ಕೇಂದ್ರ ಸರ್ಕಾರವು ದೇಶದ ಎಲ್ಲ ನಾಗರಿಕರಿಗೂ ಕೋವಿಡ್ ನಿರೋಧಕ ಲಸಿಕೆ ನೀಡಲು ತೀರ್ಮಾನಿಸಿದೆ. ಅದರಂತೆ ಕಳೆದ ಮೇ 10 ರಂದು, ಕರ್ನಾಟಕದಲ್ಲಿ 18-44 ವಯಸ್ಸಿನವರಿಗೆ ವ್ಯಾಕ್ಸಿನೇಷನ್ ಪ್ರಾರಂಭವಾದಾಗ ಬೆಂಗಳೂರಿನ ನಾಗರಿಕರು ಇನ್ನಾದರೂ ಎಲ್ಲರಿಗೂ ಲಸಿಕೆ ಸಿಗಲಿದೆ ಜೊತೆಗೆ ಅನ್ ಲೈನ್ ಮೂಲಕ ರಿಜಿಸ್ಟರ್ ಮಾಡಿಸುವುದರಿಂದ ಕಾಯುವ ರಗಳೆ ಇಲ್ಲ ಎಂದೇ ಭಾವಿಸಿದ್ದರು. ಆದರೆ ಆನ್ ಲೈನ್ ನಲ್ಲಿ ರಿಜಿಸ್ಟರ್ ಮಾಡಿಸಿದಾಗಲೇ ನಿಜವಾದ ತೊಂದರೆಯ ಅರಿವು ಆಯಿತು. ಹೇಳಿ ಕೇಳಿ ಬೆಂಗಳೂರಿನಲ್ಲಿ ಎಲ್ಲಾ ರಾಜ್ಯಗಳ ಜನರೂ ಇರುವಂತಹ ಮಹಾನಗರ ಹಾಗು ಐಟಿಬಿಟಿ ನಗರವೂ ಆಗಿರುವುದರಿಂದ ಲಸಿಕೆ ಪಡೆದುಕೊಳ್ಳಲು ಎಲ್ಲರಿಗೂ ಆಸಕ್ತಿ ಇದೆ. ಆದರೆ ಲಸಿಕೆ ಪಡೆಯಲು ಸ್ಥಳ ಆಯ್ಕೆ ಮಾಡಲು ಹೋದರೆ ಬೆಂಗಳೂರಿನ ಮನೆ ಸಮೀಪದ ಎಲ್ಲ ಸ್ಲಾಟ್ ಗಳು ಭರ್ತಿಯೇ ಆಗಿವೆ. ಹಾಗಾಗಿ ಅನೇಕರು ಬೆಂಗಳೂರಿನಿಂದ 80 ಕಿ.ಮೀ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ತಾಲ್ಲೂಕು ಗೌರಿಬಿದನೂರಿನ ಲಸಿಕೆ ಕೇಂದ್ರದಲ್ಲಿ ಕೆಲವು ಸ್ಲಾಟ್ಗಳು ಲಭ್ಯವಿವೆ ಎಂದು ತಿಳಿದು ಅಲ್ಲಿಗೆ ಬುಕ್ ಮಾಡಿದರು. ಲಸಿಕೆ ಪಡೆಯಲೆಂದೇ 180 ಕಿಲೋಮೀಟರ್ ದೂರ ಪ್ರಯಾಣಿಸುವುದು ನಿಜಕ್ಕೂ ಕೆಟ್ಟ ಅನುಭವ ಆಗಿತ್ತು ಎಂದು ಆರ್ಟಿ ನಗರದ 38 ವರ್ಷದ ಐಟಿ ಉದ್ಯೋಗಿ ಚಾರುಲತಾ ಹೇಳಿದ್ದಾರೆ.
ನಿತ್ಯವೂ ಕೋವಿಡ್ ನಿಂದ ಸಂಭವಿಸುತ್ತಿರುವ ಸಾವುಗಳ ಬಗ್ಗೆ ನಾನು ಕೇಳುತ್ತಿರುತ್ತೇನೆ. ಈಗ ಯಾವುದೇ ಆಸ್ಪತ್ರೆಗಳಲ್ಲೂ ಬೆಡ್ ಗಳು ಲಭ್ಯವಿಲ್ಲ. ಈ ಖಾಯಿಲೆ ಬಂದರೆ ಕುಟುಂಬಸ್ಥರೇ ಮುಟ್ಟಲು , ನೋಡಲು ಸಾದ್ಯವಾಗದೇ ಬೀದಿ ಹೆಣ ಆಗಬೇಕಾಗುತ್ತದೆ. ಹಾಗಾಗಿ ಲಸಿಕೆ ಪಡೆಯುವುದೇ ನನಗಿದ್ದ ಏಕೈಕ ಮಾರ್ಗ ಆಗಿತ್ತು ಎಂದು ಅವರು ಹೇಳಿದರು. ಇದೇ ರೀತಿ ಇವರ ಸಹೋದ್ಯೋಗಿ ಗುಣರಾಮ್ ಅವರೂ ಕೂಡ ತಮ್ಮ ಪತ್ನಿ ಪವಿತ್ರ ಅವರೊಂದಿಗೆ ಗೌರಿಬಿದನೂರಿನ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ. ಆದರೆ ಲಸಿಕೆ ಪಡೆದವರೇ ಅದೃಷ್ಟ ವಂತರು ನಾನು ಎರಡು ದಿನಗಳಿಂದ ಸ್ಲಾಟ್ ಗಾಗಿ ಪ್ರಯತ್ನಿಸುತಿದ್ದರೂ ಸ್ಲಾಟ್ ಮಾತ್ರ ಸಿಕ್ಕಲಿಲ್ಲ ಎಂದು ಕೆಂಗೇರಿಯ ಮನೋಜ್ ಎಂಬ ವ್ಯಾಪಾರಿ ಹೇಳಿದರು. ಸಿಲಿಕಾನ್ ಸಿಟಿಯು ದೇಶದಲ್ಲೇ ಅತೀ ಹೆಚ್ಚು ಅಭಿವೃದ್ದಿ ಹೊಂದಿದ ನಗರವಾಗಿದ್ದು ಲಸಿಕೆಗಾಗಿ ಜನರು ಪರದಾಡ ಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬೆಂಗಳೂರು ರಾಷ್ಟ್ರ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ಪ್ರವಾಸೋದ್ಯಮಕ್ಕೂ ಹೆಸರುವಾಸಿ ಆಗಿದೆ. ಅದರೆ ಇಲ್ಲಿ ಇರುವ ನಿವಾಸಿಗಳಿಗೇ ಸೂಕ್ತ ಲಸಿಕೆ ಕೊರತೆ ಆಗಿರುವುದು ನಿಜಕ್ಕೂ ರಾಜ್ಯ ಸರ್ಕಾರದ ಅಸಮರ್ಥತೆ.
ಬೆಂಗಳೂರಿನಲ್ಲಿ ಬುಧವಾರದವರೆಗೆ 18-44 ವರ್ಷ ವಯಸ್ಸಿನವರಿಗೆ 11 ವ್ಯಾಕ್ಸಿನೇಷನ್ ಕೇಂದ್ರಗಳಿದ್ದು, ಅವುಗಳಲ್ಲಿ ಪ್ರತಿಯೊಂದರಲ್ಲೂ ಸರಾಸರಿ 150 ಲಸಿಕೆಗಳು ಮಾತ್ರ ಲಭ್ಯವಾಗುತ್ತವೆ. ಕರ್ನಾಟಕ ಆರೋಗ್ಯ ಇಲಾಖೆ ಮಂಗಳವಾರ ಹೊರಡಿಸಿದ ಬುಲೆಟಿನ್ ಪ್ರಕಾರ, ರಾಜ್ಯವು 18-44 ವರ್ಷ ವಯಸ್ಸಿನವರಿಗೆ ರಲ್ಲಿ 20,278 ಪ್ರಮಾಣವನ್ನು ನೀಡಲಾಗಿದೆ. ಮಂಗಳವಾರ ಬೆಂಗಳೂರಿನಲ್ಲಿ 18-44 ವರ್ಷದ ವಯಸ್ಕರಿಗೆ ಒಟ್ಟು 1,078 ಡೋಸ್ಗಳನ್ನು ನೀಡಲಾಗಿದೆ. ರಾಜ್ಯವು ಎರಡನೇ ಕೋವಿಡ್ ಅಲೆಯ ವಿರುದ್ದ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಸೋಂಕು ದಿನೇ ದಿನೇ ಹೆಚ್ಚುತ್ತಿರುವಾಗಲೂ ಲಸಿಕೆ ನೀಡಿಕೆ ಅತ್ಯಂತ ಕನಿಷ್ಟ ಮಟ್ಟದಲ್ಲಿದೆ. ಇದನ್ನು ಇನ್ನೂ ಉತ್ತಮಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹಿರಿಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎರಡನೇ ಕೋವಿಡ್ ಅಲೆಯು ಕರ್ನಾಟಕದ ಮೇಲೆ ಕ್ರೂರ ಪರಿಣಾಮ ಬೀರಿದೆ. ಸೋಮವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ರಾಜ್ಯವು ಮಹಾರಾಷ್ಟ್ರವನ್ನು ಹಿಂದಿಕ್ಕಿ ಅತ್ಯಂತ ಹೆಚ್ಚು ಸೋಂಕು ಪ್ರಕರಣಗಳನ್ನು ದಾಖಲಾಗಿದೆ.
ಪ್ರತಿಧ್ವನಿಯೊಂದಿಗೆ ಮಾತನಾಡಿದ 25 ವರ್ಷ ವಯಸ್ಸಿನ ಚಂದ್ರಹಾಸ್ ಅವರು ಲಸಿಕೆ ಸ್ಲಾಟ್ ಪಡೆಯಲು ಮೂರು ದಿನ ಕಷ್ಟ ಪಡಬೇಕಾಯಿತು. ಪ್ರತೀ ಬಾರಿ ಆನ್ಲೈನ್ ನಲ್ಲಿ ವಿವರ ನಮೂದಿಸಿ ಒಟಿಪಿಗಾಗಿ ಕಾಯಬೇಕು. ಇದನ್ನೆಲ್ಲ ಮಾಡುವ ಹೊತ್ತಿಗೆ ಸ್ಲಾಟ್ ಲಭ್ಯವಿಲ್ಲ ಎಂದು ತಿಳಿದುಬರುತ್ತದೆ ಎಂದು ಅವರು ಹೇಳಿದರು. ಮತ್ತೋರ್ವ ಲಸಿಕೆ ಪಡೆಯಲು ನೋಂದಾಯಿಸಿಕೊಂಡಿರುವ 34 ವರ್ಷದ ಚಂದನ್ ಅವರು ಕಳೆದ ಮೇ 1 ರಿಂದಲೇ ವೆಬ್ ಪೋರ್ಟಲ್ ನಲ್ಲಿ ಸ್ಲಾಟ್ ಗಾಗಿ ಹುಡುಕಾಡಲು ಪ್ರಾರಂಬಿಸಿ ಕೊನೆಗೆ ಮೇ 10 ರಂದು ಸ್ಲಾಟ್ ಪಡೆದುಕೊಂಡೆ ಎಂದು ಹೇಳಿದರು. ಇದಕ್ಕಾಗಿ 50 ಕ್ಕಿಂತ ಹೆಚ್ಚು ಬಾರಿ ಲಾಗಿನ್ ಆಗಬೇಕಾಯ್ತು ಎಂದು ಅವರು ಬೇಸರದಿಂದ ಹೇಳಿದರು. ಸ್ಲಾಟ್ ಪಡೆಯುವುದಕ್ಕೆ ಇಷ್ಟು ಕಷ್ಟ ಪಟ್ಟ ನಂತರ ಲಸಿಕಾ ಕೇಂದ್ರಗಳಲ್ಲಿ ಶೀಘ್ರವೇ ಲಸಿಕೆ ನೀಡುವುದಿಲ್ಲ ಅದಕ್ಕೂ ಎರಡರಿಂದ ಮೂರು ಗಂಟೆ ಸರದಿಯಲ್ಲಿ ನಿಲ್ಲಬೇಕಾಗಿದೆ ಎಂದು ಅವರು ಹೇಳಿದರು.
ಪ್ರಸ್ತುತ 18 ರಿಂದ 44 ವಯೋಮನದವರಿಗಾಗಿ ಬೆಂಗಳೂರಿನಲ್ಲಿ ತೆರೆಯಲಾಗಿರುವ ಲಸಿಕಾ ಕೇಂದ್ರಗಳ ಸಂಖ್ಯೆ ಕೇವಲ 11 . ಹಾಗು ಇಲ್ಲಿ ಒಂದು ಕೇಂದ್ರದಲ್ಲಿ ದಿನಕ್ಕೆ ನೀಡಲಾಗುವ ಲಸಿಕೆ ಕೇವಲ 150 ಮಾತ್ರ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಲಸಿಕೆ ನೀಡುವ ಜೊತೆಗೆ ಕೋವಿಡ್ ಪರೀಕ್ಷೆ ಮತ್ತು ರೋಗಿಗಳ ಆರೈಕೆ ವಿಚಾರದಲ್ಲೂ ಗಮನ ಹರಿಸಬೇಕಿದೆ. ಸಾಮಾನ್ಯ ಕೆಲಸದ ಒತ್ತಡದ ನಡುವೆಯೇ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳದೇ ಲಸಿಕೆ ಅಭಿಯಾನ ಆರಂಬಿಸಿರುವುದು ಹಾಗು ನಿತ್ಯವೂ ಏರುತ್ತಿರುವ ಸೋಂಕಿತರ ಸಂಖ್ಯೆಯಿಂದಾಗಿ ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡ ಅಧಿಕವಾಗಿದೆ ಎಂದು ಶಶ್ರೂಷಕಿ ಒಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ರಾಜ್ಯ ಸರ್ಕಾರವು ಉತ್ತಮವಾಗಿ ನಿರ್ವಹಿಸಬಹುದಾಗಿದ್ದ ಯೋಜನೆಯೊಂದನ್ನು ಸೂಕ್ತ ಪ್ರೀ ಪ್ಲಾನಿಂಗ್ ಇಲ್ಲದೆ ಅಸ್ತವ್ಯಸ್ತ ಮಾಡಿಕೊಂಡಿದೆ.