ರಾಜ್ಯ ರಾಜಕಾರಣದಲ್ಲಿ ಸುದೀರ್ಘ ಚರ್ಚೆಗೊಳಗಾಗಿದ್ದ ಸಿಎಂ ಬದಲಾವಣೆ ವಿಚಾರ ಒಂದು ತಾರ್ಕಿಕ ಅಂತ್ಯಕ್ಕೆ ಬಂದಾಗಿದೆ. ಹೈಕಮಾಂಡ್ ವಿರುದ್ಧ ಯಡಿಯೂರಪ್ಪ ಅವರೇ ಮೇಲುಗೈ ಸಾಧಿಸಿದ್ದಾರೆಂಬ ವಿಶ್ಲೇಷಣೆಗಳು ರಾಜಕೀಯ ತಜ್ಞರು ಮಾಡುತ್ತಿದ್ದಾರೆ.
ಬಿಎಸ್ವೈ ಆಪ್ತರೂ ಆಗಿರುವ, ಮೂಲ ಬಿಜೆಪಿಗನಲ್ಲದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಾಗಿನಿಂದ ಚರ್ಚೆಯ ಘಟ್ಟ ಬೇರೆಯದ್ದೇ ಮಜಲು ತಲುಪಿದೆ. ಸಂಘಮೂಲದ, ಸಂಘನಿಷ್ಠೆಯ ನಾಯಕರಿಗೆ ಸಿಎಂ ಗಾದಿ ದೊರೆಯದಿರುವುದು ಬಿಎಸ್ವೈ ವಿರೋಧಿ ಪಾಳೆಯದ, ಸಂಘಕ್ಕೆ ಹತ್ತಿರದ ನಾಯಕರಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ.
ಜನತಾ ಪರಿವಾರದ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ತನ್ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹನಾಗಿರುವ ಸಂಘಮೂಲ ನಾಯಕರೇ ಇಲ್ಲವೆನ್ನುವುದನ್ನು ನಿರೂಪಿಸದಂತಿದೆ. ಇದು ಕಾಂಗ್ರೆಸ್ ಪಾಲಿಗೆ ಆಹಾರವಾಗಿ ಪರಿಣಮಿಸಿದ್ದು ಇದೇ ಅಂಶವನ್ನು ಇಟ್ಟುಕೊಂಡು ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿದೆ.
ಇದೇ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಬಿಜೆಪಿ ತನ್ನ ಕಾರ್ಯಕರ್ತರನ್ನ ಗೂಂಡಾಗಳಾಗಿ, ಸಮಾಜಘಾತುಕರನ್ನಾಗಿ ಬೆಳೆಸುತ್ತದೆಯೇ ಹೊರತು ಎಂದಿಗೂ ಆಡಳಿತಗಾರರನ್ನಾಗಿಸುವುದಿಲ್ಲ! 17 ವಲಸೆ ಶಾಸಕರಂತೆ, ಆಡಳಿತಕ್ಕೆ ಬಿಜೆಪಿ ಇತರ ಪಕ್ಷಗಳಲ್ಲಿ ಬೆಳೆದ ನಾಯಕರನ್ನು ಅಪಹರಿಸುತ್ತದೆ! ಸಿಎಂ ಬಸವರಾಜ ಬೊಮ್ಮಾಯಿ ಅದರಲ್ಲೊಬ್ಬರು! ಕರ್ನಾಟಕದ ಬಿಜೆಪಿ ಕಾರ್ಯಕರ್ತರು ಬೆಂಕಿ ಹಚ್ಚಿ, ದೊಂಬಿ ಮಾಡಲಷ್ಟೇ ಸೀಮಿತ!” ಎಂದು ಹೇಳಿದೆ.
ಕಾಂಗ್ರೆಸ್ ಟೀಕೆಯಲ್ಲೂ ಹುರುಳಿಲ್ಲದಿಲ್ಲ. ಕರ್ನಾಟಕದಲ್ಲಿ ಬಿಜೆಪಿಯ ಶೈಶಾವಸ್ಥೆಯಿಂದ ಈವರೆಗೂ ಬಿಜೆಪಿ ನಿಷ್ಠನಾಗಿರುವ ಕೆ ಎಸ್ ಈಶ್ವರಪ್ಪರಂತಹ ನಾಯಕರನ್ನು ಇನ್ನೂ ಸಿಎಂ ಮಾಡಲು ಮುಂದೆ ಬಾರದಿರುವುದು ವಿಪರ್ಯಾಸ. ಒಂದು ಹಂತದಲ್ಲಿ ಈಶ್ವರಪ್ಪ ಅವರು ಮುಖ್ಯಮಂತ್ರಿ ಆಗುವ ಇಂಗಿತವನ್ನು ಬಹಿರಂಗವಾಗಿಯೇ ಪ್ರಕಟಿಸಿದ್ದರು. ಸಿಎಂ ಹುದ್ದೆಗೆ ತಾನು ಸಮರ್ಥ ಎಂದು ಹೇಳಿದ್ದ ಈಶ್ವರಪ್ಪ, ಹುದ್ದೆ ಕೊಟ್ಟರೆ ನಿಭಾಯಿಸುವುದಾಗಿಯೂ ಹೇಳಿದ್ದರು.
ಆದರೆ, ಬಿಜೆಪಿ ʼಆಯಕಟ್ಟಿನʼ ಸ್ಥಳದಲ್ಲಿ ಈಶ್ವರಪ್ಪರ ಮನದಿಂಗಿತ ಪ್ರತಿಫಲಿಸಿದ್ದೇ ಇಲ್ಲ. ಸಿಎಂ ಆಯ್ಕೆವರೆಗೂ ಇದ್ದ ರೇಸಿನಲ್ಲಿ ಈಶ್ವರಪ್ಪ ಅವರ ಹೆಸರು ಕೇಳಿ ಬರಲೇ ಇಲ್ಲ. ಇರಲಿ, ಸಂಘಮೂಲದ ಈಶ್ವರಪ್ಪರಂತಹ ನಾಯಕರಿಗೆ ಕೊಡದ ಸಿಎಂ ಸ್ಥಾನ ಬೊಮ್ಮಾಯಿಯಂತಹ ವಲಸಿಗ ನಾಯಕರಿಗೆ ನೀಡಿರುವುದು ಚರ್ಚಾಸ್ಪದವೇ..
ಬಿಜೆಪಿ ಒಳ ರಾಜಕೀಯ, ಆಂತರಿಕವಾಗಿ ಬಿಎಸ್ವೈ ಪ್ರಭಾವಗಳೇನೇ ಇರಲಿ.. ಬೊಮ್ಮಾಯಿಗಿಂತ ಹಿರಿಯ ಸಂಘನಿಷ್ಠ ನಾಯಕರು ಬಿಜೆಪಿಯಲ್ಲಿದ್ದಾರೆ. ಅವರಿಗೆ ಸಿಎಂ ಸ್ಥಾನ ಮಾತ್ರವಲ್ಲ, ಸಚಿವಾಕಾಂಕ್ಷಿಯಾಗಲೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ಬಿಜೆಪಿಯಲ್ಲಿದೆ. ಇದು ಮೂಲ ಬಿಜೆಪಿಗರ ಅಸಮಾಧಾನಕ್ಕೆ ಮುಖ್ಯ ಕಾರಣವೂ ಹೌದು.!