ಬಿಡದಿ: ಬಿಡದಿ ಟೌನ್ಶಿಪ್ ಯೋಜನೆ ವಿಚಾರವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿ ತೀವ್ರಗೊಂಡಿದೆ. ಜೆಡಿಎಸ್ ಹಮ್ಮಿಕೊಂಡಿದ್ದ ಮೂರು ದಿನಗಳ ಪಾದಯಾತ್ರೆ ಎರಡನೇ ದಿನಕ್ಕೆ ಮೊಟಕುಗೊಂಡ ಬೆನ್ನಲ್ಲೇ, ಯೂತ್ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಭವನದ ಮೇಲೆ ಸ್ಟಿಕರ್ಗಳನ್ನು ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಭವನದಲ್ಲಿ ಸ್ಟಿಕರ್ಗಳನ್ನು ಅಂಟಿಸಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು, ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಯ ಉದ್ದೇಶವನ್ನೇ ಪ್ರಶ್ನಿಸಿ ವ್ಯಂಗ್ಯವಾಡಿದ್ದಾರೆ. “ಇದು ಬಿಡದಿ ಹೋರಾಟವೇ? ನಿಮ್ಮ ಬೇನಾಮಿ ಆಸ್ತಿ ರಕ್ಷಿಸುವ ಹೋರಾಟವೇ?” ಎಂದು ಪ್ರಶ್ನಿಸುವ ಮೂಲಕ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಅಲ್ಲದೆ, “ಜೆಡಿಎಸ್ ಪಾದಯಾತ್ರೆ ಬೇನಾಮಿ ಆಸ್ತಿ ಉಳಿಸಿಕೊಳ್ಳುವ ಯಾತ್ರೆ” ಎಂದು ಆರೋಪಿಸಿರುವ ಕಾರ್ಯಕರ್ತರು, “ಬೇನಾಮಿ ಆಸ್ತಿ ಬಿಡಿ, ಆಮೇಲೆ ರೈತರ ಪರವಾಗಿ ಮಾತನಾಡಿ” ಎಂದು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ಸ್ಟಿಕರ್ ಅಂಟಿಸುವ ಮೂಲಕ ಯೂತ್ ಕಾಂಗ್ರೆಸ್ ಕಾರ್ಯಕರ್ತರು “ಆಹಾ… ಏನ್ ಗುರು ಸಾಂಕೇತಿಕ ಬೆಂಬಲನಾ?” ಎಂಬ ವ್ಯಂಗ್ಯ ಸಂದೇಶವನ್ನೂ ನೀಡಿದ್ದಾರೆ.
ಬಿಡದಿ ಟೌನ್ಶಿಪ್ ವಿಚಾರವಾಗಿ ಈಗಾಗಲೇ ರಾಜಕೀಯ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿದ್ದು, ಜೆಡಿಎಸ್ ಪಾದಯಾತ್ರೆ ಎರಡನೇ ದಿನಕ್ಕೆ ಮೊಟಕುಗೊಂಡಿರುವುದು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸ್ಟಿಕರ್ ಪ್ರತಿಭಟನೆ ಇದೀಗ ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.






