಾನ ಶತ್ರುಗಳಾಗಿರುವ ಬಿಜೆಪಿ ಹಾಗು ಜೆಡಿಎಸ್ ರಾಜಕಾರಣ ಶುರು ಮಾಡಿವೆ. ಆದರೆ ಆರಂಭದಲ್ಲೇ ದಂತಭಗ್ನ ಅನ್ನೋ ರೀತಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಹಾಗು ಜೆಡಿಎಸ್ ಹೊಂದಾಣಿಕೆಗೆ ಹಿನ್ನಡೆ ಉಂಟಾಗಿದೆ. ಕುಮಾರಸ್ವಾಮಿ ಜೊತೆಗೆ ವಿಪಕ್ಷ ನಾಯಕನಾಗಿ ಆರ್. ಅಶೋಕ್ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸದನದಲ್ಲಿ ಅಬ್ಬರಿಸಿದ್ರೆ ಕಾಂಗ್ರೆಸ್ ಕಕ್ಕಾಬಿಕ್ಕಿ ಆಗುವಂತೆ ಮಾಡಬೇಕು ಎನ್ನುವುದು ಬಿಜೆಪಿ ಹೈಕಮಾಂಡ್ ನಾಯಕರ ತಂತ್ರವಾಗಿತ್ತು. ಆದರೆ ಬಿಜೆಪಿ ಒಳಗಿನ ಬಿಕ್ಕಟ್ಟು ಸದನದಲ್ಲಿ ಬಹಿರಂಗ ಆಗುವ ಮೂಲಕ ರಾಜ್ಯದ ಜನರ ಎದುರಲ್ಲಿ ಬೆತ್ತಲಾದಂತೆ ಆಗಿದೆ.
ಸದನದಲ್ಲೇ ಶುರುವಾಯ್ತು ಕೇಸರಿ ಸೇನೆಯ ಸಮರ..!
ಆರ್. ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ ಬಳಿಕ ಪಕ್ಷದ ಒಳಗೆ ಶುರುವಾಗಿದ್ದ ಸಮರ ಗುರುವಾರ ಸದನದಲ್ಲೂ ಹೊರ ಬಂತು. ವಿಪಕ್ಷ ನಾಯಕ ಆರ್. ಅಶೋಕ್ ನಿರ್ಧಾರದ ವಿರುದ್ಧವೇ ಉಳಿದ ಬಿಜೆಪಿ ಶಾಸಕರ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ವಿಪಕ್ಷ ನಾಯಕರು ಸಭಾತ್ಯಾಗ ಮಾಡಬಾರದಿತ್ತು ಎಂದು ಕೆಲವು ಶಾಸಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಧರಣಿ ಮಾಡಬಾರದಿತ್ತು ಎಂದು ಕೆಲವು ಶಾಸಕರ ಅಸಮಾಧಾನ ತೋರಿಸಿದ್ದಾರೆ. ವಾಚನಾಲಯದಲ್ಲಿ ಸೇರಿ ಚರ್ಚೆ ಮಾಡಿದ ಬಿಜೆಪಿ ಶಾಸಕರು, ಜಯನಗರ ಶಾಸಕ ಕೆ.ಸಿ ರಾಮಮೂರ್ತಿ ಮೇಲೆ ಶಾಸಕ ಅಭಯ್ ಪಾಟೀಲ್ ಕೋಪತಾಪ ಪ್ರದರ್ಶನ ಮಾಡಿದ್ದಾರೆ. ಈ ವೇಳೆ ನಾನು ಬೆಂಗಳೂರಿಗೆ ಹೋಗುತ್ತೇನೆ, ಇವರನ್ನು ಕಟ್ಟಿಕೊಂಡರೆ ಪಕ್ಷ ಇನ್ನಷ್ಟು ಕೆಳಕ್ಕೆ ಹೋಗುತ್ತದೆ ಎಂದು ಸಿಟ್ಟು ಪ್ರದರ್ಶನ ಮಾಡಿದ ಎಸ್. ಆರ್. ವಿಶ್ವನಾಥ್ ಕೂಡ ಸದನದಿಂದ ಹೊರಟು ಹೋದ್ರು.
ಯತ್ನಾಳ್ ಮನವಿಗೂ ಕ್ಯಾರೇ ಎನ್ನದ ಅಭಯ್ ಪಾಟೀಲ್!
ಕೆಲವು ಶಾಸಕರು ಸದನದಿಂದ ಹೊರಡುವ ನಿರ್ಧಾರದ ವೇಳೆ ಶಾಸಕ ಅಭಯ ಪಾಟೀಲ್ ಮಾತ್ರ ಸದನದ ಬಾವಿಯಲ್ಲಿ ನಿಂತು ಧರಣಿ ಮಾಡಿದ್ದರು. ಆ ನಂತರ ಶಾಸಕ ಅಭಯ್ ಪಾಟೀಲ್ ಕೂಡ ಅಶೋಕ್ ಮೇಲೆ ಕಿಡಿ ಕಾರಿದ್ರು. ಸದನದ ಬಾವಿಗಿಳಿದು ಧರಣಿ ಮಾಡಬೇಕು ಅಂತಾ ಅಂದುಕೊಂಡಿದ್ದೆವು. ಆದರೆ, ಇವರು ಸಭಾತ್ಯಾಗ ಮಾಡಿದ್ದಾರೆ. ಇನ್ನು ಮುಂದೆ ಶಾಸಕಾಂಗ ಸಭೆಗೆ ಬರೋದಿಲ್ಲ. ಇವರಿಂದ ನಾನು ರಾಜಕೀಯಕ್ಕೆ ಬಂದಿಲ್ಲ. ರಾಜಕಾರಣ ಮಾಡೋದು ನನಗೆ ಗೊತ್ತಿದೆ ಎಂದು ಹೇಳಿ ಅಭಯ್ ಪಾಟೀಲ್ ಹೊರಟು ನಿಂತರು. ಈ ವೇಳೆ ಸಂಧಾನ ನಡೆಸಲು ಮುಂದಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ನಿನ್ನ ಜೊತೆ ಇದ್ದೇನೆ ಬಾ ಎಂದು ಕರೆದರು. ಆದರೂ ನನಗೆ ಈ ರಾಜಕಾರಣ ಬೇಕಿಲ್ಲ ಎಂದು ಕೋಪದಿಂದ ಹೊರಟ ಅಭಯ್ ಪಾಟೀಲ್, ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನು ಬಹಿರಂಗ ಮಾಡಿದರು.
![](https://pratidhvani.com/wp-content/uploads/2023/12/Untitled-design-65_11zon-1024x576.jpg)
ದೆಹಲಿಗೆ ಬಿ.ವೈ ವಿಜಯೇಂದ್ರ ಭೇಟಿ, ಹೈಕಮಾಂಡ್ ಜೊತೆ ಚರ್ಚೆ..!
ಅಧಿವೇಶನದಲ್ಲೇ ಬಿಜೆಪಿ ಭಿನ್ನಮತ ಸ್ಫೋಟಗೊಂಡು ಡ್ರಾಮಾಯಣ ನಡೆಯುತ್ತಿದೆ. ಇದರ ನಡುವೆ ಶುಕ್ರವಾದ ಬೆಳಗ್ಗೆ ಬೆಳಗಾವಿಯಿಂದಲೇ ದೆಹಲಿಗೆ ಪ್ರಯಾಣ ಬೆಳೆಸಿ ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಸದನ ಆರಂಭಕ್ಕೂ ಮೊದಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅಧ್ಯಕ್ಷರು ಹಾಗು ವಿರೋಧ ಪಕ್ಷದ ನಾಯಕನ ಸ್ಥಾನ ಒಂದು ವರ್ಷ ಮಾತ್ರ ಎಂದಿದ್ದೂ ಸೇರಿದಂತೆ ಇತ್ತೀಚಿಗೆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಹೈಕಮಾಂಡ್ ಗಮನಕ್ಕೆ ತರಲಾಗುತ್ತದೆ ಎನ್ನಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಎರಡನೇ ಬಾರಿಗೆ ದೆಹಲಿಗೆ ಭೇಟಿ ನೀಡುತ್ತಿರುವ ವಿಜಯೇಂದ್ರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಆಗಲಿದ್ದಾರೆ ಎನ್ನಲಾಗಿದೆ. ಇದೇ ವೇಳೆ ವಿಧಾನ ಪರಿಷತ್ ವಿಪಕ್ಷ ನಾಯಕ ಹಾಗು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕನ ನೇಮಕ ಮಾಡುವ ಬಗ್ಗೆ ಹೈಕಮಾಂಡ್ ಜೊತೆಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಕೃಷ್ಣಮಣಿ